ಕೊರೊನಾ ಸೋಂಕು ಹೆಚ್ಚಳ: ಛತ್ತೀಸ್ಗಢ ಆಸ್ಪತ್ರೆ ಎದುರು ಶವಗಳ ರಾಶಿ
ಭೋಪಾಲ್, ಏಪ್ರಿಲ್ 13:ಛತ್ತೀಸ್ಗಢದಲ್ಲಿ ಕೊರೊನಾ ಸೋಂಕು ಹೆಚ್ಚಾಗಿದ್ದು, ಸರ್ಕಾರಿ ಆಸ್ಪತ್ರೆ ಎದುರು ಹೆಣಗಳ ರಾಶಿ ಇದೆ.
ಕೋವಿಡ್ ಸೋಂಕಿನಿಂದಾಗಿ ಸಾವನ್ನಪ್ಪಿದವರ ಶವಗಳನ್ನು ವಿಲೇವಾರಿ ಮಾಡಲು ಸಿಬ್ಬಂದಿ ಮತ್ತು ಜಾಗದ ಕೊರತೆ ಎದುರಾಗಿದ್ದು ಇದರಿಂದ ಆಸ್ಪತ್ರೆ ಆವರಣದಲ್ಲಿ ಹೆಣಗಳ ರಾಶಿಯೇ ಕಾಣಿಸುತ್ತಿದೆ.
ರೋಗಲಕ್ಷಣ ಇಲ್ಲದ ರೋಗಿಗಳ ಆರೋಗ್ಯ ಸ್ಥಿತಿ ಕೂಡಾ ತೀವ್ರವಾಗಿ ಹದಗೆಟ್ಟು ಹೃದಯಾಘಾತದಿಂದ ರೋಗಿಗಳು ಸಾಯುತ್ತಿದ್ದಾರೆ.

ಆದ್ದರಿಂದ ಎರಡನೇ ಅಲೆಯ ಹೊಡೆತವನ್ನು ಅಂದಾಜಿಸುವುದು ಸಾಧ್ಯವಾಗುತ್ತಿಲ್ಲ ಎಂದು ಆರೋಗ್ಯಾಧಿಕಾರಿ ಮೀರಾ ಬಘೇಲ್ ಅಭಿಪ್ರಾಯಪಟ್ಟಿದ್ದಾರೆ. ಅಧಿಕೃತ ಮೂಲಗಳ ಪ್ರಕಾರ ರಾಯಪುರ ನಗರದ ಸ್ಮಶಾನದಲ್ಲಿ ದಿನಕ್ಕೆ ಸರಾಸರಿ 55 ಶವಗಳ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ. ಈ ಪೈಕಿ ಬಹುತೇಕ ಕೊರೊನಾ ವೈರಸ್ ರೋಗಿಗಳದ್ದೇ ಎಂದು ಹೇಳಲಾಗಿದೆ.
ಛತ್ತೀಸ್ಗಢದಲ್ಲಿ ಕೋವಿಡ್ ಸೋಂಕಿತರ ಸಾವಿನ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಡಾ.ಭೀಮರಾವ್ ಅಂಬೇಡ್ಕರ್ ಸ್ಮಾರಕ ಆಸ್ಪತ್ರೆಯಲ್ಲಿ ಮೃತದೇಹಗಳನ್ನು ಇಡಲು ಕೂಡಾ ಸ್ಥಳಾವಕಾಶ ಇಲ್ಲದಂತಾಗಿದೆ.
ಕೋವಿಡ್ ಶಿಷ್ಟಾಚಾರದ ಪ್ರಕಾರ ಶವಗಳನ್ನು ಅಂತ್ಯಸಂಸ್ಕಾರಕ್ಕೆ ಮುನ್ನ ಶೈತ್ಯಾಗಾರಗಳಲ್ಲಿ ದಾಸ್ತಾನು ಮಾಡಬೇಕು. ಆದರೆ ಸ್ಥಳಾವಕಾಶವಿಲ್ಲದೇ ಸಿಬ್ಬಂದಿಗಳು ಆಸ್ಪತ್ರೆಯ ಆವರಣದಲ್ಲೇ ಶವಗಳನ್ನು ಇಟ್ಟಿದ್ದಾರೆ. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕ ಸೃಷ್ಟಿ ಮಾಡಿದೆ.
ಇನ್ನು ಈ ಬಗ್ಗೆ ಆಸ್ಪತ್ರೆಯ ಅಧಿಕಾರಿಗಳು ಈ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿದ್ದು, ಕೋವಿಡ್-19 ಸೋಂಕಿನಿಂದಾಗಿ ಮೃತಪಟ್ಟವರ ಅಂತ್ಯಸಂಸ್ಕಾರ ನಡೆಸುವುದಕ್ಕಿಂತ ವೇಗವಾಗಿ ಸಾವಿನ ಸಂಖ್ಯೆ ಹೆಚ್ಚುತ್ತಿರುವುದರಿಂದ ಶವಾಗಾರಗಳು ಭರ್ತಿಯಾಗಿವೆ.
ಹೊಸ ಶವಗಳನ್ನು ಇಡಲು ಜಾಗವೇ ಇಲ್ಲ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. ಒಂದೇ ಬಾರಿ ಇಷ್ಟೊಂದು ಸಾವು ಸಂಭವಿಸಬಹುದು ಎಂದು ಯಾರೂ ಊಹಿಸಿರಲಿಲ್ಲ.
ಸಾಮಾನ್ಯ ಸಾವಿನ ಸಂಖ್ಯೆಗೆ ಸಾಕಾಗುವಷ್ಟು ಶೈತ್ಯಾಗಾರ ವ್ಯವಸ್ಥೆ ಇದೆ. ಆದರೆ ಒಂದೆರಡು ಸಾವುಗಳು ಸಂಭವಿಸುತ್ತಿದ್ದ ಕಡೆಗಳಿಂದ 10-20 ಸಾವುಗಳು ಹೇಗೆ ವರದಿಯಾಗುತ್ತಿವೆ ಎನ್ನುವುದು ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications