ರಫೇಲ್ ಬಗ್ಗೆ ಮೋದಿ ನನ್ನೊಂದಿಗೆ ಚರ್ಚೆಗೆ ಕೂರಲಿ: ರಾಹುಲ್ ಚಾಲೆಂಜ್
ಬೀದರ್, ಆಗಸ್ಟ್ 13: ಬೀದರ್ನ ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಜನಧ್ವನಿ ಸಮಾವೇಶದಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಮೋದಿ ಅವರಿಗೆ ಸವಾಲೆಸೆದರು.
ಮೋದಿ ಅವರು ತಮ್ಮದು 56 ಇಂಚಿನ ಎದೆ ಎಂದು ಹೇಳಿಕೊಳ್ಳುತ್ತಾರೆ, ಆ ಎದೆಯಲ್ಲಿ 'ಧಮ್' ಇದ್ದರೆ ನನ್ನ ಮುಂದೆ ನಿಂತು ರಫೇಲ್ ಒಪ್ಪಂದದ ಬಗ್ಗೆ ಚರ್ಚೆ ಮಾಡಲಿ, ಈ ವೇದಿಕೆಯಿಂದ ನಾನು ಅವರಿಗೆ ಸವಾಲೆಸೆಯುತ್ತಿದ್ದೇನೆ, ನಾನು ಅವರು ಕರೆದಲ್ಲಿಗೆ ಹೋಗಿ ಚರ್ಚೆ ಕೂರಲು ಸಿದ್ಧವಿದ್ದೇನೆ ಎಂದರು.
ಮೋದಿ ಅವರು ತಮ್ಮ ಶ್ರೀಮಂತ ಗೆಳೆಯರಿಗೆ ಮಾತ್ರವೇ ಪ್ರಧಾನಿ, ದೇಶದ ಪ್ರಧಾನಿ ಅಲ್ಲ ಎಂದ ಅವರು, ತಮ್ಮ ಶ್ರೀಮಂತ ಗೆಳೆಯ ಅನಿಲ್ ಅಂಬಾನಿಗೆ ಸಹಾಯ ಮಾಡಲೆಂದೇ ಅವರು ರಫೇಲ್ ಒಪ್ಪಂದವನ್ನು ಬದಲಾಯಿಸಿದರು ಎಂದು ಆರೋಪಿಸಿದರು.
ರಾಹುಲ್ ಗಾಂಧಿ ಮಾಡಿದ ಭಾಷಣದಲ್ಲಿ ಬಹುತೇಕ ಸಮಯ ರಫೇಲ್ ಹಗರಣದ ಬಗ್ಗೆಯೇ ಮಾತನಾಡಿದರು, ಯುಪಿಎ ಸರ್ಕಾರದ ಅವಧಿಯಲ್ಲಿ ಆಗಿದ್ದ ಒಪ್ಪಂದ ಆ ನಂತರ ಈಗಿನ ಸರ್ಕಾರ ಅದನ್ನು ಬದಲಾಯಿಸಿದ್ದು ಎಲ್ಲವನ್ನೂ ವಿವರಿಸಿ, ಕೇಂದ್ರದ ವಿರುದ್ಧ ಹರಿಹಾಯ್ದರು.

'ಚೌಕಿದಾರ್ ಭಾಗೀದಾರ್' ಆಗಿದ್ದಾರೆ
ಫ್ರಾನ್ಸ್ಗೆ ಹೋಗಿದ್ದ ಮೋದಿ ಯುಪಿಎ ಸರ್ಕಾರ ಮಾಡಿದ್ದ ಒಪ್ಪಂದವನ್ನು ತಮ್ಮ ಒಳಿತಿಗಾಗಿ ಬದಲಾಯಿಸಿದರು. ಕರ್ನಾಟಕದ ಎಚ್ಎಎಲ್ಗೆ ನೀಡಲಾಗಿದ್ದ ಒಪ್ಪಂದವನ್ನು , ವಿಮಾನ ನಿರ್ಮಾಣದಲ್ಲಿ ಅನುಭವವೇ ಇಲ್ಲದ ಅನಿಲ್ ಅಂಬಾನಿಗೆ ನೀಡಲಾಯಿತು, ಇದರ ಬಗ್ಗೆ ಕೇಳಿದರೆ ಮೋದಿ ಮೌನಕ್ಕೆ ಶರಣಾಗುತ್ತಾರೆ ಎಂದು ರಾಹುಲ್ ಕುಟುಕಿದರು.

