ಕ್ರಿಕೆಟ್ ದೇವರು ಸಚಿನ್ ದಾಖಲೆಯನ್ನ ತನ್ನ ಹೆಸರಿಗೆ ಬರೆದುಕೊಂಡ 10ನೇ ತರಗತಿಯ ವೈಭವ್
Vaibhav Sooryavanshi: ಐಪಿಎಲ್ 2026ರಲ್ಲಿ ವೈಭವ್ ಸೂರ್ಯವಂಶಿ ರಾಜಸ್ಥಾನ್ ರಾಯಲ್ಸ್ ಪರ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಲೋಕವನ್ನೇ ತನ್ನತ್ತ ತಿರುಗಿನೋಡುವಂತೆ ಮಾಡಿದರು. ಇದೀಗ ಈ ಬಾಲಕ ಟೀಮ್ ಇಂಡಿಯಾಕ್ಕೆ ಆಯ್ಕೆ ಆಗುವ ಮೂಲಕ 'ಕ್ರಿಕೆಟ್ ದೇವರು' ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ. ಇದು ಹೇಗೆ ಸಾಧ್ಯ ಅಂತೀರಾ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
ಬಿಹಾರದ ಮೂಲದ 15 ವರ್ಷದ ವೈಭವ್ ಸೂರ್ಯವಂಶಿ ಟೀಮ್ ಇಂಡಿಯಾಕ್ಕೆ ಆಯ್ಕೆಯಾಗುವ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಇತ್ತೀಚೆಗಷ್ಟೇ ಮುಂಬರುವ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಹಾಗೂ ಏಷ್ಯನ್ ಗೇಮ್ಸ್ಗಾಗಿ ಭಾರತ ತಂಡವನ್ನು ಪ್ರಕಟಿಸಲಾಯಿತು. ಇದರಲ್ಲಿ ವೈಭವ್ ಹೆಸರು ಇದ್ದು, ಈ ಮೂಲಕ ರಾಷ್ಟ್ರೀಯ ತಂಡಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಕ್ರಿಕೆಟ್ ದೇವರ ದಾಖಲೆ ಮುರಿದ ವೈಭವ್
ಜೊತೆಗೆ ಭಾರತದ ಹಿರಿಯರ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಅತ್ಯಂತ ಕಿರಿಯ ಆಟಗಾರ ಎಂಬ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ 36 ವರ್ಷಗಳ ಹಳೆಯ ಐತಿಹಾಸಿಕ ದಾಖಲೆಯನ್ನು ಸೂರ್ಯವಂಶಿ ಧೂಳೀಪಟ ಮಾಡಿದ್ದಾರೆ. ಸಚಿನ್ ತೆಂಡೂಲ್ಕರ್ ಅವರು 1989ರಲ್ಲಿ ತಮ್ಮ 16ನೇ ವಯಸ್ಸಿನಲ್ಲಿ ಪಾಕಿಸ್ತಾನದ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಅಂದಿನಿಂದ ಈವರೆಗೆ ಯಾರಿಂದಲೂ ಮುರಿಯಲಾಗದ ಈ ಅಪರೂಪದ ದಾಖಲೆಯನ್ನು ಬಿಹಾರದ ಈ ಬಾಲಕ ಈಗ ತನ್ನ ಹೆಸರಿಗೆ ಬರೆದುಕೊಂಡಿದ್ದಾನೆ.
ರನ್ ಮಳೆ ಹರಿಸಿದ್ದ ವಂಡರ್ ಕಿಡ್
ಐಪಿಎಲ್ 2026ರ ಸೀಸನ್ನಲ್ಲಿ ಸೂರ್ಯವಂಶಿ ತೋರಿದ ಅದ್ಭುತ ಬ್ಯಾಟಿಂಗ್ ಪ್ರದರ್ಶನವೇ ಅವರಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ತಂದುಕೊಟ್ಟಿದೆ. ರಾಜಸ್ಥಾನ್ ರಾಯಲ್ಸ್ ತಂಡದ ಪರ ಕಣಕ್ಕಿಳಿದಿದ್ದ ಅವರು ಟೂರ್ನಿಯುದ್ದಕ್ಕೂ ಅಬ್ಬರದ ಬ್ಯಾಟಿಂಗ್ ನಡೆಸಿ ಒಟ್ಟು 776 ರನ್ ಕಲೆಹಾಕುವ ಮೂಲಕ ಅತೀ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದರು.
