ಫೈಲ್ ತರಲಿಲ್ಲವೆಂದು ಒಡಿಶಾದ ಅಧಿಕಾರಿಗಳಿಗೆ ಕುರ್ಚಿಯಿಂದ ಹಲ್ಲೆ; ಕೇಂದ್ರ ಸಚಿವರ ವಿರುದ್ಧ ದೂರು ದಾಖಲು
ಭುವನೇಶ್ವರ್, ಜನವರಿ 22: ಮಯೂರ್ಭಂಜ್ ಜಿಲ್ಲೆಯ ತಮ್ಮ ಕಚೇರಿಯಲ್ಲಿ ಕೇಂದ್ರ ಸಚಿವ ಬಿಶ್ವೇಶ್ವರ್ ತುಡು ಅವರು ತಮ್ಮ ಮೇಲೆ ಕುರ್ಚಿಯಿಂದ ಹಲ್ಲೆ ನಡೆಸಿದ್ದಾರೆ ಎಂದು ಒಡಿಶಾ ಸರ್ಕಾರದ ಇಬ್ಬರು ಅಧಿಕಾರಿಗಳು ಆರೋಪಿಸಿದ್ದಾರೆ, ಇದನ್ನು ಬಿಜೆಪಿ ಸಂಸದರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
ಕೇಂದ್ರ ಜಲಶಕ್ತಿ ಮತ್ತು ಬುಡಕಟ್ಟು ವ್ಯವಹಾರಗಳ ರಾಜ್ಯ ಸಚಿವ ಬಿಶ್ವೇಶ್ವರ ತುಡು ಲೋಕಸಭೆಯಲ್ಲಿ ಮಯೂರ್ಭಂಜ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಕಳೆದ ವರ್ಷ ಜುಲೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡಿದ್ದರು.
ಮಯೂರ್ಭಂಜ್ ಜಿಲ್ಲಾ ಯೋಜನಾ ಮತ್ತು ಮೇಲ್ವಿಚಾರಣಾ ಘಟಕದ ಉಪನಿರ್ದೇಶಕ ಅಶ್ವಿನಿ ಕುಮಾರ್ ಮಲ್ಲಿಕ್ ಮತ್ತು ಸಹಾಯಕ ನಿರ್ದೇಶಕ ದೇಬಶಿಶ್ ಮೊಹಾಪಾತ್ರ ಹೇಳುವ ಪ್ರಕಾರ, ಶುಕ್ರವಾರ ಪರಿಶೀಲನಾ ಸಭೆಗಾಗಿ ಕೇಂದ್ರ ಸಚಿವರು ನಮ್ಮಿಬ್ಬರನ್ನು ತಮ್ಮ ಹುಟ್ಟೂರಾದ ಬರಿಪಾಡದಲ್ಲಿರುವ ಬಿಜೆಪಿ ಪಕ್ಷದ ಕಚೇರಿಗೆ ಕರೆದಿದ್ದರು.

ಪರಿಶೀಲನಾ ಸಭೆಯಲ್ಲಿ, ಕೆಲವು ಕಡತಗಳನ್ನು ತಮ್ಮೊಂದಿಗೆ ತರದ ಕಾರಣ ತುಡು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಚೇರಿಯ ಬಾಗಿಲಿಗೆ ಒಳಗಿನಿಂದ ಬೀಗ ಹಾಕಿ, ನಂತರ ಸಚಿವರು ಇಬ್ಬರೂ ಅಧಿಕಾರಿಗಳಿಗೆ ಥಳಿಸಿದರು ಮತ್ತು ಕುರ್ಚಿಯಿಂದ ಹಲ್ಲೆ ನಡೆಸಿದರು ಎಂದು ಆರೋಪಿಸಲಾಗಿದೆ.
ಅಧಿಕಾರಿಗಳ ಮೇಲೆ ಹಲ್ಲೆಯ ನಂತರ ದೇಬಾಸಿಶ್ ಮೊಹಾಪಾತ್ರ ಅವರ ಕೈ ಮುರಿತವಾಗಿದ್ದರೆ, ಅಶ್ವಿನಿ ಮಲ್ಲಿಕ್ ಅವರಿಗೆ ತೀವ್ರ ಗಾಯಗಳಾಗಿವೆ. ಇಬ್ಬರೂ ಅಧಿಕಾರಿಗಳನ್ನು ಬರಿಪಾಡಾದ PRM ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಬ್ಬರು ಸರ್ಕಾರಿ ಅಧಿಕಾರಿಗಳು ನೀಡಿದ ದೂರಿನ ಆಧಾರದ ಮೇಲೆ, ಬರಿಪಾಡಾ ಟೌನ್ ಪೊಲೀಸ್ ಠಾಣೆಯಲ್ಲಿ ಐಪಿಸಿಯ ಸೆಕ್ಷನ್ 323, 325, 294 ಮತ್ತು 506 ರ ಅಡಿಯಲ್ಲಿ ಕೇಂದ್ರ ಸಚಿವ ಬಿಶ್ವೇಶ್ವರ ತುಡು ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಇಂಡಿಯಾ ಟುಡೇಗೆ ತಿಳಿಸಿದ್ದಾರೆ.
