ಬೀದಿನಾಯಿಗಳೆಂದರೆ ಬಿಬಿಎಂಪಿಗೆ ಅಷ್ಟೇಕೆ ಅಚ್ಚುಮೆಚ್ಚು?
ಬೆಂಗಳೂರು, ಸೆಪ್ಟೆಂಬರ್ 1: ಬೀದಿನಾಯಿಗಳೆಂದರೆ ಬಿಬಿಎಂಪಿ ಎಲ್ಲಿಲ್ಲದ ಪ್ರೀತಿ, ಬಿಬಿಎಂಪಿ ಬೀದಿನಾಯಿ ಹೆಸರಿನಲ್ಲಿ ಪ್ರತಿವರ್ಷ ಅಧಿಕಾರಿಗಳು ಹಾಕುತ್ತಿರುವ ಲೆಕ್ಕ ಕೋಟಿಯನ್ನು ಮೀರುತ್ತಿದೆ.
ಕಳೆದ ಎಂಟು ವರ್ಷಗಳಲ್ಲಿ ಬೀದಿನಾಯಿಗಳ ನಿಯಂತ್ರಣಕ್ಕೆಂದೇ ಬಿಬಿಎಂಪಿ ಸರಿಸುಮಾರು 25ಕೋಟಿ ರೂ,ಗಳನ್ನು ವೆಚ್ಚ ಮಾಡಿದೆ.ವಾರ್ಷಿಕ ಸರಾಸರಿ ಮೂರು ಕೋಟಿ ರೂಗಳು ಬೀದಿ ನಾಯಿಗಳ ಹೆಸರಿನಲ್ಲಿ ಖರ್ಚಾಗುತ್ತಿದೆ.ಆದರೆ ಇದೇ ಅವಧಿಯಲ್ಲಿ ಬೀದಿನಾಯಿಗಳು ಬೆಂಗಳೂರಿಗರಿಗೆ ಕಚ್ಚಿದ ಪ್ರಮಾಣವನ್ನು ಲೆಕ್ಕ ಹಾಕಿದರೆ ಗಾಬರಿಯಾಗುತ್ತದೆ.
2011ರಿಂದ 2018ರ ಎಂಟು ವರ್ಷದ ಅವಧರಿಯಲ್ಲಿ 1 ಲಕ್ಷ 93ಸಾವಿರ ಜನರಿಗೆ ಬೀದಿನಾಯಿಗಳು ಕಚ್ಚಿದೆ ಎಂದು ಪಾಲಿಕೆಯ ಅಂಕಿ-ಸಂಖ್ಯೆಗಳು ಹೇಳುತ್ತಿವೆ.ಇದೇ ವೇಳೆ ಬೆಂಗಳೂರು ನಗರದಲ್ಲಿ 2ಲಕ್ಷ 90ಸಾವಿರ ನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿದ್ದೇವೆ ಎಂದು ಪಾಲಿಕೆ ಅಧಿಕಾರಿಗಳು ಹೇಳುತ್ತಿದ್ದಾರೆ.
ಅಷ್ಟು ದೊಡ್ಡ ಸಂಖ್ಯೆಯ ನಾಯಿಗಳಿಗೆ ಸಂತಾನ ಹರಣ ಮಾಡಿದ್ದರೆ ಬೆಂಗಳೂರಿನಲ್ಲಿ 6 ಲಕ್ಷಕ್ಕೂ ಅಧಿಕ ಬೀದಿನಾಯಿಗಳಿರಲು ಹೇಗೆ ಸಾಧ್ಯ ಎಂದು ಎಂಬ ಪ್ರಶ್ನೆ ನಾಗರಿಕರನ್ನು ಕಾಡುತ್ತಿದೆ.

ಬಾಲಕನಿಗೆ ನಾಯಿ ಕಚ್ಚಿದ ಮೇಲೆ ಎಚ್ಚೆತ್ತುಕೊಂಡ ಬಿಬಿಎಂಪಿ
ಎಚ್ಎಎಲ್ ಸಮೀಪ ವಿಭೂತಿಪುರದಲ್ಲಿ ಬಾಲಕ ಪ್ರವೀಣ್ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ ಬಳಿಕ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಅಧಿಕಾರಿಗಳು ನಾಯಿಗಳನ್ನು ಹಿಡಿಯುವ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಬಾಲಕನಿಗೆ ಕಚ್ಚಿದ್ದ 11ನಾಯಿಗಳನ್ನು ಹಿಡಿದು ಚಿಕಿತ್ಸಾ ಕೇಂದ್ರದ ಕೊಠಡಿಯಲ್ಲಿ ಹಾಕಲಾಗಿದೆ. ನಾಯಿ ಹಿಡಿಯುವ ಕಾರ್ಯಾಚರಣೆ ಕೇವಲ ಘಟನೆ ಸ್ಥಳಕ್ಕೆ ಮಾತ್ರ ಸೀಮಿತವಾಗಿರುವುದು ಟೀಕೆಗಳಿಗೆ ಕಾರಣವಾಗಿದೆ.

