ಕೇವಲ 15 ದಿನಕ್ಕೆ ಉದ್ಯೋಗ ಕಸಿದುಕೊಂಡ ಕಂಪನಿ: ಕಣ್ಣೀರು ತರಿಸುತ್ತೆ ಕಾರ್ಪೊರೇಟ್ ಜಗತ್ತಿನ ಈ ಕರಾಳ ಕಥೆ
ಪ್ರತಿಯೊಬ್ಬ ಯುವಕ ಅಥವಾ ಯುವತಿ ತಮ್ಮ ಶಿಕ್ಷಣ ಮುಗಿಸಿದ ನಂತರ ಕಾರ್ಪೊರೇಟ್ ಜಗತ್ತಿಗೆ ಕಾಲಿಡಲು ಹಲವಾರು ಕನಸುಗಳನ್ನು ಹೊತ್ತುಕೊಂಡಿರುತ್ತಾರೆ. ಆದರೆ, ಈ ವಲಯ ಯಾವಾಗಲೂ ಅಂದುಕೊಂಡಷ್ಟು ಸುಂದರವಾಗಿರುವುದಿಲ್ಲ. ಕೆಲವೊಮ್ಮೆ ಮೊದಲ ಉದ್ಯೋಗವೇ ಜೀವನದ ಅತಿದೊಡ್ಡ ದುಃಸ್ವಪ್ನವಾಗಿ ಕಾಡುವ ಸಾಧ್ಯತೆ ಇರುತ್ತದೆ.
ಇತ್ತೀಚೆಗೆ ರೆಡ್ಡಿಟ್ ಜಾಲತಾಣದಲ್ಲಿ ಮಾಜಿ ಉದ್ಯೋಗಿಯೊಬ್ಬರು ಹಂಚಿಕೊಂಡಿರುವ ಪೋಸ್ಟ್ ಒಂದು, ಕಾರ್ಪೊರೇಟ್ ಜಗತ್ತಿನ ಕರಾಳ ಮುಖವನ್ನು ತೆರೆದಿಟ್ಟಿದೆ. ಕೇವಲ 15 ದಿನಗಳ ಕಾಲ ಮಾಡಿದ ಉದ್ಯೋಗವೊಂದು, ಬರೋಬ್ಬರಿ ಒಂದು ವರ್ಷದವರೆಗೆ ಮಾನಸಿಕ ಯಾತನೆ ನೀಡಿದ ಘಟನೆ ಈಗ ಆನ್ಲೈನ್ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಕನಸಿನ ಮೊದಲ ಉದ್ಯೋಗ ಮತ್ತು ಆರಂಭಿಕ ಆಘಾತ
ಯಾವುದೇ ಹೊಸ ಉದ್ಯೋಗಿ ಕಂಪನಿಗೆ ಸೇರುವಾಗ ಇರುವ ಉತ್ಸಾಹ ಈ ಯುವ ಉದ್ಯೋಗಿಗೂ ಇತ್ತು. ಬಹಳ ಆಸಕ್ತಿಯಿಂದಲೇ ತಮ್ಮ ಮೊದಲ ಕಾರ್ಪೊರೇಟ್ ಕೆಲಸಕ್ಕೆ ಅವರು ಸೇರ್ಪಡೆಯಾಗಿದ್ದರು. ಆದರೆ, ಕೇವಲ ಹದಿನೈದೇ ದಿನಗಳಲ್ಲಿ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಯಿತು.
