ಕ್ವಾರಂಟೈನ್ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಗಲಾಟೆ, ಇಬ್ಬರು ಸಾವು
ಬೋಪಾಲ್, ಮೇ 17: ಕ್ವಾರಂಟೈನ್ ವಿಚಾರಕ್ಕೆ ನಡೆದ ಗಲಾಟೆ ಇಬ್ಬರು ವ್ಯಕ್ತಿಗಳು ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಎರಡು ಕುಟುಂಬಗಳ ನಡುವೆ ಜರುಗಿದ ಜಗಳದಲ್ಲಿ ಅಕ್ಕ-ತಮ್ಮ ಸಾವನ್ನಪ್ಪಿದ್ದಾರೆ ಎಂದು ಭಿಂದ್ ಪೊಲೀಸರು ತಿಳಿಸಿದ್ದಾರೆ.
ಭಿಂದ್ ಪ್ರದೇಶದ ಪ್ರೇಮ್ ನಗರದಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ಮತ್ತಿಬ್ಬರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿರುವ ಕಪುರೆ ಖಾನ್ ಅವರ ಅಳಿಯ ಎರಡು ವಾರಗಳ ಹಿಂದೆ ಮನೆಗೆ ಭೇಟಿ ನೀಡಿದ್ದರು. ಆದ್ದರಿಂದ ಇಡೀ ಕುಟುಂಬವನ್ನು ಜಿಲ್ಲಾಡಳಿತ ಕ್ವಾರಂಟೈನ್ಗೆ ಒಳಗಾಗಿ ಎಂದು ಕೇಳಿಕೊಂಡಿತ್ತು. ಆದರೆ, ಅದೇ ಕುಟುಂಬದ ಮತ್ತೊಬ್ಬ ಸದಸ್ಯರ ಇನ್ನೊಂದು ಪ್ರದೇಶದಲ್ಲಿರುವ ಕುಟುಂಬದವರ ಮನೆಗೆ ಭೇಟಿ ನೀಡಿದ್ದರು.

ಈ ವಿಚಾರವಾಗಿ ನೆರೆಯ ಮನೆಯವರಾದ ಕಲಾ ಜಾತವ್ ಅವರು ಪ್ರಶ್ನಿಸಿದ್ದಾರೆ. ಕ್ವಾರಂಟೈನ್ನಲ್ಲಿರುವುದನ್ನು ಬಿಟ್ಟು ಬೇರೆ ಕಡೆ ಸುತ್ತಾಡುತ್ತಿದ್ದರೆ ಕೊರೊನಾ ವೈರಸ್ ಹರಡುವುದು ಮತ್ತು ಇತರರಿಗೆ ಅಪಾಯ ತರಬಹುದು ಎಂದು ಟೀಕಿಸಿದ್ದಾರೆ. ನಂತರ ಎರಡು ಕುಟುಂಬಗಳ ನಡುವೆ ಘರ್ಷಣೆ ನಡೆದಿದೆ ಎಂದು ಬಿಂಧ್ ಪೊಲೀಸ್ ಅಧೀಕ್ಷಕ ನಾಗೇಂದ್ರ ಸಿಂಗ್ ಮಾಹಿತಿ ನೀಡಿದ್ದಾರೆ.
ಈ ಗಲಾಟೆಯಲ್ಲಿ ಕಲ್ಲಿನಿಂದ ಹಲ್ಲೆಗೊಳಗಾದ 47 ವರ್ಷದ ಕಲಾ ಜತವ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಲಾ ಜಾತವ್ ಅವರ ಸಹೋದರ 45 ವರ್ಷದ ವಿಷ್ಣು ಜಾತವ್ ಕೂಡ ಗಲಾಟೆಯಲ್ಲಿ ಗಾಯಗೊಂಡು, ಆಸ್ಪತ್ರೆಗೆ ಸೇರಿಲಾಗಿತ್ತು. ಆದರೆ ಶನಿವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘರ್ಷಣೆಯಲ್ಲಿ ಗಾಯಗೊಂಡ ಆಕಾಶ್ ಜಾತವ್ ಮತ್ತು ರಮೇಶ್ ಜಾತವ್ ಗ್ವಾಲಿಯರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಜನರ ವಿರುದ್ಧ ಐಪಿಸಿಯ ಸೆಕ್ಷನ್ 302 (ಕೊಲೆ), 307 (ಕೊಲೆ ಯತ್ನ) ಅಡಿಯಲ್ಲಿ ಎಫ್ ಐ ಆರ್ ದಾಖಲಿಸಲಾಗಿದೆ. ಕಪುರೆ ಖಾನ್ ಮತ್ತು ಮೂವರು ಮಹಿಳೆಯರು ಸೇರಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ'' ಎಂದು ಎಸ್ಪಿ ತಿಳಿಸಿದ್ದಾರೆ.












Click it and Unblock the Notifications