ಚಿಲ್ಲರೆ ಕಾಸಿಗೆ ಕೈಯೊಡ್ಡಿ ಮರ್ಯಾದೆ ಕಳೆದುಕೊಂಡ ಬೆಂಗಳೂರು ಪೊಲೀಸರು!
ಬೆಂಗಳೂರು, ನ.18: ಚಿಲ್ಲರೆ ಅಂಗಡಿ ಇಟ್ಟುಕೊಂಡಿರುವ ಮಹಿಳೆ ಬಳಿ 10 ರೂ. ರೋಲ್ ಕಾಲ್ ಮಾಡಲು ಹೋಗಿ ಹೊಯ್ಸಳ ಸಿಬ್ಬಂದಿ ಬೆಂಗಳೂರು ಪೊಲೀಸರ ಮರ್ಯಾದೆ ಹರಾಜಿಗಿಟ್ಟಿದ್ದಾರೆ. ಚಿಲ್ಲರೆ ಅಂಗಡಿ ಇಟ್ಟುಕೊಂಡಿರುವ ಮಹಿಳೆ ಬಳಿ 10 ರೂ. ರೋಲ್ ಕಾಲ್ ಮಾಡುತ್ತಿದ್ದ ಹೊಯ್ಸಳ ಸಿಬ್ಬಂದಿಯ ವಸೂಲಿ ಬಾಜಿಯನ್ನು ಯುವಕನೊಬ್ಬ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾನೆ. ಮಾತ್ರವಲ್ಲ, ಹೊಯ್ಸಳ ಸಿಬ್ಬಂದಿಗೆ ಅವಾಜ್ ಬಿಟ್ಟು ರೋಲ್ ಕಾಲ್ ಮಾಡಿದ್ದ 10 ರೂ. ವಾಪಸು ಕೊಡಿಸಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ಮರ್ಯಾದೆ ತೆಗೆದ ಪ್ರಕರಣ: ಹೊಯ್ಸಳ ಸಿಬ್ಬಂದಿ ರಾಜಾ ರೋಷವಾಗಿ ತಳ್ಳುವ ಗಾಡಿಗಳಿಂದ, ಚಿಲ್ಲರೆ ಅಂಗಡಿಗಳಿಂದ ದಿನ ನಿತ್ಯ ವಸೂಲಿ ಮಾಡುತ್ತಾರೆ. ಇದನ್ನು ನೋಡಿದರೂ, ಅನುಭವಿಸಿದರೂ ಜನ ಸಾಮಾನ್ಯರು ಪ್ರಶ್ನೆ ಮಾಡುವುದು ಅಪರೂಪ. ಪೊಲೀಸರನ್ನು ಪ್ರಶ್ನಿಸಿ ಯಾಕೆ ತೊಂದರೆ ಅನುಭವಿಸಬೇಕೆಂಬ ಭಯದಿಂದ ನ್ಯಾಯ ಬದ್ಧ ಚಿಲ್ಲರೆ ವ್ಯಾಪಾರ ಮಾಡುವರೂ ಕೂಡ ಮಾಮೂಲಿ ಕೊಟ್ಟು ಸುಮ್ಮನಾಗುತ್ತಾರೆ. ಕೇವಲ ಹತ್ತು ರೂಪಾಯಿ ಮಾಮೂಲಿ ವಸೂಲಿ ಪ್ರಕರಣ ಇಡೀ ಬೆಂಗಳೂರು ಪೊಲೀಸರ ಮಾನವನ್ನು ಮೂರು ಕಾಸಿಗೆ ಹರಾಜು ಹಾಕಿದೆ. ಈ ಕುರಿತ ವಿಡಿಯೋ ವೈರಲ್ ಬಳಿಕ ಹತ್ತು ರೂ. ವಸೂಲಿ ಮಾಡಿದವರ ಕಥೆ ಏನಾಗಿದೆ ಎಂಬ ಪೂರ್ಣ ವಿವರ ಮುಂದಿದೆ...
