ರಾಮನವಮಿಯಂದು ಹಿಂಸಾಚಾರ: ಕತ್ತಿ ಹಿಡಿದವನಿಂದ ಪೊಲೀಸರ ಮೇಲೆ ಗುಂಡು
ಭೋಪಾಲ್ ಏಪ್ರಿಲ್ 13: ರಾಮನವಮಿ ಸಂದರ್ಭದಲ್ಲಿ ಮಧ್ಯಪ್ರದೇಶದ ಖರಗೋನ್ನಲ್ಲಿ ಸಂಭವಿಸಿದ್ದ ಹಿಂಸಾಚಾರ ಪ್ರಕರಣದಲ್ಲಿ ಗಾಯಗೊಂಡಿದ್ದ ಖರಗೋನ್ ಎಸ್ಪಿ ಸಿದ್ಧಾರ್ಥ ಚೌಧರಿ ಭಯಾನಕ ಮಾಹಿತಿ ಬಹಿರಂಗಪಡಿಸಿದ್ದಾರೆ. ರಾಮ ನವಮಿಯಂದು ಸಂಭವಿಸಿದ ಕೋಮುಗಲಭೆಯಲ್ಲಿ ಗಲಭೆಕೋರರೊಬ್ಬರು ಕತ್ತಿಯನ್ನು ಹಿಡಿದಿದ್ದರು ಎಂದು ಎಸ್ಪಿ ಹೇಳಿದ್ದಾರೆ. ಜೊತೆಗೆ ಕತ್ತಿಯನ್ನು ಕಸಿದುಕೊಳ್ಳಲು ಪ್ರಯತ್ನಿಸಿದಾಗ ತಮಗೆ ಗುಂಡು ಹಾರಿಸಲಾಯಿತು ಎಂದು ಸಿದ್ಧಾರ್ಥ ಚೌಧರಿ ಹೇಳೀಕೊಂಡಿದ್ದಾರೆ.
ರಾಮ ನವಮಿಯಂದು ಸಂಭವಿಸಿದ ಕೋಮುಗಲಭೆಯಲ್ಲಿ ಗಾಯಗೊಂಡಿದ್ದ ಖಾರ್ಗೋನ್ ಎಸ್ಪಿ ಸಿದ್ಧಾರ್ಥ ಚೌಧರಿ ಅವರು ಗಲಭೆಕೋರರೊಬ್ಬರಿಂದ ಕತ್ತಿಯನ್ನು ಕಸಿದುಕೊಳ್ಳಲು ಪ್ರಯತ್ನಿಸಿದಾಗ ಗುಂಡು ಹಾರಿಸಲಾಯಿತು ಎಂದು ಹೇಳಿದ್ದಾರೆ.
ಮಧ್ಯಪ್ರದೇಶದಲ್ಲಿ ರಾಮನವಮಿ ಮೆರವಣಿಗೆ ವೇಳೆ ಹಿಂಸಾಚಾರ; 3 ಕಡೆ ನಿಷೇಧಾಜ್ಞೆ ಜಾರಿ
"ಕೋಮು ಘರ್ಷಣೆ ನಡೆದಿದೆ ಎಂದು ತಿಳಿದಾಗ ನಾನು ಸ್ಥಳಕ್ಕೆ ಧಾವಿಸಿದೆ. ನಾನು ಕತ್ತಿ ಹಿಡಿದ ಯುವಕನನ್ನು ನೋಡಿ ಅವನ ಹಿಂದೆ ಓಡಿದೆ. ಆತನಿಂದ ಅದನ್ನು ಕಸಿದುಕೊಳ್ಳಲು ಯತ್ನಿಸಿದಾಗ ನನ್ನ ಹೆಬ್ಬೆರಳಿಗೆ ಗಾಯವಾಗಿದೆ'' ಎಂದು ಹೇಳಿದರು. "ನಾನು ಅವನನ್ನು ಮತ್ತೆ ಹಿಡಿಯಲು ಪ್ರಯತ್ನಿಸಿದಾಗ, ಅವನ ಸ್ನೇಹಿತ ನನ್ನ ಮೇಲೆ ಗುಂಡು ಹಾರಿಸಿದನು, ನನ್ನ ಕಾಲಿಗೆ ಗಾಯವಾಯಿತು" ಎಂದು ಚೌಧರಿ ಸುದ್ದಿಗಾರರಿಗೆ ಹೇಳಿಸಿದ್ದಾರೆ. ಚೌಧರಿಗೆ ಶಸ್ತ್ರಚಿಕಿತ್ಸೆ ಅಗತ್ಯವಿಲ್ಲದಿದ್ದರೂ, ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.
