ಮದುವೆ ಈಗ ಬಿಸಿನೆಸ್ ಆಗೋಗಿದೆ, ನನಗೆ ತುಂಬಾ ಪ್ರಪೋಸಲ್ಸ್ ಬಂದಿದೆ: 2ನೇ ಮದುವೆಗೆ ರೆಡಿ ಎಂದ ಬಿಗ್ಬಾಸ್ ಖ್ಯಾತಿಯ ಧ್ರುವಂತ್
ಕಿರುತೆರೆ ನಟನಾಗಿ ಗುರುತಿಸಿಕೊಂಡು, ಇತ್ತೀಚೆಗಷ್ಟೇ ಮುಕ್ತಾಯಗೊಂಡ 'ಕನ್ನಡ ಬಿಗ್ಬಾಸ್ ಸೀಸನ್ 12' ರಿಯಾಲಿಟಿ ಶೋ ಮೂಲಕ ಅಪಾರ ಜನಪ್ರಿಯತೆ ಗಳಿಸಿದ ನಟ ಧ್ರುವಂತ್, ಪ್ರಸ್ತುತ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ. ಬಿಗ್ಬಾಸ್ ಮನೆಯಲ್ಲಿ ತಮ್ಮದೇ ಆದ ವಿಶಿಷ್ಟ ಆಟ ಮತ್ತು ನೇರ ನಡೆ-ನುಡಿಯಿಂದ ಪ್ರೇಕ್ಷಕರ ಗಮನ ಸೆಳೆದಿದ್ದ ಧ್ರುವಂತ್, ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ತಮ್ಮ ವೈಯಕ್ತಿಕ ಜೀವನ, ವಿಚ್ಛೇದನ ಹಾಗೂ ಎರಡನೇ ಮದುವೆಯ ಆಲೋಚನೆಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಧ್ರುವಂತ್ ಅವರಿಗೆ ಈ ಹಿಂದೆ ಮೊದಲ ಮದುವೆಯಾಗಿದ್ದು, ಕೆಲವು ವೈಯಕ್ತಿಕ ಕಾರಣಾಂತರಗಳಿಂದಾಗಿ ಅವರು ಪರಸ್ಪರ ಒಪ್ಪಿಗೆಯೊಂದಿಗೆ ವಿಚ್ಛೇದನ (ಡಿವೋರ್ಸ್) ಪಡೆದು ದೂರವಾಗಿದ್ದರು. ಪ್ರಸ್ತುತ ಸಮಾಜದಲ್ಲಿ ಮದುವೆ ಮತ್ತು ಸಂಬಂಧಗಳು ಬದಲಾಗುತ್ತಿರುವ ರೀತಿಯನ್ನು ಕಂಡು ಬೇಸರ ವ್ಯಕ್ತಪಡಿಸಿರುವ ಅವರು, "ಇತ್ತೀಚಿನ ದಿನಗಳಲ್ಲಿ ಮದುವೆ ಎನ್ನುವುದು ಒಂದು ರೀತಿಯ ಬಿಸಿನೆಸ್ (ವ್ಯವಹಾರ) ಆಗೋಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹೆಣ್ಣನ್ನು ಹೆತ್ತವರು ತಮ್ಮ ಮಗಳು ಐಷಾರಾಮಿ ಜೀವನ ನಡೆಸಲಿ, ಚೆನ್ನಾಗಿರಲಿ ಎಂಬ ಆಸೆಯಿಂದ ಶ್ರೀಮಂತ ಹುಡುಗರಿಗೆ ಮದುವೆ ಮಾಡಿಕೊಡುತ್ತಿದ್ದಾರೆ. ಒಂದು ರೀತಿಯಲ್ಲಿ ಇದು ಸರಿ ಎಂದೇ ಎನಿಸಿದರೂ, ಇದರಲ್ಲಿ ಪ್ರೀತಿಗಿಂತ ಹಣವೇ ಮುಖ್ಯವಾಗುತ್ತಿದೆ. ಇಂದಿನ ದಿನಗಳಲ್ಲಿ ಮದುವೆಯಾದ ನಂತರ ಡಿವೋರ್ಸ್ ಆದರೂ ಕೋರ್ಟ್ ಮೂಲಕ ಜೀವನಾಂಶ ಸಿಗುತ್ತದೆ. ಹಾಗಾಗಿಯೇ ಮದುವೆ ಈಗೀಗ ಬ್ಯುಸಿನೆಸ್ ರೂಪ ಪಡೆದುಕೊಳ್ಳುತ್ತಿದೆ. ಎಲ್ಲರೂ ಹುಡುಗ ಶ್ರೀಮಂತನಾಗಿರಬೇಕು ಎಂದೇ ಡಿಮ್ಯಾಂಡ್ ಮಾಡುತ್ತಾರೆ" ಎಂದು ಇಂದಿನ ವಾಸ್ತವವನ್ನು ಬಿಚ್ಚಿಟ್ಟಿದ್ದಾರೆ.
