ಸಿದ್ದರಾಮಯ್ಯ ವಾಪಸ್ ಬರಲು ಮೂರೇ ದಿನ, ಮುಂದೇನಾಗುತ್ತೆ?
Recommended Video

ಬೆಂಗಳೂರು,ಸೆಪ್ಟೆಂಬರ್ 14: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯುರೋಪ್ ಪ್ರವಾಸಕ್ಕೆ ತೆರಳಿದ ಬಳಿಕ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿಗೆ ತೆರೆ ಎಳೆಯಲು ಇನ್ನೂ ಮೂರೇ ದಿನ ಬಾಕಿ ಇದೆ, ಯಾಕೆಂದರೆ ಸಿದ್ದರಾಮಯ್ಯ ಇನ್ನು ಮೂರೇ ದಿನದಲ್ಲಿ ವಾಪಸಾಗಲಿದ್ದಾರೆ.
ಜೆಡಿಎಸ್ -ಕಾಂಗ್ರೆಸ್ ಮೈತ್ರಿ ಸರ್ಕಾರ ಉಳಿಯುತ್ತಾ?, ಉರುಳುತ್ತಾ? ಎನ್ನುವ ಪ್ರಶ್ನೆಗೆ ಸಿದ್ದರಾಮಯ್ಯ ಯುರೋಪ್ ಪ್ರವಾಸದಿಂದ ಮರಳಿದ ಬಳಿಕ ಉತ್ತರ ಸಿಗಲಿದೆ, ಈ ಮಾತು ಮೂರು ರಾಜಕೀಯ ಪಕ್ಷಗಳ ಮೊಗಸಾಲೆಯಿಂದ ಹೊರ ಬೀಳುತ್ತಿದೆ.
ಸಿದ್ದರಾಮಯ್ಯ ಪ್ರವಾಸದ ಬೆನ್ನಲ್ಲೇ ಸರ್ಕಾರದಲ್ಲಿ ಅಸ್ಥಿರತೆ ಉಂಟಾಗಲಿದೆ ಎಂಬ ಮಾಹಿತಿ ಸಿಎಂ ಕುಮಾರಸ್ವಾಮಿಗೂ ಇತ್ತು ಎಂಬುದೀಗ ಗುಟ್ಟಾಗಿ ಉಳಿದಿಲ್ಲ, ಬೆಳಗಾವಿ ಪಿಎಲ್ ಡಿ ಬ್ಯಾಂಕ್ ಭಿನ್ನಾಭಿಪ್ರಾಯ ನೆನಪಿಟ್ಟುಕೊಂಡು ಬಂಡೆದ್ದಿರುವ ಜಾರಕಿಹೊಳಿ ಸಹೋದರರು, ಚಿಕ್ಕಬಳ್ಳಾಪುರ ಜಿಲ್ಲಾ ಆಂತರಿಕ ರಾಜಕಾರಣದ ವಿಚಾರ ಮುಂದಿಟ್ಟುಕೊಂಡು ಅಸಮಾಧಾನ ಕಾರುತ್ತಿರುವ ಡಾ. ಸುಧಾಕರ್ ನೇತೃತ್ವದ ತಂಡ, ಬಳ್ಳಾರಿಯ ಬಿ. ನಾಗೇಂದ್ರ ಹಾಗೂ ಆನಂದ್ ಸಿಂಗ್ ತಂಡ ಹೀಗೆ ಬಿಡಿಬಿಡಿಯಾಗಿ ಅತೃಪ್ತಿ ಹೊರಹಾಕುತ್ತಿರುವ ಎಲ್ಲಾ ಶಾಸಕರು ಸಿದ್ದರಾಮಯ್ಯ ಬಂದಮೇಲೆ ಮುಂದಿನ ನಡೆ ಪ್ರಕಟಿಸುತ್ತೇವೆ ಎನ್ನುವ ಧಾಟಿಯಲ್ಲಿ ಮಾತನಾಡುತ್ತಿದ್ದಾರೆ.
ಇನ್ನೊಂದು ಕಡೆ ಸರ್ಕಾರ ಪತನದ ಭೀತಿಯಲ್ಲಿರುವ ಕುಮಾರಸ್ವಾಮಿ ಒಳಗೊಂಡ ಜೆಡಿಎಸ್ ಸಚಿವರು, ಶಾಸಕರು ಸಿದ್ದರಾಮಯ್ಯ ಬಂದಮೇಲೆ ಕಾಂಗ್ರೆಸ್ ಒಳಜಗಳ ಕೊನೆಗೊಳ್ಳಲಿದೆ ಎನ್ನುತ್ತಿದ್ದಾರೆ.
ವಿದೇಶದಲ್ಲಿ ಸಿದ್ದರಾಮಯ್ಯ ಹಾಯಾಗಿ ಕಾಲ ಕಳೆಯುತ್ತಿದ್ದಾರೆ, ಲಂಡನ್ ನ ಥೇಮ್ಸ್ ಪಾರ್ಕ್ ನಲ್ಲಿ ಸಿದ್ದರಾಮಯ್ಯ ವಾಯು ವಿಹಾರ ಮಾಡಿದ್ದಾರೆ, ಬಸವಣ್ಣನವರ ಪುತ್ಥಳಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಆದರೆ ಒಂದು ಕಿವಿ ಕರ್ನಾಟಕದಲ್ಲೇ ಇದೆ, ದಿನಕ್ಕೆ ಅರ್ದ ಅಥವಾ ಒಂದು ಗಂಟೆಗಳ ಕಾಲ ದೂರವಾಣಿಯಲ್ಲಿ ಎಲ್ಲಾ ಮಾಹಿತಿ ಪಡೆಯಲಾಗುತ್ತಿದೆ ಎನ್ನಲಾಗುತ್ತಿದೆ.