ಖಾರ್ಗೋನ್ನಲ್ಲಿ ಏನಾಯಿತು?
ಏಪ್ರಿಲ್ 10 ರಂದು ಮುಸ್ಲಿಂ ಸಮುದಾಯದ ಜನರು ಹೆಚ್ಚಾಗಿರುವ ಪ್ರದೇಶಗಳಲ್ಲಿ ರಾಮ ನವಮಿ ಮೆರವಣಿಗೆ ಸಂದರ್ಭದಲ್ಲಿ ಧ್ವನಿವರ್ಧಕಗಳಲ್ಲಿ ಹಾಡುಗಳನ್ನು ಹಾಕಿಕೊಂಡು ಹೋಗುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ವೇಳೆಯಲ್ಲೇ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಅದಲ್ಲದೇ ವಾಹನಗಳಿಗೆ ಬೆಂಕಿ ಹಚ್ಚಿದ್ದು, ಕೆಲವು ಯುವಕರು ಕಲ್ಲು ತೂರಾಟ ನಡೆಸಿದ್ದು, ಪೊಲೀಸರು ಅಶ್ರುವಾಯು ಸಿಡಿಸುವುದು ದೃಶ್ಯಗಳಲ್ಲಿ ಸೆರೆಯಾಗಿದೆ. ಇದರ ಬೆನ್ನಲ್ಲೇ ಜನರು ಮನೆಗಳಿಂದ ಹೊರಗೆ ಬಾರದಂತೆ ಪೊಲೀಸರು ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ.
ಘರ್ಷಣೆಯಲ್ಲಿ ಗಾಯಗೊಂಡವರಲ್ಲಿ ಮೂವರು ಪೊಲೀಸ್ ಸಿಬ್ಬಂದಿ ಸೇರಿದ್ದಾರೆ ಎಂದು ಖಾರ್ಗೋನ್ ಹೆಚ್ಚುವರಿ ಕಲೆಕ್ಟರ್ ಸುಮರ್ ಸಿಂಗ್ ಮುಜಾಲ್ಡೆ ಹೇಳಿದ್ದಾರೆ. ಘಟನೆಯ ನಂತರ, ಪ್ರದೇಶದಲ್ಲಿ ಕರ್ಫ್ಯೂ ವಿಧಿಸಲಾಯಿತು. ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಹೊರತು ಪಡಿಸಿ ಹೊರಗೆ ಕಾಲಿಡದಂತೆ ನಾಗರಿಕರಿಗೆ ತಿಳಿಸಲಾಗಿದೆ.
ಮಧ್ಯಪ್ರದೇಶದ ಖರ್ಗೊನ್ ನಗರದಲ್ಲಿ ದುಷ್ಕರ್ಮಿಗಳು ನಾಲ್ಕು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಅಲ್ಲದೇ ದೇವಸ್ಥಾನವೊಂದನ್ನು ಧ್ವಂಸಗೊಳಿಸಿರುವ ಘಟನೆಯು ವರದಿಯಾಗಿದೆ. ಇನ್ನು ನಗರದಲ್ಲಿ ಕಲ್ಲು ತೂರಾಟದ ಘಟನೆ ವಿಕೋಪಕ್ಕೆ ಹೋಗುತ್ತಿದ್ದಂತೆ ಖಾಕಿ ಪಡೆಯು ಫುಲ್ ಅಲರ್ಟ್ ಆಯಿತು. ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದ್ದು, ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಜಿಲ್ಲೆಗಳಿಂದ ಹೆಚ್ಚುವರಿ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗಿದೆ.ಹಿಂಸಾಚಾರದಲ್ಲಿ ಒಬ್ಬ ಇನ್ಸ್ಪೆಕ್ಟರ್ ಸೇರಿದಂತೆ ಇಬ್ಬರು ಪೊಲೀಸರು ಸೇರಿ ಒಟ್ಟು 5 ರಿಂದ 7 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸರನ್ನು ಭೇಟಿ ಮಾಡಿದ ಇಸ್ಲಾಮಿಕ್ ಧರ್ಮಗುರುಗಳ
