ಯಡಿಯೂರಪ್ಪ ಧರಣಿ ಪ್ರಚಾರ ತಂತ್ರ ಮಾತ್ರ : ಸಿಎಂ
ಬೆಂಗಳೂರು, ನ.6 : ಹಾಲಿ ಸಿಎಂ ಸಿದ್ದರಾಮಯ್ಯ ಮತ್ತು ಮಾಜಿ ಸಿಎಂ ಯಡಿಯೂರಪ್ಪ ನಡುವಿನ ವಾಗ್ಯುದ್ಧ ಪುನಃ ಆರಂಭವಾಗಿದೆ. ಯಡಿಯೂರಪ್ಪ ಧರಣಿಯನ್ನು ಟೀಕಿಸಿರುವ ಸಿಎಂ ಸಿದ್ದರಾಮುಯ್ಯ ಧರಣಿ ನಡೆಸುವ ನೈತಿಕತೆಯನ್ನು ಯಡಿಯೂರಪ್ಪ ಕಳೆದುಕೊಂಡಿದ್ದಾರೆ. ಪ್ರಚಾರಕ್ಕಾಗಿ ಧರಣಿ ಮುಂದುವರೆಸಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಮಂಗಳವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಡೆಸುತ್ತಿರುವ ಧರಣಿಯಲ್ಲಿ ಜನರ ಹಿತಾಸಕ್ತಿ ಅಡಗಿಲ್ಲ. ಕೇವಲ ಪ್ರಚಾರಕ್ಕಾಗಿ ಅವರು ಧರಣಿ ನಡೆಸುತ್ತಿದ್ದಾರೆ. ಸಾರ್ವಜನಿಕ ಹಿತಾಸಕ್ತಿಗಿಂತ ರಾಜಕೀಯ ಕಾರಣವೇ ಧರಣಿಯಲ್ಲಿ ಅಡಗಿದೆ ಎಂದು ಕುಟುಕಿದರು.

ಎಲ್ಲ ವರ್ಗದ ಬಡವರಿಗೂ ಶಾದಿಭಾಗ್ಯ ಯೋಜನೆ ವಿಸ್ತರಣೆ ಹಾಗೂ ಎಪಿಎಲ್ ಕಾರ್ಡ್ದಾರರಿಗೆ ಪಡಿತರ ನೀಡಿಕೆಗೆ ಒತ್ತಾಯಿಸಿ ಧರಣಿ ನಡೆಸುತ್ತಿರುವ ಯಡಿಯೂರಪ್ಪ ಅವರಿಗೆ ಈಗ ಪ್ರಜಾಪ್ರಭುತ್ವ, ಧರಣಿ ನೆನಪಾಗಿದೆ. ಅಕ್ರಮ ಗಣಿಗಾರಿಕೆ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ಐದು ದಿನಗಳ ಕಾಲ ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ನಡೆಸಿದಾಗ ಸೌಜನ್ಯಕ್ಕೂ ನಮ್ಮಬಳಿ ಮಾತನಾಡಿರಲಿಲ್ಲ ಎಂದರು.
ನಾವು ವಿಧಾನಸಭೆಯಲ್ಲಿ ಧರಣಿ ನಡೆಸುತ್ತಿದ್ದರೆ, ಕಾಂಗ್ರೆಸ್ಸಿಗರು ಸದನದಲ್ಲಿ ಬಿರಿಯಾನಿ ತಿಂದು ಅಪವಿತ್ರಗೊಳಿಸಿದ್ದಾರೆ ಎಂದು ಯಡಿಯೂರಪ್ಪ ಟೀಕಿಸಿದ್ದರು. ಸದ್ಯ ಅವರು ಧರಣಿ ನಡೆಸುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ. ಶಾದಿಭಾಗ್ಯ ಯೋಜನೆಯ ಸೌಲಭ್ಯ ಇತರೆ ಅಲ್ಪಸಂಖ್ಯಾತ ಸಮುದಾಯಗಳಿಗೂ ದೊರೆಯುವಂತೆ ಆದೇಶ ನೀಡಲಾಗುವುದು ಎಂದು ತಿಳಿಸಿದರು.
ನ.11ರಂದು ಧರಣಿ : ಶಾದಿಭಾಗ್ಯ ಯೋಜನೆ ವಿಸ್ತರಣೆ ಮತ್ತು ಎಪಿಎಲ್ ಕಾರ್ಡ್ದಾರರಿಗೆ ಪಡಿತರ ವಿತರಣೆ ಮುಂದುವರಿಕೆಗೆ ಆಗ್ರಹಿಸಿ ಇದೇ ತಿಂಗಳ 11 ರಂದು ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಕೆಜೆಪಿ ವತಿಯಿಂದ ಒಂದು ದಿನದ ಧರಣಿ ನಡೆಸಲು ನಿರ್ಧರಿಸಲಾಗಿದೆ. ಮಂಗಳವಾರ ಪಕ್ಷದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಗರದ ಧರಣಿ ಸ್ಥಳದಲ್ಲೇ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಮುತಾಲಿಕ್ ಧರಣಿ : ಎಲ್ಲ ಧರ್ಮದವರಿಗೂ ಶಾದಿಭಾಗ್ಯ ಯೋಜನೆ ವಿಸ್ತರಿಸಬೇಕೆಂದು ಒತ್ತಾಯಿಸಿ ಬಿ.ಎಸ್.ಯಡಿಯೂರಪ್ಪ ನಡೆಸುತ್ತಿರುವ ಧರಣಿಯನ್ನು ಬೆಂಬಲಿಸಿ, ಪ್ರಮೋದ್ ಮುತಾಲಿಕ್ ನೇತೃತ್ವದ ಶ್ರೀರಾಮಸೇನೆ ಹಾಗೂ ಹಿಂದೂ ಜನಜಾಗೃತಿ ಸಮಿತಿ ಸೋಮವಾರ ಹುಬ್ಬಳ್ಳಿ ತಹಶೀಲ್ದಾರ ಕಚೇರಿ ಮುಂದೆ ಧರಣಿ ನಡೆಸಿತು. (ನ.24ರವರೆಗೆ ಧರಣಿ ವಿಸ್ತರಿಸಿದ ಯಡಿಯೂರಪ್ಪ)












Click it and Unblock the Notifications