ಲಾಕ್ಡೌನ್; ಬೀದರ್ ನಗರದ ರಸ್ತೆಗಳು ಖಾಲಿ-ಖಾಲಿ
ಬೀದರ್, ಮೇ 10; ಕೊರೊನಾ ಎರಡನೇ ಅಲೆ ಅಬ್ಬರ ತಗ್ಗಿಸಲು ಕರ್ನಾಟಕ ಸರ್ಕಾರ ಲಾಕ್ಡೌನ್ ಘೋಷಣೆ ಮಾಡಿದೆ. ಸೋಮವಾರದಿಂದ ಲಾಕ್ಡೌನ್ ಕಠಿಣ ನಿಯಮಗಳು ಜಾರಿಗೆ ಬಂದಿದ್ದು, ಬೀದರ್ನಲ್ಲಿ ಜನರು ಮನೆಯಿಂದ ಹೊರಬರಲು ಹೆದರುತ್ತಿರುವುದು ಕಂಡುಬಂತು.
ನಗರದ ಬಹುತೇಕ ರಸ್ತೆಗಳು ಖಾಲಿ-ಖಾಲಿಯಾಗಿದ್ದವು. ಪ್ರಮುಖ ಮಾರ್ಗಗಳಲ್ಲಿ ಪೊಲೀಸರು ನಾಕಾಬಂದಿ ಹಾಕಿದ್ದು, ವಾಹನ ಸವಾರರು ಅನಗತ್ಯವಾಗಿ ಓಡಾಟ ನಡೆಸಿದರೆ ವಿಚಾರಣೆ ನಡೆಸುತ್ತಿದ್ದಾರೆ. ಇದರಿಂದಾಗಿ ಜನರು ರಸ್ತೆಗಿಳಿಯಲು ಯೋಚಿಸುವಂತಾಗಿದೆ.
ಸದಾ ಜನರಿಂದ ತುಂಬಿ ತುಳುಕುತ್ತಿದ್ದ ಗವಾನ್ ಚೌಕ, ಚೌಬಾರಾ, ನಯಾ ಕಮಾನ್ ಪ್ರದೇಶಗಳಲ್ಲಿ ಪೊಲೀಸರು ಬ್ಯಾರಿಕೇಡ್ಗಳನ್ನು ಹಾಕಿದ್ದು, ಗಸ್ತು ಕಾಯುತ್ತಿರುವ ಪೊಲೀಸರು ಮಾತ್ರ ಕಾಣುತ್ತಿದ್ದಾರೆ.

ನಗರದ ಪ್ರಮುಖ ರಸ್ತೆಗಳನ್ನು ಮಾತ್ರ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಉಳಿದ ಕಡೆಗಳಲ್ಲಿ ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಲಾಗಿದೆ. ನಗರದ ಹೊರಗೆ ಮತ್ತು ಒಳಗೆ ಹೋಗಬೇಕಾದರೆ ಪೊಲೀಸರ ಅನುಮತಿ ಪಡೆಯುವುದು ಕಡ್ಡಾಯ.
ಅಂಬೇಡ್ಕರ್ ಚೌಕ, ಬಸವೇಶ್ವರ ಚೌಕ, ಗವಾನ್ ಚೌಕ, ಚೌಬಾರಾ, ಮಂಗಲಪೇಟ್, ಫತ್ತೇದರವಾಜಾ ಮುಂತಾದ ಕಡೆಗಳಲ್ಲಿ ಪೊಲೀಸ್ ಚೌಕಿ ಹಾಕಲಾಗಿದ್ದು, ಅನಗತ್ಯ ಓಡಾಡಕ್ಕೆ ಅವಕಾಶವೇ ಇಲ್ಲದಂತೆ ಮಾಡಲಾಗಿದೆ. ಇದರಿಂದಾಗಿ ಪ್ರಮುಖ ರಸ್ತೆಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು.
ತಹಶೀಲ್ದಾರ್ ಕಚೇರಿ ಮುಂಭಾಗದಿಂದ ನ್ಯಾಯಾಲಯದ ರಸ್ತೆಯನ್ನು ಸಂಪೂರ್ಣ ಮುಚ್ಚಲಾಗಿದೆ. ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗಬೇಕಾದರೆ ಬ್ಯಾರಿಕೇಡ್ ದಾಟಿಕೊಂಡೇ ಹೋಗಬೇಕು. ಅನಗತ್ಯ ಓಡಾಟವನ್ನು ಸಂಪೂರ್ಣವಾಗಿ ನಿಯಂತ್ರಿಸಲಾಗಿದೆ.
ಅಗತ್ಯ ಸೇವೆಯಲ್ಲಿರುವ ಸಿಬ್ಬಂದಿಗಳಿಗೆ ಮಾತ್ರ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಗುರುತಿನ ಚೀಟಿ ಇದ್ದರೆ ಮಾತ್ರ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಹೋಟೆಲ್ಗಳಲ್ಲಿ ಪಾರ್ಸೆಲ್ ಪಡೆಯಲು ಅವಕಾಶವಿದೆ. ಆದರೆ ಗ್ರಾಹಕರಿಲ್ಲದೇ ಹೋಟೆಲ್ ಭಣಗುಡುತ್ತಿವೆ.












Click it and Unblock the Notifications