ಧಾರ್ಮಿಕ ನಂಬಿಕೆ ಹೊಂದಿರುವ ಡಿಕೆ ಶಿವಕುಮಾರ್ ಮನೆ ಬಳಿ ವಾಮಾಚಾರ ಶಂಕೆ, ಸ್ಥಳೀಯರಲ್ಲಿ ಆತಂಕ
ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನಿವಾಸದ ಕೊಂಚ ದೂರದಲ್ಲಿ ವಾಮಾಚಾರ ಮಾಡಿದ ಶಂಕೆ ವ್ಯಕ್ತವಾಗಿದೆ. ಅವರ ಸದಾಶಿವನಗರದ ಮನೆಯ ಹಿಂಭಾಗದ ರಸ್ತೆಯಲ್ಲಿ ವೃತ್ತ ಬರೆದು ಅದರಲ್ಲಿ ನಾಟಿ ಕೋಳಿ ತಲೆ ಹಾಕಲಾಗಿದೆ. ಈ ಘಟನೆಯಿಂದ ಡಿಕೆಶಿ ನಿವಾಸದ ಸುತ್ತಮುತ್ತಲಿನ ಜನರಲ್ಲಿ ಆತಂಕ ಮನೆ ಮಾಡಿದ್ದು, ಕೋಳಿ ಬಿದ್ದ ರಸ್ತೆಯಲ್ಲಿ ಓಡಾಡಲು ಭಯ ಪಡುತ್ತಿದ್ದಾರೆ.
ರಾಜ್ಯ ರಾಜಕೀಯದಲ್ಲಿ ಹಲವು ಸವಾಲುಗಳ ನಡುವೆ ನೂತನ ಸಿಎಂ ಆಗಿ ಡಿಕೆ ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಅದರ ಬೆನ್ನಲ್ಲೆ ಅವರ ಮನೆಯ ಕೂಗಳತೆಯ ದೂರದಲ್ಲಿ ವಾಮಾಚಾರ ನಡೆದ ಶಂಕೆ ವ್ಯಕ್ತವಾಗಿದೆ. ಡಿಕೆ ಶಿವಕುಮಾರ್ ಅವರಿಗೆ ದೇವರು, ಆಚರಣೆಗಳಲ್ಲಿ ಅಪಾರ ನಂಬಿಕೆ. ಯಾವುದೇ ರಾಜಕೀಯ ಶುಭಾರಂಭಕ್ಕು ಮೊದಲು ಅವರು ಇಷ್ಟದ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಆರಾಧ್ಯ ದೇವರ ದರ್ಶನ ಮಾಡಿ ಮುಂದುವರಿಯುತ್ತಾರೆ. ಅಂತಹ ಡಿಕೆ ಶಿವಕುಮಾರ್ ಅವರ ಮನೆ ಸಮೀಪ ಈ ರೀತಿ ನಡೆದಿರುವುದಕ್ಕೆ ಸಾರ್ವಜನಿಕರು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸುತ್ತಿದ್ದಾರೆ, ಒಂದಷ್ಟು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ವಿರೋಧಿಗಳಿಂದ ಸಿಎಂ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಅಂತಲೂ ಸಲಹೆ ನೀಡಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು, ಪರಿಶೀಲನೆ
ಸದಾಶಿವನಗರ ಡಿಕೆ ಶಿವಕುಮಾರ್ ಮನೆಯ ಹಿಂದೆ ವೃತ್ತ ಬರೆದು, ನಾಟಿ ಕೋಳಿಯ ತಲೆ ಕತ್ತರಿಸಿ, ಲಿಂಬೆ ಹಣ್ಣು ಎಸೆದಿರುವುದನ್ನು ಪೊಲೀಸರು ಪರಿಶೀಲಿಸಿದ್ದಾರೆ. ಕೋಳಿ ತಲೆಯನ್ನು ನಾಯಿ ಕಚ್ಚಿಕೊಂಡು ಹೋಗಿದೆ ಎನ್ನಲಾಗಿದೆ. ಬಳಿಕ ಅಲ್ಲಿದ್ದ ಕೋಳಿ, ಇನ್ನಿತರ ವಾಮಾಚಾರ ಗುರುತುಗಳನ್ನು ಬೇರೆಡೆ ಬಿಸಾಡಿದ್ದಾರೆ ಈ ಮಾರ್ಗದಲ್ಲಿ ಓಡಾಡಲು ಹೆದರಿದ ಸ್ಥಳೀಯರಿಗೆ ಪೊಲೀಸರು ಧೈರ್ಯ ತುಂಬಿದ್ದಾರೆ.
