ಹವಾಮಾನ ತಜ್ಞರ ಪ್ರಕಾರ ಬೆಂಗಳೂರಲ್ಲಿ 3 ದಿನ ಸುರಿಯಲಿದೆ ಭಾರೀ ಮಳೆ
Recommended Video
ಬೆಂಗಳೂರು, ಆಗಸ್ಟ್ 25: ಬೆಂಗಳೂರಿನ ಹಲವು ಪ್ರದೇಶಗಳು ಕೆಲವೇ ನಿಮಿಷಗಳಲ್ಲಿ ಜಲಾವೃತಗೊಳ್ಳುವಂತೆ ಮಾಡಿದ ಶುಕ್ರವಾರ ಸಂಜೆ ಸುರಿದ ಹಠಾತ್ ಮಳೆ ಕೇವಲ ಟ್ರೇಲರ್ ಎನ್ನಲಾಗುತ್ತಿದ್ದು, ನಿಜವಾದ ಪಿಕ್ಚರ್ ಮುಂದಿನ ದಿನಗಳಲ್ಲಿ ಕಾದಿದೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರದ ಮಳೆಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ನೀರು ತುಂಬಿದ ಪರಿಣಾಮ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮೇಲ್ನೋಟಕ್ಕೆ ಇದು ಸಾಮಾನ್ಯ ಎನಿಸಿದರೂ ಸೆಪ್ಟೆಂಬರ್ ಮಳೆಯನ್ನು ಹಗುರವಾಗಿ ಪರಿಗಣಿಸುವಂತಿಲ್ಲ ಇನ್ನೂ ಎರಡರಿಂದ ಮೂರು ದಿನ ಬೆಂಗಳೂರಲ್ಲಿ ಮಳೆಯಾಗುವ ನಿರೀಕ್ಷೆ ಇದೆ ಎಂದು ತಜ್ಞರು ಹೇಳಿದ್ದಾರೆ.
ಬೆಂಗಳೂರಿಗೆ ಭಾರಿ ಮಳೆ ಭೀತಿ ಇಲ್ಲ: ಸೆಪ್ಟೆಂಬರ್ನಲ್ಲಿ ವಾಡಿಕೆ ಮಳೆ ಸಾಧ್ಯತೆ
ಹಲವು ದಿನಗಳ ಬಳಿಕ ನಗರದ ಬಹುತೇಕ ಭಾಗಗಳಲ್ಲಿ ಗಾಳಿ ಸಹಿತ ಜೋರು ಮಳೆಯಾಗಿದೆ. ಜತೆಗೆ ಟ್ರಾಫಿಕ್ ಜಾಮ್ ಸೃಷ್ಟಿಸಿ ತೊಂದರೆ ಉಂಟುಮಾಡಿತು. ವಾರಾಂತ್ಯದ ರಜೆಯ ಖುಷಿಯಲ್ಲಿ ಕಚೇರಿಯಿಂದ ತೆರಳುತ್ತಿದ್ದವರು ಮಳೆಗೆ ಸಿಲುಕಿ ರಸ್ತೆ ಬದಿಯ ಅಂಗಡಿಗಳಲ್ಲಿ ಆಶ್ರಯ ಪಡೆದರು.
ಬೈಕ್ ಸವಾರರು ಅಂಡರ್ಪಾಸ್, ಬಸ್ ತಂಗುದಾಣದ ಬಳಿ ನಿಲುಗಡೆ ಮಾಡಿ ಮಳೆಯಿಂದ ತಪ್ಪಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸಿದರು. ಗಾಳಿಯೂ ಜೋರಾಗಿ ಬೀಸಿದ್ದರಿಂದ ನಾಲ್ಕು ಕಡೆ ಮರಗಳು ಧರೆಗುರುಳಿದವು.
ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರ ಮಾಹಿತಿ ಪ್ರಕಾರ ಶುಕ್ರವಾರ ಸಂಜೆಯಿಂದ ರಾತ್ರಿ ಒಂಭತ್ತು ಗಂಟೆ ಒಳಗಾಗಿ 43ಮಿ.ಮೀನಷ್ಟು ಮಳೆ ಬಿದ್ದಿದ್ದು, ಶಾಂತಿನಗರ, ಶಿವಾಜಿನಗರ, ಮೈಸೂರು ರಸ್ತೆ, ನಾಗರಭಾವಿ, ಕೆಂಗೇರಿ, ಮಲ್ಲೇಶ್ವರ, ರಾಜಾಜಿನಗರ, ಹೆಬ್ಬಾಳ ಪ್ರದೇಶದಲ್ಲಿ ಅತಿಹೆಚ್ಚು ಮಳೆ ದಾಖಲಾಗಿದೆ ಎಂದು ಹೇಳಿದ್ದಾರೆ.
