"ಪೌರತ್ವ ಕಾಯ್ದೆ ವಿರೋಧಿಸುವ ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆ"
ಭೂಪಾಲ್, ಜನವರಿ.04: ಉರಿಯುವ ಬೆಂಕಿಗೆ ಬಿಜೆಪಿ ಸಂಸದರೊಬ್ಬರು ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ. ನೀವು ಕೇಂದ್ರ ಸರ್ಕಾರದ ತೀರ್ಮಾನವನ್ನು ಜಾರಿಗೊಳಿಸಲು ತಿರಸ್ಕರಿಸಿದರೆ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪರೋಕ್ಷವಾಗಿ ಎಚ್ಚರಿಕೆ ಸಂದೇಶ ರವಾನಿಸಿದ್ದು, ಅದೇ ಇದೀಗ ಹೊಸ ವಿವಾದವನ್ನು ಸೃಷ್ಟಿಸಿದೆ.
ಮಧ್ಯಪ್ರದೇಶ ಹೊಶಂಗಬಾದ್ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಉದಯ್ ಪ್ರತಾಪ್ ಸಿಂಗ್ ನೀಡಿರುವ ಹೇಳಿಕೆ ವಿರೋಧ ಪಕ್ಷದ ನಾಯಕರ ಕಣ್ಣು ಕೆಂಪಾಗಿಸಿದೆ. ಉರಿಯುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ ಎಂಬ ಬೆಂಕಿಗೆ ತುಪ್ಪ ಸುರಿದ ಹಾಗಾಗಿದೆ.
ಹೌದು, ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವ ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲಾಗುತ್ತದೆ ಎಂದು ಉದಯ್ ಪ್ರತಾಪ್ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರದ ಕಾಯ್ದೆಯನ್ನು ಎಲ್ಲ ರಾಜ್ಯಗಳು ಒಪ್ಪಿಕೊಳ್ಳಬೇಕು. ತಮ್ಮ ರಾಜ್ಯಗಳಲ್ಲಿ ಸಿಎಎಯನ್ನು ಅನುಷ್ಠಾನಗೊಳಿಸಬೇಕು ಎಂದು ಸಂಸದರು ಖಡಕ್ ಆಗಿ ಹೇಳಿದ್ದಾರೆ.

"ಸಿಎಎ ವಿರೋಧಿಸುವ ರಾಜ್ಯಗಳಲ್ಲಿ ಸರ್ಕಾರ ಉಳಿಯಲ್ಲ"
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಎಲ್ಲ ರಾಜ್ಯಗಳು ಕಡ್ಡಾಯವಾಗಿ ಒಪ್ಪಿಕೊಳ್ಳಲೇಬೇಕು ಎಂದು ಸಂಸದ ಉದಯ್ ಪ್ರತಾಪ್ ಸಿಂಗ್ ಆಗ್ರಹಿಸಿದ್ದಾರೆ. ಒಂದು ವೇಳೆ ರಾಜ್ಯ ಸರ್ಕಾರವು ಸಿಎಎಯನ್ನು ವಿರೋಧಿಸಿದರೆ, ಅಂಥ ರಾಜ್ಯಗಳಲ್ಲಿ ಸರ್ಕಾರವನ್ನೇ ಉರುಳಿಸಲಾಗುತ್ತದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸಂವಿಧಾನದ 356ನೇ ವಿಧಿಯ ಪ್ರಕಾರ ರಾಷ್ಟ್ರಪತಿಗಳು ತಮ್ಮ ಅಧಿಕಾರವನ್ನು ಪ್ರಯೋಗಿಸಿ ರಾಜ್ಯ ಸರ್ಕಾರದ ಅಧಿಕಾರವನ್ನು ಮೊಟಕುಗೊಳಿಸುತ್ತಾರೆ. ನಂತರ ಆ ರಾಜ್ಯಗಳಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಲಾಗುತ್ತದೆ ಎನ್ನುವ ಮೂಲಕ ಬಿಜೆಪಿ ಸಂಸದರು ವಿವಾದದ ಕಿಡಿ ಹೊತ್ತಿಸಿದ್ದಾರೆ.












Click it and Unblock the Notifications