ನೂತನ ವರ್ಷಾಚರಣೆಯನ್ನು ಕೈಬಿಡುವುದೇ ಲೇಸಲ್ಲವೆ?
ಬೆಂಗಳೂರು, ಡಿ. 29 : ಹೊಸ ವರ್ಷದ ಕೇಕ್ ಕತ್ತರಿಸಲು, ಬೀಯರ್ ಬಾಟಲಿಯ ಬೆರಣೆಯನ್ನು ಮೇಲಕ್ಕೆ ಚಿಮ್ಮಿ ಚಿಯರ್ಸ್ ಎನ್ನಲು, ಒಬ್ಬರನ್ನೊಬ್ಬರ ಕೈಕುಲುಕಿ ಶುಭಾಶಯ ಕೋರಲು ಕೆಲವೇ ಗಂಟೆಗಳು ಬಾಕಿಯಿರುವಾಗ ಬೆಂಗಳೂರಿನಲ್ಲಿ ಆತಂಕದ ಕಾರ್ಮೋಡ, ಸೂತಕದ ಛಾಯೆ ಆವರಿಸಿಕೊಂಡಿದೆ.
ಹೊಸ ವರ್ಷಾಚರಣೆಯ ಕೇಂದ್ರಬಿಂದುವಾಗಿರುವ ಎಂಜಿ ರಸ್ತೆಯ ಬಳಿಯೇ ಚರ್ಚ್ ಸ್ಟ್ರೀಟ್ ನಲ್ಲಿ ಬಾಂಬ್ ಸ್ಫೋಟಗೊಂಡು ಓರ್ವ ಮಹಿಳೆಯನ್ನು ಬಲಿ ತೆಗೆದುಕೊಂಡಿದೆ. ಹೊಸ ವರ್ಷಾಚರಣೆಯನ್ನು ಹಾಳುಗೆಡವಲೆಂದೇ ಉಗ್ರರು ಈ ಕೃತ್ಯ ನಡೆಸಿದ್ದಾರೆ ಎಂದು ಸ್ವತಃ ಗೃಹ ಸಚಿವರೇ ಹೇಳುತ್ತಿರುವಾಗ ಈ ವರ್ಷ ನೂತನ ವರ್ಷದ ಆಚರಣೆಗೆ ಪೊಲೀಸ್ ಇಲಾಖೆ ಅವಕಾಶ ಮಾಡಿಕೊಡಬೇಕೆ?
ಈ ಸಂಭ್ರಮಕ್ಕೆ ಸಾವಿರಾರು ಜನರು ಸಾಕಷ್ಟು ಸಿದ್ಧತೆ ಮಾಡಿಕೊಂಡಿರುತ್ತಾರೆ. ರೆಸಾರ್ಟುಗಳನ್ನು ಬುಕ್ ಮಾಡಿರುತ್ತಾರೆ, ಇಂಥದೇ ಸ್ಥಳದಲ್ಲಿ ಸ್ನೇಹಿತರೆಲ್ಲ ಸೇರಿ ಕೇಕ್ ಕತ್ತರಿಸಿ, ಮದಿರೆಯನ್ನು ಸೇವಿಸಿ ಮಜಾ ಉಡಾಯಿಸಬೇಕೆಂದು ಪ್ಲಾನ್ ಮಾಡಿಕೊಂಡಿರುತ್ತಾರೆ. ಸಾಕಷ್ಟು ಹಣ ಕಿಸೆಯಿಂದ ಜಾರಿ ವ್ಯಾಪಾರಿಗಳ ಉಡಿಯನ್ನು ತುಂಬಿರುತ್ತದೆ. ವ್ಯಾಪಾರಿಗಳು ಕೂಡ ಸಾಕಷ್ಟು ಸಿದ್ಧತೆ ಮಾಡಿಕೊಂಡಿರುತ್ತಾರೆ.
