ಸಂಚಾರ ಯೋಗ್ಯ ರಸ್ತೆ ಒಡೆದು ಹೊಸ ರಸ್ತೆ ನಿರ್ಮಾಣ : ಆಕ್ರೋಶ
ಬೆಂಗಳೂರು, ಡಿಸೆಂಬರ್ 13 : ರಾಜ್ಯ ವಿಧಾನ ಸಭೆ ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ ಬೆಂಗಳೂರು ನಗರದಲ್ಲಿ ರಸ್ತೆ ದುರಸ್ತಿ ಕಾಮಗಾರಿ ಸೇರಿಸಂತೆ, ವಿವಿಧ ಕಾಮಗಾರಿಗಳು ಗೋಚರಿಸಲಾರಂಭಿಸಿದೆ.
ಯೋಗ್ಯವಾಗಿರುವ ರಸ್ತೆಗಳನ್ನು ಅಗೆದು ಹೊಸ ರಸ್ತೆ ನಿರ್ಮಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹೊಸೂರು ರಸ್ತೆ, ವೆಸ್ಟ್ ಆಫ್ ಕಾರ್ಡ್ ಹತ್ತಿರ ಸರಿಯಿರುವ ರಸ್ತೆಯನ್ನು ಅಗೆದು ನೂತನ ರಸ್ತೆ ಮಾಡಲಾಗುತ್ತಿದೆ.
ಬೆಂಗಳೂರು ನಗರದ ಪ್ರಮುಖ ರಸ್ತೆಗಳಲ್ಲಿ ವೈಟ್ ಟಾಪಿಂಗ್ ಮಾಡುವ ಕಾಮಗಾರಿ ಭರದಿಂದ ಸಾಗಿದೆ. ಏಕಾಏಕಿ ಆರಂಭಗೊಂಡ ಕಾಮಗಾರಿಯಿಂದ ನಗರದ ಜನತೆ ಹಾಗೂ ನಗರ ತಜ್ಞರು ಅತೃಪ್ತಿ ವ್ಯಕ್ತಪಡಿಸಿದ್ದಾರೆ.
ವೈಟ್ ಟಾಪಿಂಗ್ ಕಾಮಗಾರಿಯಿಂದ ವಿಪರೀತ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ಕಚೇರಿಗಳಿಗೆ ತಲುಪು ನಾಗರಿಕರು ದಿನದ ಎರಡು ಗಂಟೆಗಳ ಕಾಲ ರಸ್ತೆಯಲ್ಲೇ ಸಮಯ ಕಳೆಯುವಂತಾಗಿದೆ.
ಕಳೆದ ಎರಡು ತಿಂಗಳಿನಿಂದ ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯಿಂದ ಬಹುತೇಕ ರಸ್ತೆಗಳು ಹದಗೆಟ್ಟಿದೆ, ರಸ್ತೆಗಳಲ್ಲಿ ಉಂಟಾಗಿರುವ ತಗ್ಗುಗಳಿಂದ ಜನರು ರೋಸಿ ಹೋಗಿದ್ದು ನಿತ್ಯ ಸಂಚಾರ ದಟ್ಟಣೆಗೆ ಕಾರಣವಾಗಿದೆ. ಸತತ ಎರಡು ತಿಂಗಳಿನಿಂದ ಕಷ್ಟ ಅನುಭವಿಸುತ್ತಿರುವ ನಾಗರಿಕರು, ಈಗ ಏಕಾಏಕಿ ಬಿಬಿಎಂಪಿ ನಡೆಸುತ್ತಿರುವ ರಸ್ತೆ ದುರಸ್ತಿ ಕಾಮಗಾರಿಯಿಂದ ಹೌಹಾರಿದ್ದಾರೆ.
ಈಗೇಕೆ ಎಂಬ ಪ್ರಶ್ನೆ ಉದ್ಭವವಾಗುತ್ತಿದೆ. ರಾಜ್ಯ ವಿಧಾನ ಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಬೆಂಗಳೂರಿನ ಅನೇಕ ರಸ್ತೆಯಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ ಕೆಲವೆಡೆ ಬೇಡಿಕೆ ಇಲ್ಲದ ಕಡೆಗಳಲ್ಲೂ ಕೂಡ ರ್ಸತೆಗಳ ಕಾಮಗಾರಿಗೆ ಮುಂದಾಗಿರುವುದು ಸಾರ್ವಜನಿಕರ ಅಚ್ಚರಿಗೆ ಕಾರಣವಾಗಿದೆ.
ಬಿಬಿಎಂಪಿ ಮೂಲಗಳ ಪ್ರಕಾರ ಬೆಂಗಳೂರಿನ ರಸ್ತೆಗಳ ವೈಟ್ ಟಾಪಿಂಗ್ ಕಾಮಗಾರಿ ಎರಡು ಹಂತದಲ್ಲಿ ಕೈಗೊಳ್ಳಲಾಗುತ್ತಿದ್ದು ಇದರಲ್ಲಿ723.71ಕೋಟಿ ರೂ.ಗಳ ಯೋಜನೆ ರೂಪಿಸಿದೆ. ಮೊದಲನೆ ಹಂತದ ಕಾಮಗಾರಿ ಬರುವ ಜೂನ್-ಜುಲೈ ಅಂತ್ಯಕ್ಕೆ ಪೂರ್ಣಗೊಳ್ಳಲಿದ್ದರೆ, ಎರಡನೇ ಹಂತದ ಕಾಮಗಾರಿ ಆಗಸ್ಟ್ ವೇಳೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಈಗಾಗಲೇ ಹೊಸೂರು ರಸ್ತೆ. ಮೈಸೂರು ರಸ್ತೆ, ಶೇಷಾದ್ರಿಪುರಂ, ಈ ಪ್ರದೇಶಗಳಲ್ಲಿ ಜನ ಸಂಚಾರ, ರಸ್ತೆ ಸಂಚಾರ ಕಷ್ಟವಾಗಿ ಪರಿಣಮಿಸಿದೆ. ಬಿಬಿಎಂಪಿ ಮೂಲಗಳ ಪ್ರಕಾರ, ಮಳೆನೀರು ಹರಿದುಹೋಗದೆ ರಸ್ತೆಗಳಲ್ಲಿ ನಿಲ್ಲುತ್ತಿರುವ ಪ್ರದೇಶಗಳಲ್ಲಿ ಕಾಮಗಾರಿ ಕೈಗೊಂಡಿದೆ.
ಬಿಬಿಎಂಪಿ ಚುನಾವಣೆ ದೃಷ್ಟಿಯಿಂದ ಕಾಮಗಾರಿ ಕೈಗೆತ್ತಿಕೊಳ್ಳುತ್ತಿದ್ದರೂ ಗುತ್ತಿಗೆದಾರರು ಮಾತ್ರ ಉತ್ಸಾಹ ತೋರುತ್ತಿಲ್ಲ. ಮುಂಬರುವ ಆರು ತಿಂಗಳಿಗಳಲ್ಲಿ ಪೂರ್ಣಗೊಳಿಸಲಾಗುತ್ತಿದೆ ಎಂದು ಬಿಬಿಎಂಪಿ ಹೇಳುತ್ತಿದ್ದರೂ ಈಗ ನಡೆಯುತ್ತಿರುವ ಕೆಲಸವನ್ನು ನೋಡಿದರೆ ಕಾಮಗಾರಿಯನ್ನು ಆರು ತಿಂಗಳಿನಲ್ಲಿ ಮುಗಿಸುವುದು ಅನುಮಾನವಾಗಿದೆ.