ಮಧ್ಯಪ್ರದೇಶ: ಶಾಲಾ ಮಕ್ಕಳಿಗೆ ಪಡಿತರ ವಿತರಣೆಯಲ್ಲಿ ಭಾರಿ ಹಗರಣ
ಭೋಪಾಲ್, ಸೆಪ್ಟೆಂಬರ್ 05: ಮಧ್ಯಪ್ರದೇಶದಲ್ಲಿ ಶಾಲಾ ಮಕ್ಕಳಿಗೆ ಪೌಷ್ಠಿಕಾಂಶ ಆಹಾರ ವಿತರಣೆಯಲ್ಲಿ ಭಾರಿ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ. ಕೋಟ್ಯಂತರ ರೂಪಾಯಿ ಹಗರಣ ನಡೆದಿದೆ ಎನ್ನಲಾಗುತ್ತಿದೆ. ಮಧ್ಯಪ್ರದೇಶ ಅಕೌಂಟೆಂಟ್ ಜನರಲ್ ಅವರ 36 ಪುಟಗಳ ಗೌಪ್ಯ ವರದಿಯು ದೊಡ್ಡ ಪ್ರಮಾಣದ ವಂಚನೆ ನಡೆದಿರುವುದರ ಮೇಲೆ ಬೆಳಕು ಚೆಲ್ಲಿದೆ. ಫಲಾನುಭವಿಗಳ ಗುರುತಿಸುವಿಕೆ, ಪಡಿತರ ಉತ್ಪಾದನೆ, ಪಡಿತರ ವಿತರಣೆ ಮತ್ತು ಶಾಲಾ ಮಕ್ಕಳಿಗೆ ಉಚಿತ ಪಡಿತರ ಹಾಗೂ ಆಹಾರ ಯೋಜನೆಯ ಗುಣಮಟ್ಟ ನಿಯಂತ್ರಣದಲ್ಲಿ ಅಕ್ರಮಗಳು ಕಂಡುಬಂದಿವೆ.
2021ರ ಟೇಕ್ ಹೋಮ್ ರೇಷನ್ (THR) ಯೋಜನೆಯು ಸುಮಾರು 24 ಪ್ರತಿಶತ ಫಲಾನುಭವಿಗಳಲ್ಲಿ 49.58 ಲಕ್ಷ ನೋಂದಾಯಿತ ಮಕ್ಕಳು ಮತ್ತು ಮಹಿಳೆಯರಿಗೆ ಹೆಚ್ಚು ಅಗತ್ಯವಿರುವ ಪಡಿತರವನ್ನು ಒದಗಿಸುವ ಕಾರ್ಯವನ್ನು ನಿರ್ವಹಿಸುತ್ತದೆ. ಇವರಲ್ಲಿ 6 ತಿಂಗಳಿಂದ 3 ವರ್ಷದೊಳಗಿನ 34.69 ಲಕ್ಷ ಮಕ್ಕಳು, 14.25 ಲಕ್ಷ ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು ಮತ್ತು 0.64 ಲಕ್ಷ ಶಾಲೆಯಿಂದ ಹೊರಗುಳಿದ ಹದಿಹರೆಯದ ಹುಡುಗಿಯರು ಸೇರಿದ್ದಾರೆ. 110.83 ಕೋಟಿಗೂ ಹೆಚ್ಚು ಮೌಲ್ಯದ ಪಡಿತರ ವಿತರಣೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಅಂದಾಜಿಸಲಾಗಿದೆ.