ನನಗೆ ದುಡ್ಡಿನ ಮೇಲೆ ಆಸೆಯಿಲ್ಲ
"ನನ್ನ ಜೀವನದಲ್ಲಿ ದುಡ್ಡಿಗೆ ನಾನು ಎಂದಿಗೂ ಅತಿಯಾದ ಪ್ರಾಮುಖ್ಯತೆ ನೀಡಿಲ್ಲ. ನಮ್ಮ ಮನೆಯವರೂ ಕೂಡ 'ನೀನು ದುಡ್ಡು ಮಾಡುವುದಿದ್ದರೆ ಇನ್ನೆಷ್ಟು ಅಂತ ಮಾಡಬಹುದು?' ಎಂದು ಹೇಳುತ್ತಿರುತ್ತಾರೆ. ನಿಜ ಹೇಳಬೇಕೆಂದರೆ ನನಗೆ ಹಣದ ಮೇಲೆ ಅಂತಹ ಯಾವುದೇ ದೊಡ್ಡ ಆಸೆ ಅಥವಾ ವ್ಯಾಮೋಹ ಇಲ್ಲ" ಎಂದಿದ್ದಾರೆ ಧ್ರುವಂತ್.
ಬಿಗ್ಬಾಸ್ ಬಳಿಕ ಹೆಚ್ಚಾಯ್ತು ಪ್ರಪೋಸಲ್ಸ್
ಬಿಗ್ ಬಾಸ್ ರಿಯಾಲಿಟಿ ಶೋನಿಂದ ಹೊರಬಂದ ನಂತರ ಧ್ರುವಂತ್ ಅವರ ಜನಪ್ರಿಯತೆ ಗಣನೀಯವಾಗಿ ಹೆಚ್ಚಾಗಿದೆ. ಇದನ್ನು ಒಪ್ಪಿಕೊಂಡಿರುವ ಅವರು, ತಮಗೆ ಈಗ ಸಾಕಷ್ಟು ಮದುವೆಯ ಪ್ರಪೋಸಲ್ಗಳು ಬರುತ್ತಿರುವುದಾಗಿ ಹೇಳಿಕೊಂಡಿದ್ದಾರೆ. "ಹೆಣ್ಣುಮಕ್ಕಳು ನನ್ನನ್ನು ಇಷ್ಟಪಡುತ್ತಿದ್ದಾರೆ ಮತ್ತು ಅವರ ಭಾವನೆಗಳನ್ನು ನನ್ನ ಬಳಿ ಮುಕ್ತವಾಗಿ ಹಂಚಿಕೊಳ್ಳುತ್ತಿದ್ದಾರೆ. ಇದೊಂದು ದೊಡ್ಡ ಭಾಗ್ಯ ಎಂದೇ ನಾನು ಭಾವಿಸುತ್ತೇನೆ. ಅದನ್ನು ನಾವು ಗೌರವಯುತವಾದ ಹಾದಿಯಲ್ಲೇ ಸ್ವೀಕರಿಸಬೇಕು" ಎಂದಿದ್ದಾರೆ.
