ಲಾಕ್ಡೌನ್ ಬಳಿಕ ಆರ್ಥಿಕತೆ ಪ್ರಬಲ ಚೇತರಿಕೆ: ನಿರ್ಮಲಾ ಸೀತಾರಾಮನ್
ನವದೆಹಲಿ, ನವೆಂಬರ್ 12: ಭಾರತದ ಆರ್ಥಿಕತೆಯ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರ ಮತ್ತೊಂದು ಉತ್ತೇಜನಾಕಾರಿ ಪ್ಯಾಕೇಜ್ ಪ್ರಕಟಿಸಿದೆ. ಸುದೀರ್ಘ ಮತ್ತು ಕಠಿಣ ಲಾಕ್ಡೌನ್ ಬಳಿಕ ದೇಶದ ಆರ್ಥಿಕತೆಯು ಪ್ರಬಲ ಚೇತರಿಕೆಯನ್ನು ಕಾಣುತ್ತಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ನಿರ್ಮಲಾ ಸೀತಾರಾಮನ್, ಬೃಹತ್ ಆರ್ಥಿಕ ಸೂಚಕಗಳು ಭಾರತದ ಆರ್ಥಿಕತೆಯು ಚೇತರಿಕೆ ಹಾದಿಯತ್ತ ಸಾಗಿರುವುದನ್ನು ತಿಳಿಸುತ್ತಿವೆ ಎಂದಿದ್ದಾರೆ.
ಭಾರತದಲ್ಲಿ ಸಕ್ರಿಯ ಕೋವಿಡ್ 19 ಪ್ರಕರಣಗಳಲ್ಲಿ ಇಳಿಕೆಯಾಗುತ್ತಿದೆ ಎಂದ ನಿರ್ಮಲಾ, ಸಕ್ರಿಯ ಪ್ರಕರಣಗಳು 10 ಲಕ್ಷಕ್ಕೂ ಹೆಚ್ಚಿನಿಂದ 4.89 ಲಕ್ಷಕ್ಕೆ ಇಳಿದಿದೆ. ಮತ್ತು ಮರಣ ಪ್ರಮಾಣ (ಸಿಎಫ್ಆರ್) ಶೇ 1.47ಕ್ಕೆ ಕುಸಿದಿದೆ ಎಂದು ತಿಳಿಸಿದ್ದಾರೆ.

ಭಾರತದ ಆರ್ಥಿಕತೆಯ ಚೇತರಿಕೆಯ ವಿವರ ನೀಡಿದ ಅವರು, ಸಂಯೋಜಿತ ಖರೀದಿ ವ್ಯವಸ್ಥಾಒಕ ಸೂಚ್ಯಂಕ (ಪಿಎಂಐ) ಅಕ್ಟೋಬರ್ನಲ್ಲಿ ಶೇ 58.9ಕ್ಕೆ ಏರಿಕೆಯಾಗಿದೆ. ಇದು ಸೆಪ್ಟೆಂಬರ್ನಲ್ಲಿ ಶೇ 54.6ರಷ್ಟಿತ್ತು. ಕಳೆದ ಒಂಬತ್ತು ವರ್ಷಗಳಲ್ಲಿಯೇ ಅತ್ಯಂತ ಪ್ರಬಲ ಏರಿಕೆ ದಾಖಲಾಗಿದೆ ಎಂದು ಹೇಳಿದ್ದಾರೆ.
ವರ್ಷದಿಂದ ವರ್ಷದ ಶಕ್ತಿ ಅನುಭೋಗವು ಅಕ್ಟೋಬರ್ನಲ್ಲಿ ಶೇ 12ರಷ್ಟು ಹೆಚ್ಚು ಬೆಳವಣಿಗೆ ಕಂಡಿದೆ. ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್ಟಿ) ಸಂಗ್ರಹವು ಶೇ 10ರಷ್ಟು ಹೆಚ್ಚಳವಾಗಿದ್ದು, 1.05 ಲಕ್ಷ ಕೋಟಿ ರೂ.ಗಿಂತಲೂ ಅಧಿಕವಾಗಿದೆ.
ದೈನಂದಿನ ರೈಲ್ವೆ ಸರಕು ಸುಂಕವು ವರ್ಷದಿಂದ ವರ್ಷದ ಬೆಳವಣಿಗೆಯಲ್ಲಿ ಶೇ 20ರ ಸರಾಸರಿಯಲ್ಲಿಏರಿಕೆಯಾಗಿದೆ. ಕಳೆದ ವರ್ಷ ಇದು ಶೇ 12ರಷ್ಟಿತ್ತು. ಬ್ಯಾಂಕ್ಗಳ ಸಾಲ ಶೇ 5.1ರಷ್ಟು ಸುಧಾರಣೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಹಾಗೆಯೇ ವಿದೇಶಿ ನೇರ ಬಂಡವಾಳ ಹೂಡಿಕೆಯು (ಎಫ್ಡಿಐ) ಏಪ್ರಿಲ್-ಆಗಸ್ಟ್ ಅವಧಿಯಲ್ಲಿ $35.37 ಬಿಲಿಯನ್ ಇದ್ದು ವರ್ಷದಿಂದ ವರ್ಷದ ಅವಧಿ ಆಧಾರದಲ್ಲಿ ಶೇ 13ರಷ್ಟು ಹೆಚ್ಚಳವಾಗಿದೆ.
2020-21ರ ಮೂರನೇ ತ್ರೈಮಾಸಿಕ ಅವಧಿಯಲ್ಲಿ ಭಾರತದ ಆರ್ಥಕತೆಯು ಸಕಾರಾತ್ಮಕ ಬೆಳವಣಿಗೆ ಕಾಣಲಿದೆ ಎಂದು ಆರ್ಬಿಐ ಹೇಳಿದೆ. ಬೇಡಿಕೆಯ ಹೆಚ್ಚಳ ಮಾತ್ರವಲ್ಲ, ಪ್ರಬಲ ಆರ್ಥಿಕತೆಯ ಬೆಳವಣಿಗೆಯ ಮೂಲಕವೂ ಗಮನಾರ್ಹ ಸುಧಾರಣೆಯಾಗುತ್ತಿದೆ ಎಂದು ಪ್ರತಿಷ್ಠಿತ ಆರ್ಥಿಕ ತಜ್ಞರು ಹೇಳುತ್ತಿದ್ದಾರೆ ಎಂದು ನಿರ್ಮಲಾ ತಿಳಿಸಿದ್ದಾರೆ.












Click it and Unblock the Notifications