Karnataka Budget 2023: ಕರ್ನಾಟಕದ ಕಿರೀಟ ಬೀದರ್ ಜಿಲ್ಲೆಯ ನಿರೀಕ್ಷೆಗಳೇನು..?
ಫೆಬ್ರವರಿ 10ರಂದು ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು, ಫೆಬ್ರವರಿ 17ರಂದು ಮುಖ್ಯಮಂತ್ರಿ ರಾಜ್ಯ ಬಜೆಟ್ ಮಂಡನೆ ಆಗಲಿದೆ. ಕರ್ನಾಟಕ ಬಜೆಟ್ 2023ರ ಮೇಲಿನ ಬೀದರ್ ಜಿಲ್ಲೆಯ ಜನತೆಯ ನಿರೀಕ್ಷೆಗಳೇನು ಎನ್ನುವುದು ಇಲ್ಲಿದೆ.
ಫೆಬ್ರವರಿ 17, 2023ರಂದು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ರಾಜ್ಯ ಬಜೆಟ್ ಮಂಡನೆ ಮಾಡಲಿದ್ದಾರೆ. ಈ ಬಾರಿ ಬಜೆಟ್ ಗಾತ್ರವು 2.7 ಲಕ್ಷ ಕೋಟಿ ರೂಪಾಯಿಗೂ ಅಧಿಕವಾಗಿರಲಿದೆ ಎಂದು ಅಂದಾಜಿಸಲಾಗಿದೆ. ಈ ಬಾರಿ ಬಜೆಟ್ ಮೇಲೆ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ನಿರೀಕ್ಷೆಗಳು ಹೆಚ್ಚಿವೆ. ಪ್ರತಿಯೊಂದು ಜಿಲ್ಲೆಯ ಜನರು ಸ್ಥಳೀಯ ಸಮಸ್ಯೆಗಳಿಗನುಸಾರ ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಈ ಬಾರಿ ಬಜೆಟ್ ಮೇಲೆ ಬೀದರ್ ಜನತೆ ಕೂಡ ತಮ್ಮತ್ತ ಒಲಿಯಬಹುದಾದ ಅನುದಾನ ಕಡೆಗೆ ಚಿತ್ತ ನೆಟ್ಟಿದ್ದಾರೆ.
ಉತ್ತರ ಕರ್ನಾಟಕದ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಹೆಚ್ಚು ಒಲವು ಹೊಂದಿರುತ್ತಾರೆನ್ನುವ ಭರವಸೆ ಇದೆ. ಹೀಗಾಗಿ ಬೀದರ್ ಜನತೆಗೆ ಈ ಬಾರಿ ಬಜೆಟ್ ಮೇಲೆ ನಿರೀಕ್ಷೆಗಳು ಹೆಚ್ಚಿವೆ. ಬೀದರ್ ಹಿಂದುಳಿದ ಪ್ರದೇಶ. ಇದು ಅಭಿವೃದ್ಧಿ ಕಾಣಬೇಕಾದರೆ ಆರ್ಥಿಕವಾಗಿ ಸದೃಢವಾಗಬೇಕು. ಅದಕ್ಕಾಗಿ ಹೆಚ್ಚು ಹೋರಾಟಗಳನ್ನು ಮಾಡಲಾಗಿದೆ. ಆದರೂ ಪ್ರಯೋಜನವಾಗಿಲ್ಲ. ಹೀಗಾಗಿ ಈ ಬಾರಿ ಬಜೆಟ್ನಲ್ಲಾದರೂ ಮೂಲಭೂತ ಸಮಸ್ಯೆಗಳು ದೂರವಾಗುತ್ತಾ ಅನ್ನೋ ನಿರೀಕ್ಷೆಯಲ್ಲಿ ಬೀದರ್ ಜನ ಇದ್ದಾರೆ. ಹಾಗಾದರೆ ಈ ಬಾರಿ ಬಜೆಟ್ ಬಗ್ಗೆ ಸಾಂಸ್ಕೃತಿಕವಾಗಿ ಕರ್ನಾಟಕದ ಅತ್ಯಂತ ಪ್ರಮುಖ ಜಿಲ್ಲೆಗಳಲ್ಲೊಂದಾದ ಬೀದರ್ ಜಿಲ್ಲೆಯ ಜನ ಇಟ್ಟುಕೊಂಡ ನಿರೀಕ್ಷೆಗಳೇನು ನೋಡೋಣ.

ನೀರಾವರಿ ಸೌಲಭ್ಯಗಳು
ಬೀದರ್ನಲ್ಲಿ ನೀರಾವರರಿ ಸೌಲಭ್ಯಗಳ ಕೊರತೆ ಹೆಚ್ಚಾಗಿದೆ. ಬೇಸಿಗೆಗೆ ವ್ಯವಸಾಯಕ್ಕೆ ನೀರು ಸುಗುವುದಿರಲಿ ಕುಡಿಯಲು ನೀರು ಸಿಗುವುದೇ ದೊಡ್ಡ ವಿಚಾರ. ಹೀಗಾಗಿ ಕುಡಿಯೋ ನೀರಿನ ಸೌಲಭ್ಯಗಳಾಗಬೇಕಿದೆ. ರೈತರಿಗೆ ವ್ಯವಸಾಯ ಮಾಡಲು ನೀರಿನ ಸೌಲಭ್ಯಗಳಿಲ್ಲ. ಕಾರಂಜಾ ಜಲಾಶಯದಿಂದ ಕೇವಲ ಕುಡಿಯುವ ನೀರಿನ ಸೌಲಭ್ಯ ಮಾತ್ರವಿದೆ. ಇದರಿಂದ ರೈತರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಜಲಾಶಯ ಅಭಿವೃದ್ಧಿಗೆ ಕೋಟಿ ಹಣ ಸುರಿದು ರೈತರ ಜಮೀನು ಬಳಕೆ ಮಾಡಿಕೊಂಡ ಸರ್ಕಾರ ಅದಕ್ಕೆ ಪರಿಹಾರವನ್ನೂ ನೀಡಿಲ್ಲ. ಈ ತಾರತಮ್ಯ ಧೋರಣೆಗೆ ಬೇಸತ್ತು ಬೀದರ್ನಲ್ಲಿ ಹಲವಾರು ಬಾರಿ ಪ್ರತಿಭಟನೆಗಳು ನಡೆದಿವೆ. 30-40 ವರ್ಷಗಳಿಂದ ಕಾರಂಜಾ ಮುಳುಗಡೆಯಿಂದಾದ ಹಾನಿಯನ್ನು ಭರಿಸಲು ಸ್ಥಳೀಯರು ಹೋರಾಟ ಮಾಡುತ್ತಿದ್ದಾರೆ. ಆದರೆ ಸರ್ಕಾರ ಗಮನ ಹರಿಸುತ್ತಿಲ್ಲ. ಹೀಗಾಗಿ ನೀರಾವರಿ ಸೌಲಭ್ಯಕ್ಕಾಗಿ ಹೆಚ್ಚಿನ ಅನುದಾನವನ್ನು ನೀಡಬೇಕು. ಈ ಮೂಲಕ ಬೀದರ್ ಜಿಲ್ಲೆಯ ಆರ್ಥಿಕ ಸ್ಥಿತಿ ಸುಧಾರಿಸಬೇಕು ಎನ್ನುವ ಒತ್ತಾಯವಿದೆ.

ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಒತ್ತಾಯ
ಬಸವ ಕಲ್ಯಾಣ, ಔರಾದ್, ಬಾಲ್ಕಿ ಇತರ ಪ್ರದೇಶದ ರೈತರು ಒಣ ಬೇಸಾಯದ ಮೇಲೆ ಅವಲಂಬಿತವಾಗಿದ್ದಾರೆ. ಒಣ ಬೇಸಾಯದಿಂದ ರೈತರ ಬವಣೆಗಳು ಸುಧಾರಿಸಲು ಸಾಧ್ಯವಿಲ್ಲ. ಸರ್ಕಾರ ರೈತರ ಆದಾಯವನ್ನು ಹೆಚ್ಚಳ ಮಾಡುವುದಾಗಿ ಘೋಷಣೆ ಮಾಡಿದೆ. ಆದರೆ ಅದರಿಂದ ಪ್ರಯೋಜನವಿಲ್ಲ. ಎಲ್ಲಿವರೆಗೆ ನೀರಾವರಿ ಸೌಲಭ್ಯ ಕೊಡುವುದಿಲ್ಲವೋ ಎಲ್ಲಿಯವರೆಗೂ ಬೆಂಬಲ ಬೆಲೆ ಕೊಡಲು ಸಾಧ್ಯವಿಲ್ಲವೋ ಅಲ್ಲಿವರೆಗೂ ರೈತರ ಆದಾಯ ದ್ವಿಗುಣಗೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಗೋದಾವರಿ ನದಿಯ ನೀರಿನ ಉಪಯೋಗಕ್ಕೆ ಸರ್ಕಾರ ಸಹಕಾರ ಮಾಡಬೇಕು. ಸಣ್ಣ ಸಣ್ಣ ನೀರಾವರಿ ಯೋಜನೆಗಳನ್ನು ಈ ಭಾಗದಲ್ಲಿ ಮಾಡಬೇಕಾಗಿದೆ.

