ಕೆಎಸ್ಆರ್ಟಿಸಿಯ ವಿವಿಧ ಮಾದರಿ ಬಸ್ಗಳಿಗೆ ಯಡಿಯೂರಪ್ಪ ಚಾಲನೆ
ಬೆಂಗಳೂರು, ಜನವರಿ 7: ಕೆಎಸ್ಆರ್ಟಿಸಿಯ ವಿವಿಧ ಮಾದರಿಯ ಬಸ್ಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ವಿಧಾನಸೌಧದೆದುರು ಚಾಲನೆ ನೀಡಿದರು.
ಅಂಬಾರಿ ಡ್ರೀಮ್ ಕ್ಲಾಸ್- 5, ಐರಾವತ ಕ್ಲಾಸ್ - 3, ಐರಾವತ - 4, ನಾನ್ ಎಸಿ ಸ್ಲೀಪರ್ - 01, ರಾಜಹಂಸ - 2, ಕರ್ನಾಟಕ ಸಾರಿಗೆ - 5, ಒಟ್ಟು 20 ಬಸ್ಸುಗಳಿಗೆ ಸಿಎಂ ಚಾಲನೆ ನೀಡಿದರು.
ಇದೇ ಮೊದಲ ಬಾರಿಗೆ ಅಂಬಾರಿ ಡ್ರೀಮ್ಸ್ ಕ್ಲಾಸ್ ಬಸ್ಸುಗಳಿಗೂ ಚಾಲನೆ ದೊರೆತಿದೆ. ಕಾರ್ಯಕ್ರಮದಲ್ಲಿ ಲಕ್ಷ್ಮಣ್ ಸವದಿ ಗೈರಾಗಿದ್ದರು. ತನ್ನ ಊರಿನ ಬೆಂಗಳೂರು - ಶಿಕಾರಿಪುರ ಬಸ್ಸಿನಲ್ಲಿ ಸಿಎಂ ಪ್ರಯಾಣ ಬೆಳೆಸಿದರು.
ಬಳಿಕ ಯಡಿಯೂರಪ್ಪ ಮಾತನಾಡಿ, ನರೇಂದ್ರ ಮೋದಿ ರಾಜ್ಯಕ್ಕೆ ಬಂದು ಹೋದ ಕೂಡಲೇ ಹಣ ಬಿಡುಗಡೆ, 1869 ಕೋಟಿ ರೂ. ಹಣ ಬಿಡುಗಡೆ ಮಾಡಿದ್ದಾರೆ.
ಕೆಎಸ್ಆರ್ಟಿಸಿ ನೌಕರರಿಗೆ ಸಿಹಿಸುದ್ದಿ ನೀಡಿದ ಹೈಕೋರ್ಟ್
ಈ ಮೊದಲು 1200 ಕೋಟಿ ರೂ. ಹಣ ಬಿಡುಗಡೆ ಮಾಡಿದ್ದರು, ರಾಜ್ಯದಲ್ಲಿ ಉಂಟಾದ ಪ್ರವಾಹ ಪರಿಹಾರ ಕಾರ್ಯಗಳಿಗೆ ಹಣ ಬಿಡುಗಡೆ ಮಾಡಿದ್ದಾರೆ. ಅದಕ್ಕಾಗಿ ಪ್ರಧಾನಿಯವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ, ಈಗ ಬಿಡುಗಡೆ ಆಗಿರುವ ಹಣ ಸಾಕಾಗುವುದಿಲ್ಲ.
ಈಗ ಎರಡು ಕಂತುಗಳಲ್ಲಿ ಹಣ ಬಿಡುಗಡೆ ಮಾಡಿದ್ದಾರೆ, ಮತ್ತೆ ಹಣ ಬಿಡುಗಡೆ ಮಾಡುವ ವಿಶ್ವಾಸ ಇದೆ, ಈಗಾಗಲೇ ಬಜೆಟ್ ಪೂರ್ವ ಭಾವಿ ಸಭೆ ಆರಂಭಿಸಲಾಗಿದೆ.
ನಿನ್ನೆ ವಿವಿಧ ತೆರಿಗೆ ಇಲಾಖೆಯ ಜೊತೆ ಸಭೆ ನಡೆಸಿದ್ದೇನೆ. ಮುಂದೆ ಉಳಿದ ಇಲಾಖೆಗಳ ಜೊತೆ ಸಭೆ ಮಾಡುತ್ತೇನೆ, ಇವಾಗ ಇಲಾಖೆಗಳಲ್ಲಿ ಏನೇನು ಆಗಿದೆ, ಮುಂದಿನ ಬಜೆಟ್ ನಲ್ಲಿ ಏನು ಮಾಡಬೇಕು ಎಂದು ಚರ್ಚೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಈ ಬಾರಿ ಅವರ ಸಲಹೆ ಪಡೆದು ಒಳ್ಳೆಯ ಬಜೆಟ್ ಮಂಡನೆ ಮಾಡುತ್ತೇನೆ. ರೈತ ಪರ ಬಜೆಟ್ ಮಂಡನೆ ಬಗ್ಗೆ ಯೋಚನೆ ಮಾಡ್ತಿದ್ದೇನೆ ಎಂದು ಮಾಹಿತಿ ನೀಡಿದರು.