ಖಾತೆಗಾಗಿ ಲಂಚ ಕೇಳಿದ್ದ ಗ್ರಾಮಲೆಕ್ಕಿಗ ಎಸಿಬಿ ಬಲೆಗೆ
ಆನೇಕಲ್, ನವೆಂಬರ್ 24: ತಂದೆ ತೀರಿಕೊಂಡ ನಂತರ ಕೃಷಿ ಜಮೀನಿನ ಖಾತೆಯನ್ನು ತನ್ನ ಹೆಸರಿಗೆ ಮಾಡಿಕೊಡಿ ಎಂದು ಅರ್ಜಿ ಸಲ್ಲಿಸಿದವರ ಹತ್ತಿರ ಲಂಚ ಕೇಳಿದ ಗ್ರಾಮ ಲೆಕ್ಕಿಗ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾನೆ. ಅನೇಕಲ್ ತಾಲೂಕು ಕಸಬಾ ಹೋಬಳಿ ಬೆಸ್ತಮಾನಳ್ಳಿ ಕೃಷಿಕರು ಖಾತೆಗಾಗಿ ಅರ್ಜಿ ಸಲ್ಲಿಸಿದ್ದವರು.
ಗ್ರಾಮಲೆಕ್ಕಿಗ ರಾಚಮಾನಹಳ್ಳಿಯ ಪಿ.ಶಿವಣ್ಣ ಭ್ರಷ್ಟಾಚಾರ ಆರೋಪದಲ್ಲಿ ಸಿಕ್ಕಿಬಿದ್ದವನು. ತಂದೆ ತೀರಿಕೊಂಡ ನಂತರ ಜಮೀನಿನ ಖಾತೆಯನ್ನು ತಮ್ಮ ಹೆಸರಿಗೆ ಬದಲಾಯಿಸಿಕೊಡುವಂತೆ ಆ ಕೃಷಿಕರು ಅರ್ಜಿ ಹಾಕಿದ್ದರು. ಈ ಕೆಲಸಕ್ಕಾಗಿ ಗ್ರಾಮಲೆಕ್ಕಿಗ ಪಿ.ಶಿವಣ್ಣ ಹತ್ತು ಸಾವಿರ ರುಪಾಯಿ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದ. ಆ ನಂತರ ಅರ್ಜಿದಾರರು ಈ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ಸಲ್ಲಿಸಿದ್ದರು.[ಲಂಚ ಪಡೆವಾಗ ಬಲೆಗೆ ಬಿದ್ದ ಕಂದಾಯ ಅಧಿಕಾರಿ]

ಆ ದೂರಿನ ಅನ್ವಯ ಕಾರ್ಯಾಚರಣೆ ನಡೆಸಲಾಯಿತು. ನವೆಂಬರ್ 23ರಂದು ಗ್ರಾಮಲೆಕ್ಕಿಗ ಶಿವಣ್ಣ ಅರ್ಜಿದಾರರಿಂದ ಹತ್ತು ಸಾವಿರ ರುಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆಯೇ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದು, ಭ್ರಷ್ಟಾಚಾರ ತಡೆ ಕಾಯ್ದೆ-1988ರ ಅಡಿ ಪ್ರಕರಣವನ್ನು ದಾಖಲಿಸಲಾಗಿದೆ. ಶಿವಣ್ಣನನ್ನು ವಶಕ್ಕೆ ಪಡೆಯಲಾಗಿದೆ.












Click it and Unblock the Notifications