ಯೋಗಿ ಆದಿತ್ಯನಾಥ್ ಖಾವಿ ತೊಡಲು ಯೋಗ್ಯರಲ್ಲ: ಸಿದ್ದರಾಮಯ್ಯ ಕಿಡಿ
ಬೆಂಗಳೂರು, ಅಕ್ಟೋಬರ್ 05: ಯೋಗಿ ಆದಿತ್ಯನಾಥ್ ಅವರು ಖಾವಿ ತೊಡಲು ಯೋಗ್ಯರಲ್ಲ ಎಂದು ವಿರೋಧ ಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಉತ್ತರ ಪ್ರದೇಶ ಅತ್ಯಾಚಾರ ಪ್ರಕರಣ ಖಂಡಿಸಿ ಕೆಪಿಸಿಸಿ ವತಿಯಿಂದ ಬೆಂಗಳೂರಿನಲ್ಲಿಂದು ಪ್ರತಿಭಟನೆ ನಡೆಸಲಾಯಿತು.
ಎಲ್ಲಿ ಮಹಿಳೆಯರಿಗೆ ಮರ್ಯಾದೆ ಇಲ್ಲ, ಎಲ್ಲಿ ಅನಾಗರಿಕ ಸರ್ಕಾರ ಇರುತ್ತದೋ ಅಲ್ಲಿ ಮಾತ್ರ ಇಂಥ ಘಟನೆ ನಡೆಯಲು ಸಾಧ್ಯ. ಯೋಗಿ ಆದಿತ್ಯನಾಥ ಕಾವಿ ಬಟ್ಟೆ ಹಾಕಿಕೊಳ್ಳಲು ನಾಲಾಯಕ್.
ಅವರ ವಿರುದ್ಧ 27 ಪ್ರಕರಣಗಳಿದ್ದವು. ಅವರ ವಿರುದ್ಧದ ಎಲ್ಲ ಪ್ರಕರಣಗಳನ್ನು ವಾಪಸ್ ಪಡೆದಿದ್ದಾರೆ. ಅವರು ಮುಖ್ಯಮಂತ್ರಿ ಆಗಲೂ ನಾಲಾಯಕ್ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉತ್ತರ ಪ್ರದೇಶದ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣ ಹಾಗೂ ಕಾಂಗ್ರೆಸ್ ನಾಯಕರನ್ನು ಸರ್ಕಾರ ನಡೆಸಿಕೊಂಡ ರೀತಿಯನ್ನು ಎಲ್ಲ ನಾಗರಿಕರು ಖಂಡಿಸಬೇಕು. ಇದೊಂದು ಅನಾಗರಿಕ ಸರ್ಕಾರದ ಕೆಲಸ ಎಂದರು.

ಯೋಗಿ ಖಾವಿ ತೊಟ್ಟರೆ ಆ ಬಟ್ಟೆಗೆ ಕಳಂಕ
ಉತ್ತರ ಪ್ರದೇಶದಲ್ಲಿ ಹೆಣ್ಣೊಬ್ಬಳನ್ನು ಅತ್ಯಾಚಾರ ಮಾಡಿ, ಕೊಲೆ ಮಾಡಲಾಗಿದೆ. ಆಕೆಯ ಕುಟುಂಬದವರಿಗೂ ಶವವನ್ನು ನೋಡಲು ಅವಕಾಶ ನೀಡದೆ ಮಧ್ಯರಾತ್ರಿ ಪೊಲೀಸರೇ ಶವಸಂಸ್ಕಾರ ಮಾಡಿದ್ದಾರೆ. ಸರ್ಕಾರ ಅತ್ಯಾಚಾರಿಗೆ ಶಿಕ್ಷೆ ಕೊಡಿಸುವುದು ಬಿಟ್ಟು, ನೆರವಿಗೆ ನಿಂತಿದೆ ಅಂದ್ರೆ ಯೋಗಿ ಆದಿತ್ಯನಾಥ್ರಂಥವರು ಕಾವಿ ಬಟ್ಟೆಗೆ ಕಳಂಕವಲ್ಲದೆ ಇನ್ನೇನು?

