ದೇಶ ಸುತ್ತುವವರಿಗೆ ಭರ್ಜರಿ ಗಿಫ್ಟ್ ಕೊಡಲಿದೆ ಕೇಂದ್ರ ಸರ್ಕಾರ
ಭುವನೇಶ್ವರ, ಜನವರಿ 25: 'ದೇಶ ಸುತ್ತು ಅಥವಾ ಕೋಶ ಓದು' ಎನ್ನುವ ನಾಣ್ಣುಡಿಯಲ್ಲಿರುವಂತೆ ನಮ್ಮಲ್ಲಿ ಕೋಶ ಓದುವವರ ಸಂಖ್ಯೆ ಕಡಿಮೆ ಇರಬಹುದು, ಆದರೆ ದೇಶ ಸುತ್ತುವವರ ಸಂಖ್ಯೆಗೇನೂ ಕೊರತೆಯಿಲ್ಲ. ದುಡಿಮೆ ಹಣದಲ್ಲಿ ಪ್ರವಾಸದ ಮೋಜಿಗಾಗಿ ವಿನಿಯೋಗಿಸುವವರು ಸಾಕಷ್ಟು ಮಂದಿ ಇದ್ದಾರೆ. ಅಂತಹವರಿಗಾಗಿ ಕೇಂದ್ರ ಸರ್ಕಾರ ಭರ್ಜರಿ ಗಿಫ್ಟ್ ಕೊಡಲು ಮುಂದಾಗಿದೆ.
ವರ್ಷಕ್ಕೆ ದೇಶದೊಳಗಿನ 15 ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಅವರ ಪ್ರವಾಸ ವೆಚ್ಚವನ್ನು ಪ್ರೋತ್ಸಾಹಕ ಧನದ ರೂಪದಲ್ಲಿ ಪ್ರಾಯೋಜಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಹೇಳಿದ್ದಾರೆ.
ಬಂಡೀಪುರದ ಚೆಲುವಿಗೆ ಮನಸೋತ ಪ್ರವಾಸಿಗರು
ಒಡಿಶಾ ಸರ್ಕಾರವು ಎಫ್ಐಸಿಸಿಐ ಸಹಭಾಗಿತ್ವದಲ್ಲಿ ಕೊನಾರ್ಕ್ನಲ್ಲಿ ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರೀಯ ಪ್ರವಾಸಿ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಶುಕ್ರವಾರ ಅವರು ಮಾತನಾಡಿದರು.
ಭತ್ಯೆ ನೀಡಲಿದೆ ಸರ್ಕಾರ
'ವರ್ಷವೊಂದರಲ್ಲಿ ದೇಶದಲ್ಲಿನ ಹದಿನೈದು ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ ಪ್ರವಾಸಿಗರ ಪ್ರಯಾಣ ವೆಚ್ಚವನ್ನು ಪ್ರವಾಸೋದ್ಯಮ ಸಚಿವಾಲಯ ಭರಿಸಲಿದೆ ಮತ್ತು ಅವರ ಫೋಟೋಗಳನ್ನು ನಮ್ಮ ವೆಬ್ಸೈಟ್ನಲ್ಲಿ ಪ್ರಕಟಿಸಲಿದೆ' ಎಂದು ಪಟೇಲ್ ತಿಳಿಸಿದರು.
ಹೊರ ರಾಜ್ಯದ ಪ್ರವಾಸ ಹೋಗಬೇಕು
ಆದರೆ ಪ್ರವಾಸಿಗರು ಹಣ ಸಿಗುತ್ತದೆ ಎಂದು ತಮ್ಮ ಊರಿನ ಸಮೀಪದಲ್ಲಿಯೇ ಇರುವ ಪ್ರವಾಸಿ ತಾಣಕ್ಕೆ ಹೋಗಿ ಅದಕ್ಕಾಗಿ ಹಣ ಪಡೆದುಕೊಳ್ಳಲು ಸಾಧ್ಯವಿಲ್ಲ. ಪ್ರವಾಸಿಗರು ತಮ್ಮ ರಾಜ್ಯದಿಂದ ಹೊರಗಿನ ಸ್ಥಳಗಳಿಗೆ ಪ್ರವಾಸ ಮಾಡಬೇಕು ಎನ್ನುವುದು ಈ ಯೋಜನೆಯ ಪ್ರಮುಖ ಷರತ್ತಾಗಿದೆ.
ಒಂದಿಷ್ಟು ಲಕ್ಷ್ಯ ನೀಡಿದರೆ ಗುಂಡಾಲ್ ಜಲಾಶಯವಾಗುತ್ತೆ ಸುಂದರ ಪ್ರವಾಸಿ ತಾಣ
ಪರ್ಯಟನ ಪರ್ವ ಯೋಜನೆ
ಕೇಂದ್ರ ಸರ್ಕಾರದ ಈ ಹೊಸ ಯೋಜನೆಗೆ 'ಪರ್ಯಟನ ಪರ್ವ' ಎಂದು ಹೆಸರಿಸಲಾಗಿದೆ. 2022ರ ವೇಳೆಗೆ ಕನಿಷ್ಠ 15 ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ವ್ಯಕ್ತಿಗೆ ಮಾತ್ರ ಈ ಯೋಜನೆಯಡಿ ಪ್ರೋತ್ಸಾಹಕ ರೂಪದಲ್ಲಿ ಪ್ರವಾಸ ಭತ್ಯೆ ನೀಡಲಾಗುತ್ತದೆ. ಒಂದು ವರ್ಷದೊಳಗೆ ಈ ಗುರಿ ತಲುಪಿದವರಿಗೆ ಬಹುಮಾನ ನೀಡಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.
ಇದು ಭತ್ಯೆ, ಹಣಕಾಸು ನೆರವು ಅಲ್ಲ
'ಇದನ್ನು ಹಣಕಾಸು ನೆರವು ಎಂದು ಪರಿಗಣಸಬಾರದು. ಇದು ಉತ್ತೇಜಕ ಭತ್ಯೆಯಷ್ಟೇ. ಹೀಗೆ ಅತಿ ಹೆಚ್ಚು ಸ್ಥಳಗಳಿಗೆ ಪ್ರವಾಸ ಕೈಗೊಳ್ಳುವ ವ್ಯಕ್ತಿಗಳನ್ನು ಭಾರತೀಯ ಪ್ರವಾಸೋದ್ಯಮದ ಬ್ರ್ಯಾಂಡ್ ಅಂಬಾಸೆಡರ್ಗಳೆಂದು ಗೌರವಿಸುವುದು ನಮ್ಮ ಕರ್ತವ್ಯ' ಎಂದು ಪಟೇಲ್ ತಿಳಿಸಿದರು.
ಸೂರ್ಯ ದೇವಾಲಯಕ್ಕೆ ಐಕಾನಿಕ್ ಗುರುತು
ದೇಶದ ಐಕಾನಿಕ್ ಸ್ಥಳಗಳ ಪಟ್ಟಿಯಲ್ಲಿ ಕೊನಾರ್ಕ್ನ ಸೂರ್ಯ ದೇವಾಲಯವನ್ನು ಸೇರ್ಪಡೆ ಮಾಡಲಾಗುವುದು. ಇದನ್ನು ಪ್ರಕಟಿಸಲು ಶೀಘ್ರದಲ್ಲಿಯೇ ವಿಶೇಷ ಸಮಾರಂಭವನ್ನು ಆಯೋಜಿಸಲಾಗುವುದು ಎಂದು ಪಟೇಲ್ ಹೇಳಿದರು.