ಬಿಎಸ್ವೈ ಮನೆಯಲ್ಲಿ ವಾಚ್ ಮ್ಯಾನ್ ಆಗೋಕೆ ರೆಡಿನಾ ಜಮೀರ್ ಭಾಯ್?
Recommended Video
'ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು.. ಆಡಿದ ಮಾತು, ಬಿಟ್ಟ ಬಾಣ ಮತ್ತೆ ಮರಳಿ ಬಾರವು' ಎನ್ನುವ ಮಾತಿದೆ. ಈ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವ ಸತ್ಯವನ್ನು ಅರಿಯದಂತಿರುವ ಚಾಮರಾಜಪೇಟೆ ಕಾಂಗ್ರೆಸ್ ಶಾಸಕ, ಜಮೀರ್ ಅಹಮದ್ ಖಾನ್ ಆಡಿದ 'ಲೂಸ್ ಟಾಕ್' ಈಗ ಚರ್ಚೆಯ ವಿಷಯವಾಗಿದೆ.
ಯಡಿಯೂರಪ್ಪನವರಿಗೆ ನಾನು ಚಾಲೆಂಜ್ ಮಾಡುತ್ತೇನೆ, ಸೋತರೆ ನಾನು ಹೇಳಿದಂತೆ ಅವರು ಮಾಡುತ್ತಾರಾ, ನಾನು ಮಾತ್ರ ನನ್ನ ಮಾತಿಗೆ ಬದ್ದನಾಗಿರುತ್ತೇನೆ ಎಂದು ಜಮೀರ್, ಮಾಧ್ಯಮಗಳ ಮುಂದೆ ಕೆಲವು ದಿನಗಳ ಹಿಂದೆ ಹೇಳಿದ್ದರು.
ಮೈತ್ರಿ ಪಕ್ಷದ ಮುಖಂಡರೇ ಹೇಳುವಂತೆ, ಆರು ಬಾರಿ ಸರಕಾರ ಉರುಳಿಸಲು ಬಿಜೆಪಿಯವರು ಪ್ರಯತ್ನಿಸಿದ್ದರಿಂದ, ಈ ಬಾರಿಯೂ ವಿಫಲರಾಗಬಹುದು ಎನ್ನುವ ಓವರ್ ಕಾನ್ಫಿಡೆನ್ಸ್ ನಿಂದ ಬಹುಷಃ ಜಮೀರ್, ಯಡಿಯೂರಪ್ಪನವರಿಗೆ ಈ ಚಾಲೆಂಜ್ ಮಾಡಿರಬಹುದು.

ಜಮೀರ್ ಮಾಧ್ಯಮದರ ಮುಂದೆ ಸವಾಲು ಹಾಕಿದ್ದು ಏನೆಂದರೆ, ' ಏನೇನು ಬದಲಾವಣೆ ಆಗುವುದಿಲ್ಲ ಬ್ರದರ್.., ಆವತ್ತಿನಿಂದ ಹೇಳಿಕೊಂಡೇ ಬರುತ್ತಿದ್ದಾರೆ. ಬಿಜೆಪಿ ಮುಖಂಡರನ್ನು ಕೇಳಿ, ನನ್ನ ಸವಾಲನ್ನು ಸ್ವೀಕರಿಸುತ್ತಾರಾ ಎಂದು'.
'23ನೇ ತಾರೀಕು ಬೇಡ ಮೇ25ನೇ ತಾರೀಕಿನೊಳಗೆ ಅವರು ಏನಾದರೂ ಸರಕಾರ ರಚನೆ ಮಾಡಿದರೆ, ನಾನು ರಾಜಕೀಯದಿಂದ ನಿವೃತ್ತಿಗೊಳ್ಳುತ್ತೇನೆ. ಅಷ್ಟೇ ಅಲ್ಲ, ಯಡಿಯೂರಪ್ಪ ಏನಾದರೂ ಮುಖ್ಯಮಂತ್ರಿಯಾದರೆ, ಒಂದು ದಿನ ಅವರ ಮನೆಯಲ್ಲಿ ಡ್ರೆಸ್ ಹಾಕೊಂಡು ವಾಚ್ ಮ್ಯಾನ್ ಆಗಿ ಕೆಲಸ ಮಾಡುತ್ತೇನೆ'.
'ನನ್ನ ಈ ಸವಾಲನ್ನು ಯಡಿಯೂರಪ್ಪ ಸ್ವೀಕಾರ ಮಾಡುತ್ತಾರಾ, ಸೋತರೆ ಅವರು ಏನ್ ಮಾಡುತ್ತಾರೆ.. ಅವರು ದೊಡ್ಡವರು, ನಾನು ಈ ಮಾತನ್ನು ಅವರಿಗೆ ಕೇಳೋಕೆ ಆಗುತ್ತಾ.. ನೀವೇ ಕೇಳಿ' ಇದು ಜಮೀರ್ ಮಾಡಿದ್ದ ಸವಾಲು. (ಮೇ 25ರೊಳಗೆ ಬಿಎಸ್ವೈ ಸಿಎಂ ಆಗಲಿಲ್ಲ, ಆದರೆ ಜುಲೈ 25ರೊಳಗೆ ಮುಖ್ಯಮಂತ್ರಿಯಾಗುವ ಎಲ್ಲಾ ಸಾಧ್ಯತೆಯಿದೆ)
ಕೊನೇ ಮಾತು: ನೀವು ಹೇಳಿದಂತೆ ಡ್ರೆಸ್ ಹಾಕೊಂಡು ವಾಚ್ಮ್ಯಾನ್ ಕೆಲಸಕ್ಕೆ ಅವರ ಮನೆಗೆ ನೀವೂ ಹೋಗಲ್ಲಾ.. ಒಂದು ವೇಳೆ ಹೋದರೆ, ಆ ಕೆಲಸ ಮಾಡಿಸೋಕೆ ನಿಮ್ಮನ್ನೂ ಬಿಎಸ್ವೈ ಬಿಡುವುದಿಲ್ಲ ಎನ್ನುವುದು ಸತ್ಯ. ಆದರೆ, ಸಾರ್ವಜನಿಕ ಬದುಕಿನಲ್ಲಿರುವ ನೀವುಗಳೆಲ್ಲಾ, ಆಡುವ ಮಾತಿನಲ್ಲಿ, ನೀಡುವ ಹೇಳಿಕೆಯಲ್ಲಿ ತೂಕವಿದ್ದರೆ ಒಳ್ಳೆಯದು ಎನ್ನುವುದೊಂದು ಸಲಹೆ.












Click it and Unblock the Notifications