ಹತ್ತು ವರ್ಷದಲ್ಲಿ 1.91ಲಕ್ಷ ಮಂದಿಗೆ ನಾಯಿ ಕಡಿತ
ಬೆಂಗಳೂರಲ್ಲಿ 2008ರಿಂದ 2018ರವರೆಗೆ 1.91 ಲಕ್ಷ ಮಂದಿಗೆ ನಾಯಿ ಕಚ್ಚಿದೆ. 2001ರಿಂದ 61ಮಂದಿಯನ್ನು ನಾಯಿಗಳೇ ಕಚ್ಚಿ ಸಾಯಿಸಿರು ಅಂಶ ಬೆಳಕಿಗೆ ಬಂದಿದೆ. ಇದರಲ್ಲಿ ಮಕ್ಕಳ ಸಂಖ್ಯೆಯೇ ಹೆಚ್ಚು, ಹೈಕೋರ್ಟ್ ಸೂಚನೆಯಂತೆ ನಾಯಿ ಕಚ್ಚಿದಾಗ ಕ್ರಮಗಳ ಕುರಿತು ಮಾರ್ಗಸೂಚಿ ತಯಾರಾಗಿದೆ.

ಆರು ವರ್ಷದಿಂದ ನಡೆದಿಲ್ಲ ನಾಯಿ ಗಣತಿ
ನಗರದಲ್ಲಿ 2012ರ ಜಾನುವಾರು ಗಣತಿಯಂತೆ 1,85,454 ಬೀದಿ ನಾಯಿಗಳು ಮತ್ತು 1, 05,055 ಸಾಕುನಾಯಿಗಳಿವೆ. ಕಳೆದ ಆರು ವರ್ಷಗಳಿಂದ ಜಾನುವಾರು ಗಣತಿಯನ್ನೇ ನಡೆಸಿಲ್ಲ ಹೀಗಾಗಿ ಬೀದಿನಾಯಿಗಳ ನಿಖರ ಮಾಹಿತಿ ಪಾಲಿಕೆಗಿಲ್ಲ.

ಪಶುಪಾಲನೆ ಸಹಾಯಕ ನಿರ್ದೇಶಕ, ಗುತ್ತಿಗೆದಾರ ಜೈಲಿಗೆ
ಬಾಲಕ ಪ್ರವೀಣ್ ಗೆ ನಾಯಿ ಕಚ್ಚಿದ ಪ್ರಕರಣ ಸಂಬಂಧ ಬಿಬಿಎಂಪಿ ಅಧಿಕಾರಿಗಳು ಸೇರಿ ಮೂವರನ್ನು ಎಚ್ಎಎಲ್ ಪೊಲೀಸರು ಬಂಧಿಸಿದ್ದಾರೆ. ಬೀದಿ ನಾಯಿಗಳ ನಿಯಂತ್ರಣದಲ್ಲಿ ವಿಫಲವಾದ ಆರೋಪದಲ್ಲಿ ಬಿಬಿಎಂಪಿ ಪಶುಪಾಲನಾ ವಿಭಾಗದ ಮಹದೇವಪುರ ವಲಯದ ಸಹಾಯಕ ನಿರ್ದೇಶಕ ಡಾ. ಶ್ರೀರಾಮ್, ಹಿರಿಯ ಪಶುವೈದ್ಯಕೀಯ ಪರೀಕ್ಷಕ ಅರುಣ್ ಮುತಾಲಿಕ್ ಹಾಗೂ ನಾಯಿ ಹಿಡಿಯಲು ಬಿಬಿಎಂಪಿಯಿಂದ ಗುತ್ತಿಗೆ ಪಡೆದಿದ್ದ ರವಿಶಂಕರ್ ಅವರನ್ನು ಬಂಧಿಸಲಾಗಿದೆ.












Click it and Unblock the Notifications