ಒಡಿಶಾ ನದಿ ನೀರಿನ ಮಟ್ಟ ಇಳಿಕೆ: ಇಂದೂ ಭಾರೀ ಮಳೆ ಸೂಚನೆ
ಒಡಿಶಾದ ಬಹುತೇಕ ನದಿಗಳಲ್ಲಿ ನೀರಿನ ಮಟ್ಟವು ಮಂಗಳವಾರ ಅಪಾಯದ ಮಟ್ಟಕ್ಕಿಂತ ಕಡಿಮೆಯಾಗಿದೆ. ಆದರೆ ರಾಜ್ಯದ 902 ಹಳ್ಳಿಗಳಲ್ಲಿ 6.4 ಲಕ್ಷ ಜನರು ಇನ್ನೂ ಪ್ರವಾಹಕ್ಕೆ ಸಿಲುಕ್ಕಿದ್ದಾರೆ. ಬುಧವಾರದವರೆಗೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆಯಂತೆ ರಾಜ್ಯದ ಉತ್ತರ ಜಿಲ್ಲೆಗಳಲ್ಲಿ ಭಾರೀ ಮಳೆ ಎದುರಿಸಲು ಸಜ್ಜಾಗಿದ್ದಾರೆ. ಉತ್ತರದಲ್ಲಿ ಬಾಲಸೋರ್, ಭದ್ರಕ್, ಜಾಜ್ಪುರ್, ಮಯೂರ್ಭಂಜ್ ಮತ್ತು ಕಿಯೋಂಜಾರ್ ಮತ್ತು ಕರಾವಳಿ ಪ್ರದೇಶದ ಕೇಂದ್ರಪಾರಾ, ಕಟಕ್ ಮತ್ತು ಜಗತ್ಸಿಂಗ್ಪುರ ಜಿಲ್ಲೆಗಳು ಮಳೆಯಿಂದ ಪ್ರಭಾವಿತವಾಗಿವೆ.
"ಐಎಂಡಿ ಸೂಚನೆಯಂತೆ ರಾಜ್ಯದಲ್ಲಿ ಅತೀ ಹೆಚ್ಚು ಮಳೆಯಾಗುವ ಮುನ್ಸೂಚನೆಯಿದ್ದು ನಾವು ಎಲ್ಲಾ ರಕ್ಷಣಾ ಮತ್ತು ಪರಿಹಾರ ತಂಡಗಳನ್ನು ನಾಲ್ಕು ಪ್ರವಾಹ ಪೀಡಿತ ಬ್ಲಾಕ್ಗಳಾದ ಬಲಿಪಾಲ್, ಭೋಗ್ರೈ, ಬಸ್ತಾ ಮತ್ತು ಜಲೇಶ್ವರದಲ್ಲಿ ನಿಯೋಜನೆಯ ಸ್ಥಳದಲ್ಲಿ ಇರಿಸಿದ್ದೇವೆ" ಎಂದು ಜಿಲ್ಲಾಧಿಕಾರಿ ದತ್ತಾತ್ರಯ ಭೌಸಾಹೇಬ್ ಶಿಂಧೆ ಹೇಳಿದ್ದಾರೆ.
ಹಗಲಿನಲ್ಲಿ ಭೋಗ್ರೈ ಬ್ಲಾಕ್ಗೆ ಭೇಟಿ ನೀಡಿದ ಸಿಂಧೆ ಅವರು ಕೆಲವು ಸಂತ್ರಸ್ತ ಜನರನ್ನು ಭೇಟಿಯಾದರು ಮತ್ತು ಪ್ರವಾಹ ನೀರು ಕಡಿಮೆಯಾಗುವವರೆಗೆ ಸುರಕ್ಷಿತ ಆಶ್ರಯವನ್ನು ತೊರೆಯದಂತೆ ವಿನಂತಿಸಿದರು. ಸೋಮವಾರ ಬಾಲಸೋರ್ ಜಿಲ್ಲೆಯ ವಿವಿಧ ಆಶ್ರಯಗಳಲ್ಲಿ ತಂಗಿದ್ದ 40,124 ನಿರಾಶ್ರಿತರ ಪೈಕಿ ಸುಮಾರು 25,000 ಜನರು ತಮ್ಮ ಮನೆಗಳಿಗೆ ತೆರಳಿದ್ದಾರೆ. ಜಿಲ್ಲೆಯಲ್ಲಿ ಈಗ ಕೇವಲ 46 ಆಶ್ರಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

ಉತ್ತರ ಒಡಿಶಾದ ಸುವರ್ಣರೇಖಾ, ಪೂರ್ವದ ಮಹಾನದಿ ಸೇರಿದಂತೆ ಬಹುತೇಕ ನದಿಗಳು ಅಪಾಯದ ಮಟ್ಟಕ್ಕಿಂತ ಕೆಳಮಟ್ಟದಲ್ಲಿ ಹರಿಯುತ್ತಿವೆ ಎಂದು ಜಲಸಂಪನ್ಮೂಲ ಇಲಾಖೆ ಮುಖ್ಯ ಎಂಜಿನಿಯರ್ ಬಿ.ಕೆ.ಮಿಶ್ರಾ ತಿಳಿಸಿದ್ದಾರೆ. "ಉತ್ತುಂಗದ ಪ್ರವಾಹ ಮುಗಿದಿದೆ, ಆದರೆ ಅನೇಕ ಗ್ರಾಮಗಳು ಜಲಾವೃತವಾಗಿವೆ. ಹಲವಾರು ಜಿಲ್ಲೆಗಳ ಅನೇಕ ಹಳ್ಳಿಗಳಲ್ಲಿ ಪ್ರವಾಹದ ನೀರು ಇನ್ನೂ ಹಾನಿಯನ್ನುಂಟುಮಾಡುತ್ತಿದೆ. ತಾಜಾ ಮಳೆಯನ್ನು ಎದುರಿಸಲು ಆಡಳಿತವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ" ಎಂದು ಅವರು ಹೇಳಿದರು.
