Kottiyoor: ಕನ್ನಡಿಗರು ಕೊಟ್ಟಿಯೂರ್ಗೆ ಹೋಗಲೇಬೇಡಿ, ಹೆಣ್ಮಕ್ಕಳು ಅಂತನೂ ನೋಡಲ್ಲ, ರೌಡಿಸಂ ಮಾಡ್ತಾರೆ: ವಿಡಿಯೋ ಮಾಡಿ ಆಕ್ರೋಶ
ಕೇರಳದ ಸುಪ್ರಸಿದ್ಧ ಪುಣ್ಯಕ್ಷೇತ್ರ ಕೊಟ್ಟಿಯೂರಿಗೆ (Kottiyoor) ಭೇಟಿ ನೀಡುವ ಕರ್ನಾಟಕದ ಭಕ್ತರ ಮೇಲೆ ಅಲ್ಲಿನ ಸ್ಥಳೀಯರು ಮತ್ತು ಆಡಳಿತ ಮಂಡಳಿ ನಡೆಸುತ್ತಿರುವ ದೌರ್ಜನ್ಯದ ವಿರುದ್ಧ ಇಡೀ ಕನ್ನಡಿಗರು ಕೆರಳಿ ಕೆಂಡವಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕಣ್ಣೀರು ಹಾಕುತ್ತಾ ಕನ್ನಡಿಗರು ಹಂಚಿಕೊಂಡಿರುವ ವಿಡಿಯೋಗಳು ಈಗ ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಕಿಚ್ಚು ಹೊತ್ತಿಸಿದೆ.
ಇತಿಹಾಸ ಪ್ರಸಿದ್ಧ ಕೇರಳದ ಕೊಟ್ಟಿಯೂರು ಶಿವ ದೇವಸ್ಥಾನದಲ್ಲಿ ಕರ್ನಾಟಕದ ಭಕ್ತರ ಮೇಲೆ ಮನುಷ್ಯತ್ವವೇ ಇಲ್ಲದಂತೆ ಕ್ರೂರವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ದೇವಸ್ಥಾನದ ಆವರಣದಿಂದಲೇ ಭಕ್ತರು ಕಣ್ಣೀರು ಹಾಕುತ್ತಾ ವಿಡಿಯೋಗಳನ್ನು ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, "ದಯವಿಟ್ಟು ಯಾವುದೇ ಕನ್ನಡಿಗರು ಈ ಕೊಟ್ಟಿಯೂರು ಕ್ಷೇತ್ರಕ್ಕೆ ಕಾಲಿಡಬೇಡಿ. ಇಲ್ಲಿ ನಮಗೆ ರಕ್ಷಣೆಯೂ ಇಲ್ಲ, ಗೌರವವೂ ಇಲ್ಲ" ಎಂದು ಭಾವುಕರಾಗಿ ಇಡೀ ಕರ್ನಾಟಕದ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಹೆಣ್ಣುಮಕ್ಕಳಿಗೂ ಇಲ್ಲ ಗೌರವ
ವೈರಲ್ ಆಗಿರುವ ವಿಡಿಯೋಗಳಲ್ಲಿ ಭಕ್ತರು ಅಲ್ಲಿ ನಡೆಯುತ್ತಿರುವ ರೌಡಿಸಂ ಅನ್ನು ಬಿಚ್ಚಿಟ್ಟಿದ್ದಾರೆ. "ಇಲ್ಲಿಗೆ ಬರುವ ಹೆಣ್ಣುಮಕ್ಕಳು, ತಾಯಂದಿರು ಎಂದು ನೋಡದೆ ಮೃಗಗಳಂತೆ ತಳ್ಳಾಡುತ್ತಾರೆ. ಕರ್ನಾಟಕದ ಭಕ್ತರೆಂದರೆ ಇಲ್ಲಿನ ಸ್ಥಳೀಯರಿಗೆ ಮತ್ತು ಆಡಳಿತ ಸಿಬ್ಬಂದಿಗೆ ಎಲ್ಲಿಲ್ಲದ ತಾತ್ಸಾರ. ಗಂಡುಮಕ್ಕಳನ್ನು ಹಿಂದುಮುಂದು ನೋಡದೆ ಮನಬಂದಂತೆ ಒದೆಯಲು ಬರುತ್ತಾರೆ. ಭಕ್ತರ ರಕ್ಷಣೆಗೆ ಇರಬೇಕಾದ ಅಲ್ಲಿನ ಪೊಲೀಸ್ ವ್ಯವಸ್ಥೆಯಂತೂ ಸಂಪೂರ್ಣ ಹದಗೆಟ್ಟಿದ್ದು, ಇಲ್ಲಿಯವರು ಭಕ್ತರ ಮೇಲೆ ಕಾಲಿನಿಂದ ನೀರನ್ನು ಎರಚಿ ವಿಕೃತಿ ತೋರುತ್ತಿದ್ದಾರೆ" ಎಂದು ಆಕ್ರೋಶ ಹೊರಹಾಕಿದ್ದಾರೆ.