ನಕಲಿ ಟ್ರಕ್ಗಳ ದಾಖಲಾತಿ
ಹಗರಣದ ಪ್ರಮಾಣ ಎಷ್ಟಿದೆಯೆಂದರೆ, ಆರು ಉತ್ಪಾದನಾ ಘಟಕಗಳು ಅಥವಾ ಸಂಸ್ಥೆಗಳಿಂದ ₹ 6.94 ಕೋಟಿ ವೆಚ್ಚದ 1,125.64 ಮೆಟ್ರಿಕ್ ಟನ್ ಪಡಿತರವನ್ನು ಸಾಗಿಸಲಾಗಿತ್ತು. ಪಡಿತರ ರೇಷನ್ ಅನ್ನು ಸಾಗಿಸಲಾದ ಟ್ರಕ್ಗಳ ನಂಬರ್ ಪ್ಲೇಟ್ಗಳು ಫೇಕ್ ನಂಬರ್ಗಳು ಆಗಿದ್ದವು. ಸಾರಿಗೆ ಇಲಾಖೆಯಿಂದ ಪರಿಶೀಲನೆ ಮಾಡಿದಾಗ ಟ್ರಕ್ ಹೊಂದಿದ್ದ ನಂಬರ್ಗಳು ಟ್ರಕ್ಗಳದ್ದಾಗಿರಲಿಲ್ಲ. ಬದಲಿಗೆ ಮೋಟಾರು ಸೈಕಲ್ಗಳು, ಕಾರುಗಳು, ಆಟೊಗಳು ಮತ್ತು ಟ್ಯಾಂಕರ್ಗಳ ನಂಬರ್ಗಳಾಗಿದ್ದವು ಎಂದು ತಿಳಿದು ಬಂದಿದೆ.
ಪಡಿತರಕ್ಕೆ ಅರ್ಹರಾಗಿರುವ ಶಾಲೆಯಿಂದ ಹೊರಗುಳಿದ ವಿದ್ಯಾರ್ಥಿನಿಯರ ಗುರುತಿಸುವಿಕೆಗಾಗಿ ಸಮೀಕ್ಷೆಯನ್ನು ಏಪ್ರಿಲ್ 2018 ರೊಳಗೆ ಪೂರ್ಣಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೇಳಿದ್ದರೂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ (ಡಬ್ಲ್ಯುಸಿಡಿ) ಇಲಾಖೆಯು ಫೆಬ್ರವರಿ 2021 ರವರೆಗೆ ಅದನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಶಾಲಾ ಶಿಕ್ಷಣ ಇಲಾಖೆಯು 2018-19ರಲ್ಲಿ ಶಾಲೆಯಿಂದ ಹೊರಗುಳಿದ ಬಾಲಕಿಯರ ಸಂಖ್ಯೆಯನ್ನು 9,000 ಎಂದು ಅಂದಾಜಿಸಿದ್ದರೆ, WCD ಇಲಾಖೆಯು ಯಾವುದೇ ಬೇಸ್ಲೈನ್ ಸಮೀಕ್ಷೆಯನ್ನು ನಡೆಸದೆ, ಅವರ ಸಂಖ್ಯೆಯನ್ನು 36.08 ಲಕ್ಷ ಎಂದು ಅಂದಾಜಿಸಿದೆ.
ತಪ್ಪು ದಾಖಲಾತಿಗಳು ಸೃಷ್ಟಿ
ಎಂಟು ಜಿಲ್ಲೆಗಳ 49 ಅಂಗನವಾಡಿ ಕೇಂದ್ರಗಳಲ್ಲಿ ಶಾಲೆಯಿಂದ ಹೊರಗುಳಿದ ಮೂವರು ಬಾಲಕಿಯರು ಮಾತ್ರ ದಾಖಲಾಗಿರುವುದು ಲೆಕ್ಕ ಪರಿಶೋಧನೆ ವೇಳೆ ಪತ್ತೆಯಾಗಿದೆ. ಆದಾಗ್ಯೂ, ಅದೇ 49 ಅಂಗನವಾಡಿ ಕೇಂದ್ರಗಳ ಅಡಿಯಲ್ಲಿ, ಡಬ್ಲ್ಯುಸಿಡಿ ಇಲಾಖೆಯು 63,748 ಹುಡುಗಿಯರನ್ನು ಪಟ್ಟಿ ಮಾಡಿದೆ ಮತ್ತು 2018-21ರಲ್ಲಿ 29,104 ಮಂದಿಗೆ ಸಹಾಯ ಮಾಡಿದೆ ಎಂದು ಹೇಳಿಕೊಂಡಿದೆ. ಈ ದತ್ತಾಂಶದಿಂದ ₹ 110.83 ಕೋಟಿ ಮೌಲ್ಯದ ಪಡಿತರ ವಿತರಣೆಯಲ್ಲಿ ಅವ್ಯವಹಾರ ನಡೆದಿದೆ. ಜೊತೆಗೆ ತಪ್ಪು ದಾಖಲಾತಿಗಳನ್ನು ಸೃಷ್ಟಿ ಮಾಡಲಾಗಿದೆ.
