ಈದ್ಗಾ ಮೈದಾನ ಬಗ್ಗೆ ಹೈಕೋರ್ಟ್ ಆದೇಶ, ಬೊಮ್ಮಾಯಿ ಪ್ರತಿಕ್ರಿಯೆ ಏನು?
ಬೆಂಗಳೂರು, ಆಗಸ್ಟ್ 26: ಬೆಂಗಳೂರಿನ ಚಾಮರಾಜಪೇಟೆ ಆಟದ ಮೈದಾನ ಅಥವಾ ಈದ್ಗಾ ಆಟದ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ ನೀಡುವ ಕುರಿತು ಹೈಕೋರ್ಟ್ ನೀಡಿರುವ ಆದೇಶ ಪರಿಪಾಲಿಸಲಾಗುವುದು. ಈ ಸಂಬಂಧ ಶನಿವಾರ ಅಡ್ವೊಕೇಟ್ ಜನರಲ್ ಮತ್ತು ಕಂದಾಯ ಸಚಿವರೊಂದಿಗೆ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಶುಕ್ರವಾರ ಸಂಜೆ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅವರಣದಲ್ಲಿ ಸುದ್ದಿಗಾರರಿಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಚಾಮರಾಜಪೇಟೆಯ ಈದ್ಗಾ ಮೈದಾನದ ಮಾಲೀಕತ್ವ ಕುರಿತ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಕಾನೂನು ಮತ್ತು ನ್ಯಾಯಾಲಯದ ಆಜ್ಞೆಯನ್ನು ರಾಜ್ಯ ಸರ್ಕಾರ ಪರಿಪಾಲಿಸಲಿದೆ ಎಂದರು.
Breaking: ಬೆಂಗಳೂರು ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಹೈಕೋರ್ಟ್ ಗ್ರೀನ್ ಸಿಗ್ನಲ್
ಹೈಕೋರ್ಟ್ ವಿಭಾಗೀಯ ಪೀಠವು ಶುಕ್ರವಾರ ಮಹತ್ವದ ಆದೇಶ ನೀಡಿದೆ. ಚಾಮರಾಜಪೇಟೆಯ ಸರ್ವೇ ನಂ.40ರ ಕುರಿತಂತೆ ರಾಜ್ಯ ಸರ್ಕಾರ ಸೂಕ್ತವಾಗಿ ನಿರ್ಣಯ ಕೈಗೊಳ್ಳಬೇಕಿದೆ. ನಮ್ಮ ದೇಶ ಸರ್ವಜನಾಂಗದ, ಸರ್ವ ಧರ್ಮಿಯರು ಇರುವ ಸ್ಥಳವಾಗಿದ್ದು. ಇವೆಲ್ಲ ಅಂಶಗಳ ಬಗ್ಗೆಯೂ ವಿಶ್ಲೇಷಣೆಯಾಗಿದೆ.
ಈದ್ಗಾ ಮೈದಾನ ಅಥವಾ ಚಾಮರಾಜಪೇಟೆ ಆಟದ ಮೈದಾನ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ಅನ್ನು ನೀಡಿದೆ. ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನಿರ್ಧಿಷ್ಟ ಅವಧಿಗೆ ಅನುಮತಿಯನ್ನು ನೀಡಬಹುದು ಎಂದು ಹೈಕೋರ್ಟ್ ಅನುಮತಿ ನೀಡಬಹುದು ಎಂದು ಹೇಳಿದೆ.
ಸಮಾಜದಲ್ಲಿ ಶಾಂತಿ ಕಾಪಾಡುವ ಕೆಲಸವಾಗಲಿದೆ
ಹೈಕೋರ್ಟ್ ಆದೇಶದ ಪಾಲಿಸುವ ನಿಟ್ಟಿನಲ್ಲಿ ವಕೀಲರು, ಕಂದಾಯ ಸಚಿವ ಆರ್.ಅಶೋಕ್ ಅವರ ನೇತೃತ್ವದಲ್ಲಿ ಸಭೆ ನಡೆಸಲಾಗುವುದು. ಈ ಸಭೆಯಲ್ಲಿ ಸೂಕ್ತ ವಿಚಾರಗಳನ್ನು ಚರ್ಚಿಸುವ ಮೂಲಕ ಸಮಾಜದಲ್ಲಿ ಶಾಂತಿಯನ್ನು ಕಾಪಾಡುವ ಜೊತೆ ಎಲ್ಲರ ಮನದಾಳದ ಇಚ್ಛೆಯನ್ನು ಈಡೇರಿಸುವ ಕೆಲಸವನ್ನು ಸರ್ಕಾರ ಮಾಡುತ್ತದೆ ಎಂದು ಬೊಮ್ಮಾಯಿ ಭರವಸೆ ನೀಡಿದರು.
ಗಣೇಶ ಹಬ್ಬ: ಪ್ರತಿಷ್ಠಾಪನೆ, ವಿಸರ್ಜನೆ ಬಗ್ಗೆ ಪಾಲಿಕೆ ಮಾರ್ಗಸೂಚಿ ಏನಿದೆ?
ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಆಗಸ್ಟ 31ರಂದು ಗಣೇಶೋತ್ಸವ ಆಚರಣೆಗೆ ನಾಗರಿಕರ ಒಕ್ಕೂಟ ಸೇರಿದಂತೆ ಹಲವು ಸಂಘಟನೆಗಳು ಅರ್ಜಿ ಸಲ್ಲಿಸಿವೆ. ಹೈಕೋರ್ಟ್ ಆಗಸ್ಟ 31 ಅವಧಿಗೆ ನೀಡಿರುವ ಆದೇಶವನ್ನು ಸಂಪೂರ್ಣವಾಗಿ ಗ್ರಹಿಸಿದ ನಂತರ ಸೂಕ್ತವಾದ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಹುಬ್ಬಳ್ಳಿ ಈದ್ಗಾ ಬಗ್ಗೆ ಆ.29ಕ್ಕೆ ತೀರ್ಮಾನ
ಇನ್ನೂ ಹುಬ್ಬಳ್ಳಿಯಲ್ಲಿ ಗಣೇಶೋತ್ಸವ ಆಚರಣೆ ಕುರಿತಂತೆ ಹುಬ್ಬಳ್ಳಿ ನಗರಸಭೆಗಳು, ಸರ್ವಪಕ್ಷದ ಸಭೆ ನಡೆಸಿ ಆಗಸ್ಟ್ 29ಕ್ಕೆ ಚರ್ಚಿಸಲಿವೆ. ನಂತರ ಗಣೇಶೋತ್ಸವಕ್ಕೆ ಅನುಮತಿ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ. ಜಮೀನಿನ ಮಾಲೀಕತ್ವ ದೃಷ್ಟಿಯಿಂದ ಈ ವಿಚಾರ ಬೇರೆಯಾಗಿದೆ. ಇದಕ್ಕೆ ಸುಪ್ರೀಂ ಕೋರ್ಟ್ನ ಆದೇಶ ಇದೆ.. ಕಾನೂನು ಮತ್ತು ನ್ಯಾಯಾಲಯದ ಆಜ್ಞೆಯ ಪರಿಪಾಲನೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ಸರ್ಕಾರದ ಅರ್ಜಿ ವಿಚಾರಣೆ ಮೇರೆಗೆ ಹೈಕೋರ್ಟ್ ಆದೇಶ
ಇದೇ ಮೊದಲ ಬಾರಿಗೆ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಸೂಕ್ತ ಪೊಲೀಸ್ ಬಿಗಿ ಭದ್ರತೆಯಲ್ಲಿ 75ನೇ ಸ್ವಾತಂತ್ರ್ಯೋತ್ಸವ ನಡೆದಿತ್ತು. ಅದಾದ ಬಳಿಕ ಹಲವು ಹಿಂದೂಪರ ಸಂಘಟನೆಗಳು ಆಗಸ್ಟ್ 31 ರಂದು ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿ ಕೋರಿದ್ದವು. ಈ ಬಗ್ಗೆ ಸಾಕಷ್ಟು ಗೊಂದಲ ಉಂಟಾಗಿದ್ದರಿಂದ ಹೈಕೋರ್ಟ್ ಗುರುವಾರ ಈದ್ಗಾ ಮೈದಾನದ ವಿಚಾರದಲ್ಲಿ ಯಥಾ ಸ್ಥಿತಿ ಕಾಯುವಂತೆ ಸೂಚಿಸಿ ಆದೇಶಿಸಿತ್ತು.
ಇದರಿಂದ ಮೈದಾನವು ಆಟಕ್ಕೆ, ಮುಸ್ಲಿಂ ಸಮುದಾಯದವರ ಎರಡು ಪ್ರಾರ್ಥನೆಗೆ ಅವಕಾಶ ಸಿಕ್ಕಿತ್ತು ಹೊರತು ಹಿಂದೂ ಹಬ್ಬಗಳ ಆಚರಣೆಗೆ ಅವಕಾಶ ಸಿಕ್ಕಿರಲಿಲ್ಲ. ಈ ಸಂಬಂಧ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ವಿಭಾಗೀಯ ಪೀಠವು ಆಗಸ್ಟ್ 31 ಅವಧಿಗೆ ಸೀಮಿತಿವಾಗಿ ಗಣೇಶೋತ್ಸವಕ್ಕೆ ಅನುಮತಿ ನೀಡುವ ಕುರಿತು ಆದೇಶ ಹೊರಡಿಸಿದೆ. ಸದ್ಯ ಈ ಆದೇಶವನ್ನು ರಾಜ್ಯ ಸರ್ಕಾರ ಎಲ್ಲ ಧರ್ಮಿಯರನ್ನು ಗಮನದಲ್ಲಿಟ್ಟುಕೊಂಡು ನಾಳೆ ಸಭೆ ನಡೆಸಿ ಪಾಲಿಸುವುದಾಗಿ ತಿಳಿಸಿದೆ.