ನಿರುದ್ಯೋಗದ ಸಮಸ್ಯೆಗಳು
ಈ ಬಾರಿ ಬೀದರ್ ಜನತೆಯಲ್ಲಿರುವ ಮತ್ತೊಂದು ಬಹುಮುಖ್ಯವಾದ ಬೇಡಿಕೆ ಎಂದರೆ ಅದು ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸುವುದು. ಬೀದರ್ನಲ್ಲಿ ನಿರುದ್ಯೋಗ ಸಮಸ್ಯೆಗಳನ್ನು ಹೋಗಲಾಡಿಸಲು ಕೈಗಾರಿಕೋದ್ಯಮಕ್ಕೆ ಉತ್ತೇಜನ ನೀಡಬೇಕು ಎನ್ನುವ ಬೇಡಿಕೆಗಳಿವೆ. ಆಗ ಮಾತ್ರ ನಿರುದ್ಯೋಗಿಗಳಿಗೆ ಉದ್ಯೋಗ, ವ್ಯಾಪಾರಿಗಳ ವ್ಯಾಪಾರ ಕೂಡ ವೃದ್ಧಿಯಾಗುವುದು ಮಾತ್ರವಲ್ಲದೆ ಎಲ್ಲಾ ರೀತಿಯ ಸಮೃದ್ಧಿಯಾಗುತ್ತದೆ ಎನ್ನುವ ನಿರೀಕ್ಷೆಗಳಿವೆ. ಕಳೆದ ವರ್ಷ ಹೆಚ್ಡಿ ಕುಮಾರಸ್ವಾಮಿ ಅವರು ಬೀದರ್ ಅನ್ನು ರೈತರ ಸಲಕರಣೆಗಳನ್ನ ಉತ್ಪತ್ತಿ ಮಾಡುವ ಕೈಗಾರಿಕೋದ್ಯಮ ಪ್ರದೇಶ ಎಂದು ಕರೆದಿದ್ದರು. ಆದರೆ ಇಲ್ಲಿವರೆಗೂ ಯಾವ ಒಬ್ಬ ಕೈಗಾರಿಕೋದ್ಯಮಿ ಈ ಪ್ರದೇಶದತ್ತ ಬಂದಿಲ್ಲ. ಹೀಗಾಗಿ ಸರ್ಕಾರ ತೆಲಂಗಾಣ ಮಾದರಿಯಲ್ಲಿ ಕೈಗಾರಿಕೋದ್ಯಮವನ್ನು ಅಭಿವೃದ್ಧಿಪಡಿಸಬೇಕಿದೆ.