ಪಿಎಲ್ ಡಿ ಬ್ಯಾಂಕ್ ಮೂಲಕ ಡಿಕೆಶಿಗೆ ಸೆಡ್ಡು
ಸಿದ್ದರಾಮಯ್ಯ ವಿದೇಶಕ್ಕೆ ತೆರಳಿದ ಬೆನ್ನಲ್ಲೇ, ಬೆಳಗಾವಿ ಜಿಲ್ಲೆಯ ಪಿಎಲ್ ಡಿ ಬ್ಯಾಂಕ್ ಚುನಾವಣೆಯಲ್ಲಿ ಜಾರಕಿಹೊಳಿ ಸಹೋದರರು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮೂಲಕ ಕಾಂಗ್ರೆಸ್ ಹಿರಿಯ ನಾಯಕ ಡಿಕೆ ಶಿವಕುಮಾರ್ ವಿರುದ್ಧ ಸೆಡ್ಡುಹೊಡೆದರು, ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಶಾಸಕಿ ಲಕ್ಷ್ಮೀ ಮೂಲಕ ಆಟವಾಡುತ್ತಿದ್ದಾರೆ ಎನ್ನುವುದು ಜಾರಕಿಹೊಳಿ ಸಹೋದರರ ಆರಂಭಿಕ ಆಕ್ಷೇಪವಾಗಿತ್ತು. ಆದರೆ ಕಾಂಗ್ರೆಸ್ ಹೈಕಮಾಂಡ್ ಜಾರಕಿಹೊಳಿ ಸಹೋದರರನ್ನು ಸಮಾಧಾನಪಡಿಸಲು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರನ್ನು ಬೆಳಗಾವಿಗೆ ಕಳಿಸಿ ಸಮಸ್ಯೆ ಇತ್ಯರ್ಥಪಡಿಸುವಂತೆ ಮಾಡಿದ್ದರು.ಆಗಲೂ ಕೂಡ ಜಾರಕಿಹೊಳಿ ಸಹೋದರರು ನಮಗೆಲ್ಲೂ ಮುಖಭಂಗ ಆಗಿಲ್ಲವೆಂದು ಹೇಳುತ್ತಲೇ ಡಿಕೆ ಶಿವಕುಮಾರ್ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.

ಬೆಳಗಾವಿಯಿಂದ ಬಳ್ಳಾರಿಗೆ ಹೋದ ಅಸಮಾಧಾನ
ಒಂದು ಕಡೆ ಬೆಳಗಾವಿ ಪಿಎಲ್ ಡಿ ಬ್ಯಾಂಕ್ ವಿವಾದ ತಣ್ಣಗಾಗುತ್ತಿದೆ ಎಂದು ಭಾವಿಸುತ್ತಲೇ ಎರಡೇ ದಿನಗಳಲ್ಲಿ ಬೆಳಗಾವಿ ಜಿಲ್ಲೆಬಿಟ್ಟು ಬಳ್ಳಾರಿ ಜಿಲ್ಲಾ ರಾಜಕಾರಣದಲ್ಲಿ ಡಿಕೆ ಶಿವಕುಮಾರ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಮತ್ತೊಂದು ಆಕ್ಷೇಪದೊಂದಿಗೆ ಜಾರಕಿಹೊಳಿ ಸಹೋದರರು ಬೆಳಗಾವಿ ಜಿಲ್ಲಾ ಶಾಸಕರೊಂದಿಗೆ ಬಳ್ಳಾರಿ ಜಿಲ್ಲಾ ಶಾಸಕರನ್ನೂ ಒಗ್ಗೂಡಿಸಿಕೊಂಡು ಕಾಂಗ್ರೆಸ್ ಪಕ್ಷದ ವಿರುದ್ಧ ಅಸಮಾಧಾನ ಮುಂದುವರೆಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಮಧ್ಯಸ್ಥಿಕೆ ವಹಿಸಿ ಸಮಾಧಾನ ಪಡಿಸುವ ಕೆಲಸವನ್ನೂ ಮಾಡಿದರು.