ಇತ್ತ ಡಿಕೆ ಶಿವಕುಮಾರ್ ಅವರ ಬೆಂಬಲಿಗರು ಇದಕ್ಕೂ ಮತ್ತು ಡಿಕೆ ಶಿವಕುಮಾರ್ ಅವರಿಗೆ ಸಂಬಂಧವಿಲ್ಲ. ಅವರನ್ನು ಉದ್ದೇಶಿಸಿ ಇದೆಲ್ಲ ಮಾಡಿದಂತಿಲ್ಲ. ಅದನ್ನು ಪ್ರತ್ಯೇಕವಾಗಿ ನೋಡುವಂತೆ ಕೋರಿದ್ದಾರೆ.
ಅಪಾರ ಧೈವಭಕ್ತಿ ಹೊಂದಿರುವ ಸಿಎಂ
ಡಿಕೆ ಶಿವಕುಮಾರ್ ಅವರು ಅಪಾರ ಧೈವ ಭಕ್ತಿ ಹೊಂದಿದ್ದಾರೆ. ರಾಜಕೀಯದಲ್ಲಿ ಅಥವಾ ದೈನಂದಿನ ಜೀವನದಲ್ಲಿ ಕಷ್ಟುಗಳೇ ಬರಲಿ, ಸುಖದ ಕ್ಷಣಗಳೇ ಇರಲಿ ಅವರು ಮೊದಲು ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ. ವಿಶೇಷ ಪೂಜೆ ಮಾಡಿಸುತ್ತಾರೆ. ತಾವು ಸಹ ಧಾರ್ಮಿಕ ಆಚರಣೆಗಳಲ್ಲಿ ಭಾಗಿಯಾಗುತ್ತಾರೆ.
ಡಿಕೆ ಶಿವಕುಮಾರ್ ಅವರು ಸದಾ ಆರಾಧಿಸುವ, ಅವರ ಆಧ್ಯಾತ್ಮ ಗುರುವಾದ ನೊಣವಿನ ಕೆರೆ ಅಜ್ಜಯ್ಯ (ಶ್ರೀ ವೀರ ಗಂಗಾಧರ ಅಜ್ಜಯ್ಯ) ಅವರ ಹೆಸರಿನಲ್ಲಿ ಜೂನ್ 3ರಂದು ಪ್ರಮಾಣ ವಚನ ಸ್ವೀಕರಿಸಿದ್ದರು. 'ನಾನು ಹಿಂದೂವಾಗಿ ಹುಟ್ಟಿದ್ದೇನೆ. ನನ್ನ ಧರ್ಮವನ್ನು ಎಂದಿಗೂ ಬಿಟ್ಟು ಕೊಡುವುದಿಲ್ಲ ಎಂದು ಹೇಳಿದ್ದರು. ರಾಜಕೀಯದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುವಾಗ ಅಥವಾ ವಿಶೇಷ ದಿನಗಳಲ್ಲಿ ಅವರು ದೇವರ ಮೊರೆ ಹೋಗುವುದನ್ನು ರೂಢಿಯಲ್ಲಿಟ್ಟುಕೊಂಡಿದ್ದಾರೆ.
ದೇವರಲ್ಲಿ ಅಪಾರ ನಂಬಿಕೆ, ಭಕ್ತಿಯುಳ್ಳವರಾದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನಂಬಿಕೆಗೆ ಅಪಚಾರ ಮಾಡಲು ಅವರ ಮನೆ ಹತ್ತಿರ ಈ ರೀತಿ ವಾಮಾಚಾರ ಮಾಡಲು ಯತ್ನ ನೆಡೆಸಲಾಗಿದೆ ಅಂತಲೂ ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ.













Click it and Unblock the Notifications