ಐಪಿಎಲ್ 2026ರಲ್ಲಿ ವಂಡರ್ ಕಿಡ್ ಸಾಧನೆಗಳು
ಅಷ್ಟೇ ಅಲ್ಲದೆ ಅತಿ ಚಿಕ್ಕ ವಯಸ್ಸಿನಲ್ಲಿ ಆರೆಂಜ್ ಕ್ಯಾಪ್, ಮೋಸ್ಟ್ ವ್ಯಾಲ್ಯುಯಬಲ್ ಪ್ಲೇಯರ್ (MVP) ಹಾಗೂ ಸೂಪರ್ ಸ್ಟ್ರೈಕರ್ ಸೇರಿದಂತೆ ಐದು ಪ್ರಮುಖ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು. ಇದೇ ವೇಳೆ ಐಪಿಎಲ್ನ ಒಂದೇ ಸೀಸನ್ನಲ್ಲಿ ಅತಿ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ್ದ ಯೂನಿವರ್ಸಲ್ ಬಾಸ್, ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್ ಅವರ ಸುದೀರ್ಘ ಕಾಲದ ದಾಖಲೆಯನ್ನು ವೈಭವ್ ಸೂರ್ಯವಂಶಿ ಮುರಿದರು.
ಅಂಡರ್-19 ವಿಶ್ವಕಪ್ ಫೈನಲ್ನಲ್ಲಿ ಬೆಂಕಿಯಾಟ
ಕಳೆದ ಸೀಸನ್ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಐಪಿಎಲ್ಗೆ ಪದಾರ್ಪಣೆ ಮಾಡಿದ ದಿನದಿಂದಲೂ ಸೂರ್ಯವಂಶಿ ಕ್ರಿಕೆಟ್ ದಿಗ್ಗಜರ ಗಮನ ಸೆಳೆದಿದ್ದರು. ದೇಶೀಯ ಮಟ್ಟದಲ್ಲಿ ರನ್ಗಳ ಸುರಿಮಳೆಗರೆದಿದ್ದ ಇವರು ಈ ವರ್ಷದ ಆರಂಭದಲ್ಲಿ ನಡೆದ ಅಂಡರ್-19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಕೇವಲ 80 ಎಸೆತಗಳಲ್ಲಿ 175 ರನ್ಗಳ ಸ್ಫೋಟಕ ಇನಿಂಗ್ಸ್ ಆಡಿ ಜಾಗತಿಕ ಕ್ರಿಕೆಟ್ನ ಗಮನ ಸೆಳೆದಿದ್ದರು. ಬಳಿಕ 2026ರ ಐಪಿಎಲ್ ಸೀಸನ್ ಆರಂಭಕ್ಕೂ ಮುನ್ನ ಹಲವರು ಇವರ ಸಾಮರ್ಥ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.