ತಾಳ್ಮೆ ಕಳೆದುಕೊಂಡ ಸಚಿವರು ಕುರ್ಚಿಯಿಂದ ಹೊಡೆದರು
ಗಾಯಗೊಂಡ ಅಧಿಕಾರಿಗಳಲ್ಲಿ ಒಬ್ಬರಾದ ದೇಬಾಸಿಸ್ ಮೊಹಾಪಾತ್ರ ಇಂಡಿಯಾ ಟುಡೇಗೆ ತಿಳಿಸಿದ್ದು, "ನಾವು ಪ್ರೋಟೋಕಾಲ್ಗಳನ್ನು ಉಲ್ಲಂಘಿಸಿದ್ದೇವೆ ಎಂದು ಹೇಳುವ ಮೂಲಕ ಸಚಿವರು ಮೊದಲು ನಮ್ಮನ್ನು ಟೀಕಿಸಿದರು. ನಾವು ಭೇಟಿ ಸಮಯದಲ್ಲಿ ಫೈಲ್ಗಳ ಜೊತೆಗೆ ಅವರ ಕಚೇರಿಗೆ ಭೇಟಿ ನೀಡಿದರೆ ಅದು ಅನುಚಿತವಾಗಿದೆ ಎಂದು ನಾವು ಅವರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದ್ದೇವೆ. ಮುಂಬರುವ ಪಂಚಾಯತ್ ಚುನಾವಣೆಯಿಂದಾಗಿ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಆದರೆ ಅವರು ಕೋಪಗೊಂಡು ನಮಗೆ ಹೊಡೆಯಲು ಆರಂಭಿಸಿದರು,'' ಎಂದು ಆರೋಪಿಸಿದ್ದಾರೆ.
ಮತ್ತೊಬ್ಬ ಅಧಿಕಾರಿ ಅಶ್ವಿನಿ ಕುಮಾರ್ ಮಲ್ಲಿಕ್, "ನಾವಿಬ್ಬರೂ ಸಚಿವರನ್ನು ಪಕ್ಷದ ಕಚೇರಿಯಲ್ಲಿ ಭೇಟಿಯಾದಾಗ, ನಾವು ಎಂಪಿಎಲ್ಎಡಿಎಸ್ ಫೈಲ್ ತರಲು ಮರೆತಿದ್ದರಿಂದ ಸಚಿವರು ತಾಳ್ಮೆ ಕಳೆದುಕೊಂಡರು. ಅವರು ನಮ್ಮನ್ನು ನಿಂದಿಸಿದ ನಂತರ ಪ್ಲಾಸ್ಟಿಕ್ ಕುರ್ಚಿಯಿಂದ ನಮಗೆ ಹೊಡೆಯಲು ಪ್ರಾರಂಭಿಸಿದರು. ನಾವು ತಪ್ಪಿಸಿಕೊಂಡು ಬಂದೆವು,'' ಎಂದು ತಿಳಿಸಿದ್ದಾರೆ.
ಸುಳ್ಳು ಮತ್ತು ಆಧಾರರಹಿತ ಆರೋಪವೆಂದ ಸಚಿವ
ಈ ಮಧ್ಯೆ ಪಂಚಾಯತ್ ಚುನಾವಣೆಗೆ ಮುನ್ನ ತನ್ನ ಇಮೇಜ್ ಅನ್ನು ಕೆಡಿಸುವ ಪ್ರಯತ್ನ ಎಂದು ಕೇಂದ್ರದ ರಾಜ್ಯ ಖಾತೆ ಸಚಿವ ಬಿಶ್ವೇಶ್ವರ್ ತುಡು ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿದ್ದಾರೆ. ತಮ್ಮ ಮೇಲಿನ ಆರೋಪಗಳು ಸುಳ್ಳು ಮತ್ತು ಆಧಾರರಹಿತವಾಗಿವೆ ಎಂದಿದ್ದಾರೆ.
"ಅಧಿಕಾರಿಗಳಾದ ಮಲ್ಲಿಕ್ ಮತ್ತು ಮೊಹಾಪಾತ್ರ ನನ್ನ ಬಳಿಗೆ ಬಂದಿದ್ದರು. ನಾವು ಕುಳಿತು ಸುಮಾರು ಅರ್ಧ ಗಂಟೆ ಚರ್ಚೆ ನಡೆಸಿದೆವು. ಕೇಂದ್ರ ಸರ್ಕಾರ ನೀಡಿದ 7 ಕೋಟಿ ರೂ.ಗಳನ್ನು ಹೇಗೆ ಖರ್ಚು ಮಾಡಲಾಗಿದೆ ಎಂಬ ಕಡತಗಳನ್ನು ತಮ್ಮೊಂದಿಗೆ ತರುವಂತೆ ಹೇಳಿದ್ದೆ. ಈಗ ಹಲ್ಲೆ ಆರೋಪ ಮಾಡುತ್ತಿದ್ದಾರೆ. ನಾನು ಅವರನ್ನು ಥಳಿಸಿದ್ದರೆ, ಅವರು ನನ್ನ ಕಚೇರಿಯಿಂದ ಹಿಂತಿರುಗಲು ಸಾಧ್ಯವಾಗುತ್ತಿತ್ತೇ?," ಎಂದು ಸಚಿವ ಬಿಶ್ವೇಶ್ವರ್ ತುಡು ಹೇಳಿದ್ದಾರೆ.












Click it and Unblock the Notifications