ಉಪ ಚುನಾವಣೆ ಚಿತ್ರಣ; ಬೀದರ್ನ ಬಸವ ಕಲ್ಯಾಣ ಕ್ಷೇತ್ರ
ಬೀದರ್, ಏಪ್ರಿಲ್ 12; ಬೀದರ್ ಜಿಲ್ಲೆಯ ಬಸವಕಲ್ಯಾಣ ಕ್ಷೇತ್ರದ ಉಪ ಚುನಾವಣೆ ಕಣ ರಂಗೇರಿದೆ. ಬಿ. ನಾರಾಯಣರಾವ್ ಅಕಾಲಿಕ ನಿಧನದಿಂದ ತೆರವಾದ ಕ್ಷೇತ್ರದಲ್ಲಿ ಅನುಕಂಪ, ಸ್ವಾಭಿಮಾನ ಮತ್ತು ಜಾತಿ ಲೆಕ್ಕಾಚಾರದ ಚರ್ಚೆಗಳು ಜೋರಾಗಿವೆ.
ಬಿಜೆಪಿಯಿಂದ ಶರಣು ಸಲಗರ್, ಕಾಂಗ್ರೆಸ್ನಿಂದ ದಿ. ಬಿ. ನಾರಾಯಣರಾವ್ ಪತ್ನಿ ಮಾಲಾ, ಜೆಡಿಎಸ್ನಿಂದ ಸೈಯದ್ ಯಸ್ರಬ್ ಅಲಿ ಖಾದ್ರಿ ಅಭ್ಯರ್ಥಿಗಳು. ಕ್ಷೇತ್ರದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಬಿಜೆಪಿ ಟಿಕೆಟ್ ಸಿಗಲಿಲ್ಲ ಎಂದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
2018ರಲ್ಲಿ ಬಿ. ನಾರಾಯಣರಾವ್ ಗೆಲ್ಲುವ ಮೂಲಕ 35 ವರ್ಷಗಳ ಬಳಿಕ ಕ್ಷೇತ್ರದಲ್ಲಿ ಕಾಂಗ್ರೆಸ್ ಬಾವುಟ ಹಾರಿಸಿದ್ದರು. ಕೋವಿಡ್ನಿಂದಾಗಿ ಅವರು ಮೃತಪಟ್ಟ ಕಾರಣ ಉಪ ಚುನಾವಣೆ ಎದುರಾಗಿದೆ. ಕಾಂಗ್ರೆಸ್ ನಾರಾಯಣರಾವ್ ಪತ್ನಿಗೆ ಟಿಕೆಟ್ ಕೊಟ್ಟು ಅನುಕಂಪದ ಮತಗಳ ನಿರೀಕ್ಷೆಯಲ್ಲಿದೆ.
ಏಳು ಬಾರಿ ಜನತಾ ಪರಿವಾರದ ಅಭ್ಯರ್ಥಿಗಳು ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಆದ್ದರಿಂದ, ಜೆಡಿಎಸ್ ಬಸವ ಕಲ್ಯಾಣದಲ್ಲಿ ಅಭ್ಯರ್ಥಿ ಕಣಕ್ಕಿಳಿಸಿದೆ. ಮಸ್ಕಿ ಮತ್ತು ಬೆಳಗಾವಿ ಲೋಕಸಭಾ ಉಪ ಚುನಾವಣೆಯಿಂದ ದೂರ ಉಳಿದಿದೆ.

ಬಿಜೆಪಿಗೆ ಬಂಡಾಯದ್ದೇ ಚಿಂತೆ
ಬಿಜೆಪಿ ಅಭ್ಯರ್ಥಿ ಶರಣು ಸಲಗರ ಕಲಬುರಗಿ ಜಿಲ್ಲೆಯವರು. ಇವರ ಪತ್ನಿ ಸಾವಿತ್ರಿ ಸಲಗರ ಎರಡು ವರ್ಷಗಳ ಹಿಂದೆ ಬಸವಕಲ್ಯಾಣದ ತಹಶೀಲ್ದಾರ್ ಆಗಿ ನಿಯೋಜನೆಗೊಂಡಿದ್ದರು. ಆಗ ಕ್ಷೇತ್ರದಲ್ಲಿದ್ದ ಶರಣು ಸಲಗರ ಸಮಾಜ ಸೇವೆ ಮಾಡುವ ಮೂಲಕ ಉಪ ಚುನಾವಣೆಯ ಬಿಜೆಪಿ ಟಿಕೆಟ್ ಗಿಟ್ಟಿಸಿದ್ದಾರೆ. ಆದರೆ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಬಿಜೆಪಿ ಟಿಕೆಟ್ ಕೈ ತಪ್ಪಿತು ಎಂದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಬಿಜೆಪಿಗೆ ಬಿಸಿ ತುಪ್ಪವಾಗಿದೆ.

