ಬಿಟ್ ಕಾಯಿನ್ ಬ್ಯಾನ್ ಬಯಿಸಿ ಪ್ರಧಾನಿಗೆ ಪತ್ರ ಬರೆದ ಬೆಂಗಳೂರು ಸೈಬರ್ ತಜ್ಞ
ಬೆಂಗಳೂರು, ಫೆಬ್ರವರಿ 20 : ಬಿಟ್ ಕಾಯಿನ್ ಬ್ಯಾನ್ ಮಾಡದೇ ಹತ್ತು ಸಲ ನೋಟ್ ಬ್ಯಾನ್ ಮಾಡಿದ್ರೂ ಬ್ಲಾಕ್ ಮನಿ ನಿಯಂತ್ರಣ ಮಾಡಲಿಕ್ಕೆ ಅಸಾಧ್ಯ. ಮೊದಲು ಬಿಟ್ ಕಾಯಿನ್ ಬ್ಯಾನ್ ಮಾಡಬೇಕು. ಜಾಗತಿಕ ನಾಯಕರಾಗಿ ಗುರುತಿಸಿಕೊಳ್ಳಲು ಯತ್ನಿಸುತ್ತಿರುವ ನೀವು ಈ ಕ್ರಿಪ್ಟೋ ಕರೆನ್ಸಿ ಬ್ಯಾನ್ ಮಾಡಿದ್ದೇ ಆದಲ್ಲಿ ಸಾಕಷ್ಟು ರಾಷ್ಟ್ರಗಳು ನಿಮ್ಮ ಬೆಂಬಲಕ್ಕೆ ನಿಲ್ಲಲಿವೆ !
ಪ್ರಧಾನಿ ಮೋದಿಗೆ ಪತ್ರ:
ಕಪ್ಪು ಹಣ ನಿರ್ವಹಣೆ ಆರೋಪ ಹೊತ್ತಿರುವ ಬಿಟ್ ಕಾಯಿನ್ ನ್ನು ಬ್ಯಾನ್ ಮಾಡುವಂತೆ ಬೆಂಗಳೂರಿನ ಸೈಬರ್ ತಜ್ಞ ನಾ. ವಿಜಯಶಂಕರ್ ಅವರು ಪ್ರಧಾನಿ ಮೋದಿ ಅವರಿಗೆ ಬಹಿರಂಗವಾಗಿ ಪತ್ರ ಬರೆದಿದ್ದರು. ಅದರ ಪ್ರಮುಖ ಸಾರಾಂಶವಿದು. ದೇಶದಲ್ಲಿ ಬಿಟ್ ಕಾಯಿನ್ ನಿಷೇಧ ಮಾಡುವ ಸಂಬಂಧ ಬಿಲ್ ಮಂಡಿಸಲಾಗಿದೆ. ಒಂದು ವರ್ಷವಾದರೂ ಬಿಲ್ ಗೆ ಅನುಮೋದನೆ ನೀಡಿ ಜಾರಿ ಮಾಡಿಲ್ಲ. ದೇಶದಲ್ಲಿ ಬಿಟ್ ಕಾಯಿನ್ ತ್ವರಿತ ನಿಷೇಧ ಮಾಡಬೇಕು. ಇಲ್ಲದಿದ್ದರೆ ದೇಶದ ಆರ್ಥಿಕ ಸ್ಥಿತಿ ನಾಶವಾಗುವ ಜತೆಗೆ ಸೈಬರ್ ಅಪರಾಧಕ್ಕೆ ಬಲಿಪಶುವಾಗಲಿದೆ ಎಂದು ಬೆಂಗಳೂರಿನ ಸೈಬರ್ ತಜ್ಞ ನಾ. ವಿಜಯ ಶಂಕರ್ ಎಳೆ ಎಳೆಯಾಗಿ ಪತ್ರದಲ್ಲಿ ಬಿಡಿಸಿಟ್ಟಿದ್ದಾರೆ. ಪ್ರಧಾನಿಗೆ ಬರೆದಿರುವ ಪತ್ರದ ಬಗ್ಗೆ ನಾ. ವಿಜಯಶಂಕರ್ ಒನ್ ಇಂಡಿಯಾ ಕನ್ನಡ ಜತೆ ಹಲವು ವಿಷಯ ಹಂಚಿಕೊಂಡರು.
