ಪಿಎಂ ಕೇರ್ಸ್ ಅಡಿ ಪಡೆದ ವೆಂಟಿಲೇಟರ್ಗಳಲ್ಲಿ ದೋಷ
ಭೋಪಾಲ್, ಮೇ 11; ಪಿಎಂ ಕೇರ್ಸ್ ಅನುದಾನದಲ್ಲಿ ಖರೀದಿ ಮಾಡಿದ ವೆಂಟಿಲೇಟರ್ಗಳು ಕೋವಿಡ್ 2ನೇ ಅಲೆ ಸಂದರ್ಭದಲ್ಲಿ ಜನರ ಜೀವ ಉಳಿಸಲು ಸಹಾಯಕವಾಗಬೇಕಿತ್ತು. ಆದರೆ ಮಧ್ಯ ಪ್ರದೇಶ, ಛತ್ತೀಸ್ಗಢ್ ರಾಜ್ಯದಲ್ಲಿ ವೆಂಟಿಲೇಟರ್ ಬಗ್ಗೆ ದೂರುಗಳು ಬಂದಿವೆ.
ಕಳೆದ ವಾರ ಭೋಪಾಲ್ನಲ್ಲಿ ಸರ್ಕಾರ ನಡೆಸುವ ಬಹುದೊಡ್ಡ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸಮಸ್ಯೆಯಿಂದ ಕೋವಿಡ್ ರೋಗಿ ಮೃತಪಟ್ಟಿದ್ದ. ಮೊದಲು ಆಸ್ಪತ್ರೆ ವೆಂಟಿಲೇಟರ್ ಸಮಸ್ಯೆ ಇದೆ ಎಂಬ ಮಾತನ್ನು ತಳ್ಳಿ ಹಾಕಿತ್ತು.
ರಾಷ್ಟ್ರೀಯ ಸುದ್ದಿವಾಹಿನಿಯೊಂದು ವೆಂಟಿಲೇಟರ್ ವ್ಯವಸ್ಥೆ ಸರಿ ಇಲ್ಲ ಎಂದು ಆಸ್ಪತ್ರೆ ನಿರ್ದೇಶಕರಿಗೆ ಪತ್ರ ಬರೆದಿತ್ತು. ಮೃತ ವ್ಯಕ್ತಿಯ ಸಂಬಂಧಿಕರು ಸಹ ವೆಂಟಿಲೇಟರ್ ಸಮಸ್ಯೆ ಇದೆ ಎಂದು ಆಸ್ಪತ್ರೆ ಸಿಬ್ಬಂದಿಗೆ ದೂರು ನೀಡಿದ್ದರು.

ಈಗ ಆಸ್ಪತ್ರೆಯ ವೈದ್ಯರು ಇದನ್ನು ಒಪ್ಪಿಕೊಂಡಿದ್ದಾರೆ. ವೆಂಟಿಲೇಟರ್ಗಳು ಸಾಕಷ್ಟು ಒತ್ತಡವನ್ನು ತಡೆದುಕೊಳ್ಳುತ್ತಿಲ್ಲ. ಕೆಲವು ಬಾರಿ ಅವು ತಾನಾಗಿಯೇ ಆಫ್ ಆಗುತ್ತದೆ. ವೆಂಟಿಲೇಟರ್ಗಳನ್ನು ರೋಗಿಗೆ ಬಳಕೆ ಮಾಡುವುದು ಅಪಾಯಕಾರಿ. ಇದರ ನಿರ್ವಹಣೆಯೂ ಕಷ್ಟ ಎಂದು ಹೇಳಿದ್ದಾರೆ.
ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ಈ ಕುರಿತು ಮಾತನಾಡಿದ್ದು, "ಪಿಎಂ ಕೇರ್ಸ್ ಅಡಿ ಬಂದಿರುವ ವೆಂಟಿಲೇಟರ್ಗಳಲ್ಲಿ ಸಮಸ್ಯೆ ಇದೆ ಎಂಬುದು ಸುಳ್ಳು. ಪ್ರಧಾನಿ ನರೇಂದ್ರ ಮೋದಿ ದೇಶದ ಆರೋಗ್ಯ ವ್ಯವಸ್ಥೆಯನ್ನು ಉತ್ತಮ ಪಡಿಸಲು ಶ್ರಮಿಸಿದ್ದಾರೆ. ರೋಗಿಗಳ ಜೀವ ಉಳಿಸಲು ಕೇಂದ್ರ ಹಲವು ವೆಂಟಿಲೇಟರ್ ನೀಡಿದೆ" ಎಂದು ಹೇಳಿದ್ದಾರೆ.
ರಾಜ್ಯದ ಬೇರೆ ಭಾಗಗಳಿಗೆ ಪೂರೈಕೆ ಮಾಡಲಾದ ವೆಂಟಿಲೇಟರ್ಗಳನ್ನು ಉಪಯೋಗಿಸುತ್ತಲೇ ಇಲ್ಲ. ಅದನ್ನು ನಿರ್ವಹಣೆ ಮಾಡಲು ಬೇಕಾದ ಸಿಬ್ಬಂದಿಗಳು ಸಹ ಆಸ್ಪತ್ರೆಗಳಲ್ಲಿ ಇಲ್ಲ ಎಂಬ ವರದಿಯೂ ಬರುತ್ತಿದೆ.
ಶಾಡೋಲ್ ಜಿಲ್ಲೆಯ ವೈದ್ಯಕೀಯ ಕಾಲೇಜಿಗೆ 24 ವೆಂಟಿಲೇಟರ್ ನೀಡಲಾಗಿತ್ತು. ಆದರೆ, ಅದನ್ನು ಉಪಯೋಗಿಸುತ್ತಲೇ ಇಲ್ಲ. ಇದರಲ್ಲಿ ಕೆಲವು ದೋಷಗಳಿವೆ ಅವುಗಳ ಬಗ್ಗೆ ಕಂಪನಿಗೆ ಮಾಹಿತಿ ನೀಡಿದ್ದೇವೆ ಎಂದು ಕಾಲೇಜಿನ ಡೀನ್ ತಿಳಿಸಿದ್ದಾರೆ.
2020ರ ಮಾರ್ಚ್ಗೆ ಮೊದಲು ರಾಜ್ಯದಲ್ಲಿ 993 ವೆಂಟಿಲೇಟರ್ ಇತ್ತು. ಈಗ ರಾಜ್ಯದಲ್ಲಿ 1,205 ವೆಂಟಿಲೇಟರ್ಗಳಿವೆ. ರಾಜ್ಯದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 1,11,223 ಆಗಿದೆ.
ಮಧ್ಯಪ್ರದೇಶದ ಪಕ್ಕದ ಛತ್ತೀಸ್ಗಢ್ ರಾಜ್ಯದಲ್ಲಿ ಪಿಎಂ ಕೇರ್ಸ್ ಅಡಿ 6 ವೆಂಟಿಲೇಟರ್ ಒದಗಿಸಲಾಗಿತ್ತು. ಆದರೆ ಇವುಗಳಲ್ಲಿ 2 ಮಾತ್ರ ಉಪಯೋಗಿಸಲಾಗುತ್ತಿದೆ.












Click it and Unblock the Notifications