ಶಿವನ ನೋಡೋಕೆ ಕೇರಳಕ್ಕೆ ಹೋಗ್ಬೇಕೇನ್ರೋ??!#Kottiyoor #Kerala pic.twitter.com/VaqsXuCCTa
— S R E E | ಶ್ರೀ (@SreeDharaNEL) June 7, 2026
ಭಾಷೆಯ ಅಹಂಕಾರ; ಕೆಟ್ಟ ಪದಗಳಿಂದ ನಿಂದನೆ
"ನಮಗೆ ಮಲಯಾಳಿ ಭಾಷೆ ಬರುವುದಿಲ್ಲ ಎಂಬುದನ್ನೇ ಬಂಡವಾಳ ಮಾಡಿಕೊಳ್ಳುವ ಅಲ್ಲಿನ ಸಿಬ್ಬಂದಿ, ಅತ್ಯಂತ ಕೆಟ್ಟ ಪದಗಳಿಂದ ನಮ್ಮನ್ನು ನಿಂದಿಸುತ್ತಾರೆ. ಸಾವಿರಾರು ರೂಪಾಯಿ ಕೊಟ್ಟು ಸ್ಪೆಷಲ್ ಟಿಕೆಟ್ ಖರೀದಿಸಿದರೂ ನಮಗೆ ಕನಿಷ್ಠ ಮಾನವೀಯತೆಯ ದರ್ಶನವೂ ಸಿಗುತ್ತಿಲ್ಲ. ಈ ದೇವಸ್ಥಾನಕ್ಕೆ ಅತಿ ಹೆಚ್ಚು ಆದಾಯ ತರುವುದೇ ಕರ್ನಾಟಕದ ಭಕ್ತರು. ಅಂಥದ್ದರಲ್ಲಿ ನಮ್ಮದೇ ಹಣ ಪಡೆದು, ನಮ್ಮ ಮೇಲೆಯೇ ರೌಡಿಸಂ ಮಾಡುವುದಾದರೆ ನಾವು ಇಲ್ಲಿಗೆ ಬರುವುದೇ ವ್ಯರ್ಥ" ಎಂದು ಭಕ್ತರು ಗರಂ ಆಗಿದ್ದಾರೆ.
ನಟರ ಭೇಟಿಯಿಂದ ಪ್ರಸಿದ್ಧಿ ಪಡೆದಿದ್ದ ಕ್ಷೇತ್ರ
ಪೌರಾಣಿಕ ಹಿನ್ನೆಲೆಯುಳ್ಳ ಕೊಟ್ಟಿಯೂರು ಶಿವ ದೇವಾಲಯವು ವರ್ಷದಲ್ಲಿ ಕೇವಲ ಒಂದು ತಿಂಗಳು ಮಾತ್ರ ಭಕ್ತರ ದರ್ಶನಕ್ಕೆ ಮುಕ್ತವಾಗಿರುತ್ತದೆ. ಶಿವನ ಮಡದಿ ಸತಿ ದೇವಿಯು ತನ್ನ ತಂದೆಯ ಯಜ್ಞಕುಂಡಕ್ಕೆ ಹಾರಿ ಪ್ರಾಣತ್ಯಾಗ ಮಾಡಿದ ಪರಮ ಪವಿತ್ರ ಜಾಗ ಇದಾಗಿದೆ ಎಂಬ ನಂಬಿಕೆಯಿದೆ. ಇತ್ತೀಚಿನ ದಿನಗಳಲ್ಲಿ ಕನ್ನಡದ ಖ್ಯಾತ ನಟರಾದ ದರ್ಶನ್, ಜಗ್ಗೇಶ್ ಹಾಗೂ ರಿಷಬ್ ಶೆಟ್ಟಿ ಸೇರಿದಂತೆ ಹಲವರು ಈ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಹೋಗಲು ಆರಂಭಿಸಿದ್ದರು. ಆದರೆ, ದೇವರ ಹೆಸರಿನಲ್ಲಿ ಅಲ್ಲಿನ ಸಿಬ್ಬಂದಿ ಕನ್ನಡಿಗರನ್ನು ನಡೆಸಿಕೊಳ್ಳುತ್ತಿರುವ ರೀತಿಯನ್ನು ಖಂಡಿಸಿ ಸಾಮಾಜಿಕ ಜಾಲತಾಣಗಳಲ್ಲಿ "ಬಾಯ್ಕಾಟ್ ಕೊಟ್ಟಿಯೂರು" (Boycott Kottiyoor) ಅಭಿಯಾನ ಆರಂಭಿಸಿದ್ದಾರೆ.