ಪೋಸ್ಟ್ನಲ್ಲಿ ಉಲ್ಲೇಖಿಸಿರುವಂತೆ, ಕಂಪನಿಯ ಹೆಚ್ಆರ್ ವಿಭಾಗದ ಅಧಿಕಾರಿಯೊಬ್ಬರಿಗೆ ಈ ಉದ್ಯೋಗಿ ಕಂಡರೆ ಇಷ್ಟವಿರಲಿಲ್ಲ. ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ, ಉದ್ಯೋಗಿಯ ಮೇಲೆ 'ಅಸಹ್ಯಕರ' ಹೇಳಿಕೆಗಳನ್ನು ನೀಡಿದ ಆರೋಪ ಹೊರಿಸಲಾಯಿತು. ಇದೇ ನೆಪವಿಟ್ಟುಕೊಂಡು ಕೇವಲ 15 ದಿನಗಳಲ್ಲಿ ಅವರನ್ನು ಕೆಲಸದಿಂದ ವಜಾಗೊಳಿಸಲಾಯಿತು.
ಎಚ್ಆರ್ ಬೆದರಿಕೆ ಹಾಗೂ ಅಮಾನವೀಯ ವರ್ತನೆ
ಕೆಲಸದಿಂದ ತೆಗೆದುಹಾಕಿದ್ದು ಮಾತ್ರವಲ್ಲದೆ, ಈ ಘಟನೆಯ ಬಗ್ಗೆ ಎಲ್ಲಿಯೂ ಬಹಿರಂಗವಾಗಿ ಮಾತನಾಡದಂತೆ ಕಂಪನಿಯ ಮತ್ತೊಬ್ಬ ಎಚ್ಆರ್ ಅಧಿಕಾರಿ ನೀಡಿದ ಬೆದರಿಕೆ ನಿಜಕ್ಕೂ ಅಮಾನವೀಯವಾಗಿತ್ತು. "ಎಚ್ಆರ್ಗಳ ಪ್ರಪಂಚ ತುಂಬಾ ಚಿಕ್ಕದು. ನೀನು ಸರಿಯಾಗಿ ವರ್ತಿಸದೆ, ಈಗಲೇ ರಾಜೀನಾಮೆ ನೀಡದಿದ್ದರೆ ನಿನ್ನ ಮುಂದಿನ ವೃತ್ತಿಜೀವನ ಶಾಶ್ವತವಾಗಿ ನಾಶವಾಗುತ್ತದೆ" ಎಂದು ಎಚ್ಚರಿಕೆ ನೀಡಲಾಗಿತ್ತು. ಇಷ್ಟೇ ಅಲ್ಲದೆ, ಈ ಆಘಾತದಿಂದ ಪ್ಯಾನಿಕ್ ಅಟ್ಯಾಕ್ ಆಗಿ, ತಮ್ಮ ಕುಟುಂಬದ ಸದಸ್ಯರೊಂದಿಗೆ ಫೋನ್ನಲ್ಲಿ ಮಾತನಾಡುತ್ತಿದ್ದಾಗ, ಉದ್ಯೋಗಿಯ ಮೊಬೈಲ್ ಕಸಿದುಕೊಳ್ಳಲಾಯಿತು. ರಾಜೀನಾಮೆ ನೀಡಲು ಒಪ್ಪದಿದ್ದರೆ ಭದ್ರತಾ ಸಿಬ್ಬಂದಿಯನ್ನು ಕರೆದು ಹೊರಹಾಕುವುದಾಗಿ ಬೆದರಿಸಲಾಯಿತು ಎಂದು ಉದ್ಯೋಗಿ ಅಳಲು ತೋಡಿಕೊಂಡಿದ್ದಾರೆ.
ಅನಾರೋಗ್ಯದ ನಡುವೆಯೂ ಕಿರುಕುಳ
ಈ ಎಲ್ಲಾ ಕಿರುಕುಳಗಳ ಜೊತೆಗೆ, ಉದ್ಯೋಗಿಯ ಆರೋಗ್ಯ ಸಮಸ್ಯೆಗಳನ್ನೂ ಕಂಪನಿ ನಿರ್ಲಕ್ಷಿಸಿತ್ತು. ಉದ್ಯೋಗಿಯು ತೀವ್ರವಾದ ಮೂತ್ರನಾಳದ ಸೋಂಕಿನಿಂದ ಮತ್ತು ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಈ ಬಗ್ಗೆ ಕಂಪನಿಯ ಗಮನಕ್ಕೆ ತಂದಿದ್ದರೂ, ಯಾವುದೇ ರೀತಿಯ ವಿನಾಯಿತಿ ನೀಡಲಿಲ್ಲ. ಬದಲಾಗಿ, ಅವರು ವಾಶ್ರೂಮ್ಗೆ ಹೋಗುವ ಸಮಯವನ್ನು ಸಹ ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಲಾಗುತ್ತಿತ್ತು.
