'ವೈಭವ್ ಸೂರ್ಯವಂಶಿ ಕಡೆಗಣಿಸಿದ್ದಕ್ಕೆ ಐರ್ಲೆಂಡ್ ವಿರುದ್ಧ ಟೀಂ ಇಂಡಿಯಾಗೆ ಹೀನಾಯ ಸೋಲು'
India vs Ireland 1st T20I: ಬೆಲ್ಫಾಸ್ಟ್ನಲ್ಲಿ ಸಿವಿಲ್ ಸರ್ವಿಸ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ಶುಕ್ರವಾರ (ಜೂನ್ 27) ನಡೆದ ಎರಡು ಪಂದ್ಯಗಳ ಟಿ20 ಸರಣಿಯ ಮೊದಲ ಮ್ಯಾಚ್ನಲ್ಲಿ ಭಾರತವು ಐರ್ಲೆಂಡ್ ವಿರುದ್ಧ 34 ರನ್ಗಳಿಂದ ಹೀನಾಯ ಸೋಲನುಭವಿಸಿತು. ಇದೀಗ ಬಹುತೇಕ ಮಂದಿ ವೈಭವ್ ಸೂರ್ಯವಂಶಿ ಅವರನ್ನ ಹೊರಗಿಟ್ಟಿದ್ದಕ್ಕೆ ಟೀಮ್ ಇಂಡಿಯಾ ಸೋಲು ಕಂಡಿದೆ ಎಂದು ಹೇಳುತ್ತಿದ್ದಾರೆ. ಹಾಗಾದ್ರೆ ಇದಕ್ಕೆ ಕಾರಣ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಅವರು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆಯಯೇ ಮೊದಲು ಬ್ಯಾಟ್ ಬೀಸಿದ ಐರ್ಲೆಂಡ್ ತಂಡವು ಲೋರ್ಕನ್ ಟಕರ್ (50), ಗರೆತ್ ಡೆಲಾನಿ (49) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 182 ರನ್ಗಳ ಬೃಹತ್ ಮೊತ್ತ ಪೇರಿಸಿತು. ಬಳಿಕ ಬ್ಯಾಟ್ ಬೀಸಿದ ಭಾರತ 18.5 ಓವರ್ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 148 ರನ್ ಕಲೆಹಾಕಿ ಹೀನಾಯ ಸೋಲನುಭವಿಸಿತು.

ನಿರಾಶೆ ಮೂಡಿಸಿದ ಪ್ರಸಿದ್ಧ್ ಕೃಷ್ಣ
ಮೊದಲು ಬೌಲಿಂಗ್ ಆಯ್ದುಕೊಂಡ ಭಾರತದ ಪರ ಹರ್ಷಿತ್ ರಾಣಾ (24 ರನ್ಗಳಿಗೆ 3 ವಿಕೆಟ್) ಮೂರು ವಿಕೆಟ್ ಪಡೆದು ಐರ್ಲೆಂಡ್ ತಂಡದ ಬ್ಯಾಟರ್ಗಳ ರನ್ ವೇಗಕ್ಕೆ ಕಡಿವಾಣ ಹಾಕಿದರು. ಉಳಿದಂತೆ ಅರ್ಷದೀಪ್ ಸಿಂಗ್ ಹಾಗೂ ಅಕ್ಷರ್ ಪಟೇಲ್ ತಲಾ 2 ವಿಕೆಟ್ ಕಿತ್ತರೆ, ಶಿವಂ ದುಬೆ 1 ವಿಕೆಟ್ ಕಬಳಿಸಿದರು. ಪ್ರಸಿದ್ಧ್ ಕೃಷ್ಣ ತೀವ್ರ ನಿರಾಶೆ ಮೂಡಿಸಿದ್ದು, ಇವರು ತಮ್ಮ 4 ಓವರ್ಗಳಲ್ಲಿ ಯಾವುದೇ ವಿಕೆಟ್ ಪಡೆಯದೆ ಬರೋಬ್ಬರಿ 57 ರನ್ ಬಿಟ್ಟುಕೊಟ್ಟು ದುಬಾರಿಯಾದರು.
ಐರ್ಲೆಂಡ್ ನಾಯಕನಿಂದ ಅಬ್ಬರದ ಬ್ಯಾಟಿಂಗ್
ಐರ್ಲೆಂಡ್ ತಂಡದ ಪರ ನಾಯಕ ಲೋರ್ಕನ್ ಟಕರ್ 36 ಎಸೆತಗಳಲ್ಲಿ 2 ಸಿಕ್ಸ್, 5 ಬೌಂಡರಿಗಳೊಂದಿಗೆ 50 ರನ್ ಗಳಿಸಿದರೆ, ಗರೆಥ್ ಡೆಲಾನಿ 32 ಎಸೆತಗಳಲ್ಲಿ 49 ರನ್ ಬಾರಿಸಿದರು. ಪರಿಣಾಮ ಐರ್ಲೆಂಡ್ 180 ರನ್ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು.