ಪರಿಕ್ಕರ್ಗೆ ಮಾಹಿತಿಯೇ ಇರಲಿಲ್ಲ
ಈ ಹಿಂದೆ ರಕ್ಷಣಾ ಮಂತ್ರಿ ಆಗಿದ್ದ ಮನೋಹರ್ ಪರಿಕ್ಕರ್ ಅವರಿಗೆ ರಫೇಲ್ ಒಪ್ಪಂದ ಬದಲಾದ ಬಗ್ಗೆ ಮಾಹಿತಿಯೇ ಇರಲಿಲ್ಲ, ಈ ವಿಷಯವನ್ನು ಸ್ವತಃ ಅವರೇ ಹೇಳಿದ್ದಾರೆ. ಮೋದಿ ಅವರ ಪ್ರಧಾನಿ ಕಚೇರಿ ರಾತ್ರೋ ರಾತ್ರಿ ಒಪ್ಪಂದ ಬದಲಾವಣೆ ಮಾಡಿದೆ, ಕೇವಲ 10 ದಿನ ಮುಂಚೆ ಹುಟ್ಟಿದ ಕಂಪೆನಿಗೆ ವಿಮಾನ ನಿರ್ಮಾಣ ಮಾಡುವ ಜವಾಬ್ದಾರಿ ನೀಡಲಾಗಿದೆ ಎಂದರು.

ರಫೇಲ್ ಬಗ್ಗೆ ಮೋದಿ ಉತ್ತರಿಸಲಾರರು
ರಫೇಲ್ ಬಗ್ಗೆ ನಾನು ಸಂಸತ್ನಲ್ಲಿ ಮಾತನಾಡಿದೆ, ಮೋದಿ ಅವರಿಗೆ ಪ್ರಶ್ನೆಗಳನ್ನು ಕೇಳಿದೆ, ಆದರೆ ಅವರು ಮಾಡಿದ ಸುಧೀರ್ಘ ಭಾಷಣದಲ್ಲಿ ಅಲ್ಲಿನ-ಇಲ್ಲಿನ ಮಾತುಗಳನ್ನಷ್ಟೆ ಆಡಿದ ಮೋದಿ, ನನ್ನ ಪ್ರಶ್ನೆಗಳಿಗೆ ಉತ್ತರಿಸಲೇ ಇಲ್ಲ, ನಾನು ಭಾಷಣ ಮಾಡುವ ಸಮಯದಲ್ಲಿ ಅವರು ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಸಹ ಆಗಲಿಲ್ಲ, ಅವರು ತಪ್ಪು ಮಾಡಿದ್ದಾರೆ ಹಾಗಾಗಿ ನನ್ನ ಪ್ರಶ್ನೆಗಳಿಗೆ ಅವರು ಉತ್ತರಿಸಲಿಲ್ಲ ಎಂದು ರಾಹುಲ್ ಹೇಳಿದರು.

ಚರಂಡಿಯಿಂದ ಗ್ಯಾಸ್, ಮೋದಿ ಮಾತಿಗೆ ವ್ಯಂಗ್ಯ
ಮೋದಿ ಅವರು ಇತ್ತೀಚೆಗಷ್ಟೆ ವಿಶ್ವ ಜೈವಿಕ ಇಂಧನ ದಿನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, 'ವ್ಯಾಪಾರಿಯೊಬ್ಬ ತನ್ನ ಟೀ ಅಂಗಡಿಯ ಮುಂದೆ ಹಾದು ಹೋಗಿದ್ದ ಚರಂಡಿಗೆ ಪೈಪ್ ಹಾಕಿ, ಅದರಿಂದ ಬಂದ ಗ್ಯಾಸ್ನಲ್ಲಿ ಟೀ ಮಾಡಿ ಮಾರುತಿದ್ದಾನೆ' ಎಂದಿದ್ದರು. ಈ ಮಾತಿಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯ ವ್ಯಕ್ತವಾಗಿತ್ತು. ಇದನ್ನು ಇಂದು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ರಾಹುಲ್ ಮೋದಿ ಅವರ ಅವೈಜ್ಞಾನಿಕ ಮಾತನ್ನು ವ್ಯಂಗ್ಯ ಮಾಡಿದರು.

ಉದ್ಯೋಗ ಎಲ್ಲಿ? ರಾಹುಲ್ ಪ್ರಶ್ನೆ
ಮೋದಿ ಅವರು 2 ಕೋಟಿ ನಿರುದ್ಯೋಗಿಗಳಿಗೆ ಉದ್ಯೋಗ ನೀಡುತ್ತೇನೆ ಎಂದು ಮಾತು ಕೊಟ್ಟಿದ್ದರು. ಆದರೆ ಅದನ್ನು ಪೂರೈಸಲಿಲ್ಲ, ಬದಲಿಗೆ ಚರಂಡಿಯಿಂದ ಗ್ಯಾಸ್ ತೆಗೆದುಕೊಳ್ಳಿ, ಪಕೋಡ ಮಾಡಿ ಎಂದು ಸಲಹೆ ನೀಡುತ್ತಿದ್ದದಾರೆ, ಚೀನಾ 24 ಗಂಟೆಯಲ್ಲಿ 50 ಲಕ್ಷ ಸೃಷ್ಟಿಸುವುದು ಸಾಧ್ಯವಾಗಿರಬೇಕಾದರೆ ನಾವೇಕೆ ಅದನ್ನು ಮಾಡಲಾಗುತ್ತಿಲ್ಲ ಎಂದರು.