ಮಲ್ಲಿಕಾರ್ಜುನ ಖೂಬಾ
ಮಲ್ಲಿಕಾರ್ಜುನ ಖೂಬಾರ ಎರಡು ಬಾರಿ ಜೆಡಿಎಸ್ನಿಂದ ಶಾಸಕರಾಗಿ ಕ್ಷೇತ್ರದಲ್ಲಿ ಆಯ್ಕೆಯಾಗಿದ್ದರು. ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದು ಕಾಂಗ್ರೆಸ್ನ ಬಿ. ನಾರಾಯಣರಾವ್ ವಿರುದ್ಧ ಸೋತಿದ್ದರು. ಶರಣು ಸಲಗರ ಮತ್ತು ಮಲ್ಲಿಕಾರ್ಜುನ ಖೂಬಾ ಇಬ್ಬರು ಲಿಂಗಾಯತ ಸಮುದಾಯಕ್ಕೆ ಸೇರಿದವರು. ಆದ್ದರಿಂದ ಮತಗಳು ವಿಭಜನೆಯಾಗುವ ಆತಂಕವೂ ಇದೆ.

ಮುಸ್ಲಿಂ ಮತಗಳ ಮೇಲೆ ಜೆಡಿಎಸ್ ಕಣ್ಣು
ಕ್ಷೇತ್ರದಲ್ಲಿ ಮುಸ್ಲಿಂ ಮತಗಳು ಹೆಚ್ಚಿದ್ದು, ಜೆಡಿಎಸ್ ಸೈಯದ್ ಯಸ್ರಬ್ ಅಲಿ ಖಾದ್ರಿ ಕಣಕ್ಕಿಳಿಸಿದೆ. ಮಾರುತಿರಾವ್ ಮುಳೆ ಜೆಡಿಎಸ್ನಿಂದ ಬಿಜೆಪಿಗೆ ಹೋಗಿದ್ದಾರೆ. ಕಳೆದ ಬಾರಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿದ್ದ ಪಿಜಿಆರ್ ಸಿಂಧ್ಯಾ ಕಾಂಗ್ರೆಸ್ ಸೇರಿದ್ದಾರೆ. ಇದರಿಂದಾಗಿ ಜೆಡಿಎಸ್ ಪಕ್ಷಕ್ಕೆ ಕೊಂಚ ಮಟ್ಟಿನ ಹಿನ್ನಡೆಯಾಗಿದೆ. ಎಚ್. ಡಿ. ಕುಮಾರಸ್ವಾಮಿ ಅವರೇ ಪ್ರಚಾರ ನಡೆಸಿದ್ದು, ಫಲ ನೀಡಲಿದೆಯೇ? ಕಾದು ನೋಡಬೇಕು.
Recommended Video

ಜಾತಿ, ಮತಗಳ ಲೆಕ್ಕಾಚಾರ
ಕ್ಷೇತ್ರದಲ್ಲಿ ಲಿಂಗಾಯತ, ಮರಾಠ, ಮುಸ್ಲಿಂ ಮತದಾರರು ಸರಿಸುಮಾರು ಒಂದೇ ಸಂಖ್ಯೆಯಲ್ಲಿದ್ದಾರೆ. ಮೂರು ಪಕ್ಷದ ಅಭ್ಯರ್ಥಿಗಳಿಗೆ ಅವರನ್ನು ಒಲಿಸಿಕೊಳ್ಳುವುದೇ ಸವಾಲು. ಕ್ಷೇತ್ರದಲ್ಲಿ 1,24,530 ಪುರುಷರು, 1,14,325 ಮಹಿಳೆಯರು ಸೇರಿ 2,38,855 ಮತದಾರರು ಇದ್ದಾರೆ. ಏಪ್ರಿಲ್ 17ರಂದು ಚುನಾವಣೆ ನಡೆಯಲಿದ್ದು, ಮೇ 2ಕ್ಕೆ ಫಲಿತಾಂಶ ಹೊರಬರಲಿದೆ.












Click it and Unblock the Notifications