ಇದರ ಹೊರತಾಗಿ, ಪಡಿತರ ತಯಾರಿಕಾ ಘಟಕಗಳು ತಮ್ಮ ದರ ಮತ್ತು ಅನುಮತಿಸಲಾದ ಸಾಮರ್ಥ್ಯವನ್ನು ಮೀರಿ ಉತ್ಪಾದನೆಯನ್ನು ವರದಿ ಮಾಡುತ್ತಿರುವುದು ಕಂಡುಬಂದಿದೆ. ಅಗತ್ಯವಿರುವ ಕಚ್ಚಾವಸ್ತು ಮತ್ತು ಬಳಕೆಯಾಗುವ ವಿದ್ಯುತ್ ಅನ್ನು ನಿಜವಾದ ಪಡಿತರ ಉತ್ಪಾದನೆಗೆ ಹೋಲಿಸಿದಾಗ, ಅದರಲ್ಲಿ ₹ 58 ಕೋಟಿ ಹಗರಣವಾಗಿರುವುದು ಕಂಡುಬಂದಿದೆ.
ಮಧ್ಯಪ್ರದೇಶದ ಬಾಡಿ, ಧಾರ್, ಮಂಡ್ಲಾ, ರೇವಾ, ಸಾಗರ್ ಮತ್ತು ಶಿವಪುರಿಯಲ್ಲಿನ ಆರು ಸ್ಥಾವರಗಳು 821 ಮೆಟ್ರಿಕ್ ಟನ್ ಪಡಿತರವನ್ನು ಪೂರೈಸಿವೆ ಎಂದು ಹೇಳಿಕೊಂಡಿವೆ, ಇದರ ಬೆಲೆ ₹ 4.95 ಕೋಟಿಯಾಗಿದೆ. ಎಂಟು ಜಿಲ್ಲೆಗಳಲ್ಲಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು (CDPO) 97,000 ಮೆಟ್ರಿಕ್ ಟನ್ ಪಡಿತರವನ್ನು ಪಡೆದರು. ಆದರೆ, ಅವರು ಅಂಗನವಾಡಿಗಳಿಗೆ ಕೇವಲ 86,000 ಮೆಟ್ರಿಕ್ ಟನ್ಗಳನ್ನು ಕಳುಹಿಸಿದ್ದಾರೆ. ಇದರಲ್ಲಿ ₹ 62.72 ಕೋಟಿ ವೆಚ್ಚದ 10,000 ಮೆಟ್ರಿಕ್ ಟನ್ಗೂ ಹೆಚ್ಚು ಪಡಿತರ ಸಾಗಣೆಯಾಗಿಲ್ಲ ಅಥವಾ ಗೋದಾಮಿನಲ್ಲಿ ಲಭ್ಯವಿಲ್ಲ, ಅದು ಕಳ್ಳತನವಾಗಿದೆ.
