ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ; ಐವರ ಬಂಧನ
ಭುವನೇಶ್ವರ, ಜುಲೈ, 19: ಒಡಿಶಾದ ಜಾಜ್ಪುರ ಜಿಲ್ಲೆಯಲ್ಲಿ ಅತ್ಯಾಚಾರ ಯತ್ನದಿಂದ ತಪ್ಪಿಸಿಕೊಳ್ಳಲು ಶಾಲಾ ಕಟ್ಟಡದ ಮೇಲ್ಛಾವಣಿಯಿಂದ ಜಿಗಿದು ಬಾಲಕಿ ಗಂಭೀರ ಗಾಯಗೊಂಡಿದ್ದಾಳೆ. ಅತ್ಯಾಚಾರ ನಡೆಸಲು ಯತ್ನಿಸಿದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಭಾನುವಾರ ರಾತ್ರಿ ಒಡಿಶಾದ ಕಿಯೋಂಜಾರ್ ಜಿಲ್ಲೆಯ ನಿವಾಸಿಯಾಗಿರುವ ವಿದ್ಯಾರ್ಥಿನಿ ತನ್ನ ಸಹೋದರನೊಂದಿಗೆ ಮನೆಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ಕಳಿಂಗನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ದ್ರೌಪದಿ ಮುರ್ಮು ಬೆಂಬಲಿಸಿದ ಒಡಿಶಾ ಸಿಎಂ ನವೀನ್ ಪಟ್ನಾಯಕ್
ಭಾರೀ ಮಳೆಯಾಗುತ್ತಿದ್ದರಿಂದ ಶಾಲೆಯಲ್ಲಿ ಆಶ್ರಯ ಪಡೆಯುವಂತೆ ಬಾಲಕಿ ಮತ್ತು ಆಕೆಯ ಸಹೋದರನಿಗೆ ಸಲಹೆ ನೀಡಿದ ಐವರು ಆರೋಪಿಗಳು, ಬಳಿಕ ಅವರು ಆಕೆಯ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಸ್ನಿಂದ ಇಳಿದಾಗ ಭಾರೀ ಮಳೆಯಾಗುತ್ತಿದ್ದ ಕಾರಣ ಪುರುಷರ ಗುಂಪೊಂದು ಶಾಲಾ ಕಟ್ಟಡದಲ್ಲಿ ಉಳಿದುಕೊಳ್ಳಿ. ಮಳೆ ನಿಂತಾಗ ನಿಮ್ಮ ಊರಿಗೆ ಹಿಂತಿರುಗಿ ಎಂದು ಸೂಚಿಸಿದ್ದರು. ಅವರ ಸಲಯೆಯಂತೆ ನಾವು ಅಲ್ಲೇ ಉಳಿದುಕೊಳ್ಳಲು ಒಪ್ಪಿಕೊಂಡಿದ್ದೆವು. ರಾತ್ರಿಯಾಗುತ್ತಿದ್ದಂತೆ ಕಿರಾತಕರ ಗುಂಪು ನನ್ನ ಸಹೋದರನನ್ನು ಥಳಿಸಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಾರೆ.
ಬಾಲಕಿಯ ಸಹೋದರನ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಲೆಗೆ ಕೆಡವಿ ಯಶಸ್ವಿಯಾಗಿದ್ದಾರೆ. ಕಿರಾತಕರು ಅತ್ಯಾಚಾರ ಮಾಡಲು ಪ್ರಯತ್ನಿಸಿದಾಗ ಬಾಲಕಿ ಶಾಲೆಯ ಕಟ್ಟಡದ ಮೇಲ್ಛಾವಣಿಯ ಮೇಲಿನಿಂದ ಜಿಗಿದಿದ್ದು, ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅತ್ಯಾಚಾರಕ್ಕೆ ಯತ್ನಿಸಿದ ಸಮಯದಲ್ಲಿ ಬಾಲಕಿಯ ಸಹೋದರ ಕಿರುಚಾಡಿದ್ದಾನೆ. ತಕ್ಷಣ ಸ್ಥಳೀಯರು ಸ್ಥಳಕ್ಕೆ ಆಗಮಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಬಾಲಕಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಂತ್ರಸ್ತೆಯ ಸಹೋದರನ ಹೇಳಿಕೆ ಆಧರಿಸಿ ಎಲ್ಲ ಐವರನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಕಳಿಂಗನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಪಿಬಿ ರೌತ್ ತಿಳಿಸಿದ್ದಾರೆ.
ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಒಡಿಶಾದಲ್ಲಿ ಅಷ್ಟೇ ಅಲ್ಲ ಬೇರೆ ರಾಜ್ಯಗಳಲ್ಲೂ ನಡೆಯುತ್ತಲೇ ಇವೆ. ಪೊಲೀಸರು ಆರೋಪಿಗಳನ್ನು ಮಟ್ಟ ಹಾಕುತ್ತಲೇ ಇದ್ದಾರೆ. ಆದರೆ ಅತ್ಯಾಚಾರಿಗಳ ಸಂಖ್ಯೆ ಮಾತ್ರ ಕಡಿಮೆ ಆದ ರೀತಿ ಕಾಣುತ್ತಿಲ್ಲ. ಪೋಷಕರ ಗಮನವೆಲ್ಲ ತಮ್ಮ ಮಕ್ಕಳ ಕಡೆ ಇರುತ್ತದೆ.
ಶಾಲೆಗಳ ಆವರಣದಲ್ಲಿ ಹೀಗೆ ಅತ್ಯಾಚಾರಗಳು ನಡೆದರೆ ಎಂತಹ ಪೋಷಕರೂ ಕೂಡ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಾರೆ. ಅದಕ್ಕಾಗಿ ಬರೀ ಆರೋಪಿಗಳನ್ನು ಬಂಧಿಸಿದರೆ ಸಾಲದು ಅವರಿಗೆ ಸೂಕ್ತ ರೀತಿಯಲ್ಲಿ ಶಿಕ್ಷೆಯಾಗಬೇಕು. ಹಾಗಾದಾಗ ಮಾತ್ರ ಅನಾಹುತಗಳನ್ನು ತಪ್ಪಿಸಲು ಸಾಧ್ಯ. ಈಗಾಗಲೇ ಒಡಿಶಾದಲ್ಲಾದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿದ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
Recommended Video