ಬಾಲಸೋರ್ ಮತ್ತು ಮಯೂರ್ಭಂಜ್ ಜಿಲ್ಲೆಗಳಲ್ಲಿ ಪ್ರವಾಹಕ್ಕೆ ಕಾರಣವಾದ ಸುವರ್ಣರೇಖಾ ಮತ್ತು ಭೂಧಾಬಲಾಂಗ್ ನದಿಗಳಲ್ಲಿ ನೀರಿನ ಮಟ್ಟವು ಅಪಾಯದ ಮಟ್ಟಕ್ಕಿಂತ ಕಡಿಮೆಯಾಗಿದೆ. ಬೈತರಾಣಿ ನದಿಯ ಪರಿಸ್ಥಿತಿಯೂ ಇದೇ ಆಗಿದೆ. ಇದು ಜಾಜ್ಪುರ ಮತ್ತು ಕಿಯೋಂಜಾರ್ ಜಿಲ್ಲೆಗಳ ಹಲವಾರು ಹಳ್ಳಿಗಳನ್ನು ಮುಳುಗಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಪ್ರವಾಹ ಪರಿಸ್ಥಿತಿ ಸುಧಾರಿಸಿದೆ ಎಂದು ಮಿಶ್ರಾ ಹೇಳಿದ್ದಾರೆ. ಹಿರಾಕುಡ್ ಅಣೆಕಟ್ಟಿನ ನೀರಿನ ಮಟ್ಟ ಬೆಳಿಗ್ಗೆ 9 ಗಂಟೆಗೆ 623.35 ಅಡಿಗಳಷ್ಟಿತ್ತು. ಜಲಾಶಯಕ್ಕೆ 1.59 ಲಕ್ಷ ಕ್ಯೂಸೆಕ್ (ಸೆಕೆಂಡಿಗೆ ಘನ ಅಡಿ) ನೀರು ಸೇರುತ್ತಿದ್ದರೆ, ನಾಲ್ಕು ಗೇಟ್ಗಳ ಮೂಲಕ 1.04 ಲಕ್ಷ ಕ್ಯೂಸೆಕ್ ಹೊರಬಿಡಲಾಗುತ್ತಿದೆ. ಆದರೆ, ಬಾಲಸೋರ್ ಬ್ಲಾಕ್ನಲ್ಲಿ ಪ್ರವಾಹಕ್ಕೆ ಕಾರಣವಾದ ಜಲಕಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಮಥನಿಯಲ್ಲಿ 6.45 ಮೀಟರ್ಗಳಷ್ಟು ಹರಿಯುತ್ತಿದ್ದು, ಅಪಾಯದ ಮಟ್ಟ 5.5 ಮೀಟರ್ನಲ್ಲಿದೆ.
ರಾಜಸ್ಥಾನದಲ್ಲಿ ಮಳೆ ಅರ್ಭಟ
ರಾಜಸ್ಥಾನದ ಬರಾನ್ ಮತ್ತು ಬುಂದಿ ಜಿಲ್ಲೆಗಳಲ್ಲಿ ಇಬ್ಬರು ಜನರು ಮಳೆ ಪ್ರವಾಹದಲ್ಲಿ ಕೊಚ್ಚಿಹೋಗಿದ್ದಾರೆ ಮತ್ತು ಇಬ್ಬರು ನಾಪತ್ತೆಯಾಗಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವ ರಮೇಶ್ ಮೀನಾ ಮಂಗಳವಾರ ಕರೌಲಿ ಜಿಲ್ಲೆಯ ಮಳೆ ಪೀಡಿತ ಪ್ರದೇಶಗಳಲ್ಲಿ ಪ್ರವಾಸ ಮಾಡಿದರು. "ಪ್ರವಾಹ ಪರಿಸ್ಥಿತಿಯ ಬಗ್ಗೆ ಸಿಎಂ ಪ್ರಧಾನ ಕಾರ್ಯದರ್ಶಿ ಜೊತೆ ಮಾತನಾಡಿ, ಹಲವು ಗ್ರಾಮಗಳು ದ್ವೀಪಗಳಾಗಿ ಮಾರ್ಪಟ್ಟಿವೆ. ಗ್ರಾಮಸ್ಥರಿಗೆ ಸಹಾಯ ಬೇಕು" ಎಂದು ಮೀನಾ ಟ್ವೀಟ್ ಮಾಡಿದ್ದಾರೆ. ಸಂತ್ರಸ್ತರಿಗೆ ಆಹಾರ, ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಧಾರಾಕಾರ ಮಳೆಯು ರಾಜಸ್ಥಾನದ ಮೂರು ಜಿಲ್ಲೆಗಳಾದ ಜಲಾವರ್, ಧೋಲ್ಪುರ್ ಮತ್ತು ಬರಾನ್ಗಳಲ್ಲಿ ಪ್ರವಾಹದಂತಹ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಅಲ್ಲಿ ಸೇನೆ ಮತ್ತು ವಿಪತ್ತು ಪರಿಹಾರ ತಂಡವು ರಾಜ್ಯದಾದ್ಯಂತ ಸುಮಾರು 1,100 ಜನರನ್ನು ರಕ್ಷಿಸಲು ಕಾರ್ಯಾಚರಣೆ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications