ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು: ಮಾ.16 ವಿಶ್ವಾಸಮತಯಾಚನೆಗೆ ಒತ್ತಾಯ
ಭೂಪಾಲ್, ಮಾರ್ಚ್.12: ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ದಿನಗಣನೆ ಶುರುವಾದಂತೆ ಕಾಣುತ್ತಿದೆ. ಬಿಜೆಪಿ ನಾಯಕರು ಮಾರ್ಚ್.16ರಂದು ವಿಶ್ವಾಸ ಮತಯಾಚನೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ.
ಕಾಂಗ್ರೆಸ್ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ ಪಕ್ಷವನ್ನು ತೊರೆಯುತ್ತಿದ್ದಂತೆ ಮಧ್ಯಪ್ರದೇಶ ರಾಜಕಾರಣದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗಿದೆ. ಸಿಂಧಿಯಾ ರಾಜೀನಾಮೆ ಬೆನ್ನಲ್ಲೇ 22 ಶಾಸಕರು ರಾಜೀನಾಮೆ ಸಲ್ಲಿಸಿ, ಸರ್ಕಾರದಿಂದ ಹೊರ ಬಂದಿದ್ದಾರೆ.
ರಾಜ್ಯದಲ್ಲಿ ಸೃಷ್ಟಿಯಾಗಿರುವ ರಾಜಕೀಯ ಬಿಕ್ಕಟ್ಟನ್ನು ಗಮನದಲ್ಲಿ ಇಟ್ಟುಕೊಂಡು ಸರ್ಕಾರವು ಬಹುಮತವನ್ನು ಕಳೆದುಕೊಂಡಿದೆ ಎಂದು ಬಿಜೆಪಿ ವಾದಿಸುತ್ತಿದೆ. ಈ ಹಿನ್ನೆಲೆಯಲ್ಲಿ ಇನ್ನು ನಾಲ್ಕು ದಿನಗಳಲ್ಲಿ ಸಿಎಂ ಕಮಲನಾಥ್ ವಿಶ್ವಾಸಮತಯಾಚನೆ ಮಾಡಬೇಕು ಎಂದು ಒತ್ತಾಯಿಸುತ್ತಿದೆ.

ರಾಜ್ಯಪಾಲರು ಮತ್ತು ಸ್ಪೀಕರ್ ಗೆ ಬಿಜೆಪಿ ಮೊರೆ:
ಸಿಎಂ ಕಮಲನಾಥ್ ನೇತೃತ್ವದಲ್ಲಿ 15 ತಿಂಗಳು ಅಧಿಕಾರ ನಡೆಸಿದ ಸರ್ಕಾರಕ್ಕೆ ಇದೀಗ ಆಪತ್ತು ಎದುರಾಗಿದೆ. 22 ಶಾಸಕರು ಸಲ್ಲಿಸಿದ ರಾಜೀನಾಮೆ ಪತ್ರವು ರಾಜ್ಯಪಾಲರು ಮತ್ತು ಸ್ಪೀಕರ್ ಬಳಿಯಿದೆ. ಈ ನಿಟ್ಟಿನಲ್ಲಿ ಬಜೆಟ್ ಅಧಿವೇಶನ ಆರಂಭಕ್ಕೂ ಮೊದಲೇ ಸ್ಪೀಕರ್ ಮತ್ತು ರಾಜ್ಯಪಾಲರು ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಮಾರ್ಚ್.16ರಂದು ವಿಶ್ವಾಸ ಮತಯಾಚನೆಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿಕೊಳ್ಳುತ್ತೇವೆ ಎಂದು ಬಿಜೆಪಿ ಮುಖಂಡ ನಾರೋತ್ತಮ್ ಮಿಶ್ರಾ ತಿಳಿಸಿದ್ದಾರೆ.
22 ಶಾಸಕರ ರಾಜೀನಾಮೆ ಅಂಗೀಕಾರವಾದರೇನು ಗತಿ?:
ಮಧ್ಯಪ್ರದೇಶದಲ್ಲಿ 228 ಶಾಸಕರ ಸಂಖ್ಯಾಬಲವಿದ್ದು ವಿಧಾನಸಭೆಯಲ್ಲಿ ಅಧಿಕಾರ ಗದ್ದುಗೆ ಏರಲು ಕನಿಷ್ಠ 114 ಶಾಸರ ಬೆಂಬಲ ಬೇಕಾಗುತ್ತದೆ. ಒಂದು ವೇಳೆ 22 ಶಾಸಕರ ರಾಜೀನಾಮೆಯು ಅಂಗೀಕಾರವಾದಲ್ಲಿ ಈ ಸಂಖ್ಯಾಬಲವು 206ಕ್ಕೆ ಇಳಿಕೆಯಾಗಲಿದೆ. ಆಗ ಸರ್ಕಾರ ರಚನೆಗೆ ಕನಿಷ್ಠ 104 ಸ್ಥಾನಗಳು ಬೇಕಾಗುತ್ತದೆ. ಈಗಾಗಲೇ ರಾಜ್ಯದಲ್ಲಿ ಬಿಜೆಪಿ 107 ಶಾಸಕರನ್ನು ಹೊಂದಿದ್ದು, ಬಿಜೆಪಿ ಅಧಿಕಾರಕ್ಕೆ ಬರುವ ಲಕ್ಷಣಗಳು ಎದ್ದು ಕಾಣುತ್ತಿವೆ ಎಂದು ವಿಶ್ಲೇಷಿಸಲಾಗುತ್ತಿದೆ.












Click it and Unblock the Notifications