ಮಹಿಳೆ ಬಳಿ ಹೊಯ್ಸಳ ಸಿಬ್ಬಂದಿ ರೋಲ್ ಕಾಲ್
ಘಟನೆ ಹಿನ್ನೆಲೆ: ಮಾರತಹಳ್ಳಿ ಬ್ರಿಡ್ಜ್ ಸಮೀಪ ಚಿಲ್ಲರೆ ಅಂಗಡಿ ಇಟ್ಟುಕೊಂಡಿದ್ದ ಮಹಿಳೆ ಬಳಿ ಹೊಯ್ಸಳ ಸಿಬ್ಬಂದಿ ಹತ್ತು ರೂಪಾಯಿ ಹಣ ರೋಲ್ ಕಾಲ್ ಮಾಡಿದ್ದಾರೆ. ಇದನ್ನು ಗಮನಿಸಿದ ಯುವಕನೊಬ್ಬ ಹಣ ಕೊಡುವುದನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾನೆ. ಹಣ ತೆಗೆದುಕೊಂಡು ಹೋಗುತ್ತಿದ್ದ ಹೊಯ್ಸಳ ವಾಹನವನ್ನು ತಡೆದು, ಯಾಕೆ ಆ ಮಹಿಳೆ ಬಳಿ ಹಣ ತೆಗೆದುಕೊಂಡು ಹೋಗುತ್ತಿದ್ದೀರಾ? ಮೊದಲು ವಾಪಸು ಕೊಡಿ ಎಂದು ಅವಾಜ್ ಬಿಟ್ಟಿದ್ದಾನೆ. ಯುವಕನ ಕೈಯಲ್ಲಿದ್ದ ಮೊಬೈಲ್ನಲ್ಲಿ ಎಲ್ಲವೂ ರೆಕಾರ್ಡ್ ಆಗುತ್ತಿದ್ದನ್ನು ಗಮನಿಸಿದ ಪೊಲೀಸ್ ಸಿಬ್ಬಂದಿ ವಸೂಲಿ ಮಾಡಿದ್ದ ಹಣವನ್ನು ಮಹಿಳೆಗೆ ವಾಪಸು ಕೊಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಹತ್ತು ರೂ. ರೋಲ್ ಕಾಲ್ ಪ್ರಕರಣದಲ್ಲಿ ಹೊಯ್ಸಳ ಸಿಬ್ಬಂದಿಯ ಬಗ್ಗೆ ಸಾರ್ವಜನಿಕ ಆಕ್ರೋಶ ವ್ಯಕ್ತವಾಗುತ್ತಿದೆ. ಮಾತ್ರವಲ್ಲ, ಆ ಯುವಕನ ಧೈರ್ಯವನ್ನು ಮೆಚ್ಚಿ ಸಾರ್ವಜನಿಕರು ಪ್ರಶಂಸೆ ಮಾಡುತ್ತಿದ್ದಾರೆ. ಇನ್ನೂ ಆತ ಯಾರು ಏನು ಎಂಬುದರ ವಿವರಗಳು ಬಹಿರಂಗವಾಗಿಲ್ಲ.
