ತಮಿಳುನಾಡಿಗೆ ಪಾದಯಾತ್ರೆ ಮಾಡುವುದೆಂದು?; ಕಾಂಗ್ರೆಸ್ಗೆ ಬಿಜೆಪಿ ಪ್ರಶ್ನೆ
ಬೆಂಗಳೂರು, ಮಾರ್ಚ್ 22: ಮೇಕೆದಾಟು ಅಣೆಕಟ್ಟು ಯೋಜನೆ ವಿಚಾರವಾಗಿ ಕರ್ನಾಟಕ ಮತ್ತು ತಮಿಳುನಾಡಿನ ಮಧ್ಯೆ ತೀವ್ರ ಬಿಕ್ಕಟ್ಟು ಎದುರಾಗಿದ್ದು, ಕಾವೇರಿ ಜಲ ವಿವಾದ ಮತ್ತಷ್ಟು ಜಟಿಲವಾಗುತ್ತಿದೆ.
ಈ ನಡುವೆ ಮೇಕೆದಾಟು ಅಣೆಕಟ್ಟು ಯೋಜನೆಯನ್ನು ಜಾರಿಗೊಳಿಸಲು ಬಿಡುವುದಿಲ್ಲ ಎಂದು ತಮಿಳುನಾಡು ಸರ್ಕಾರ ಅಲ್ಲಿನ ವಿಧಾನಸಭೆಯಲ್ಲಿ ನಿರ್ಣಯ ತೆಗೆದುಕೊಂಡಿದೆ. ಈ ನಿರ್ಣಯವನ್ನು ಕರ್ನಾಟಕದಲ್ಲಿ ಆಡಳಿತರೂಢ ಬಿಜೆಪಿ ಸೇರಿದಂತೆ ಸರ್ವಪಕ್ಷಗಳು ವಿರೋಧಿಸಿವೆ. ಆದರೂ ರಾಜಕೀಯ ವಾಗ್ದಾಳಿಗಳಿಗೆ ದಾರಿ ಮಾಡಿಕೊಟ್ಟಿದೆ.
ತಮಿಳುನಾಡಿನಲ್ಲಿ ತಮ್ಮದೇ ಮೈತ್ರಿ ಪಕ್ಷದ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಏಕೆ ಮೌನವಾಗಿದ್ದಾರೆ? ಎಂದು ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದೆ.
ರಾಜಕೀಯ ಲಾಭಕ್ಕಾಗಿ ಡಿ.ಕೆ. ಶಿವಕುಮಾರ್ ಅವರು ಒಂದಲ್ಲ ಎರಡು ಬಾರಿ ಮೇಕೆದಾಟು ಪಾದಯಾತ್ರೆ ಮಾಡಿದ್ದಾರೆ. ಎರಡು ಬಾರಿ ಸುಳ್ಳಿನ ಜಾತ್ರೆ ಮಾಡಿ ಅಭ್ಯಾಸವಿರುವ ಡಿಕೆಶಿ ಅವರಿಗೆ ಮತ್ತೊಂದು ಬಾರಿ ಪಾದಯಾತ್ರೆ ಮಾಡುವುದು ಕಷ್ಟವೇನಿಲ್ಲ. ಮೂರನೇ ಬಾರಿ, ಕರ್ನಾಟಕದ ಹಿತದೃಷ್ಟಿಯಿಂದ ತಮಿಳುನಾಡು ಕಡೆಗೆ ಪಾದಯಾತ್ರೆ ಮಾಡಿ. ಇದನ್ನು ನಿರೀಕ್ಷಿಸಬಹುದೇ? ಎಂದು ಬರೆದುಕೊಂಡಿದೆ.