ಬಿಟ್ ಕಾಯಿನ್ ಬ್ಯಾನ್ ಯಾಕೆ ?
ಕ್ರಿಪ್ಟೋ ಕರೆನ್ಸಿ ನಿಷೇಧ ಮಾಡುವ ಬಗ್ಗೆ ಮೋದಿಗೆ ಮೊದಲಿನಿಂದಲೂ ಬಹಿರಂಗ ಪತ್ರಗಳನ್ನು ಬರೆಯುತ್ತಿದ್ದೇನೆ. ದೇಶದಲ್ಲಿ ನೂರು ಸಲ ನೋಟ್ ಬ್ಯಾನ್ ಮಾಡಿದ್ರೂ ಕಪ್ಪು ಹಣ ನಿಯಂತ್ರಣ ಮಾಡಲಿಕ್ಕೆ ಸಾಧ್ಯವಿಲ್ಲ. ಅದೇ ಬಿಟ್ ಕಾಯಿನ್ ಮೇಲೆ ನಿಷೇಧ ಹೇರಲಿ, ರಾಜಕಾರಣಿಗಳ, ಅಧಿಕಾರಿಗಳು ಭ್ರಷ್ಟಾಚಾರ ರೂಪದಲ್ಲಿ ಗಳಿಸಿರುವ ಭ್ರಷ್ಟ ಸಂಪತ್ತು ಬಯಲಿಗೆ ಬರಲಿದೆ. ದೇಶದ ಆರ್ಥಿಕ ಪ್ರಗತಿಗೆ ಮಾರಕವಾಗಿರುವ ಈ ಬಿಟ್ ಕಾಯಿನ್ ನಿಷೇಧ ಮಾಡುವ ಬಗ್ಗೆ ವರ್ಷದ ಹಿಂದೆಯೇ ಬಿಲ್ ಮಂಡಿಸಿದ್ದರು. ಆದರೆ ಈವರೆಗೂ ಅದನ್ನು ಪಾಸ್ ಮಾಡಿ ಜಾರಿಗೆ ತರುವಲ್ಲಿ ಕೇಂದ್ರ ಸರ್ಕಾರ ತಲೆ ಕೆಡಿಸಿಕೊಂಡಿಲ್ಲ. ಒಬ್ಬ ಭಾರತೀಯನಾಗಿ ನನ್ನ ದೇಶ ಉಳಿಸುವ ಹಂಬಲ. ಸಾಮಾನ್ಯ ವ್ಯಕ್ತಿಯಾಗಿ ನಾನು ಪತ್ರ ಬರೆದಿದ್ದೇನೆ ಎಂದು ಅವರು ತಿಳಿಸಿದರು.
