ಕೊನೆಗೂ ಕಾಡಿನಲ್ಲಿ ಸಿಕ್ಕಿಬಿದ್ದ ಅಂತರರಾಜ್ಯ ಡಕಾಯಿತರ ಮಹಿಳಾ ಗ್ಯಾಂಗ್ ಲೀಡರ್!
ಭೋಪಾಲ್, ನವೆಂಬರ್ 18: ಮಧ್ಯಪ್ರದೇಶ ಪೊಲೀಸರು ಭಾನುವಾರ ದಟ್ಟ ಅರಣ್ಯದಲ್ಲಿ ಕಾರ್ಯಾಚರಣೆ ನಡೆಸಿ ಭರ್ಜರಿ ಬೇಟೆಯನ್ನೇ ಆಡಿದ್ದಾರೆ. ಡಕಾಯತಿ ಪ್ರಕರಣದಲ್ಲಿ ಪೊಲೀಸರಿಗೆ ಮೋಸ್ಟ್ ವಾಂಟೆಡ್ ಆಗಿದ್ದ ಚಾಲಾಕಿ ಯುವತಿಯೊಬ್ಬಳನ್ನು ಪತ್ತೆ ಹಚ್ಚಿದ್ದಾರೆ.
ಇನ್ನು ಇಪ್ಪತ್ತೊಂದು ವಯಸ್ಸನ್ನೂ ಮುಟ್ಟದ ಈ ಯುವತಿ ಬಂಡಲ್ ಖಾಡ್-ಬಾಗೆಲ್ ಖಾಂಡ್ ಅಂತರರಾಜ್ಯ ಡಕಾಯತರ ತಂಡದ ಏಕೈಕ ಮಹಿಳಾ ಗ್ಯಾಂಗ್ ಲೀಡರ್ ಎನಿಸಿಕೊಂಡಿದ್ದಳು. ಈಕೆಗಾಗಿ ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ಪೊಲೀಸರು ಸತತ ಹುಡುಕಾಟ ನಡೆಸಿದ್ದರು. ಕೊನೆಗೂ ಕಾಡಿನಲ್ಲಿ ಈಕೆ ಸಿಕ್ಕಿಬಿದ್ದಿದ್ದಾಳೆ.

ಈಕೆಯ ಮೇಲಿತ್ತು 20ಕ್ಕೂ ಹೆಚ್ಚು ಪ್ರಕರಣ
ಈಕೆಯ ಮೇಲೆ 20ಕ್ಕೂ ಹೆಚ್ಚು ಅಪಹರಣ, ಸುಲಿಗೆ ಮತ್ತು ಡಕಾಯಿತಿ ಪ್ರಕರಣಗಳು ದಾಖಲಾಗಿದ್ದವು. ಈಕೆ ಹೆಸರು ಸಾಧನಾ ಪಟೇಲ್. ಉತ್ತರ ಪ್ರದೇಶದ ಚಿತ್ರಕೂಟ ಪ್ರದೇಶದವಳಾದ ಸಾಧನಾ ತನ್ನದೇ ಗ್ಯಾಂಗ್ ಕಟ್ಟಿಕೊಂಡು ಎರಡೂ ರಾಜ್ಯಗಳ ನಡುವೆ ಇರುವ ದಟ್ಟ ಕಾಡಿನಲ್ಲಿ ಅವಿತುಕೊಂಡು ಕಾರ್ಯಾಚರಣೆ ನಡೆಸುತಿದ್ದಳು. 15 ದಿನಗಳ ಹಿಂದಷ್ಟೇ ಪೊಲೀಸರು ಅಂತರರಾಜ್ಯ ಡಕಾಯಿತರಾದ ಬಾಬ್ಲು ಕೋಲ್ ಮತ್ತವನ ಸಹಾಯಕ ಲವಲೇಶ್ ಕೋಲ್ ನಲ್ಲಿ ಎನ್ ಕೌಂಟರ್ ನಲ್ಲಿ ಮುಗಿಸಿದ್ದರು. ಸಾಧನಾಳಿಗಾಗಿ ಹುಡುಕಾಟ ನಡೆಸುತ್ತಿದ್ದರು.

ಈಕೆ ಏಕೈಕ ಸಕ್ರಿಯ ಅಂತರರಾಜ್ಯ ಮಹಿಳಾ ಡಕಾಯತ್
ಮೋಸ್ಟ್ ವಾಂಟೆಡ್ ಅಂತರರಾಜ್ಯ ಡಕಾಯಿತ ಬಾಬುಲಿ ಕೋಲ್ ಮತ್ತು ಅವನ ಸಹಾಯಕ ಲವಲೇಶ್ ಕೋಲ್ ಅವರನ್ನು ಎನ್ಕೌಂಟರ್ನಲ್ಲಿ ಪೊಲೀಸರು ಗುಂಡಿಕ್ಕಿ ಕೊಂದ ನಂತರ, ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಪೊಲೀಸರು ಏಕೈಕ ಸಕ್ರಿಯ ಅಂತರರಾಜ್ಯ ಮಹಿಳಾ ಡಕಾಯಿಟ್ ಅನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸ್ ಸಹಾಯಕನೊಬ್ಬ ನೀಡಿದ ಖಚಿತ ಸುಳಿವಿನ ಮೇರೆಗೆ ಮಧ್ಯಪ್ರದೇಶದ ಸಾತ್ನ ಜಿಲ್ಲೆಯ ಕಡಿಯನ್ ಮೊರ್ ಅರಣ್ಯದಲ್ಲಿ ಈಕೆಯ ಗ್ಯಾಂಗ್ ಅಡಗುತಾಣದ ಮೇಲೆ ಪೊಲೀಸರು ದಾಳಿ ನಡೆಸಿ ಅಂತರ ರಾಜ್ಯ ಗ್ಯಾಂಗ್ ನ ಡಕಾಯಿತರ ಮಹಿಳಾ ಗ್ಯಾಂಗ್ ಲೀಡರನ್ನು ಪೊಲೀಸರು ಭಾನುವಾರ ಸತ್ನಾ ಜಿಲ್ಲೆಯ ಕಡಿಯನ್ ಮೊರ್ ಕಾಡಿನಲ್ಲಿ ಬಂಧಿಸಿದ್ದಾರೆ.

ಭಾರೀ ಪ್ರಮಾಣದ ಬೋರ್ ರೈಫಲ್ ವಶ
ಬಂಧಿತ ಸಾಧನಾ ಇಂದ 315 ಬೋರ್ ರೈಫಲ್, ಲೈವ್ ಮತ್ತು ಖಾಲಿ ಕಾರ್ಟ್ರಿಜ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆಕೆಯ ಬಂಧನದೊಂದಿಗೆ, ಗ್ಯಾಂಗ್ ನ ಇತರ ವಾಂಟೆಡ್ ಡಕಾಯಿತರಾದ ರಿಂಕು ಅಲಿಯಾಸ್ ರವಿ ಶಿವಹರೆ, ದೀಪಕ್ ಶಿವರೆ, ಶಿವ ಮುರಾತ್ ಕೋಲ್, ಧನು ಅಲಿಯಾಸ್ ಧನಪತ್ ಖೈರ್ವಾರ್ ಮತ್ತು ದದು ಸಿಂಗ್ ಅಲಿಯಾಸ್ ಪಟ್ಟಿದಾರ್ ಸಿಂಗ್ ಅವರನ್ನು ಸತ್ನಾ ಪೊಲೀಸರು ಬಂಧಿಸಿದ್ದಾರೆ ಮತ್ತು ಅವರಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈಕೆಗೆ ಫೂಲನ್ ದೇವಿ ಆದರ್ಶ
ಸಾಧನಾ ಪಟೇಲ್ ಗ್ರಾಮೀಣ ಪ್ರದೇಶದವಳಾಗಿದ್ದು, ಈಕೆಯ ಸಂಬಂಧಿ ಚುನ್ನಿ ಲಾಲ್ ಪಟೇಲ್ ಎಂಬಾತನೂ ಡಕಾಯಿತನಾಗಿದ್ದ. ಸುಲಭ ಹಣ ಗಳಿಕೆಯ ಉದ್ದೇಶವೇ ದರೋಡೆಗೆ ಈಕೆ ಇಳಿಯಲು ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. 2015ರಲ್ಲಿ ಒಮ್ಮೆ ತನ್ನ ಸಂಬಂಧಿಕನೊಬ್ಬನೊಡನೆ ಮನೆ ಬಿಟ್ಟು ಹೋದ ಸಾಧನಾ ಮತ್ತೊಂದು ಡಕಾಯಿತ ಗ್ಯಾಂಗ್ ಸೇರಿಕೊಂಡಳು. ಕೆಲ ಸಮಯದ ನಂತರ ತನ್ನದೇ ಗ್ಯಾಂಗ್ ಕಟ್ಟಿಕೊಂಡಳು.
ಖ್ಯಾತ ಡಕಾಯಿತ ರಾಣಿ ಫೂಲನ್ ದೇವಿ ಈಕೆಯ ಆರಾಧ್ಯ ದೈವವಂತೆ. ಡಕಾಯಿತಿ ಪ್ರಕರಣಗಳಲ್ಲಿ ಹಣ ಮಾಡಿಕೊಂಡು ನಂತರ ಸರ್ಕಾರದಿಂದ ಕ್ಷಮಾದಾನ ಪಡೆದುಕೊಂಡು ಚುನಾವಣೆಯಲ್ಲಿ ಸ್ಪರ್ಧಿಸುವುದು ಈಕೆಯ ಹೆಗ್ಗುರಿ ಆಗಿತ್ತು ಎಂದು ಸ್ವತಃ ಪೊಲೀಸರಿಗೆ ತಿಳಿಸಿದ್ದಾಳೆ.












Click it and Unblock the Notifications