ವಿಶ್ವದ ನಂಬರ್ 1 ಬೌಲರ್ಗಳ ಮೇಲೆ ಸವಾರಿ
ಎದುರಾಳಿ ತಂಡಗಳು ಇವರ ಬ್ಯಾಟಿಂಗ್ ಶೈಲಿಯನ್ನು ಅರಿತುಕೊಂಡು ವಿಶೇಷ ಯೋಜನೆಗಳೊಂದಿಗೆ ಬರುವುದರಿಂದ ಈ ಬಾರಿ ಸೂರ್ಯವಂಶಿ ಪರದಾಡುತ್ತಾರೆ ಎಂದು ಹಲವರು ಭವಿಷ್ಯ ನುಡಿದಿದ್ದರು. ಆದರೆ ಈ ಎಲ್ಲಾ ಭವಿಷ್ಯಗಳನ್ನು ಸೂರ್ಯವಂಶಿ ತಲೆ ಕೆಳಗಾಗುವಂತೆ ಮಾಡಿದರು. ಜಸ್ಪ್ರೀತ್ ಬುಮ್ರಾ, ಜೋಶ್ ಹ್ಯಾಜಲ್ವುಡ್, ಪ್ಯಾಟ್ ಕಮ್ಮಿನ್ಸ್, ಭುವನೇಶ್ವರ್ ಕುಮಾರ್, ಕಗಿಸೊ ರಬಾಡ ಅವರಂತಹ ವಿಶ್ವದ ನಂಬರ್ ಒನ್ ಬೌಲರ್ಗಳನ್ನು ಅತ್ಯಂತ ಧೈರ್ಯದಿಂದ ಎದುರಿಸಿ ಬೌಂಡರಿ, ಸಿಕ್ಸರ್ಗಳ ಸುರಿಮಳೆಗೈದರು.
ಟೂರ್ನಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಕೇವಲ 36 ಎಸೆತಗಳಲ್ಲಿ ಶತಕ ಸಿಡಿಸಿದ ಅವರು, ಮೂರು ಬಾರಿ 90ರ ಗಡಿ ದಾಟುತ್ತಿದ್ದಂತೆ ಔಟಾಗಿ ಶತಕ ವಂಚಿತರಾಗಿದ್ದರು. ಇವುಗಳಲ್ಲಿ ಎರಡು ಪಂದ್ಯಗಳು ಅತ್ಯಂತ ಒತ್ತಡದ ಪ್ಲೇ ಆಫ್ ಪಂದ್ಯಗಳಾಗಿದ್ದವು ಎಂಬುದು ವಿಶೇಷ. ಆದರೂ ತಂಡಕ್ಕೆ ಇವರು ಕೊಟ್ಟ ಕೊಡುಗೆ ಮಾತ್ರ ಅಪಾರವಾದುದ್ದಾಗಿತ್ತು.
ವೈಭವ್ ಸೂರ್ಯವಂಶಿ ಅವರ ಈ ಅಸಾಧಾರಣ ಆಟವನ್ನು ಕಡೆಗಣಿಸಲು ಸಾಧ್ಯವೇ ಇರಲಿಲ್ಲ ಎಂದು ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಒಪ್ಪಿಕೊಂಡಿದ್ದಾರೆ. 'ಅವರು ತಮ್ಮ ಅದ್ಭುತ ಪ್ರದರ್ಶನದ ಮೂಲಕ ಆಯ್ಕೆ ಸಮಿತಿಯ ಬಾಗಿಲನ್ನು ಬಲವಾಗಿ ತಟ್ಟಿದ್ದಾರೆ. ಟೂರ್ನಿಯಲ್ಲಿ ಒಬ್ಬ ಯುವ ಆಟಗಾರ ಈ ಮಟ್ಟಿಗೆ ಪಂದ್ಯದ ಗತಿಯನ್ನು ಬದಲಿಸಬಲ್ಲ ಸ್ಫೋಟಕ ಆಟ ಆಡುವುದೇ ಒಂದು ಅದ್ಭುತ, ಎಂದು ಅಗರ್ಕರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಐರ್ಲೆಂಡ್ ಪ್ರವಾಸಕ್ಕೆ ತೆರಳುವ ಮುನ್ನ ಸೂರ್ಯವಂಶಿ ಸದ್ಯ ಶ್ರೀಲಂಕಾ 'ಎ' ಮತ್ತು ಅಫ್ಘಾನಿಸ್ತಾನ 'ಎ' ತಂಡಗಳ ವಿರುದ್ಧದ ತ್ರಿಕೋನ ಸರಣಿಗಾಗಿ ಇಂಡಿಯಾ 'ಎ' ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇವರ ಆಟವನ್ನು ನೋಡಲು ಬರೀ ಇಂಡಿಯಾ ಅಷ್ಟೇ ಅಲ್ಲದೆ, ವಿಶ್ವಾದ್ಯಂತ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.












Click it and Unblock the Notifications