ದೇಶದ ಉಳಿವು ಅಳಿವು:
ಅಧಿಕಾರಸ್ಥರು, ಉದ್ಯಮಿಗಳು ತಮ್ಮ ಆಸ್ತಿಯನ್ನು ಈಗ ಬಿಟ್ ಕಾಯಿನ್, ಕ್ರಿಪ್ಟೋ ಕರೆನ್ಸಿಯಲ್ಲಿ ಸಂಗ್ರಹಿಸಿ ಇಡುತ್ತಿದ್ದಾರೆ. ಇಲ್ಲಿ ಕೇವಲ ಒಂದು ಮೇಲ್ ಮೂಲಕ ಎಷ್ಟು ಸಾವಿರ ಕೋಟಿಯನ್ನು ಬೇಕಾದರೂ ನಿರ್ವಹಿಸಬಹುದು. ಇನ್ನು ಈ ಬಿಟ್ ಕಾಯಿನ್ ಯಾವುದೇ ದೇಶದ ಅಧಿಕೃತ ಕರೆನ್ಸಿಯೂ ಅಲ್ಲ. ಇದರ ಮೇಲೆ ಯಾರಿಗೂ ನಿಯಂತ್ರಣ ಹಾಕುವ ಹಕ್ಕು ಇಲ್ಲ. ಹೀಗಾಗಿ ಇವತ್ತಿನ ದಿನಮಾನಗಳಲ್ಲಿ ಪ್ರಭಾವಿಗಳು ತಮ್ಮ ಅಕ್ರಮ ಸಂಪತ್ತನ್ನು ಬಿಟ್ ಕಾಯಿನ್ ಮೂಲಕ ರಕ್ಷಣ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ಬ್ಯಾನ್ ಮಾಡಿದ್ದೇ ಆದಲ್ಲಿ, ಕನಿಷ್ಠ ಪಕ್ಷ ದೇಶದಲ್ಲಿ ಬಿಟ್ ಕಾಯಿನ್ ರೂಪಾಯಿ ನಾಣ್ಯಕ್ಕೆ ಪರಿವರ್ತನೆ ಮಾಡಲು ಅಸಾಧ್ಯವಾಗುತ್ತದೆ. ಹೀಗಾಗಿ ನಮ್ಮ ದೇಶದ ಉಳಿವಿಗಾಗಿ ಬಿಟ್ ಕಾಯಿನ್ ಬ್ಯಾನ್ ಮಾಡಬೇಕು ಎಂದು ನಾ. ವಿಜಯಶಂಕರ್ ತಿಳಿಸಿದ್ದಾರೆ.
ಭ್ರಷ್ಟರೇ ಬಿಟ್ ಕಾಯಿನ್ ಪ್ರೇಮಿಗಳು:
ಬಿಟ್ ಕಾಯಿನ್ ಬ್ಯಾನ್ ಮಾಡುವ ಬಗ್ಗೆ ಹಿಂದೆ ಆರ್ ಬಿಐ ಪ್ರಯತ್ನಿಸಿತ್ತು. ಕಪ್ಪು ಹಣದ ಶಕ್ತಿ ಮುಂದೆ ಆರ್ಬಿಐ ಆಟ ನಡೆಯಲಿಲ್ಲ. ಹೀಗಾಗಿ ಆರ್ ಬಿಐ ಮೇಲಿನ ನಂಬಿಕೆ ಇಲ್ಲದಾಗಿದೆ. ಇನ್ನು ಬಿಟ್ ಕಾಯಿನ್ ಮೇಲೆ ನಿಷೇಧ ಹೇರುವ ಬಗ್ಗೆ ಸುಪ್ರೀಂಕೋರ್ಟ್ ಮಹತ್ವದ ತೀರ್ಮಾನ ಕೈಗೊಳ್ಳಲಿದೆಯಾ ಎಂಬ ನಂಬಿಕೆಯೂ ಇಲ್ಲ. ರಾಜಕಾರಣಿಗಳು ಮತ್ತು ಭ್ರಷ್ಟ ಅಧಿಕಾರಿಗಳು ಬಿಟ್ ಕಾಯಿನ್ ಪ್ರೀತಿಸುತ್ತಾರೆ. ಯಾಕೆಂದರೆ ಬಿಟ್ ಕಾಯಿನ್ ಮೂಲಕ ಲಂಚ ಸ್ವೀಕರಿಸುವುದು ಅತಿ ಸುಲಭ. ಇನ್ನು