ಪಶ್ಚಿಮಘಟ್ಟ ಸೂಕ್ಷ್ಮ ವಲಯ ಅಧಿಸೂಚನೆಗೆ ರಾಜ್ಯದಲ್ಲಿ ಪಕ್ಷಾತೀತ ವಿರೋಧ
ಬೆಂಗಳೂರು, ಜುಲೈ 18: ಕೇಂದ್ರ ಪರಿಸರ ಖಾತೆಯು ಹೊರಡಿಸಿದ, ಪಶ್ಚಿಮ ಘಟ್ಟ ಸೂಕ್ಷ್ಮ ಪ್ರದೇಶ, ಅಧಿಸೂಚನೆ ಕುರಿತು, ಗೃಹ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆದೇಶವನ್ನು ವಿರೋಧಿಸುವ ನಿರ್ಣಯವನ್ನು ಕೈಗೊಳ್ಳಲಾಗಿದೆ. ಇನ್ನು ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರವನ್ನು ಮಂಡಿಸಿ ಅನುಮೋದನೆಯನ್ನು ಪಡೆಯಲು ತೀರ್ಮಾನಿಸಲಾಗಿದೆ.
ಕೇಂದ್ರ ಪರಿಸರ ಸಚಿವಾಲಯ, ಪಶ್ಚಿಮಘಟ್ಟ ಸೂಕ್ಷ್ಮ ವಲಯದ ಬಗ್ಗೆ ಹೊರಡಿಸಿರುವ ಅಧಿಸೂಚನೆ ವಿರುದ್ಧ, ಕಾನೂನಿನ ಹೋರಾಟ ನಡೆಸಲು, ಮಲೆನಾಡು ಹಾಗೂ ಕರಾವಳಿ ಪ್ರದೇಶದ ಸಚಿವರು ಹಾಗೂ ಶಾಸಕರ ನಿರ್ಧಾರವನ್ನು ಮಾಡಿದ್ದಾರೆ. ಈ ಕುರಿತು, ಗೃಹ ಸಚಿವ ಆರಗ ಜ್ಞಾನೇಂದ್ರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಿದ್ದು, ಅಧಿಸೂಚನೆ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಲಾಗಿದೆ.
ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವರು, "ಕೇಂದ್ರ ಪರಿಸರ ಸಚಿವಾಲಯದ ಅಧಿಸೂಚನೆ ಕುರಿತು, ಸಭೆಯಲ್ಲಿ, ಪಕ್ಷ ಬೇಧ ಮರೆತು, ಒಕ್ಕೊರಲಿನ ವಿರೋಧ ವ್ಯಕ್ತವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಭೆಯಲ್ಲಿ ಭಾಗವಹಿಸಿ ಮಾತನಾಡಿದ್ದಾರೆ. ಅಧಿಸೂಚನೆ ವಿರುದ್ಧ ಕಾನೂನಿನ ಹೋರಾಟ ಮಾಡುವುದಲ್ಲದೆ, ಜನಾಭಿಪ್ರಾಯ ಸಂಗ್ರಹಕ್ಕೆ ನಿರ್ಧರಿಸಲಾಗಿದೆ," ಎಂದು ಹೇಳಿದರು.

ಅಧಿಸೂಚನೆ ವಿರುದ್ಧ, ಪರಿಸರ ಸಚಿವರ ಬಳಿಗೆ, ಮುಖ್ಯಮಂತ್ರಿಯವರ ನೇತೃತ್ವದಲ್ಲಿ, ಲೊಕಸಭಾ ಸದಸ್ಯರ ಹಾಗೂ ಶಾಸಕರನ್ನು ಒಳಗೊಂಡ ನಿಯೋಗವನ್ನು ತೆಗೆದುಕೊಂಡು ಹೋಗಲಾಗುತ್ತದೆ.
ವರದಿಯ ಬಗ್ಗೆ ಈ ಹಿಂದೆ ವ್ಯಕ್ತವಾದ ಯಾವುದೇ ಆಕ್ಷೇಪಣೆ ಗಳನ್ನು ಪರಿಗಣಿಸಿಲ್ಲ ಎಂದ ಸಚಿವರು, ಸರಿಯಾದ ಹಾಗೂ ವೈಜ್ಞಾನಿಕ ಸರ್ವೇ ಕಾರ್ಯ ನಡೆದಿಲ್ಲವೆಂದು ಹೇಳಿದರು.