ಅಭಿಷೇಕ್ ಶರ್ಮಾ ಸ್ಫೋಟಕ ಬ್ಯಾಟಿಂಗ್
ಬಳಿಕ 183 ರನ್ಗಳ ಗುರಿ ಬೆನ್ನಟ್ಟಿದ ಭಾರತದ ಪರ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಕೇವಲ 20 ಎಸೆತಗಳಲ್ಲಿ 50 ರನ್ ಸಿಡಿಸಿ ಮಿಂಚಿದರು. ಆದರೆ ಉಳಿದ ಬ್ಯಾಟರ್ಗಳಿಂದ ಅವರಿಗೆ ಸೂಕ್ತ ಬೆಂಬಲ ಸಿಗಲಿಲ್ಲ. ಅಂತಿಮವಾಗಿ ಭಾರತ ತಂಡ 18.5 ಓವರ್ಗಳಲ್ಲಿ ಕೇವಲ 148 ರನ್ಗಳಿಗೆ ಆಲೌಟ್ ಆಯಿತು. ಪಂದ್ಯದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ವೈಭವ್ ಸೂರ್ಯವಂಶಿ ಅವರಿಗೆ ಅಂತಿಮ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡದಿದ್ದಕ್ಕೆ ಟೀ ಇಂಡಿಯಾ ಸೋತಿದೆ ಎನ್ನುವ ಚರ್ಚೆಗಳು ದಟ್ಟವಾಗಿವೆ.
ಸೂರ್ಯವಂಶಿಗೆ ಸ್ಥಾನ ನೀಡದಿದ್ದಕ್ಕೆ ಆಕ್ರೋಶ
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಐರ್ಲೆಂಡ್ ಎದುರು ಟೀಮ್ ಇಂಡಿಯಾ ಹೀನಾಯ ಸೋಲನುಭವಿಸಿದೆ. ಈ ಐತಿಹಾಸಿಕ ಸೋಲಿನ ಬೆನ್ನಲ್ಲೇ ಕ್ರಿಕೆಟ್ ವಲಯದಲ್ಲಿ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಟೀಮ್ ಮ್ಯಾನೇಜ್ಮೆಂಟ್ ನಿರ್ಧಾರದ ವಿರುದ್ಧ ದೊಡ್ಡ ಮಟ್ಟದ ಚರ್ಚೆ ಮತ್ತು ಆಕ್ರೋಶಗಳು ವ್ಯಕ್ತವಾಗುತ್ತಿವೆ.
ಐಪಿಎಲ್ನಲ್ಲಿ ರನ್ಗಳ ಮಳೆ ಹರಿಸಿದ್ದ 15 ವರ್ಷದ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಅವರಿಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ನೀಡದಿರುವುದೇ ಭಾರತದ ಸೋಲಿಗೆ ಪ್ರಮುಖ ಕಾರಣ ಎಂದು ಅಭಿಮಾನಿಗಳು ಹಾಗೂ ಕೆಲವು ಕ್ರಿಕೆಟ್ ದಿಗ್ಗಜರು ಹೇಳುತ್ತಿದ್ದಾರೆ.
ವೈಭವ್ ಸೂರ್ಯವಂಶಿ ಅವರ ಅಂತಾರಾಷ್ಟ್ರೀಯ ಪಾದಾರ್ಪಣೆಯನ್ನು ನೋಡಲು ಕಾಯುತ್ತಿದ್ದ ಕೋಟ್ಯಂತರ ಅಭಿಮಾನಿಗಳಿಗೆ ನಾಯಕ ಶ್ರೇಯಸ್ ಅಯ್ಯರ್ ಟಾಸ್ ವೇಳೆ ನಿರಾಶೆ ಮೂಡಿಸಿದರು. ಅನುಭವಿ ಆಟಗಾರರಿಗೆ ಆದ್ಯತೆ ನೀಡುವ ಸಲುವಾಗಿ ವೈಭವ್ ಅವರನ್ನು ಹೊರಗಿಡಲಾಗಿದೆ ಎಂದು ಅಯ್ಯರ್ ತಿಳಿಸಿದ್ದರು. ಆದರೆ ಭಾರತ ಪಂದ್ಯ ಸೋಲುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಮ್ಯಾನೇಜ್ಮೆಂಟ್ ವಿರುದ್ಧ ಕಡಿಕಾಡಿದ್ದಾರೆ. 'ಅತ್ಯುತ್ತಮ ಫಾರ್ಮ್ನಲ್ಲಿದ್ದ ಯುವ ಪ್ರತಿಭೆಯನ್ನು ಬೆಂಚ್ ಮೇಲೆ ಕೂರಿಸಿ ತಪ್ಪು ಮಾಡಿದರು,' ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಕಲ್ ವಾನ್ ಹೇಳಿದ್ದೇನು?
ಮತ್ತೊಂದೆಡೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಕೂಡ ತಮ್ಮ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, 'ಪ್ರಸ್ತುತ ಅತ್ಯುತ್ತಮ ಟಿ20 ಆಟಗಾರರಲ್ಲಿ ಒಬ್ಬರಾಗಿರುವ ವೈಭವ್ ಸೂರ್ಯವಂಶಿ ಅವರನ್ನು ಭಾರತ ತಂಡದ ಪ್ಲೇಯಿಂಗ್ 11ನಲ್ಲಿ ಸ್ಥಾನ ನೀಡದಿರುವುದು ನಂಬಲು ಸಾಧ್ಯವಾಗುತ್ತಿಲ್ಲ,' ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇನ್ನು ಜೂನ್ 28ರಂದು ನಡೆಯಲಿರುವ ಎರಡನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಾದರೂ ವೈಭವ್ ಸೂರ್ಯವಂಶಿ ಅವರಿಗೆ ಅವಕಾಶ ಸಿಗಲಿದೆಯೇ ಎಂದು ಕಾದುನೋಡಬೇಕಿದೆ.












Click it and Unblock the Notifications