ಎಎಪಿ ಫಲಶ್ರುತಿ: ಬಿಎಂಟಿಸಿಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ
ಬೆಂಗಳೂರು, ಮಾರ್ಚ್ 5: ದೆಹಲಿ ಮಾದರಿಯಲ್ಲಿ ಮಹಿಳೆಯರಿಗೆ ರಾಜ್ಯದಾದ್ಯಂತ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಸಾರಿಗೆಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಆಮ್ ಆದ್ಮಿ ಪಕ್ಷ ಮನವಿ ಸಲ್ಲಿಸಿತ್ತು. ಎಎಪಿ ಮನವಿಯನ್ನು ತಕ್ಕಮಟ್ಟಿಗೆ ಬಿಎಸ್ವೈ ಪೂರೈಸಿದ್ದಾರೆ.
'ವನಿತಾ ಸಂಗಾತಿ' ಯೋಜನೆಯಡಿ ಗಾರ್ಮೆಂಟ್ ಉದ್ಯಮಗಳಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಕಾರ್ಮಿಕರಿಗೆ ಉಚಿತ ಬಿಎಂಟಿಸಿ ಮಾಸಿಕ ಬಸ್ ಪಾಸ್ ವಿತರಣೆಗೆ 25 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದಾರೆ.
ಬಿಎಂಟಿಸಿ ಸಾರಿಗೆಗಳಲ್ಲಿ ಉಚಿತ ಪ್ರಯಾಣ ಕಲ್ಪಿಸಲು ಮನವಿ
''ಪ್ರಸ್ತುತದಲ್ಲಿ ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ಬಿಜೆಪಿ ಅಧಿಕಾರದ ಗದ್ದುಗೆಗೆ ಏರಿದ್ದು ಜನೋಪಯೋಗಿ ಕಾರ್ಯಕ್ರಮಗಳನ್ನು ತರಲು ಮುಂದಾಗಬೇಕು . ಕೇಂದ್ರ ಮತ್ತು ರಾಜ್ಯಗಳೆರಡರಲ್ಲೂ ಒಂದೇ ಪಕ್ಷದ ಸರ್ಕಾರ ಅಸ್ತಿತ್ವದಲ್ಲಿದ್ದರೆ ಹೆಚ್ಚು ಉಪಯುಕ್ತ ವೆಂಬ ಭಾವನೆ ಜನತೆಯಲ್ಲಿದೆ .ಇಂತಹ ಸುಸಂದರ್ಭವನ್ನು ಬಳಸಿಕೊಂಡು ಜನಪರ ಯೋಜನೆಗಳನ್ನು ಜಾರಿಗೊಳಿಸಬೇಕೆಂದು ನಾವು ಒತ್ತಾಯಿಸುತ್ತಿದ್ದೇವೆ'' ಎಂದು ಎಎಪಿ ಆಗ್ರಹಿಸಿತ್ತು.
ಇದಲ್ಲದೆ, ಮಾರ್ಚ್ 8ರಂದು ವಿಶ್ವ ಮಹಿಳಾ ದಿನಾಚರಣೆ ಇರುವುದರಿಂದ ಕರ್ನಾಟಕದ ಮಹಿಳೆಯರಿಗಾಗಿ ಈ ಒಂದು ವಿಶೇಷ ಉಚಿತ ಪ್ರಯಾಣ ಯೋಜನೆ ಯನ್ನು ಸರ್ಕಾರ ಘೋಷಿಸಬೇಕೆಂದು ಆಮ್ ಆದ್ಮಿ ಪಕ್ಷವು ಒತ್ತಾಯಪೂರ್ವಕವಾಗಿ ಮನವಿ ಮಾಡಿಕೊಂಡಿತ್ತು.
ದೆಹಲಿ ಆಮ್ ಆದ್ಮಿ ಪಕ್ಷದ ಮಾದರಿಯಲ್ಲಿ ಕರ್ನಾಟಕ ರಾಜ್ಯದಲ್ಲೂ ಸಹ ಮಹಿಳೆಯರಿಗೆ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಸಾರಿಗೆಗಳಲ್ಲಿ ಉಚಿತ ಪ್ರಯಾಣವನ್ನು ಕಲ್ಪಿಸಿಕೊಡಬೇಕು.
ಉಚಿತ ಬಸ್ ಪಾಸ್: ಬಿ.ಎಸ್.ವೈ ಬಜೆಟ್ ನಲ್ಲಿ ಹೆಣ್ಮಕ್ಕಳಿಗೆ ಸಿಹಿ ಸಿಕ್ತು ಗುರು!
ಮಹಿಳೆಯರಿಗೆ ಉಚಿತ ಪ್ರಯಾಣ ಒದಗಿಸುವುದು ಕಷ್ಟವಾದ ಕೆಲಸವೇನೂ ಅಲ್ಲ. ಈಗಾಗಲೇ ದೆಹಲಿಯಲ್ಲಿ ಮಹಿಳೆಯರಿಗೆ ಮತ್ತು ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಬಸ್ ಉಚಿತ ಪ್ರಯಾಣವನ್ನು ಒದಗಿಸಲಾಗಿದೆ .ಇದಕ್ಕಾಗಿ ದೆಹಲಿ ಸರ್ಕಾರ ಕೇವಲ 150 ಕೋಟಿ ರೂಗಳ ವೆಚ್ಚವನ್ನು ಮಾಡುತ್ತಿದೆ.ಈ ಮೊತ್ತವು ರಾಜ್ಯ ಸರ್ಕಾರಕ್ಕೆ ಭರಿಸಲಾರದಷ್ಟು ಹೊರೆಯೇನೂ ಆಗುವುದಿಲ್ಲ ಎಂಬುದು ಆಮ್ ಆದ್ಮಿ ಪಕ್ಷ ಅಭಿಪ್ರಾಯಪಟ್ಟಿತ್ತು.