ಶಿವಮೊಗ್ಗ ಕ್ಷೇತ್ರದಲ್ಲಿ ಮುಂದಿನ ಸಲವೂ ಮಧು ಬಂಗಾರಪ್ಪ ಅಭ್ಯರ್ಥಿ
ಬೆಂಗಳೂರು, ನವೆಂಬರ್ 7: ಮುಂದಿನ ಲೋಕಸಭಾ ಚುನಾವಣೆಗೆ ಶಿವಮೊಗ್ಗದಿಂದ ಮಧು ಬಂಗಾರಪ್ಪ ಅವರೇ ಅಭ್ಯರ್ಥಿಯಾಗಿರುತ್ತಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ ತಿಳಿಸಿದ್ದಾರೆ.
ಮಂಗಳವಾರ ಸದಾಶಿವನಗರದ ಮಧುಬಂಗಾರಪ್ಪ ನಿವಾಸದಲ್ಲಿ ಮಾತನಾಡಿದ ಅವರು, ಬಂಗಾರಪ್ಪ ಅವರು ಹಠವಾದಿ ಹೋರಾಟಗಾರ ಅವರದ್ದೇ ದಾರಿಯಲ್ಲಿ ಮಧುಬಂಗಾರಪ್ಪ ನಡೆದುಕೊಂಡು ಬರುತ್ತಿದ್ದಾರೆ, ಮಂಡ್ಯ ಹಾಗೂ ಶಿವಮೊಗ್ಗ ಎರಡೂ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮತ್ತೆ ಸ್ಪರ್ಧಿಸಲಿದೆ ಎಂದು ಹೇಳಿದರು.
ಶಿವಮೊಗ್ಗ ಉಪಚುನಾವಣೆಯಲ್ಲಿ ಮಧುಬಂಗಾರಪ್ಪ ಯಶಸ್ವಿಯಾಗಿ ಹೋರಾಟ ಮಾಡಿದ್ದಾರೆ. ಬೈಂದೂರಿನಲ್ಲಿ ಜೆಡಿಎಸ್ ಅಧಿಕ ಮತ ಬಂದಿದೆ. ವಿದೇಶದಲ್ಲಿದ್ದ ಅವರನ್ನು ಕರೆಸಿ ಶಿವಮೊಗ್ಗಕ್ಕೆ ಅಭ್ಯರ್ಥಿ ಮಾಡಿದ್ದೆವು. ಎಚ್ಡಿಡಿ, ಎಚ್ಡಿಕೆ ಮತ್ತು ನಾನು ಮನವಿ ಮಾಡಿದ್ದೆ.

ಪಕ್ಷದ ನಾಯಕರಿಗೆ ಗೌರವ ಕೊಟ್ಟು ಸ್ಪರ್ಧೆ ಮಾಡಿದ್ದರು. ಕೇವಲ 10 ದಿನಗಳಲ್ಲಿ ಮೂರೂವರೆ ಲಕ್ಷ ಅಂತರದಿಂದ ಯಡಿಯೂರಪ್ಪ ಅವರನ್ನ ಐವತ್ತು ಸಾವಿರಕ್ಕೆ ಇಳಿಸಲಾಯಿತು ಎಂದು ಹೇಳಿದರು.
ಮುಂದಿನ ಲೋಕಸಭಾ ಚುನಾವಣೆಗೆ ಮಧು ಬಂಗಾರಪ್ಪ ಅವರೇ ಶಿವಮೊಗ್ಗದ ಅಭ್ಯರ್ಥಿ, ಮುಂದಿನ ರಣತಂತ್ರವನ್ನು ಕೂಡ ನಾವು ತಯಾರಿಸಬೇಕಿದೆ, ಮಧು ಬಂಗಾರಪ್ಪ ಸಚಿವ ಆಗುತ್ತಾರೆ ಎನ್ನುವ ಸುದ್ದಿ ಬಂದಿದೆ, ಪ್ರಭಾವಿಯುತ ಹುದ್ದೆಯನ್ನು ಸರ್ಕಾರದ ಮಟ್ಟದಲ್ಲಿ ಕೊಡುತ್ತೇವೆ ಎಂದು ಹೇಳಿದರು.
ಮಂಗಳವಾರ ಶಿವಮೊಗ್ಗ ಫಲಿತಾಂಶ ಬಂದ ಬಳಿಕ ಬೆಂಗಳೂರಿಗೆ ಮಧುಬಂಗಾರಪ್ಪ ಆಗಮಿಸಿದ್ದು, ಸೋಲಿನಿಂದ ಬೇಸರಗೊಂಡಿರುವ ಅವರನ್ನು ಭೇಟಿ ಮಾಡಿರುವ ಎಚ್ ವಿಶ್ವನಾಥ್ ಅವರು ಸಮಾಧಾನ ಮಾಡಿದ್ದಾರೆ ಎನ್ನಲಾಗಿದೆ.












Click it and Unblock the Notifications