ಒಂದು ವೇಳೆ ಅಧಿಸೂಚನೆ ಅನುಷ್ಠಾನ ಗೊಂಡರೆ ಗ್ರಾಮೀಣ ಭಾಗದ ಜನತೆಯ ಬದುಕು ಅಸಹನೀಯ ವಾಗುತ್ತದೆ ಎಂದ ಸಚಿವರು, ಅಧಿಸೂಚನೆಯನ್ನು ಶತಾಯ ಗತಾಯ ವಿರೋದಿಸಲಾಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ, ಸಂಪುಟ ಸದಸ್ಯರಾದ, ಆನಂದ್ ಸಿಂಗ್, ಶಿವರಾಮ್ ಹೆಬ್ಬಾರ್, ಎಸ್ ಅಂಗಾರ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್, ಶಾಸಕರು ಭಾಗವಹಿಸಿದ್ದರು.

ಕೇಂದ್ರ ಸರಕಾರದ 5ನೇ ಅಧಿಸೂಚನೆ
ಕೇಂದ್ರ ಪರಿಸರ ಖಾತೆಯಿಂದ ಐದನೇ ಸಲ ಅಧಿಸೂಚನೆಯನ್ನು ಹೊರಡಿಸಲಾಗಿದೆ. 20,668 ಚದರ ಕಿ.ಮೀ ವ್ಯಾಪ್ತಿಯ ಪಶ್ಚಿಮಘಟ್ಟವನ್ನು ಸೂಕ್ಷ್ಮವಲಯ ಎಂದು ಪರಿಗಣಿಸಿದ ಅಧಿಸೂಚನಯನ್ನೇ ಮರಳಿ ನೀಡಲಾಗಿದೆ.

ಕೇಂದ್ರ ಅಧಿಸೂಚನೆ ಪಾಲನೆ ಕಷ್ಟ
ಕೇಂದ್ರ ಅಧಿಸೂಚನೆಯಂತೆ ಪಾಲನೆಯನ್ನು ಮಾಡಿದರೆ ಮಲೆನಾಡು, ಪಶ್ಚಿಮಘಟ್ಟದ ವ್ಯಾಪ್ತಿಯಲ್ಲಿ ಬದುಕುವ ಜನರ ಬದುಕು ಮೂರಾಬಟ್ಟೆಯಾಗಲಿದೆ. ಜನರನ್ನು ಒಕ್ಕಲೆಬ್ಬಿಸುವ ಕೆಲಸವಾಗುತ್ತದೆ. ರಸ್ತೆ ಸೇರಿ ಮನೆಗಳನ್ನು ನಿರ್ಮಿಸುವಂತಿಲ್ಲ. ಆಸ್ಪತ್ರೆಗಳನ್ನು ಕಟ್ಟುವಂತಿಲ್ಲ. ರಸ್ತೆ ನಿರ್ಮಾಣ ಮಾಡುವಂತಿಲ್ಲ. 1500ಕ್ಕೂ ಹೆಚ್ಚು ಹಳ್ಳಿಯ ಜನರ ಬದು ಬೀದಿಗೆ ಬೀಳುತ್ತದೆ. ಉದ್ಯಮ ಸ್ಥಾಪನೆಯನ್ನು ಮಾಡಬೇಕಾದ ಕೇಂದ್ರದ ಅನುಮತಿ ಪಡೆಯಬೇಕು. ಜಮೀನು ಮಾಡಬೇಕಾದರೆ ಗೊಬ್ಬರ ಸೇರಿದಂತೆ ಕೆಲವು ಕೆಮಿಕಲ್ ಬಳಸುವಂತಿಲ್ಲ. ಹೀಗೆ ಪಟ್ಟಿಯನ್ನು ಮಾಡಿದರೇ ಜನರು ಬದುಕು ಹಾಳಾಗುವುದು ಖಚಿತವಾಗಲಿದೆ. ಇದರಿಂದಾಗಿಯೇ ಪಶ್ಚಿಮ ಘಟ್ಟ ವ್ಯಾಪ್ತಿಯ ಎಲ್ಲಾ ಶಾಸಕರು ಈ ಅಧಿಸೂಚನೆಯನ್ನು ವಿರೋಧಿಸುತ್ತಿದ್ದಾರೆ.












Click it and Unblock the Notifications