ಗುಂಡಿ ಬಿದ್ದ ರಸ್ತೆಗಳಲ್ಲೇ ಸಂಚಾರ
ಬೀದರ್ನಲ್ಲಿ ಅತಿ ದೊಡ್ಡ ಸಮಸ್ಯೆ ಅಂದರೆ ಅದು ರಸ್ತೆ ಸಮಸ್ಯೆ. ಕಳೆದ 10 ವರ್ಷಗಳಿಂದ ಬೀದರ್ನ ಔರಾದ್ ರಸ್ತೆಗಳಲ್ಲಿ ಡಾಂಬರೀಕರಣ ಮಾಡಲಾಗಿಲ್ಲ. ಹಲವಾರು ಅಪಘಾತಗಳು ಈ ರಸ್ತೆಯಲ್ಲಿ ಸಂಭವಿಸಿವೆ. ಅನೇಕ ಸಾವು ನೋವುಗಳು ಸಂಭವಿಸಿವೆ. ಸರ್ಕಾರ ಗ್ರಾಮೀಣ ಭಾಗದ ಜನರ ಮೂಲಭೂತ ಸಮಸ್ಯೆಗಳತ್ತ ಗಮನಹರಿಸಬೇಕಾಗಿದೆ. ಕೆಲವೆಡ ಆಮೆಗತಿಯ ಕಾಮಗಾರಿ ನಡೆಯುತ್ತಿದೆ. ಎಲ್ಲಾ ಪಕ್ಷದ ಸರ್ಕಾರಗಳು ಬಂದು ಹೋಗಿವೆ. ಕೋಟಿ ಕೋಟಿ ಅನುದಾನ ನೀಡಿರುವುದಾಗಿ ಸುಳ್ಳು ಹೇಳಿಕೆಯನ್ನು ನೀಡಿವೆ. ಜಿಲ್ಲೆಯಲ್ಲಿ ಯಾವುದೇ ನಿರೀಕ್ಷಿತ ಅಭಿವೃದ್ಧಿಯಾಗಿಲ್ಲ. ಕಾರ್ಯಗತಗೊಂಡಾಗ ಮಾತ್ರ ಅಭಿವೃದ್ಧ ಕಾಣಲು ಮಾತ್ರ ಸಾಧ್ಯ ಕೇವಲ ಘೋಷಣೆಯಿಂದ ಯಾವುದೇ ಕಾರ್ಯಗಳು ಆಗುವುದಿಲ್ಲ ಎನ್ನುವುದು ಸ್ಥಳೀಯರ ಮಾತು.

ಕೇಂದ್ರೀಯ ವಿದ್ಯಾಲಯ
ವಿಜಯಪುರ, ಮೈಸೂರು, ಬಾದಾಮಿಯಂತೆ ಬೀದರ್ನಲ್ಲೂ ಅದ್ಭುತವಾದ ಸ್ಮಾರಕಗಳಿವೆ. ಐತಿಹಾಸಿಕ ಕೋಟೆಯಿದೆ. ಇವುಗಳ ಅಭಿವೃದ್ಧಿಗಾಗಿ ರಾಜ್ಯ ಸರಕಾರ ಅನುದಾನ ನೀಡಬೇಕು. ಇದಕ್ಕಾಗಿ ಬೀದರ್ ಜಿಲ್ಲೆಯನ್ನು ಕೇಂದ್ರದ ಪ್ರವಾಸೋದ್ಯಮದ ಪಟ್ಟಿಗೆ ಸೇರಿಸಬೇಕು ಎನ್ನುವುದು ಜಿಲ್ಲೆಯ ಜನರ ಬೇಡಿಕೆಯಾಗಿದೆ. ಬೀದರ್ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಒತ್ತು ನೀಡಬೇಕು ಎನ್ನುವ ಒತ್ತಾಯವಿದೆ. ಸರಕಾರವೂ ಪ್ರವಾಸೋದ್ಯಮ ಅಭಿವೃದ್ಧಿಗೆ ಅನುದಾನ ನೀಡಬೇಕು. ಜೊತೆಗೆ ಪ್ರವಾಸೋದ್ಯಮ ಅಭಿವೃದ್ಧಿ ಹೊರತು ಪಡಿಸಿ ಬೀದರ್ ಜಿಲ್ಲೆಗೆ ಇನ್ನೊಂದು ಕೇಂದ್ರೀಯ ವಿದ್ಯಾಲಯ ನೀಡಬೇಕು ಎನ್ನುವ ಬೇಡಿಕೆ ಇದೆ. ಹೀಗೆ ಬೀದರ್ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗಾಗಿ ಸರ್ಕಾರ ಈ ಬಾರಿ ಬಜೆಟ್ನಲ್ಲಿ ಹೆಚ್ಚಿನ ಅನುದಾನ ನೀಡಲಿದೆ ಎನ್ನುವ ನಿರೀಕ್ಷೆಗಳು ಇವೆ. ಆದರೆ ರಾಜ್ಯ ಸರ್ಕಾರ ಕರ್ನಾಟಕದ ಕಿರೀಟ ಎಂದೇ ಕರೆಯಲ್ಪಡುವ ಬೀದರ್ ಜನತೆಯತ್ತ ಒಲವು ತೋರುತ್ತಾ ಕಾದು ನೋಡಬೇಕಿದೆ.












Click it and Unblock the Notifications