ಇನ್ನು ಮಹಾತ್ಮಾ ಗಾಂಧಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಗಳು ಈಗಾಗಲೆ ಸಿಂಗರಿಸಿಕೊಂಡು ಮಧ್ಯರಾತ್ರಿ ಎರಡು ಗಂಟೆಯವರೆಗೆ ಪಾರ್ಟಿ ಪ್ರಾಣಿಗಳನ್ನು ಸಂಭ್ರಮದಲ್ಲಿ ತೇಲಾಡಿಸಲು ತಯಾರಾಗಿ ನಿಂತಿವೆ. ಪೊಲೀಸರು ಕೂಡ ಯಾವುದೇ ಅವಘಡ ಸಂಭವಿಸದಂತೆ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ. ಆದರೂ, ಚರ್ಚ್ ಸ್ಟ್ರೀಟ್ ನಲ್ಲಿ ದುರ್ಘಟನೆ ಸಂಭವಿಸಿಬಿಟ್ಟಿದೆ. [ಐಐಎಸ್ಸಿ ದಾಳಿ, ಚರ್ಚ್ ಸ್ಟ್ರೀಟ್ ಸ್ಫೋಟ ಕಾಕತಾಳೀಯ]
ಇಂಥ ಸಂದರ್ಭದಲ್ಲಿ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಕಮರ್ಶಿಯಲ್ ಸ್ಟ್ರೀಟ್ ನಂಥ ಥಳಕುಬಳುಕಿನ, ಅತ್ಯಂತ ಜನನಿಬಿಡವಾಗಿರುವ, ಉಗ್ರರಿಗೆ ಮತ್ತೊಂದು ದುಷ್ಕೃತ್ಯ ಎಸಗಲು ಹೇಳಿಮಾಡಿಸಿಟ್ಟಿರುವ ಸ್ಥಳಗಳಲ್ಲಿ ಹೊಸ ವರ್ಷಾಚರಣೆಗೆ ರಾಜ್ಯ ಸರಕಾರ ಅನುವು ಮಾಡಿಕೊಡಬೇಕೆ? ಅಲ್ಲಿ ಸೇರುವ ಲಕ್ಷಾಂತರ ಜನರಿಗೆ ಭದ್ರತೆ ನೀಡುವ, ಅವರನ್ನು ರಕ್ಷಿಸುವಷ್ಟು ತಾಕತ್ತು ಪೊಲೀಸ್ ಇಲಾಖೆಗಿದೆಯೆ? [ಬೆಂಗಳೂರು ಸ್ಫೋಟ : ಮೆಹದಿ ಬಂಧನಕ್ಕೆ ಪ್ರತೀಕಾರವೆ?]
ಅದೂ ಅಲ್ಲದೆ, ವರ್ಷಾಂತ್ಯದ ದಿನಗಳಲ್ಲಿ ರಜಾ ಹಾಕಿ ಊರಿಗೆ ತೆರಳುವ ಅಥವಾ ಊರಿಂದ ಮರಳುವ ಜನರ ದಂಡೆ ಬಸ್, ರೈಲ್ವೆ, ವಿಮಾನ ನಿಲ್ದಾಣಗಳಲ್ಲಿ ನೆರೆದಿರುತ್ತದೆ. ಇನ್ನು ದೇವಸ್ಥಾನ, ಇಗರ್ಜಿಗಳಲ್ಲಿ ವಿಶೇಷ ಪೂಜೆ ಆಯೋಜಿಸಿರಲಾಗಿರುತ್ತದೆ. ಅಲ್ಲೆಲ್ಲ ಲಕ್ಷಾಂತರ ಜನ ನೆರೆದಿರುತ್ತಾರೆ. ಈ ಎಲ್ಲ ಸ್ಥಳಗಳಲ್ಲಿ ಜನರಿಗೆ ಸಾಕಷ್ಟು ಭದ್ರತೆ ನೀಡಲು ನಮ್ಮ ಪೊಲೀಸ್ ಇಲಾಖೆಗೆ ಸಾಧ್ಯವೆ?
ಪ್ರಾಕ್ಟಿಕಲ್ ಆಗಿ ವಿಚಾರ ಮಾಡಿದರೆ, ಈ ವರ್ಷ ಜನರ ಭದ್ರತೆಯ ದೃಷ್ಟಿಯಿಂದ, ತನಿಖೆಗೆ ಅನುವು ಮಾಡಿಕೊಡುವ ದೃಷ್ಟಿಯಿಂದ ನೂತನ ವರ್ಷಾಚರಣೆಯನ್ನು ಕೈಬಿಡುವುದೇ ಲೇಸು. ಸ್ನೇಹಿತರೆಲ್ಲ ಸೇರಿ ಮನೆಯಲ್ಲೇ ಕುಳಿತು ವರ್ಷಾಚರಣೆ ಮಾಡಬಹುದಲ್ಲ? ಮತ್ತೊಮ್ಮೆ ಇಂಥದೇ ದುರ್ಘಟನೆ ಎಂಜಿ ರಸ್ತೆಯಲ್ಲೋ, ಬ್ರಿಗೇಡ್ ರಸ್ತೆಯಲ್ಲೋ, ಕಮರ್ಶಿಯಲ್ ಸ್ಟ್ರೀಟ್ ನಲ್ಲೋ ಆಗುವುದಿಲ್ಲವೆಂದು ಏನು ಗ್ಯಾರಂಟಿ? ಕನಿಷ್ಠಪಕ್ಷ ತಮ್ಮ ಮಕ್ಕಳು ಹೊಸವರ್ಷದ ಸಂದರ್ಭದಲ್ಲಿ ಮನೆಯಲ್ಲಿ ಸುರಕ್ಷಿತವಾಗಿದ್ದಾರೆ ಎಂಬ ನಿರಾಳತೆಯಾದರೂ ಪಾಲಕರಿಗಿರುತ್ತದೆ. ಏನಂತೀರಿ?