''ಕಾಂಗ್ರೆಸ್ ಮತ್ತು ಬಿಜೆಪಿ ಮ್ಯಾಚ್ ಫಿಕ್ಸಿಂಗ್ ಗಿರಾಕಿಗಳು''
ಬೀದರ್, ಏಪ್ರಿಲ್ 4: "ಕರ್ನಾಟಕ ರಾಜ್ಯಕ್ಕೆ ಒಳ್ಳೆಯದಾಗಬೇಕು ಅಂದರೆ ಎರಡು ರಾಷ್ಟ್ರೀಯ ಪಕ್ಷಗಳು ಮನೆಗೆ ಹೋಗಬೇಕು. ಪ್ರಾದೇಶಿಕ ಪಕ್ಷ ಜೆಡಿಎಸ್ ಅಧಿಕಾರಕ್ಕೆ ಬರಬೇಕು" ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಬಂಡೆಪ್ಪ ಕಾಶೆಂಪೂರ್ ರವರು ಹೇಳಿದ್ದಾರೆ.
ಬಸವಕಲ್ಯಾಣ ಕ್ಷೇತ್ರದ ಬಸವಕಲ್ಯಾಣ, ಹತ್ಯಾಳ, ಹಾರಕೂಡ, ಸಿರಗಾಪೂರ, ಗದಲೇಗಾಂವ್, ಮೈಸಲಗಾ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಜೆಡಿಎಸ್ ಅಭ್ಯರ್ಥಿ ಸೈಯದ್ ಯಸ್ರಬ್ ಅಲಿ ಖಾದ್ರಿ ಪರ ಪ್ರಚಾರ ನಡೆಸಿ ಕಾಶೆಂಪೂರ್ ಮಾತನಾಡುತ್ತಿದ್ದರು.
"ರಾಜ್ಯದಿಂದ ಆಯ್ಕೆಯಾದ ಅಷ್ಟು ಬಿಜೆಪಿ ಎಂಪಿಗಳು ರಾಜ್ಯದ ಪರವಾಗಿ ರಾಜ್ಯದ ಜನತೆಯ ಪರವಾಗಿ ಕೇಂದ್ರದಲ್ಲಿ ಯಾವತ್ತಾದರೂ ಧ್ವನಿ ಎತ್ತಿದ್ದಾರಾ" ಎಂದು ಪ್ರಶ್ನಿಸಿರುವ ಕಾಶೆಂಪೂರ್, ಬಸವಕಲ್ಯಾಣದಲ್ಲಿ ಸಾಹೇಬ್, ಬೀದರ್ ನಲ್ಲಿ ಬಂಡೆಪ್ಪ ಕಾಶೆಂಪೂರ್, ಬೆಂಗಳೂರಿನಲ್ಲಿ ಕುಮಾರಣ್ಣ ಯಾವಾಗಲೂ ನಿಮ್ಮ ಕೆಲಸ ಮಾಡಲು ತಯಾರಿದ್ದೇವೆ" ಎನ್ನುವ ಭರವಸೆಯನ್ನು ನೀಡಿದರು.

"ಕಾಂಗ್ರೆಸ್ನವರು ಬಿಜೆಪಿಯವರು ಮ್ಯಾಚ್ ಫಿಕ್ಸಿಂಗ್ ಗಿರಾಕಿಗಳು. ಕಾಂಗ್ರೆಸ್ನವರು ಅಧಿಕೃತವಾಗಿ ವಿರೋಧ ಪಕ್ಷದ ಸ್ಥಾನದಲ್ಲಿದ್ದಾರೆ. ಆದರೆ, ಯಾವತ್ತಾದರೂ ರಾಜ್ಯ ಸರ್ಕಾರದ ಒಂದೇ ಒಂದು ಹಗರಣವನ್ನು ಬಯಲಿಗೆಳೆದಿದ್ದಾರಾ. ಅವರೆಲ್ಲಾ ಬರೀ ಮ್ಯಾಚ್ ಫಿಕ್ಸಿಂಗ್ ಮಾಡಿಕೊಳ್ಳುತ್ತಾರೆ" ಎಂದು ಕಾಶೆಂಪೂರ್ ಟೀಕಿಸಿದರು .
ಬಸವಣ್ಣನ ನಾಡಾದ ಬಸವಕಲ್ಯಾಣದಲ್ಲಿ ಜಾತ್ಯತೀತವಾಗಿ ಎಲ್ಲರೂ ಪ್ರಾದೇಶಿಕ ಪಕ್ಷವಾದ ಜಾತ್ಯತೀತ ಜನತಾದಳಕ್ಕೆ ಮತ ನೀಡಬೇಕೆಂದು ಶಾಸಕ ಬಂಡೆಪ್ಪ ಕಾಶೆಂಪೂರ್ರವರು ಮನವಿ ಮಾಡಿದರು.
ಇದೇ ವೇಳೆ ತಮ್ಮ ಪಕ್ಷ ಅಧಿಕಾರದಲ್ಲಿದ್ದ ದಿನಗಳನ್ನು ನೆನಪಿಸಿಕೊಂಡ ಅವರು, "ನಮ್ಮದು ರೈತರ ಪಾರ್ಟಿ, ನಾನು ಸಹಕಾರ ಸಚಿವನಾಗಿದ್ದಾಗ ರಾಜ್ಯದ ಒಳಿತಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದೆ. ಕೃಷಿ ಸಚಿವನಾಗಿದ್ದಾಗ ರೈತರ ಸಾಲ ಮನ್ನಾ ಮಾಡಿದ್ದೆ. ಮೋದಿಯವರು ರೈತರಿಗೆ ಎರಡು ಸಾವಿರ ರೂಪಾಯಿ ಕೊಡಲು ಹರಸಾಹಸ ಪಡುತ್ತಿದ್ದಾರೆ" ಎಂದು ಕಾಶೆಂಪೂರ್ ಹೇಳಿದರು.












Click it and Unblock the Notifications