ಅಲ್ಲದೆ ಪ್ರಕೃತಿ ವಿಕೋಪ ನಿರ್ವಹಣ ನಿರ್ವಹಣ ಕೇಂದ್ರದ ಸಿಡಿಲು ಮೊಬೈಲ್ ಅಪ್ಲಿಕೇಷನ್ ನಲ್ಲಿ ಬೆಂಗಳೂರಿನ ಆಯ್ದ ಪ್ರದೇಶಗಳಲ್ಲಿ ಭಾರಿ ಮಳೆಯಾಗಲದೆ ಎಂಬ ಎಚ್ಚರಿಕೆಯನ್ನು ನೀಡಲಾಗಿತ್ತು. ಈ ಮಧ್ಯೆ ಶುಕ್ರವಾರದ ಮಳೆ ಜನಜೀವನದ ಮೇಲೆ ಪರಿಣಾಮ ಬೀರಿದೆ.
ಕರಾವಳಿ, ಕೇರಳದಲ್ಲಿ ಮುಂದಿನ 48 ತಾಸು ಭಾರಿ ಮಳೆ ಎಚ್ಚರಿಕೆ
ಅಲ್ಲದೆ ಶುಕ್ರವಾರ ಸಂಜೆ ಸುರಿದ ಮಳೆ ರೀತಿಯಲ್ಲೇ ಬೆಂಗಳೂರಲ್ಲಿ ಮತ್ತೆ ಮಳೆ ಸುರಿದರೆ ಸಾರಿಗೆ ಸಂಚಾರ ಹೆಚ್ಚುಕಡಿಮೆ ನಿಂತೇ ಹೋಗುತ್ತದೆ. ಜಲಾವೃತ ಪ್ರದೇಶಗಳಲ್ಲಿ ಜನರು ಬದುಕುವುದೇ ಕಷ್ಟವಾಗುತ್ತದೆ. ನಗರದ ಪ್ರಮುಖ ರಸ್ತೆಗಳಲ್ಲೂ ಭಾರಿ ಪ್ರಮಾಣದಲ್ಲಿ ಮಳೆ ನೀರು ಸಂಗ್ರಹವಾಗುತ್ತಿರುವುದು ಎಚ್ಚರಿಕೆ ಗಂಟೆಯಾಗುತ್ತಿದೆ ಎಂದು ಸಾರ್ವಜನಿಕರು ಹೇಳಿದ್ದಾರೆ.
ಕೇರಳ ಹಾಗೂ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಬಳಿಕ ಬೆಂಗಳೂರು ನಗರದಲ್ಲಿ ಮಳೆ ಬಂದರೆ ಸಾಕು ಭಯ ಉಂಟಾಗುವಂತಹ ಪರಿಸ್ಥಿತಿ ಇದೆ. ಶುಕ್ರವಾರ ಸಂಜೆ ಒಂದು ಗಂಟೆ ಸುರಿದ ಮಳೆಗೆ ಬೆಂಗಳೂರು ನಗರ ತತ್ತರಿಸಿ ಹೋಗಿದೆ. ಇದೇ ರೀತಿ ದೊಡ್ಡ ಪ್ರಮಾಣದಲ್ಲಿ ಬಿದ್ದರೆ ಬದುಕುವುದು ಹೇಗೆ ಎಂಬ ಆತಂಕ ನಮ್ಮನ್ನು ಕಾಡುತ್ತಿದೆ ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ.
ಹವಾಮಾನ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಈ ಬಾರಿ ಆಗಸ್ಟ್ ಮತ್ತು ಸೆಪ್ಟೆಂಬರ್ ನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಬಹುದು, ಈಗಗಲೇ ಜೂನ್ನಿಂದ ಇಲ್ಲಿಯವರೆಗೆ 252ಮಿ.ಮೀ ಮಳೆಯಾಗಿದೆ.ಪ್ರತಿ ವರ್ಷ ಇದಕ್ಕಿಂತ ಹೆಚ್ಚುವರಿ ಮಳೆ ಬೀಳುತ್ತಿತ್ತು. ಈ ಬಾರಿ ಸೆಪ್ಟೆಂಬರ್ನಲ್ಲೂ ಮಳೆಯ ಪ್ರಮಾಣ ಕಡಿಮೆಯಾಗಬಹುದು ಎಂದಿದ್ದಾರೆ.