ಪೊಲೀಸ್ ಸಿಬ್ಬಂದಿ ಮೇಲೆ ಬ್ರಹ್ಮಾಸ್ತ್ರ
ಚಿಲ್ಲರೆ ಅಂಗಡಿಯಿಂದ ಚಿಲ್ಲರೆ ವಸೂಲಿ ಮಾಡಿ ಸಿಕ್ಕಿಬಿದ್ದ ಹೊಯ್ಸಳ ಸಿಬ್ಬಂದಿ ಮೇಲೆ ಪೊಲೀಸ್ ಇಲಾಖೆ ಕ್ರಮಕ್ಕೆ ಮುಂದಾಗಿದೆ. ಈ ಮೂಲಕ ತಮ್ಮ ಇಲಾಖೆ ಶಿಸ್ತಿನ ಇಲಾಖೆ ಎಂದು ತೋರಿಸಲು ಹೊರಟಿದೆ. ಹಣ ಪಡೆದ ಮುಖ್ಯ ಪೇದೆ ಗುರುಮೂರ್ತಿ ಮತ್ತು ಹೊಯ್ಸಳ ಸಿಬ್ಬಂದಿ ಸುರೇಂದ್ರ ವಿರುದ್ಧ ವಿಚಾರಣೆ ನಡೆಸಿ ಮಾರತಹಳ್ಳಿ ಪೊಲೀಸ್ ಇನ್ಸ್ಪೆಕ್ಟರ್ ವೈಟ್ ಫೀಲ್ಡ್ ವಿಭಾಗದ ಡಿಸಿಪಿಗೆ ವರದಿ ಸಲ್ಲಿಸಿದ್ದಾರೆ. ಹಣ ನೀಡಿದ ಮಹಿಳೆಯ ಹೇಳಿಕೆ ಆಧರಿಸಿ ವರದಿ ನೀಡಿದ್ದು, ಇಬ್ಬರು ಹೊಯ್ಸಳ ಸಿಬ್ಬಂದಿ ವಿರುದ್ಧ ಇಲಾಖಾ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.
ಹೊಯ್ಸಳ ಕರ್ತವ್ಯ
ಬೆಂಗಳೂರಿನಲ್ಲಿ ನಡೆಯುವ ಅಪರಾಧ ಕೃತ್ಯಗಳನ್ನು ತಡೆಯಲು, ಜನ ಸಾಮಾನ್ಯರ ಮನವಿಗೆ ತುರ್ತು ಸ್ಪಂದಿಸಿ ಘಟನಾ ಸ್ಥಳಕ್ಕೆ ಹೋಗಲೆಂದು ಬೆಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಪ್ರತಿ ಪೊಲೀಸ್ ಠಾಣೆಗೂ ಹೊಯ್ಸಳ ವಾಹನ ನೀಡಲಾಗಿದೆ. ಪ್ರತಿ ವಾಹನವೂ ಜಿಪಿಆರ್ಎಸ್ ತಂತ್ರಜ್ಞಾನ ಹೊಂದಿವೆ. ಯಾವುದೇ ಸಮಸ್ಯೆ ಬಗ್ಗೆ ಪೊಲೀಸ್ ನಿಯಂತ್ರಣ ಕಚೇರಿಯಿಂದ ಬರುವ ಕರೆಗೆ ತುರ್ತು ಸ್ಪಂದನೆ ಮಾಡುವುದು, ಅಪರಾಧ ಕೃತ್ಯ ತಡೆಯುವುದು ಈ ಹೊಯ್ಸಳ ಸಿಬ್ಬಂದಿಯ ಮೂಲ ಉದ್ದೇಶ. ಅದೆಷ್ಟೋ ಅಪರಾಧ ಕೃತ್ಯಗಳನ್ನು ಪೊಲೀಸರು ತಡೆದಿದ್ದಾರೆ. ಅದೆಷ್ಟೋ ಅನಾಥ ಜೀವಗಳನ್ನು ಹೊಯ್ಸಳ ಸಿಬ್ಬಂದಿ ಕಾಪಾಡಿದ್ದಾರೆ. ಆದರೆ ಚಿಲ್ಲರೆ ಅಂಗಡಿಯಿಂದ ಹಣ ಪಡೆದು ವಾಪಸು ನೀಡಿದ ಪ್ರಕರಣ ಇದೀಗ ಪೊಲೀಸ್ ಇಲಾಖೆಗೆ ಮುಜುಗರ ತಂದಿಟ್ಟಿದೆ.