ಹೆಣ್ಣು ಗಂಡಿಗಿಂತ ಒಂದು ಕೈ ಮೇಲೆ
"ಯಾವ ದೃಷ್ಟಿಕೋನದಿಂದ ನೋಡಿದರೂ ಹೆಣ್ಣು ಯಾವಾಗಲೂ ಪುರುಷರಿಗಿಂತ ಒಂದು ಕೈ ಮೇಲೆಯೇ ಇರುತ್ತಾಳೆ. ಆದರೆ ಇಂದಿನ ದಿನಗಳಲ್ಲಿ ಗಂಡಸರು ಹೆಣ್ಣಿಗೆ ಸಮನಾಗಲು ಹೊರಟಿದ್ದಾರೆ, ಯಾಕೆ ಅಂತ ತಿಳಿಯುತ್ತಿಲ್ಲ. ನನಗೆ ಮಹಿಳೆಯರ ಮೇಲೆ ಅಪಾರ ಗೌರವವಿದೆ" ಎಂದಿದ್ದಾರೆ. ಇದೇ ವೇಳೆ ತಮ್ಮನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುವ ಅಥವಾ ಕೆಟ್ಟದಾಗಿ ಕಮೆಂಟ್ ಮಾಡುವವರಿಗೆ ಖಡಕ್ ಎಚ್ಚರಿಕೆ ನೀಡಿರುವ ಧ್ರುವಂತ್, "ಕೆಲವರು ನನ್ನ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ದರು. ಅಂತವರಿಗೆ ಅವರದ್ದೇ ಭಾಷೆಯಲ್ಲಿ ಮತ್ತು ಅದೇ ಶೈಲಿಯಲ್ಲಿ ಸರಿಯಾಗಿ ಉತ್ತರ ಕೊಟ್ಟಿದ್ದೇನೆ. ನಾನು ತುಂಬಾನೇ ಒಳ್ಳೆಯವನು ಅಂತ ನಾನೆಲ್ಲೂ ಹೇಳಿಕೊಂಡಿಲ್ಲ. ಕೆಲವೊಂದು ಜನರಿಗೆ ಅವರದ್ದೇ ರೀತಿಯಲ್ಲಿ ಬುದ್ಧಿ ಕಲಿಸಬೇಕಾಗುತ್ತದೆ. ಆದರೆ, ಯಾರು ನಮ್ಮನ್ನು ಪ್ರೀತಿಸಿ, ಗೌರವ ಮತ್ತು ಅಭಿಮಾನ ನೀಡುತ್ತಾರೋ, ಅವರಿಗೆ ನನ್ನ ಹೃದಯದಲ್ಲಿ ಸದಾ ಗೌರವ ಇದ್ದೇ ಇರುತ್ತದೆ" ಎಂದು ಹೇಳಿದ್ದಾರೆ.
ಎರಡನೇ ಮದುವೆಗೆ ಹುಡುಗಿ ಹೇಗಿರಬೇಕು?
ಜೀವನದಲ್ಲಿ ಒಬ್ಬ ಉತ್ತಮ ಬಾಳಸಂಗಾತಿಯ ಅವಶ್ಯಕತೆ ಇದೆ ಎಂದು ಧ್ರುವಂತ್ ಒಪ್ಪಿಕೊಂಡಿದ್ದಾರೆ. "ನನಗೂ ಒಬ್ಬ ಲೈಫ್ ಪಾರ್ಟ್ನರ್ ಬೇಕು ಎಂಬ ಆಸೆ ಖಂಡಿತಾ ಇದೆ. ದೇವರ ಕೃಪೆಯಿಂದ ಅದು ಯಾವಾಗ, ಹೇಗೆ ನಡೆಯಬೇಕೋ ಹಾಗೆ ನಡೆಯುತ್ತದೆ. ಮದುವೆಯ ವಿಚಾರವನ್ನು ನಮ್ಮ ಮನೆಯವರು ಸಂಪೂರ್ಣವಾಗಿ ನನಗೆ ಬಿಟ್ಟಿದ್ದಾರೆ. 'ಕೊನೆಯವರೆಗೂ ಜೀವನ ನಡೆಸಬೇಕಾದವನು ನೀನು, ಹಾಗಾಗಿ ನೀನೇ ಹುಡುಗಿಯನ್ನು ಆಯ್ಕೆ ಮಾಡಿಕೊ. ನಿನ್ನಷ್ಟು ತಿಳುವಳಿಕೆ ನಮಗಿಲ್ಲ' ಎಂದು ಮನೆಯವರು ಹೇಳುತ್ತಾರೆ. ಆದರೆ, ನನಗೇನಾದರೂ ಅವರೇ ಒಂದು ಒಳ್ಳೆಯ ಸಂಬಂಧ ಹುಡುಕಿಕೊಟ್ಟರೆ ಸಾಕು ಎನಿಸುತ್ತದೆ" ಎಂದಿದ್ದಾರೆ. ಇನ್ನು ತಮ್ಮ ಭಾವಿ ಪತ್ನಿಯಾಗುವವಳಿಗೆ ಇರಬೇಕಾದ ಗುಣಗಳ ಬಗ್ಗೆ ಮಾತನಾಡುತ್ತಾ, "ಒಳ್ಳೆಯ ಗುಣ, ನಡತೆ ಹೊಂದಿರುವ ಹಾಗೂ ನೋಡಲು ಚೆನ್ನಾಗಿರುವ ಸಂಗಾತಿ ಸಿಕ್ಕರೆ ನಾನು ಖಂಡಿತವಾಗಿಯೂ ಎರಡನೇ ಮದುವೆಯಾಗಲು ಸಿದ್ಧ" ಎಂದು ಧ್ರುವಂತ್ ಹೇಳಿದ್ದಾರೆ.













Click it and Unblock the Notifications