ಸಾಲಮನ್ನಾಕ್ಕೆ ಸಹಾಯ ನೀಡಲಿಲ್ಲ
ನಾವು ಭರವಸೆ ನೀಡಿದಂತೆ ಕರ್ನಾಟಕದಲ್ಲಿ ರೈತರ ಸಾಲಮನ್ನಾ ಮಾಡಿದೆವು, ಆದರೆ ಕೇಂದ್ರ ಇದಕ್ಕೆ ಆರ್ಥಿಕ ನೆರವು ನೀಡಲಿಲ್ಲ. ಕನಿಷ್ಟ ಬೆಂಬಲ ಬೆಲೆ ಹೆಚ್ಚಿಸಿದ್ದೇವೆ ಎಂದು ಬೀಗುತ್ತಿರುವ ಕೇಂದ್ರ ಸರ್ಕಾರಕ್ಕೆ ನಿಜವಾಗಿಯೂ ರೈತರ ಮೇಲೆ ಕಾಳಜಿ ಇದ್ದರೆ ಕರ್ನಾಟಕ ಮನ್ನಾ ಮಾಡಿರುವ ರೈತರ ಸಾಲ ಮೊತ್ತದ ಅರ್ಧವನ್ನು ಕೇಂದ್ರ ನೀಡಲಿ ಎಂದು ಅವರು ಸವಾಲು ಎಸೆದರು.

ಹೆಣ್ಣುಮಕ್ಕಳನ್ನು ಬಿಜೆಪಿಯಿಂದ ರಕ್ಷಿಸಿ
ಉತ್ತರ ಪ್ರದೇಶದಲ್ಲಿ ಬಿಜೆಪಿಯ ಶಾಸಕರೇ ಅತ್ಯಾಚಾರ ಮಾಡಿ ಸಿಕ್ಕಿಹಾಕಿಕೊಂಡಿದ್ದಾರೆ. ಬಿಹಾರದಲ್ಲಿ ನಡೆದಿರುವ ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಶಾಸಕರ ನೆರಳಿದೆ. ದೇಶದ ಪೋಷಕರು ತಮ್ಮ ಹೆಣ್ಣು ಮಕ್ಕಳನ್ನು ಬಿಜೆಪಿ ಶಾಸಕರಿಂದ ಬಚಾವ್ ಮಾಡಬೇಕಿದೆ ಎಂದು ಅವರು ಹೇಳಿದರು.

ನಿಮ್ಮ ಹಕ್ಕುಗಳಿಗಾಗಿ ಕಾಂಗ್ರೆಸ್ ಹೋರಾಟ
ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆಗೆ ಆಗಿನ ಬಿಜೆಪಿ ಸರ್ಕಾರ ವಿರೋಧಿಸಿತ್ತು. ಆದರೆ ನಾವು ಹೋರಾಟ ಬಿಡಲಿಲ್ಲ, ಹೈ-ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕೊಡಿಸಿ ಅಭಿವೃದ್ಧಿ ಆಗುವಂತೆ ಮಾಡಿದೆವು. ಕಾಂಗ್ರೆಸ್ ಪಕ್ಷ ಸದಾ ಜನರ ಹಕ್ಕುಗಳಿಗಾಗಿ ಹೋರಾಡುತ್ತದೆ ಎಂದ ರಾಹುಲ್, ಕಾಂಗ್ರೆಸ್ ಕಾರ್ಯಕರ್ತರಿಗೆ ಏನೆ ಸಮಸ್ಯೆ ಇರಲಿ ಪಿಸಿಸಿ, ಡಿಸಿಸಿಗೆ ತಿಳಿಸಿ ನಾವು ಸಹಾಯ ಮಾಡುತ್ತೇವೆ ಎಂದರು.

ನಾವು ಅಧಿಕಾರಕ್ಕೆ ಬಂದರೆ...
ನಾವು ಈ ಬಾರಿ ಅಧಿಕಾರಕ್ಕೆ ಬಂದರೆ 'ಗಬ್ಬರ್ ಸಿಂಗ್ ಟ್ಯಾಕ್ಸ್' ತೊಡೆದುಹಾಕಿ, ಏಕರೂಪದ ಜಿಎಸ್ಟಿ ತರುತ್ತೇವೆ, ಈಗ ಮಾಡಿರುವಂತೆ ವಿವಿಧ ಟ್ಯಾಕ್ಸ್ ಹಾಕುವುದಿಲ್ಲ ಬದಲಿಗೆ ಒಂದೇ ಟ್ಯಾಕ್ಸ್ ತರುತ್ತೇವೆ, ಬೆಲೆ ಏರಿಕೆಗೆ ಕಡಿವಾಣ ಹಾಕುತ್ತೇವೆ ಎಂದರು.











Click it and Unblock the Notifications