ಭೋಪಾಲ್ನಲ್ಲಿ ಇಸ್ಲಾಮಿಕ್ ಧರ್ಮಗುರುಗಳ ನಿಯೋಗವು ಡಿಜಿಪಿಯನ್ನು ಭೇಟಿ ಮಾಡಿತು. ಸೆಂಧ್ವಾ ಮತ್ತು ಖಾರ್ಗೋನ್ನಲ್ಲಿ ಜನ ರಾಮನವಮಿ ಮೆರವಣಿಗೆಗಳಲ್ಲಿ ಭಾಗವಹಿಸಿದವರು. ಮಸೀದಿಗಳ ಮೇಲೆ ಕೇಸರಿ ಧ್ವಜಗಳನ್ನು ಹಾರಿಸಿದರು ಮತ್ತು ಆಕ್ಷೇಪಾರ್ಹ ಘೋಷಣೆಗಳನ್ನು ಎತ್ತಿದರು, ಇದು ಹಿಂಸಾಚಾರಕ್ಕೆ ಕಾರಣವಾಯಿತು. ಇದರ ಹೊರತಾಗಿಯೂ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಘರ್ಷಣೆಗೆ ದೂಷಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಮಧ್ಯಪ್ರದೇಶ ಸರ್ಕಾರದಿಂದ ನ್ಯಾಯಮಂಡಳಿ ಸ್ಥಾಪನೆ
ಖಾರ್ಗೋನ್ ನಗರದಲ್ಲಿ ಭಾನುವಾರ ನಡೆದ ಹಿಂಸಾಚಾರದ ಸಂದರ್ಭದಲ್ಲಿ ಹಾನಿಯ ಮೌಲ್ಯಮಾಪನಕ್ಕೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗಾಗಿ ಸಾರ್ವಜನಿಕ ಮತ್ತು ಖಾಸಗಿ ಆಸ್ತಿ ವಸೂಲಾತಿ ಕಾಯಿದೆ-2021 ರ ನಿಬಂಧನೆಗಳ ಪ್ರಕಾರ ನ್ಯಾಯಮಂಡಳಿಯನ್ನು ರಚಿಸಲಾಗಿದೆ ಎಂದು ತಿಳಿದುಬಂದಿದೆ.
ನಿವೃತ್ತ ಜಿಲ್ಲಾ ನ್ಯಾಯಾಧೀಶ ಡಾ.ಶಿವಕುಮಾರ್ ಮಿಶ್ರಾ ನೇತೃತ್ವದ ಮತ್ತು ರಾಜ್ಯ ಸರ್ಕಾರದ ನಿವೃತ್ತ ಕಾರ್ಯದರ್ಶಿ ಪ್ರಭಾತ್ ಪರಾಶರ್ ಅವರನ್ನೊಳಗೊಂಡ ನ್ಯಾಯಪೀಠವು ಮೂರು ತಿಂಗಳ ಅವಧಿಯಲ್ಲಿ ಈ ಕಾರ್ಯವನ್ನು ಪೂರ್ಣಗೊಳಿಸಲಿದೆ ಎಂದು ಹೇಳಲಾಗುತ್ತಿದೆ. ಗಲಭೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಗಲಭೆಕೋರರಿಂದ ಹಾನಿಯನ್ನು ವಸೂಲಿ ಮಾಡುವುದನ್ನು ನ್ಯಾಯಮಂಡಳಿ ಖಚಿತಪಡಿಸುತ್ತದೆ ಎಂದು ಅಧಿಸೂಚನೆ ತಿಳಿಸಿದೆ.
100ಕ್ಕೂ ಹೆಚ್ಚು ಮಂದಿ ಅರೆಸ್ಟ್
ಎ.10ರಂದು ಖರಗೋನ್ನಲ್ಲಿ ರಾಮನವಮಿ ಮೆರವಣಿಗೆಗಳ ಸಂದರ್ಭದಲ್ಲಿ ಮೂರು ಕಡೆಗಳಲ್ಲಿ ಕಲ್ಲು ತೂರಾಟ ಮತ್ತು ಬೆಂಕಿ ಹಚ್ಚಿದ ಘಟನೆಗಳು ವರದಿಯಾಗಿದ್ದವು. ಹಿಂಸಾಚಾರಕ್ಕೆ ಸಂಬಂಧಿಸಿದಂತೆ 100ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ನಡುವೆ ಬುಲ್ಡೋಜರ್ಗಳು ಅಂಗಡಿಗಳು ಮತ್ತು ಕಟ್ಟಡಗಳಿಗೆ ನುಗ್ಗುತ್ತಿರುವ ಹಲವಾರು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆಸ್ತಿಗಳಿಗೆ ಉಂಟಾದ ಹಾನಿಯನ್ನು ವಸೂಲಿ ಮಾಡಲು ರಾಜ್ಯ ಸರ್ಕಾರವು ಹಿಂಸಾಚಾರದಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ಪಾಠ ಕಲಿಸಲು ಸಿದ್ಧವಾಗಿದೆ.
Recommended Video
document2}