'ನನಗೆ ಹಿಂದಿ ಅರ್ಥವಾಗುತ್ತೆ' ಪತ್ರಕರ್ತರ ವ್ಯಂಗ್ಯಕ್ಕೆ ನಿರ್ಮಲಾ ಪ್ರತಿಕ್ರಿಯೆ
ಭೋಪಾಲ್, ನವೆಂಬರ್ 24: ಸರ್ಜಿಕಲ್ ಸ್ಟ್ರೈಕ್ ಕುರಿತಂತೆ ಮಾತನಾಡುತ್ತಿದ್ದ ಪತ್ರಕರ್ತರೊಬ್ಬರು ವ್ಯಂಗ್ಯವಾಗಿ ಕೇಳಿದ ಪ್ರಶ್ನೆಗೆ, 'ನನಗೆ ಹಿಂದಿ ಅರ್ಥವಾಗುತ್ತದೆ' ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಖಡಕ್ ಉತ್ತರ ನೀಡಿದ್ದಾರೆ.
ಮಧ್ಯಪ್ರದೇಶದಲ್ಲಿ ಇದೇ ನವೆಂಬರ್ 28 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯ ಪ್ರಚಾರ ಸಭೆಗೆಂದು ಭೋಪಾಲ್ ಗೆ ಆಗಮಿಸಿದ್ದ ನಿರ್ಮಲಾ ಸೀತಾರಾಮನ್ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ, "ಸರ್ಜಿಕಲ್ ಸ್ಟ್ರೈಕ್ ಅನ್ನು ಎನ್ ಡಿಎ ಸರ್ಕಾರ ಏಕೆ ಟಾಂ ಟಾಂ(ಬಿನ್ ಬಜಾಯೆ) ಮಾಡುತ್ತಿದೆ?" ಎಂದು ಪತ್ರಕರ್ತರೊಬ್ಬರು ಹಿಂದಿಯಲ್ಲಿ ವ್ಯಂಗ್ಯದ ದಾಟಿಯಲ್ಲಿ ಪ್ರಶ್ನಿಸಿದರು.

"ನಿಮ್ಮ ಪ್ರಶ್ನೆಯಲ್ಲಿದ್ದ ವ್ಯಂಗ್ಯದ ದಾಟಿಯಿಂದ ನನಗೆ ನೋವಾಗಿದೆ. ನೀವು ಉಪಯೋಗಿಸಿದ 'ಬಿನ್ ಬಜಾಯೆ' ಪದ ಬೇಸರವನ್ನುಂಟು ಮಾಡಿತು. ಏಕೆಂದರೆ ನನಗೆ ಹಿಂದಿ ಅರ್ಥವಾಗುತ್ತದೆ" ಎಂದು ನಿರ್ಮಲಾ ಸೀತಾರಾಮನ್ ಬೇಸರದಲ್ಲೇ ಪ್ರತಿಕ್ರಿಯೆ ನೀಡಿದರು.
2016 ರಲ್ಲಿ ಎನ್ ಡಿಎ ಸರ್ಕಾರ ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್ ಅನ್ನು ತನ್ನ ಸಾಧನೆ ಎಂಬಂತೆ ಬಡಾಯಿ ಕೊಚ್ಚಿಕೊಳ್ಳುತ್ತಿದೆ. ಸೇನೆಯೇ ಅದನ್ನು ಬಹಿರಂಗ ಪಡಿಸಬೇಡಿ, ಭದ್ರತೆಯ ದೃಷ್ಟಿಯಿಂದ ಸರ್ಜಿಕಲ್ ಸ್ಟ್ರೈಕ್ ನ ವಿವರಗಳನ್ನು ನೀಡುವುದು ಸಪಾಯಕಾರಿ ಎಂದು ಹೇಳಿದ್ದರೂ ಸರ್ಕಾರ ಅದನ್ನು ಟಾಂ ಟಾಂ ಮಾಡುತ್ತಿರುವುದು ಸರಿಯೇ ಎಂದು ಪತ್ರಕರ್ತರು ಕೇಳಿದ್ದರು.
ಪಾಕಿಸ್ತಾನದ ಗಡಿಯೊಳಗೆ ತೆರಳಿ ಭಾರತೀಯ ಸೇನೆಯು ಅಲ್ಲಿದ್ದ ಉಗ್ರ ನೆಲೆಯನ್ನು ಧ್ವಂಸಗೊಳಿಸಿ ಪಾಕಿಸ್ತಾನಕ್ಕೆ ಖಡಕ್ ವಾರ್ನಿಂಗ್ ನೀಡಿತ್ತು. ಅದಕ್ಕೂ ಮುನ್ನ ಜಮ್ಮು-ಕಾಶ್ಮೀರದ ಉರಿ ಎಂಬಲ್ಲಿ ಸೇನಾ ನೆಲೆಯ ಮೇಲೆ ದಾಳಿ ನಡೆಸಿ ಹಲವು ಭಾರತೀಯ ಸೈನಿಕರನ್ನು ಪಾಕಿಸ್ತಾನೀ ಉಗ್ರರು ಸದೆಬಡಿದಿದ್ದರಿಂದ ಅದಕ್ಕೆ ಭಾರತ ಪ್ರತೀಕಾರ ತೀರಿಸಿಕೊಂಡಿತ್ತು.












Click it and Unblock the Notifications