ಯೋಗಿ ಮೇಲೆ ಕ್ರಿಮಿನಲ್ ಮೊಕದ್ದಮೆಗಳಿದ್ದವು
ಯೋಗಿ ಆದಿತ್ಯನಾಥ್ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಸೇರಿದಂತೆ 27 ಪ್ರಕರಣಗಳು ಇದ್ದವು. ಮುಖ್ಯಮಂತ್ರಿಯಾದ ಮೇಲೆ ಆ ಎಲ್ಲಾ ಪ್ರಕರಣಗಳನ್ನು ವಾಪಾಸು ಪಡೆಯುವಂತೆ ಮಾಡಿ, ಸಾತ್ವಿಕನಂತೆ ನಾಟಕ ಮಾಡುತ್ತಿದ್ದರೆ. ಇಂಥವರ ರಾಜ್ಯದಲ್ಲಿ ಜನಸಾಮಾನ್ಯರಿಗೆ ರಕ್ಷಣೆ ಸಿಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಚುನಾವಣೆ ಹತ್ತಿರಬಂದಾಗ ವಿರೋಧಿಗಳನ್ನು ಹತ್ತಿಕ್ಕುವ ಪ್ರಯತ್ನ
ಐಟಿ, ಇಡಿ, ಸಿಬಿಐ ಇಲಾಖೆಗಳು ತಮ್ಮ ಕರ್ತವ್ಯ ತಾವು ಮಾಡುವ ಬಗ್ಗೆ ನಮ್ಮ ತಕರಾರಿಲ್ಲ, ಆದರೆ ಚುನಾವಣೆಗಳು ಹತ್ತಿರ ಬಂದಾಗ ವಿರೋಧಿಗಳನ್ನು ಹತ್ತಿಕ್ಕಲು ಐಟಿ, ಇಡಿ, ಸಿಬಿಐ ಗಳನ್ನು ದುರ್ಬಳಕೆ ಮಾಡಿಕೊಂಡು ದಾಳಿ ಮಾಡಿಸುವುದಕ್ಕಷ್ಟೇ ನಮ್ಮ ವಿರೋಧ. ಇಂತಹ ದಾಳಿ ಮೂಲಕ ನಮ್ಮ ಬಾಯಿ ಮುಚ್ಚಿಸಬಹುದು ಎಂದುಕೊಂಡಿದ್ದರೆ ಅದು ಬಿಜೆಪಿಯವರ ಭ್ರಮೆ.
Recommended Video

ದೇಶದಲ್ಲಿ ಮಹಿಳೆಯರಿಗೆ, ಮಕ್ಕಳಿಗೆ ರಕ್ಷಣೆ ಇಲ್ಲ
ದೇಶದಲ್ಲಿ ಮಹಿಳೆಯರಿಗೆ, ಮಕ್ಕಳಿಗೆ, ದಲಿತರಿಗೆ ರಕ್ಷಣೆ ಇಲ್ಲ. ನಿತ್ಯ ಸಾವಿರಾರು ಕೊಲೆ, ಅತ್ಯಾಚಾರ, ಶೋಷಣೆಯ ಪ್ರಕರಣಗಳು ದಾಖಲಾಗ್ತಿವೆ. ಇವರಲ್ಲಿ ಎಷ್ಟು ಜನರಿಗೆ ನ್ಯಾಯ ಸಿಕ್ಕಿದೆ? ನಾನು ಚೌಕಿದಾರ್ ಅಂತ ಹೇಳಿ ಕುಣಿದಾಡ್ತಿದ್ದವರೆಲ್ಲ ಈಗ ಎಲ್ಲಿದ್ದಾರೆ? ಇದೇನಾ ಮೋದಿಯವರ ಅವರ ಚೌಕಿದಾರಿಕೆ ಎಂದು ಪ್ರಶ್ನಿಸಿದರು.












Click it and Unblock the Notifications