ಮೇಕೆದಾಟು ಪಾದಯಾತ್ರೆಯ ಮೂಲಕ ಬೆಂಗಳೂರಿನ 15ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಪಾದಯಾತ್ರೆ ಮಾಡಿರುವುದಾಗಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಅದು ನೀರಿಗಾಗಿ ಅಲ್ಲ, ರಾಜಕೀಯ ಲಾಭಕ್ಕಾಗಿ ಎಂಬುದು ಡಿಕೆಶಿಯವರ ಹೇಳಿಕೆಯಲ್ಲೇ ಸ್ಪಷ್ಟವಾಗುತ್ತದೆ. ಹೋಳಿ ಹಬ್ಬ ಮುಗಿದಿದೆ, ಕಾಂಗ್ರೆಸ್ಸಿಗರ ನಿಜ ಬಣ್ಣ ಬಯಲಾಗುತ್ತಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಕುಡಿಯುವ ನೀರಿಗಾಗಿ ರಾಜ್ಯ ಬಿಜೆಪಿ ಸರ್ಕಾರ ಮಾಡುತ್ತಿರುವ ಯೋಜನೆಗೆ ತಮಿಳುನಾಡಿನ ಕಾಂಗ್ರೆಸ್ ಮೈತ್ರಿ ಸರ್ಕಾರ ಅಡ್ಡಗಾಲು ಹಾಕುತ್ತಿದೆ. ಡಿಕೆಶಿ ಅವರಿಗೆ ತಮಿಳುನಾಡು ಸರ್ಕಾರದ ವಿರುದ್ಧ ಧ್ವನಿ ಎತ್ತುವ ತಾಕತ್ತು ಇದೆಯೇ? ಎಂದು ಟ್ವೀಟ್ ಮೂಲಕ ಪ್ರಶ್ನಿಸಿರುವ ಬಿಜೆಪಿ, ನೀರಿನ ರಾಜಕಾರಣ ಮಾಡಿ ಸಿಎಂ ಆಗುತ್ತೇನೆ ಎನ್ನುವ ಭ್ರಮೆಯಿಂದ ಹೊರಗೆ ಬನ್ನಿ ಎಂದು ಕಿಡಿಕಾರಿದೆ.

ಮಹದಾಯಿ ಆಗಲಿ, ಮೇಕೆದಾಟು ಆಗಲಿ ಕಾಂಗ್ರೆಸ್ ನಾಯಕರದು ಸದಾ ಇಬ್ಬಗೆಯ ನಿಲುವು ವ್ಯಕ್ತವಾಗುತ್ತಿದೆ. ಅಧಿಕಾರದಲ್ಲಿದ್ದಾಗ ಒಂದು ರೀತಿ, ಅಧಿಕಾರ ಕಳೆದುಕೊಂಡಾಗ ಇನ್ನೊಂದು ನೀತಿ. ತಮಿಳುನಾಡು ಸರ್ಕಾರ ತೆಗೆದುಕೊಂಡ ನಿರ್ಣಯದ ವಿರುದ್ಧ ಒಂದು ಸಾತ್ವಿಕ ಪ್ರತಿರೋಧ ತೋರುವ ಧೈರ್ಯವಾದರೂ ಡಿ.ಕೆ. ಶಿವಕುಮಾರ್ ಅವರಿಗೆ ಇದೆಯೇ? ಎಂದು ತೀವ್ರವಾಗಿ ಪ್ರಶ್ನಿಸಿದೆ.

ಮೇಕೆದಾಟು ಹೋರಾಟದ ನಾಟಕದ ಮೂಲಕ ಹಳೆ ಮೈಸೂರು ಭಾಗದಲ್ಲಿ ತಮ್ಮ ನಾಯಕತ್ವ ಪ್ರತಿಷ್ಠಾಪನೆ ಮಾಡುವುದಷ್ಟೇ ಡಿ.ಕೆ. ಶಿವಕುಮಾರ್ ಉದ್ದೇಶವಾಗಿತ್ತು. ಆದರೆ ಪಾದಯಾತ್ರೆಯ ಉದ್ದೇಶಕ್ಕೆ ಅವರ ಮೈತ್ರಿ ಪಕ್ಷದಿಂದಲೇ ಅಡ್ಡಿಯುಂಟಾಗಿದೆ. ಡಿ.ಕೆ. ಶಿವಕುಮಾರ್ ಅವರೇ, ಜಲ ಜಪ ಮಾಡಿಕೊಂಡು ನಾಲ್ಕು ಹೆಜ್ಜೆ ನಡೆದವರೆಲ್ಲ ಭಗೀರಥರಾಗಲು ಸಾಧ್ಯವಿಲ್ಲ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.












Click it and Unblock the Notifications