Recommended Video
ಗೊತ್ತಿದ್ದು ತಪ್ಪು ಮಾಡುವ ಸಿಬ್ಬಂದಿ
ಹೊಯ್ಸಳ ಸಿಬ್ಬಂದಿ ಚಿಲ್ಲರೆ ಅಂಗಡಿಗಳಲ್ಲಿ, ತಳ್ಳುವ ಗಾಡಿಗಳಲ್ಲಿ 10, 20 ರೂ. ರೋಲ್ ಕಾಲ್ ಮಾಡುವುದು ಸಾಮಾನ್ಯ. ಇದರಿಂದ ಇಲಾಖೆ ಮರ್ಯಾದೆ ಹೋಗುತ್ತದೆ ಎಂದು ಗೊತ್ತಿದ್ದರೂ ಸ್ವಯಂ ಪ್ರೇರಿತವಾಗಿ ಹೊಯ್ಸಳ ಸಿಬ್ಬಂದಿ ವಸೂಲಿ ನಿಲ್ಲಿಸಿಲ್ಲ. ಹೊಯ್ಸಳ ಸಿಬ್ಬಂದಿಯ ವಸೂಲಿಗೆ ಬ್ರೇಕ್ ಹಾಕಲೆಂದು ಹಿಂದಿನ ಪೊಲೀಸ್ ಆಯುಕ್ತ ರಾಗಿದ್ದ ಎನ್. ಎಸ್. ಮೇಘರಿಕ್ ಹೊಯ್ಸಳ ವಾಹನಗಳಿಗೆ ಜಿಪಿಆರ್ಎಸ್ ಫಿಟ್ ಮಾಡಿಸಿದ್ದರು. ಪೊಲೀಸ್ ನಿಯಂತ್ರಣ ಕೊಠಡಿಯಿಂದ ಕರೆ ಬರುವ ವರೆಗೂ ಹೊಯ್ಸಳ ವಾಹನ ನಿಂತಿರುವ ಜಾಗದಿಂದ ಕದಲಬಾರದು ಎಂದು ಆದೇಶ ಹೊರಡಿಸಿದ್ದರು. ಇದಕ್ಕಾಗಿಯೇ ಹೊಸ ಜಿಪಿಆರ್ಎಸ್ ಆಧಾರಿತ ಹೊಸ ಹೊಯ್ಸಳ ವಾಹನ ಕೊಡಿಸಿದ್ದರು.
ಆದರೆ, ಹೊಯ್ಸಳ ವಾಹನಗಳ ರೌಂಡ್ಸ್ ರದ್ದು ಮಾಡಿದ್ದ ಮೇಘರಿಕ್ ವಿರುದ್ದ ಹೊಯ್ಸಳ ರೌಂಡ್ಸ್ ಸಿಬ್ಬಂದಿ ಮುನಿಸಿಕೊಂಡಿದ್ದರು. ಬಹುತೇಕ ಸಿಬ್ಬಂದಿ ಹೊಯ್ಸಳ ವಾಹನ ಹತ್ತುತ್ತಿರಲಿಲ್ಲ. ಅನಿವಾರ್ಯವಾಗಿ ಪೊಲೀಸರ ಮನವಿಗೆ ಸ್ಪಂದಿಸಿ ಮತ್ತೆ ಹೊಯ್ಸಳ ವಾಹನ ರೌಂಡ್ಸ್ ಮಾಡಲು ಅವಕಾಶ ನೀಡಲಾಗಿತ್ತು. ಹೀಗಾಗಿ ಹೈಟೆಕ್ ವಾಹನದಲ್ಲಿ ಚಲಿಸುವ ಪೊಲೀಸ್ ಸಿಬ್ಬಂದಿ ಕೇವಲ ಹತ್ತು ರೂಪಾಯಿ ಪಡೆಯುವುದು, 20 ರೂ. ಪಡೆಯುವುದು ಮುಜುಗರವೇ! ಆದರೂ ಬೀದಿ ಬದಿ ರೋಲ್ ಕಾಲ್ ಗೆ ಬ್ರೇಕ್ ಬಿದ್ದಿಲ್ಲ. ಇದು ವಿಪರ್ಯಾಸ ಅಲ್ಲವೇ?