ಬಾಪುಗೆ ಅವಮಾನ ಮಾಡಿದ ಪ್ರಗ್ಯಾಳನ್ನು ಕ್ಷಮಿಸಲಾರೆ: ಮೋದಿ
ಭೋಪಾಲ್, ಮೇ 17: ಮಹಾತ್ಮಾ ಗಾಂಧಿ ಅವರನ್ನು ಹತ್ಯೆ ಮಾಡಿದ್ದ ನಾಥೂರಾಮ್ ಗೋಡ್ಸೆ ಒಬ್ಬ ದೇಶಭಕ್ತ ಎಂದು ಹೇಳಿಕೆ ನೀಡುವ ಮೂಲಕ ಭಾರಿ ವಿವಾದ ಕೆರಳಿಸಿರುವ ಭೋಪಾಲ್ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಧ್ಯಪ್ರದೇಶದ ಖಾರ್ಗೋನ್ನಲ್ಲಿ ಶುಕ್ರವಾರ ಚುನಾವಣಾ ಪ್ರಚಾರ ನಡೆಸಿದ ಮೋದಿ, ಪ್ರಗ್ಯಾ ಸಿಂಗ್ ಹೇಳಿಕೆಯನ್ನು ವಿರೋಧಿಸಿದರು.
'ಬಾಪು ಅವರನ್ನು ಅವಮಾನ ಮಾಡಿದ ಸಾಧ್ವಿ ಪ್ರಗ್ಯಾ ಸಿಂಗ್ ಅವರನ್ನು ನನ್ನಿಂದ ಕ್ಷಮಿಸಲು ಸಾಧ್ಯವಿಲ್ಲ' ಎಂದು ಮೋದಿ ಅವರು ಹೇಳಿದರು.
"ನಾಥೂರಾಮ್ ಗೋಡ್ಸೆ ಒಬ್ಬ ದೇಶಭಕ್ತ, ಆತನ್ನನ್ನು ಉಗ್ರ ಎಂಬುವವರಿಗೆ ಜನ ಉತ್ತರಿಸುತ್ತಾರೆ" ಎಂದು ಮಧ್ಯಪ್ರದೇಶದ ಭೋಪಾಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಹೇಳಿದ್ದರು. ಸಾಧ್ವಿ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಇದರ ಬಗ್ಗೆ ಮೌನವಹಿಸಿದ್ದ ಮೋದಿ ವಿರುದ್ಧ ಕೂಟ ಟೀಕೆಗಳು ವ್ಯಕ್ತವಾಗಿದ್ದವು.
ನಾಥೂರಾಮ್ ಗೋಡ್ಸೆ ಪರ ಹೇಳಿಕೆ ನೀಡಿದ್ದ ನಳಿನ್ ಕುಮಾರ್ ಕಟೀಲ್, ಪ್ರಗ್ಯಾ ಸಿಂಗ್ ಮತ್ತು ಅನಂತ್ ಕುಮಾರ್ ಹೆಗಡೆ ವಿರುದ್ಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಶಿಸ್ತುಕ್ರಮಕ್ಕೆ ಸೂಚಿಸಿದ್ದರು.

ಸಾಧ್ವಿಯನ್ನು ಕ್ಷಮಿಸಲಾರೆ
ಸಾಧ್ವಿ ಪ್ರಗ್ಯಾ ಸಿಂಗ್ ಕ್ಷಮೆ ಯಾಚಿಸಿರಬಹುದು. ಆದರೆ ಅವರನ್ನು ಕ್ಷಮಿಸಲು ನನ್ನಿಂದ ಸಾಧ್ಯವಿಲ್ಲ. ಅವರ ಹೇಳಿಕೆ ಅಕ್ಷಮ್ಯ ಅಪರಾಧ. ಸ್ವಸ್ಥ ಸಮಾಜದಲ್ಲಿ ಇಂತಹ ಹೇಳಿಕೆಗಳನ್ನು ಸಹಿಸಲು ಸಾಧ್ಯವಿಲ್ಲ. ಪ್ರಗ್ಯಾ ಹೇಳಿಕೆಗಳಿಂದ ನನಗೆ ನೋವಾಗಿದೆ. ಎಂದು ಮೋದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
|
ಗೋಡ್-ಸೆ ಪ್ರೇಮಿಗಳು
ನನಗೆ ಕೊನೆಗೂ ಗೊತ್ತಾಯಿತು. ಬಿಜೆಪಿ ಮತ್ತು ಆರೆಸ್ಸೆಸ್ ನವರು ದೇವರ ಪ್ರಿಯರಲ್ಲ (God-Ke lovers). ಅವರು ಗೋಡ್-ಸೆ ಪ್ರಿಯರು (God-Se lovers) ಎಂದು ರಾಹುಲ್ ಗಾಂಧಿ ವ್ಯಂಗ್ಯಭರಿತ ಟ್ವೀಟ್ ಮಾಡಿದ್ದಾರೆ.

ಬಿಜೆಪಿ ಮುಖಂಡನ ಅಮಾನತು
'ಪಾಕಿಸ್ತಾನವು ಬಾಪೂ ಅವರ ಆಶೀರ್ವಾದದಿಂದ ಹುಟ್ಟಿಕೊಂಡಿತು. ಹೀಗಾಗಿ ಮಹಾತ್ಮ ಗಾಂಧಿ ಅವರು ಪಾಕಿಸ್ತಾನದ ರಾಷ್ಟ್ರಪಿತ ಆಗಬಹುದೇ ಹೊರತು ಭಾರತಕ್ಕಲ್ಲ' ಎಂಬ ಹೇಳಿಕೆ ನೀಡಿದ್ದ ಪಕ್ಷದ ಮುಖಂಡ ಅನಿಲ್ ಸೌಮಿತ್ರ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಬಿಜೆಪಿ ವಜಾಗೊಳಿಸಿದೆ.
|
ಹತ್ತು ದಿನ ಬೇಕೇ?
ರಾಷ್ಟ್ರಪಿತನ ವಿರುದ್ಧ ಇಂತಹ ಆಘಾತಕಾರಿ ಹೇಳಿಕೆ ನೀಡಿರುವ ಘಟನೆ ಕುರಿತು ವರದಿ ಪಡೆದುಕೊಳ್ಳಲು ನಿಮಗೆ ಹತ್ತು ದಿನಗಳು ಬೇಕಾಗಿವೆಯೇ? ಎಂದು ಹತ್ತು ದಿನಗಳಲ್ಲಿ ವರದಿ ಪಡೆದುಕೊಳ್ಳುವುದಾಗಿ ಹೇಳಿರುವ ಬಿಜೆಪಿ ವಿರುದ್ಧ ತೃಣಮೂಲ ಕಾಂಗ್ರೆಸ್ ಸಂಸದ ದಿನೇಶ್ ತ್ರಿವೇದಿ ಕಿಡಿಕಾರಿದ್ದಾರೆ.












Click it and Unblock the Notifications