ಕಳಪೆ ಪಡಿತರ ನೀಡಿದ ಆಂತರಿಕ
ಪಡಿತರ ಮಾದರಿಗಳನ್ನು ವಿತರಿಸುವ ಹಲವು ಹಂತಗಳಲ್ಲಿ ರಾಜ್ಯದ ಹೊರಗಿನ ಸ್ವತಂತ್ರ ಲ್ಯಾಬ್ಗಳಿಗೆ, ಸ್ಥಾವರದಿಂದ ಅಂಗನವಾಡಿಗಳಿಗೆ ಕಳುಹಿಸಲಾದ ಆಹಾರ ಪದಾರ್ಥಗಳ ಗುಣಮಟ್ಟ ಮತ್ತು ಪೌಷ್ಟಿಕಾಂಶದ ಮೌಲ್ಯವನ್ನು ಪರೀಕ್ಷಿಸಲು ಕಳುಹಿಸಬೇಕಾಗಿದ್ದರೂ ಸಹ ಅದನ್ನು ಮಾಡಲಾಗಿಲ್ಲ. ಇದು ಮಕ್ಕಳು ಮತ್ತು ಮಹಿಳೆಯರಿಗೆ ಕಳಪೆ ಪಡಿತರ ನೀಡಿದ ಶಂಕೆಯನ್ನು ಹೆಚ್ಚಿಸಿದೆ. ಎಂಟು ಲೆಕ್ಕಪರಿಶೋಧಕ ಜಿಲ್ಲೆಗಳಲ್ಲಿ, ಅಧಿಕಾರಿಗಳು 2018-21ರಲ್ಲಿ ಅಂಗನವಾಡಿ ಕೇಂದ್ರಗಳನ್ನು ಪರಿಶೀಲಿಸಲಿಲ್ಲ, ಇದು ಅತ್ಯಂತ ಕಳಪೆ ಆಂತರಿಕ ನಿಯಂತ್ರಣಗಳನ್ನು ಸೂಚಿಸುತ್ತದೆ.
ವಾಸ್ಥವವೇ ಬೇರೆ..
ರಾಜ್ಯದ ಸ್ವಂತ ಲೆಕ್ಕಪರಿಶೋಧಕರಿಂದ ಬೆರಗುಗೊಳಿಸುವ ಸಂಶೋಧನೆಗಳು, ತಾನು ಸರ್ಕಾರವನ್ನು ನಡೆಸುವಲ್ಲಿ ಎಲ್ಲಿಯೂ ಯಾವುದೇ ಭ್ರಷ್ಟಾಚಾರದ ಆರೋಪ ಮಾಡಿಲ್ಲ ಎಂಬ ಬಿಜೆಪಿಯ ಹೇಳಿಕೆಗಳಿಗೆ ವಿರುದ್ಧವಾಗಿದೆ. ವರದಿಯ ಕುರಿತು ಪ್ರತಿಕ್ರಿಯೆಗಾಗಿ ಎನ್ಡಿಟಿವಿ ಮಾಡಿದ ಮನವಿಗೆ ಮಧ್ಯಪ್ರದೇಶ ಸರ್ಕಾರ ಇನ್ನೂ ಪ್ರತಿಕ್ರಿಯಿಸಿಲ್ಲ.
ಉಪಚುನಾವಣೆಯಲ್ಲಿ ಸೋಲಿನ ನಂತರ 2020 ರಲ್ಲಿ ಬಿಜೆಪಿ ನಾಯಕಿ ಇಮಾರ್ತಿ ದೇವಿ ರಾಜೀನಾಮೆ ನೀಡಿದ ನಂತರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಮೇಲ್ವಿಚಾರಣೆಯಲ್ಲಿದೆ.
THR ಕಾರ್ಯಕ್ರಮವನ್ನು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ನೇತೃತ್ವ ವಹಿಸುತ್ತಾರೆ ಮತ್ತು ಮೇಲ್ವಿಚಾರಣೆ ಮಾಡುತ್ತಾರೆ. ಅವರಿಗೆ ರಾಜ್ಯ ಮಟ್ಟದ ನಿರ್ದೇಶಕರು, 10 ಜಂಟಿ ನಿರ್ದೇಶಕರು, 52 ಜಿಲ್ಲಾ ಕಾರ್ಯಕ್ರಮ ಅಧಿಕಾರಿಗಳು ಮತ್ತು 453 ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಅಥವಾ ಸಿಡಿಪಿಒಗಳು ಸಹಾಯ ಮಾಡುತ್ತಾರೆ.