ಕೆಲಸ ಹೋದ ಮೇಲಿನ ಯಾತನೆ ಮತ್ತು ಮಾನಸಿಕ ಸಂಘರ್ಷ
ಕೆಲಸ ಕಳೆದುಕೊಂಡ ನಂತರದ ದಿನಗಳು ಆ ಉದ್ಯೋಗಿಗೆ ನರಕಯಾತನೆಯಾಗಿದ್ದವು. "ನನ್ನನ್ನು ನಾನು ಸಮರ್ಥಿಸಿಕೊಳ್ಳಲು ನನಗೆ ನ್ಯಾಯಯುತ ಅವಕಾಶವನ್ನೇ ನೀಡಲಿಲ್ಲ ಎಂಬುದು ಇಂದಿಗೂ ನನ್ನನ್ನು ಕಾಡುತ್ತಿದೆ. ಈ ಘಟನೆ ನನ್ನ ಆತ್ಮವಿಶ್ವಾಸವನ್ನು ಸಂಪೂರ್ಣವಾಗಿ ನಾಶ ಮಾಡಿತು" ಎಂದು ಅವರು ಬರೆದುಕೊಂಡಿದ್ದಾರೆ.
ಕೆಲಸ ಹೋದ ನಂತರದ ತಿಂಗಳುಗಳು ಅತ್ಯಂತ ಕಷ್ಟಕರವಾಗಿದ್ದವು. ಥೆರಪಿ ಮೊರೆಹೋಗಬೇಕಾಯಿತು, ಆತಂಕ ಮತ್ತು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯಬೇಕಾಯಿತು. ತಮ್ಮ ಸ್ನೇಹಿತರು ವೃತ್ತಿಜೀವನದಲ್ಲಿ ಮುಂದೆ ಸಾಗುತ್ತಿರುವುದನ್ನು ನೋಡುತ್ತಾ, ತಮ್ಮ ಕಳೆದುಹೋದ ಆತ್ಮವಿಶ್ವಾಸವನ್ನು ಮರಳಿ ಪಡೆಯಲು ಅವರು ಬಹಳಷ್ಟು ಹೆಣಗಾಡಬೇಕಾಯಿತು.
"ಕಾರ್ಪೊರೇಟ್ ಜಗತ್ತಿನಲ್ಲಿ ತೆಗೆದುಕೊಳ್ಳುವ ಕೆಲವು ನಿರ್ಧಾರಗಳು, ಅಧಿಕಾರಿಗಳ ಮೇಜಿನ ಮೇಲಿರುವ ಕೇವಲ ಮತ್ತೊಂದು ಫೈಲ್ ಆಗಿರಬಹುದು. ಆದರೆ, ಆ ನಿರ್ಧಾರಕ್ಕೊಳಗಾದ ಉದ್ಯೋಗಿಗೆ ಅದು ವರ್ಷಗಳ ಕಾಲ ಹೊತ್ತುಕೊಂಡು ತಿರುಗುವ ಕರಾಳ ನೆನಪಾಗಿ ಉಳಿಯುತ್ತದೆ" ಎಂದು ಪೋಸ್ಟ್ನ ಕೊನೆಯಲ್ಲಿ ಉದ್ಯೋಗಿ ಹೇಳಿರುವ ಮಾತುಗಳು ವಾಸ್ತವ ಸತ್ಯವನ್ನು ಬಿಚ್ಚಿಟ್ಟಿವೆ.












Click it and Unblock the Notifications