ಮಲ್ಯ ಮದ್ಯದಂಗಡಿಗೆ ಗುಡ್ ಬೈ ಹೇಳಿದ ಸಿಎಫ್ಒ
ಮುಂಬೈ, ಏ.23: ಮದ್ಯದ ದೊರೆ ವಿಜಯ್ ಮಲ್ಯರಿಗೆ ಮತ್ತೊಂದು ಆಘಾತ ಉಂಟಾಗಿದೆ. ಯುನೈಟೆಡ್ ಸ್ಪಿರಿಟ್ಸ್ ನ ಕಾರ್ಯಕಾರಿ ನಿರ್ದೇಶಕ, ಸಿಎಫ್ಒ ಮುರಳಿ ಅವರು ರಾಜೀನಾಮೆ ನೀಡಿ ಮನೆಗೆ ತೆರಳಿದ್ದಾರೆ.
ಮುರಳಿ ಅವರ ರಾಜೀನಾಮೆಯನ್ನು ಯುನೈಟೆಡ್ ಸ್ಪಿರಿಟ್ಸ್ ನಿರ್ದೇಶಕ ಮಂಡಳಿ ಸ್ವೀಕರಿಸಿದೆ. ಮಲ್ಯ ಅವರ ಯುಬಿ ಸಮೂಹದಿಂದ ಕಳೆದ ವರ್ಷ ಯುನೈಟೆಡ್ ಸ್ಪಿರೀಟ್ಸ್ ನಿಂದ ಡಿಯಾಜಿಯೋ ಶೇ 25.02 ಪಾಲು ಪಡೆದುಕೊಂಡ ಮೇಲೆ ಅನೇಕ ದೊಡ್ಡ ತಲೆಗಳಿಗೆ ಗೇಟ್ ಪಾಸ್ ನೀಡುತ್ತಾ ಬಂದಿರುವುದು ಗುಟ್ಟಾಗಿ ಉಳಿದಿಲ್ಲ. ಇದೆಲ್ಲವೂ ಗೊತ್ತಿದ್ದರೂ ಏನೂ ಮಾಡದ ಪರಿಸ್ಥಿತಿಯಲ್ಲಿ ಮಲ್ಯ ಇದ್ದಾರೆ.

ಇತ್ತೀಚಿಗೆ ಮಲ್ಯ ಅವರ ನೆಚ್ಚಿನ ಖಾಸಗಿ ವಿಮಾನ ಗುಜರಿ ಅಂಗಡಿ ಸೇರಿತ್ತು. ಇತ್ತ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಸೋಲು ಕಾಣುತ್ತಿದೆ. ಮಂಗಳೂರಿನಲ್ಲಿ ಕೆಮಿಕಲ್ ಫ್ಯಾಕ್ಟರಿಯಲ್ಲಿ ಗಲಾಟೆ ಮುಂದುವರೆದಿದೆ.
ಆರ್ಥಿಕ ತಜ್ಞ ಮುರಳಿ: ಸಿಎ ಮಾಡಿದ್ದ ಮುರಳಿ ಅವರು ಈ ಕ್ಷೇತ್ರದಲ್ಲಿ ಸುಮಾರು 32 ವರ್ಷಗಳ ಅನುಭವ ಹೊಂದಿದ್ದರು. ಯುಬಿ ಕಂಪನಿಯಲ್ಲಿ ಸುಮಾರು 22 ವರ್ಷಗಳ ದುಡಿದಿದ್ದಾರೆ.
1992ರಲ್ಲಿ ವಾಣಿಜ್ಯ ವಿಭಾಗದ ಮ್ಯಾನೇಜರ್ ಆಗಿ ಮುಂಬೈನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಿ.ಎ ಮುರಳಿ ಅವರನ್ನು ಮಲ್ಯ ಅವರು ಬೆಂಗಳೂರಿಗೆ ಕರೆಸಿಕೊಂಡಿದ್ದರು.
ಯುಎಸ್ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಮಲ್ಯ ಅವರ ಬಿಯರ್ ಉದ್ಯಮ ಬೆಳೆಯಲು ಮುರಳಿ ಕಾರಣರಾಗಿದ್ದರು. ಯುಬಿ ಸಮೂಹ ಬಿಯರ್ ಉತ್ಪಾದನಾ ಕ್ಷೇತ್ರದಲ್ಲಿ ವಿಶ್ವದಲ್ಲೇ ನಂ.1 ಎನಿಸಿಕೊಂಡಿತ್ತು.
ಡಿಯಾಜಿಯೋ ವಿಶ್ವದ ಅಗ್ರಗಣ್ಯ ಡಿಸ್ಟಿಲರ್ ಸಂಸ್ಥೆಯಾಗಿದ್ದು ಯುನೈಟೆಡ್ ಸ್ಪಿರೀಟ್ಸ್ ನಲ್ಲಿ ಶೇ 54.78ರಷ್ಟು ಪಾಲು ಹೊಂದಿದೆ. ಕಳೆದ ಜುಲೈ ತಿಂಗಳಿನಲ್ಲಿ ಯುಬಿ ಸಮೂಹದಿಂದ ಶೇ 26ರಷ್ಟು ಪಾಲನ್ನು 1.11 ಬಿಲಿಯನ್ ಪೌಂಡ್ ನೀಡಿ ಪಡೆದುಕೊಂಡಿತ್ತು. ಹೀಗಾಗಿ ಮಲ್ಯ ಅವರ ಮದ್ಯದಂಗಡಿ ಈಗ ಡಿಯಾಜಿಯೋ ಕಂಟ್ರೋಲ್ ನಲ್ಲಿದೆ. (ಏಜೆನ್ಸೀಸ್)












Click it and Unblock the Notifications