ಬಿಜೆಪಿಯೊಳಗೂ ಸಂಚಲನ ಉಂಟು ಮಾಡಿದ್ದ ಸಿದ್ದು ಪ್ರವಾಸ
ಒಂದೆಡೆ ಕಾಂಗ್ರೆಸ್ ನಲ್ಲಿ ರಾಜಕೀಯ ಚಟುವಟಿಕೆ ಗುಪ್ತಗಾಮಿನಿಯಂತೆ ನಡೆಯುತ್ತಲೇ ಇದ್ದರೂ ಮತ್ತೊಂದೆಡೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ರಾಜ್ಯಸರ್ಕಾರವನ್ನು ಬೀಳಿಸುವ ಪ್ರಯತ್ನ ನಡೆಸುತ್ತಿಲ್ಲ ಎಂದು ಹೇಳುತ್ತಿದ್ದಾರೆ.ಆದರೆ 16ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ಯಡಿಯೂರಪ್ಪ ಜೊತೆ ಸಂಪರ್ಕದಲ್ಲಿದ್ದಾರೆ. ಹಾಗೂ ಶೀಘ್ರದಲ್ಲೇ ರಾಜಿನಾಮೆ ನೀಡುತ್ತಾರೆ ಎಂಬ ವದಂತಿ ದಟ್ಟವಾಗಿ ಹಬ್ಬಿತ್ತು.

ಐವರು ಶಾಸಕರನ್ನು ಸೆಳೆಯುತ್ತೇನೆ ಎಂದ ಸಿಎಂ
ಒಂದೆಡೆ ಕಾಂಗ್ರೆಸ್ ನ 15ಕ್ಕೂ ಹೆಚ್ಚು ಶಾಸಕರನ್ನು ಸೆಳೆದು ಸಮ್ಮಿಶ್ರ ಸರ್ಕಾರ ಪತನಗೊಳಿಸಿ ಅಧಿಕಾರದ ಗದ್ದುಗೆಯನ್ನು ಏರಲು ಬಿಜೆಪಿ ಪ್ರಯತ್ನ ನಡೆಸಿದ್ದರೆ, ಅದೇ ಬಿಜೆಪಿಗೆ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ನೇರ ಡಿಕ್ಕಿ ಹೊಡೆದಿದ್ದಾರೆ, ನಮ್ಮ ಒಂದು ಶಾಸಕರನ್ನು ಮುಟ್ಟಿದರೆ ಬಿಜೆಪಿಯ ಐವರು ಶಾಸಕರು ನಮ್ಮ ಜೊತೆ ಬರಲು ರೆಡಿ ಇದ್ದಾರೆ ಎಂದು ರಾಮನಗರದಲ್ಲಿ ಹೇಳಿದ್ದರು.

ವಾಪಸ್ ಬಂದ್ಮೇಲೆ ಸಿದ್ದರಾಮಯ್ಯ ಸರಿ ಮಾಡ್ತಾರಾ, ಸಚಿವ ಸಂಪುಟ ವಿಸ್ತರಣೆಯಾಗುತ್ತಾ?
ಬೆಳಗಾವಿಯ ಜಿಲ್ಲೆಯ ಜಾರಕಿಹೊಳಿ ಸಹೋದರರು ಸೇರಿದಂತೆ ಬಂಡೆದ್ದಿರುವ 17 ಕ್ಕೂ ಹೆಚ್ಚು ಶಾಸಕರನ್ನು ಸಿದ್ದರಾಮಯ್ಯ ಅವರೇ ಸಮಾಧಾನ ಪಡಿಸಿ ಪಕ್ಷದಲ್ಲೇ ಉಳಿಸಿಕೊಳ್ಳುತ್ತಾರೆ ಎಂಬ ನಿರೀಕ್ಷೆ ಕಾಂಗ್ರೆಸ್ ಹಾಗೂ ಜೆಡಿಎಸ್ ವಲಯದಲ್ಲಿದೆ, ಭಿನ್ನಮತ ಶಮನಗೊಳಿಸಿದ ತಕ್ಷಣವೇ ದಸರಕ್ಕೂ ಮುನ್ನ ಸಚಿವ ಸಂಪುಟ ವಿಸ್ತರಣೆಯಾಗುತ್ತದೆ ಎಂದು ಶಾಸಕರು ಕಾಯ್ದು ಕುಳಿತಿದ್ದಾರೆ.ಸಿದ್ದರಾಮಯ್ಯ ವಾಪಸ್ ಬಂದ ಮೇಲೆ ಭಿನ್ನಮತ ಶಮನ ಜತೆಗೆ ಸಚಿವ ಸಂಪುಟ ವಿಸ್ತರಣೆ ನಡೆಗಳು ಇಡೀ ಸಮ್ಮಿಶ್ರ ಸರ್ಕಾರದ ಅಸ್ಥಿರತೆ ತೀವ್ರವಾಗುತ್ತದೆ ಎಂದು ಕಾಂಗ್ರೆಸ್ ಮಾತ್ರವಲ್ಲ ಜೆಡಿಎಸ್ ಕೂಡ ನಂಬಿದೆ.












Click it and Unblock the Notifications