ಬೀದರ್, ಕಲಬುರಗಿಯಾದ್ಯಂತ ವರುಣನ ಆರ್ಭಟ ಜೋರು
ಬೀದರ್, ಜೂನ್ 28: ಕಲ್ಯಾಣ ಕರ್ನಾಟಕದ ಭಾಗದಲ್ಲಿ ನೈಋತ್ಯ ಮುಂಗಾರು ಚುರುಕುಗೊಂಡಿದ್ದು, ಬೀದರ್ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ.
ಭಾನುವಾರ ಬೆಳಗಿನ ಜಾವ ಸುರಿದ ಮಳೆಗೆ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಭಾಲ್ಕಿ ತಾಲ್ಲೂಕಿನ ಹಾಲೆ ಹಿಪರ್ಗಾ ಗ್ರಾಮದ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ.
ನಸುಕಿನ ನಾಲ್ಕು ಗಂಟೆಯಿಂದ ಈ ಭಾಗದಲ್ಲಿ ನಿರಂತರವಾಗಿ ಸುರಿದ ಮಳೆ ಸುರಿಯುತ್ತಿದ್ದು, ಹಳ್ಳಗಳ ಪ್ರವಾಹಕ್ಕೆ ಅಕ್ಕ ಪಕ್ಕದ ಹೊಲಗಳಲ್ಲಿ ಬಿತ್ತನೆ ಮಾಡಿರುವ ಬೆಳೆ ಕೊಚ್ಚಿ ಹೋಗಿದೆ. ನಾಲ್ಕು ಗಂಟೆಯಿಂದಲೇ ರಸ್ತೆ ಸಂಪರ್ಕ ಬಂದಾಗಿದೆ.

ಹಾಲೆಹಿಪರ್ಗಾ, ಕೋಸಂ, ಜೈನಾಪುರ ರಸ್ತೆ ಸಂಪರ್ಕ ಬಂದ ಆಗಿರುವ ಗ್ರಾಮಗಳು. ಬೀದರ್ ಜಿಲ್ಲೆಯ ಹಲವೆಡೆ ತಡರಾತ್ರಿಯಿಂದ ಮುಂಗಾರು ಮಳೆ ಶುರುವಾಗಿದೆ.

ಅದೇ ರೀತಿ ಕಲಬುರಗಿ ಜಿಲ್ಲೆಯಲ್ಲಿಯೂ ತಡರಾತ್ರಿಯಿಂದ ವರುಣನ ಆರ್ಭಟ ಜೋರಾಗಿದ್ದು, ರಾತ್ರಿಯಿಂದ ಸುರಿದ ಭಾರಿ ಮಳೆಗೆ ಜವಳಗಾ ಬಿ ಗ್ರಾಮದ ಸೇತುವೆ ಜಲಾವೃತಗೊಂಡಿದೆ. ಬಿಟ್ಟುಬಿಡದೇ ಸುರಿಯುತ್ತಿರುವ ಮಳೆಯಿಂದ ಹಳ್ಳಗಳು ತುಂಬಿ ಹರಿಯುತ್ತಿವೆ.












Click it and Unblock the Notifications