ಮನೆ ಮೇಲ್ಛಾವಣಿ ಕುಸಿದು 6 ಸಾವು, 24 ಲಕ್ಷ ಪರಿಹಾರ ವಿತರಣೆ
ಬೀದರ್, ಜೂನ್ 27 : ಬೀದರ್ ಜಿಲ್ಲೆಯ ಬಸವ ಕಲ್ಯಾಣದಲ್ಲಿ ಮನೆ ಕುಸಿತದಿಂದ 6 ಜನರು ಮೃತಪಟ್ಟ ಕುಟುಂಬದವರಿಗೆ ಪರಿಹಾರ ನೀಡಲಾಗಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು 24 ಲಕ್ಷ ರೂ.ಗಳ ಚೆಕ್ ವಿತರಣೆ ಮಾಡಿದರು.
ಗುರುವಾರ ಬೀದರ್ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಬಸವಕಲ್ಯಾಣಕ್ಕೆ ಭೇಟಿ ನೀಡಿ ಮನೆ ಕುಸಿತದಿಂದ ಮೃತಪಟ್ಟಿರುವ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಪರಿಹಾರದ ಚೆಕ್ ನೀಡಿದರು.
ಬಸವ ಕಲ್ಯಾಣದ ಛಿಲ್ಲಾ ಗಲ್ಲಿಯಲ್ಲಿ ಮನೆ ಕುಸಿತದಿಂದಾಗಿ ಬುಧವಾರ ಒಂದೇ ಕುಟುಂಬದ 6 ಜನರು ಮೃತಪಟ್ಟಿದ್ದರು. ಕುಟುಂಬದ ಮುಖ್ಯಸ್ಥರಾದ ಇಸೂಫ್ ಬಕರೆ ವಾಲೆ ಅವರಿಗೆ ಸಾಂತ್ವನ ಹೇಳಿದ ಕುಮಾರಸ್ವಾಮಿ ಅವರು 24 ಲಕ್ಷ ರೂ.ಗಳ ಚೆಕ್ ಗಳನ್ನು ವಿತರಿಸಿದರು.

ಮನೆಯ ಮೇಲ್ಛಾವಣಿ ಕುಸಿದು ಬಿದ್ದು ಹಣ್ಣಿನ ವ್ಯಾಪಾರಿ ನದೀಮ್ ಶೇಖ ಯುಸೂಫ್ (45), ಫರೀದಾಬೇಗಂ (34), ಆಯುಷಾಬೇಗಂ (15), ಮೆಹತಾಬಿ (14), ಗೌಸಿಯಾ (13), ಫೈಜಾನ್ ಅಲಿ (6) ಹಾಗೂ ಫರಾನ್ ಅಲಿ (4) ಮೃತಪಟ್ಟಿದ್ದರು.
ಬುಧವಾರ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ ಅವರು ಮೃತರ ಕುಟುಂಬದವರಿಗೆ ನಿಯಮಾನುಸಾರ ಪರಿಹಾರ ನೀಡಲಾಗುತ್ತದೆ ಎಂದು ಹೇಳಿದ್ದರು. ಇಂದು ಮುಖ್ಯಮಂತ್ರಿಗಳು ಪರಿಹಾರ ವಿತರಣೆ ಮಾಡಿದರು.
ಕುಟುಂಬಕ್ಕೆ ಸೇರಿದ ಇಸೂಫ್ ಬಕರೆ ವಾಲೆ ಅವರು ಮುಂಬೈಗೆ ಹೋಗಿದ್ದರಿಂದ ಅವರು ಸಾವಿನಿಂದ ಪಾರಾಗಿದ್ದರು. ಪೊಲೀಸರ ಸಹಾಯದಿಂದ ಶವಗಳನ್ನು ಹೊರಗೆ ತೆಗೆದು ಪಟ್ಟಣದ ಹೊರವಲಯದಲ್ಲಿ ಬುಧವಾರ ಸಂಜೆ ಅಂತ್ಯ ಸಂಸ್ಕಾರ ನಡೆಸಲಾಗಿದೆ.












Click it and Unblock the Notifications