ಕೊರೊನಾ ನಿರ್ವಹಣೆಗೆ ಮಾದರಿಯಾದ ಒಡಿಶಾ ಸರ್ಕಾರ
ಭುವನೇಶ್ವರ, ಜೂನ್ 05: ಒಡಿಶಾ ಸರ್ಕಾರವು ಕೊರೊನಾ ನಿಯಂತ್ರಣಕ್ಕೆ ಮಹತ್ತರ ಕ್ರಮಗಳನ್ನು ತೆಗೆದುಕೊಂಡಿದೆ. ಇದರಿಂದಾಗಿ ಒಡಿಶಾದಲ್ಲೀಗ ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ.
ದೇಶದಲ್ಲಿ ಕೊರೊನಾ ಪ್ರವೇಶಕ್ಕೂ ಮುನ್ನವೇ, ಅಗತ್ಯ ಕಾನೂನು ಮಾರ್ಪಾಡು, ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಆರೋಗ್ಯ ಸೇವೆಗಳ ಬಗ್ಗೆ ಹೆಚ್ಚಿನ ಲಕ್ಷ್ಯವಹಿಸುವ ಮೂಲಕ ಕೊರೊನಾ ನಿಯಂತ್ರಣಕ್ಕೆ ನಿಯಂತ್ರಣಕ್ಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ದೇಶದಲ್ಲಿ ಅತಿ ದೊಡ್ಡ ಕೊರೊನಾ ಆಸ್ಪತ್ರೆಯನ್ನು ಭುವನೇಶ್ವರದಲ್ಲಿ ತೆರೆಯುವ ಮೂಲಕ ಯಾವುದೇ ತುರ್ತು ಆರೋಗ್ಯ ಸೇವೆಗೆ ನೆರವಾಗುವ ನಿಟ್ಟಿನಲ್ಲಿ ಒಡಿಶಾ ಸರ್ಕಾರ ಕ್ರಮ ಕೈಗೊಂಡಿದೆ.
ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ, ಮುಂಜಾಗ್ರತಾ ಕ್ರಮದಿಂದಾಗಿ ರಾಜ್ಯದಲ್ಲಿ ಲಭ್ಯವಿರುವ ಎಲ್ಲಾ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳಲು ಸಾಧ್ಯವಾಗಿದೆ.
ತಂತ್ರಜ್ಞಾನದ ನೆರವನ್ನೂ ಪಡೆದು ಕೊರೊನಾ ನಿಯಂತ್ರಣಕ್ಕೆ ಇನ್ನಷ್ಟು ದೊಡ್ಡ ಹೆಜ್ಜೆಗಳನ್ನು ಇಡಲಾಗಿದೆ. ಇದರ ಪರಿಣಾಮವಾಗಿ ರಾಜ್ಯದಲ್ಲಿ ಈಗ 3300 ಐಸಿಯು ಬೆಡ್ಗಳಿದ್ದರೆ, ಸುಮಾರು 17000 ಸಾವಿರ ಹಾಸಿಗೆಗಳು ರಾಜ್ಯಾದ್ಯಂತ ಲಭ್ಯವಿದೆ.
ಜತೆಗೆ ಪೂರಕ ವೆಂಟಿಲೇಟರ್ ವ್ಯವಸ್ಥೆಯೂ ಕೂಡ ಇದೆ. ಹಾಸಿಗೆಗಳ ಲಭ್ಯತೆ ಜತೆಗೆ ಗ್ರಾಮ ಗ್ರಾಮಗಳಲ್ಲೂ ಮುಂಜಾಗ್ರತೆಯನ್ನು ಮೂಡಿಸಲಾಗುತ್ತಿದೆ. ಹಾಗೆಯೇ ಸ್ಥಳೀಯ ನೌಕರರನ್ನು ಬಳಸಿಕೊಂಡು ಸ್ಥಳೀಯರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
ಕೊರೊನಾ ನಿಯಂತ್ರಣ ಹಾಗೂ ನಿರ್ವಹಣೆ ಕುರಿತಂತೆ ಗ್ರಾಮ ಮಟ್ಟದ ಅಧಿಕಾರಿಗಳವರೆಗೂ ಜಾಗೃತಿ ಮೂಡಿಸಲಾಗಿದೆ ಇದರಿಂದ ಕೊರೊನಾ ನಿಯಂತ್ರಣವು ಗ್ರಾಮದಿಂದ ನಗರದವರೆಗೂ ಸುಲಭವಾಗಿ ಆಗುತ್ತಿದೆ.
ಇದಲ್ಲದೆ ಕೊರೊನಾ ಲಸಿಕೆ ವಿತರಣೆಯಲ್ಲೂ ರಾಜ್ಯ ಮುಂದಡಿ ಇಟ್ಟಿದ್ದು, ಈಗಾಗಲೇ ರಾಜ್ಯ 17 ಲಕ್ಷ ಡೋಸ್ಗಳನ್ನು ಜನರಿಗೆ ನೀಡಿದೆ.
ಗ್ರಾಮೀಣ ಭಾಗದಲ್ಲಿ ಸುಮಾರು 7 ಸಾವಿ ಪ್ಯಾರಾಮೆಡಿಕಲ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಗ್ರಾಮ ಮಟ್ಟದಲ್ಲಿ ಕೊರೊನಾ ನಿರ್ವಹಣೆಯನ್ನು ಸುಲಭವಾಗಿ ರಾಜ್ಯ ಸರ್ಕಾರ ಮಾಡುತ್ತಿದೆ.
ಸಚೇತಕ್ ಮೊಬೈಲ್ ಅಪ್ಲಿಕೇಷನ್ ಮೂಲಕ ವಲಸೆ ಕಾರ್ಮಿಕರ ನೆರವಿಗೆ ಧಾವಿಸಲಾಗುತ್ತಿದೆ, ವಲಸೆ ಕಾರ್ಮಿಕರ ಸಮಸ್ಯೆ ಹಾಗೂ ಅವರನ್ನು ಟ್ರ್ಯಾಕ್ ಮಾಡಲು ಇದರಿಂದ ಸುಲಭವಾಗುತ್ತಿದೆ. ಹೀಗಾಗಿ ನಗರ ಪ್ರದೇಶಗಳಿಂದ ಗ್ರಾಮೀಣ ಪ್ರದೇಶಗಳಿಗೆ ಕೊರೊನಾ ಹಬ್ಬುವುದನ್ನು ತಡೆಯಲು ಸಾಧ್ಯವಾಗುತ್ತಿದೆ.