Don’t go to #Kottiyur Kerala 🙏
— HDfan (@HDFanTweets) June 6, 2026
Danger and Disrespect for Karnataka
It was previously popular in Kerala 👍 , but After our @DasaDarshan visited this place gained massive popularity among Karnataka devotees, and huge crowds started visiting from KA , Now many people are saying… pic.twitter.com/8KpvP0u80W
ನೀವು ಬರದಿದ್ರೆ ನಮಗೇನು ನಷ್ಟವಿಲ್ಲ
ಕರ್ನಾಟಕದ ಭಕ್ತರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬ ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ, ಸೋಷಿಯಲ್ ಮೀಡಿಯಾದಲ್ಲಿ ಕನ್ನಡಿಗರು "ಬಾಯ್ಕಾಟ್ ಕೊಟ್ಟಿಯೂರು" ಅಭಿಯಾನ ಆರಂಭಿಸಿದ್ದರು. "ಕೆಲವು ಕನ್ನಡಿಗರು ಕೊಟ್ಟಿಯೂರು ಉತ್ಸವವು ಕಳೆದ ವರ್ಷವಷ್ಟೇ ಆರಂಭವಾಗಿದೆ ಮತ್ತು ತಮ್ಮಿಂದಲೇ ಈ ಕ್ಷೇತ್ರ ಪ್ರಸಿದ್ಧಿ ಪಡೆದು ಮುನ್ನಡೆಯುತ್ತಿದೆ ಎಂಬ ಭ್ರಮೆಯಲ್ಲಿದ್ದಾರೆ. ಆದರೆ ಇತಿಹಾಸ ಪುಟಗಳನ್ನು ತಿರುವಿ ನೋಡಿದರೆ ಸತ್ಯ ತಿಳಿಯುತ್ತದೆ. ಈ ಪವಿತ್ರ ಆಚರಣೆ ಮತ್ತು ಧಾರ್ಮಿಕ ವಿಧಿವಿಧಾನಗಳು ನಿನ್ನೆ ಮೊನ್ನೆಯದಲ್ಲ, ಇದು ಶತಶತಮಾನಗಳಷ್ಟು ಹಳೆಯದು. ಕೇರಳದ ಸಾಂಸ್ಕೃತಿಕ ಪರಂಪರೆಯ ಹೆಮ್ಮೆಯ ಸಂಕೇತವಾಗಿ ಈ ಕ್ಷೇತ್ರ ಶತಮಾನಗಳಿಂದಲೂ ಭದ್ರವಾಗಿ ಬೆಳೆದು ಬಂದಿದೆ" ಎಂದು ಖಡಕ್ ಆಗಿ ಹೇಳಿದ್ದಾರೆ.
"ಕನ್ನಡಿಗರು ಕೊಟ್ಟಿಯೂರು ಕ್ಷೇತ್ರವನ್ನು ಬಹಿಷ್ಕರಿಸುವುದರಿಂದ ಇಲ್ಲಿನ ದೈನಂದಿನ ಕಾರ್ಯಕಲಾಪಗಳಿಗಾಗಲಿ ಅಥವಾ ಉತ್ಸವದ ಯಶಸ್ಸಿಗಾಗಲಿ ಯಾವುದೇ ರೀತಿಯ ಧಕ್ಕೆ ಉಂಟಾಗುವುದಿಲ್ಲ. ಕನ್ನಡಿಗರು ಬರದಿದ್ದರೂ ಕೊಟ್ಟಿಯೂರು ಉತ್ಸವ ಎಂದಿನಂತೆಯೇ ಅತ್ಯಂತ ಸಡಗರದಿಂದ, ಯಶಸ್ವಿಯಾಗಿ ನಡೆಯಲಿದೆ. ನಿಮ್ಮ ಬಹಿಷ್ಕಾರದಿಂದ ದೇವಸ್ಥಾನಕ್ಕೆ ಯಾವುದೇ ನಷ್ಟವಿಲ್ಲ" ಎಂದು ನೇರವಾಗಿಯೇ ಸವಾಲ್ ಹಾಕಿದ್ದಾರೆ.













Click it and Unblock the Notifications