ಭಯೋತ್ಪಾದನೆ ಕೃತ್ಯ ಎಸಗಿರುವ ಉಗ್ರ ಸಂಘಟನೆಗಳಿಗೆ ಸುಲಭವಾಗಿ ಹಣ ಪೂರೈಕೆ ಮಾಡಲು ಬಿಟ್ ಕಾಯಿನ್ ಬಳಕೆಯಾಗುತ್ತಿದೆ. ದೇಶ ವಿರೋಧಿ ಕೃತ್ಯಗಳಿಗೆ ಆರ್ಥಿಕ ನೆರವು ನೀಡಲು ಈ ಬಿಟ್ ಕಾಯಿನ್ ಬಳಸಲಾಗುತ್ತಿದೆ. ಬಿಟ್ ಕಾಯಿನ್ ಬಳಕೆ ಮಾಡುವ ನಿಟ್ಟಿನಲ್ಲಿ ಕೆನಡಾ ಮೊದಲ ಸ್ಥಾನದಲ್ಲಿದೆ. ಆದರೆ, ಇದಕ್ಕೆ ಆಸ್ಪದ ನೀಡಿದರೆ ನಮ್ಮ ದೇಶದ ಆರ್ಥಿಕ ಶಕ್ತಿಯನ್ನು ಸಂಪೂರ್ಣ ನಾಶ ಮಾಡುತ್ತದೆ. ಬಿಟ್ ಕಾಯಿನ್ ನಿಷೇಧ ವಿಚಾರದಲ್ಲಿ ಕೇಂದ್ರ ಸರ್ಕಾರ ಮೌನ ವಹಿಸಿರುವುದು ಒಳ್ಳೆಯ ಬೆಳವಣಿಗೆ ಯಲ್ಲ ಎಂದು ವಿವರಣೆ ನೀಡಿದ್ದಾರೆ.
Recommended Video
ಡ್ರಗ್ ಗಿಂತಲೂ ಅಪಾಯ ಬಿಟ್ ಕಾಯಿನ್ :
ಡಿಟಿಟಲ್ ಬ್ಲಾಕ್ ಮನಿಯನ್ನು ರದ್ದು ಮಾಡದೇ ಇದ್ದಲ್ಲಿ, ಕಪ್ಪು ಹಣದ ವಹಿವಾಟು, ಸೈಬರ್ ಅಪರಾಧಗಳನ್ನು ತಡೆಯಲಾರದ ಸ್ಥಿತಿಗೆ ಹೋಗಿ ನಿಲ್ಲುತ್ತೇವೆ. ಬಿಟ್ ಕಾಯಿನ್ , ಕ್ರಿಪ್ಟೋ ಕರೆನ್ಸಿ ರದ್ದು ಮಾಡುವ ಗಟ್ಟಿ ನಿರ್ಧಾರವನ್ನು ಪ್ರಧಾನಿ ಮೋದಿ ಅವರು ಕೈಗೊಳ್ಳಬೇಕು. ಬಿಟ್ ಕಾಯಿನ್ ಬ್ಯಾನ್ ಮಾಡುವ ಮೂಲಕ ಜಾಗತಿಕವಾಗಿ ಅದರನ್ನು ರದ್ದು ಮಾಡುವ ನಾಯಕತ್ವನ್ನು ಪ್ರಧಾನಿಯಾಗಿ ನೀವು ಮುಂದಾಳತ್ವ ವಹಿಸಿ. ಬಿಟ್ ಕಾಯಿನ್ ಮಾದಕ ಜಾಲಕ್ಕಿಂತಲೂ ಅಪಾಯಕಾರಿ. ದೇಶವನ್ನೇ ಇದು ಸರ್ವ ನಾಶ ಮಾಡಲಿದೆ. ಅದಕ್ಕೂ ಮುನ್ನ ಅದನ್ನೇ ನಿಯಂತ್ರಣ ಮಾಡಿ. ದೇಶದಲ್ಲಿ ಆರ್ಬಿಐ ಮಾನ್ಯತೆಗೆ ಒಳಪಟ್ಟು ಡಿಜಿಟಲ್ ಕರೆನ್ಸಿಯನ್ನು ಜಾರಿಗೆ ತನ್ನಿ ಎಂಬ ಸಲಹೆಯನ್ನು ಪ್ರಧಾನ ಮಂತ್ರಿಗಳ ಕಾರ್ಯಾಲಯಕ್ಕೆ ನಾವಿ ರವಾನಿಸಿದ್ದಾರೆ.