ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿ ಶಾಸಕರನ್ನು ಗೆಲ್ಲಿಸಿ-ಶ್ರೀರಾಮುಲು
ಬೀದರ್, ಅಕ್ಟೋಬರ್ 18: "ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿಯ ಗರಿಷ್ಠ ಶಾಸಕರನ್ನು ಗೆಲ್ಲಿಸಬೇಕು. ರಾಜ್ಯದಲ್ಲಿ 150 ಬಿಜೆಪಿ ಶಾಸಕರು ಗೆದ್ದು ಅಧಿಕಾರ ಪಡೆಯುವಂತಾಗಲು ಮುಖಂಡರು ಮತ್ತು ಕಾರ್ಯಕರ್ತರು ಶ್ರಮಿಸಬೇಕಿದೆ," ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ಬೀದರ್ ಜಿಲ್ಲೆಯ ಔರಾದ್ನಲ್ಲಿ ನಡೆದ ಜನಸಂಕಲ್ಪ ಯಾತ್ರೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಈ ಭಾಗದಲ್ಲಿ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಅವರು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಗೋವುಗಳ ಸಂರಕ್ಷಣೆಗಾಗಿ 30 ಜಿಲ್ಲೆಗಳಲ್ಲಿ ಗೋಶಾಲೆ ನಿರ್ಮಾಣದ ಕೆಲಸ ಮಾಡಿದ್ದಾರೆ. ಇದು ಅತ್ಯಂತ ಶ್ಲಾಘನಾರ್ಹ. ಗೋವುಗಳಿಗಾಗಿ ಮೊಬೈಲ್ ಕ್ಲಿನಿಕ್ ತೆರೆದಿದ್ದಾರೆ ಇದು ಎಲ್ಲರು ಮೆಚ್ಚುವ ಕೆಲಸ," ಎಂದರು.
Breaking; ಬೀದರ್ನಲ್ಲಿ ಬಿಜೆಪಿ ಜನಸಂಕಲ್ಪ ಯಾತ್ರೆ, ಯಡಿಯೂರಪ್ಪ ಗೈರು
ಇನ್ನು ವಿಜಯ ಸಂಕಲ್ಪಕ್ಕಾಗಿ ಬಿಜೆಪಿ ಯಾತ್ರೆಗಳನ್ನು ನಡೆಸುತ್ತಿದೆ. ಇವತ್ತು ಬೀದರ್ ಜಿಲ್ಲೆಯ ಬಸವಣ್ಣನ ಜನ್ಮಭೂಮಿ- ಕಲ್ಯಾಣ ಭೂಮಿಯಲ್ಲಿ ಪ್ರವಾಸ ಮುಂದುವರಿದಿದೆ. ಈ ಕಾರ್ಯಕ್ರಮದ ಮೂಲಕ 1.20 ಲಕ್ಷ ಲಂಬಾಣಿ ಹಟ್ಟಿಗಳು, ಕುರುಬರ ಹಟ್ಟಿಗಳನ್ನು ಕಂದಾಯ ಗ್ರಾಮವನ್ನಾಗಿ ಸಿಎಂ ಮತ್ತು ಕಂದಾಯ ಸಚಿವರು ಘೋಷಿಸಿದ್ದಾರೆ. ಇದು ಅಭಿವೃದ್ಧಿಗೆ ಪೂರಕ ಎಂದರು.
"ಕಲ್ಯಾಣ ಕರ್ನಾಟಕದಲ್ಲಿ 1600 ಹೊಸ ಬಸ್ ಖರೀದಿಸಿ ಓಡಾಟಕ್ಕೆ ಅವಕಾಶ ಮಾಡಲಾಗುತ್ತಿದೆ. ನಮ್ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಎಸ್ಸಿ, ಎಸ್ಟಿ ಸಮುದಾಯದ ಅನುದಾನವನ್ನು ಹೆಚ್ಚಿಸಿ ನೆರವಾಗಿದ್ದಾರೆ. ಬಿಜೆಪಿಯ ಕೇಂದ್ರ- ರಾಜ್ಯ ಸರಕಾರಗಳು ದೇಶದ ಹಾಗೂ ರಾಜ್ಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಕಾಂಗ್ರೆಸ್ ಸರಕಾರವು ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಕನಿಷ್ಠ ಅನುದಾನವನ್ನು ನೀಡಿದ್ದರೆ, ನಮ್ಮ ಸರಕಾರವು ಈ ಅನುದಾನವನ್ನು ದ್ವಿಗುಣಗೊಳಿಸಿದೆ," ಎಂದರು.
ಔರಾದ್ನಲ್ಲಿ ನಡೆದ ಜನಸಂಕಲ್ಪ ಯಾತ್ರೆಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಚಿವ ಬೈರತಿ ಬಸವರಾಜ್ ಜನರನ್ನುದ್ದೇಶಿಸಿ ಮಾತನಾಡಿದ್ದು, ಕೇಂದ್ರದ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರಕಾರ ಮತ್ತು ರಾಜ್ಯದ ಬೊಮ್ಮಾಯಿಯವರ ಸರಕಾರದಿಂದ ದೇಶ ಮತ್ತು ರಾಜ್ಯದ ಸರ್ವತೋಮುಖ ಅಭಿವೃದ್ಧಿ ಆಗಿದೆ. ಇದನ್ನು ಗಮನಿಸಿ ಜನತೆ ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲಿದ್ದಾರೆ ಎಂದು ರಾಜ್ಯದ ಸಚಿವ ಬೈರತಿ ಬಸವರಾಜ್ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬಳಿಕ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಜನ ಸಂಕಲ್ಪ ಕಾರ್ಯಕ್ರಮದಲ್ಲಿ ಮಾತನಾಡಿದ್ದು, "ಇದು ಜನಸಂಕಲ್ಪ ಯಾತ್ರೆಯಾಗಿಲ್ಲ. ಬಸವಣ್ಣನ ಪುಣ್ಯಭೂಮಿಯಿಂದ ಹೊರಟ ಚಾಮರಾಜನಗರದ ವರೆಗೆ ನಡೆಯುವ ವಿಜಯ ಯಾತ್ರೆಯಂತಿದೆ. ಮಾಜಿ ಸಿಎಂ ಯಡಿಯೂರಪ್ಪ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಅವರು ಅನುಭವ ಮಂಟಪದ ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಿದ್ದಾರೆ," ಎಂದು ಬಿಜೆಪಿ ಸರ್ಕಾರದ ಕೊಡುಗೆಯನ್ನು ವಿವರಿಸಿದರು.
ಔರಾದ್ನಲ್ಲಿ ನಡೆದ ಜನಸಂಕಲ್ಪ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಭಗವಂತ್ ಖೂಬಾ, ರಾಜ್ಯದ ಸಚಿವರಾದ ಗೋವಿಂದ ಕಾರಜೋಳ, ಪ್ರಭು ಚೌಹಾಣ್, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು.