ಕನ್ನಡದ ಹಿರಿಯ ನಟ, ನಿರ್ದೇಶಕ ಕಾಶಿನಾಥ್ ಇನ್ನು ನೆನಪು ಮಾತ್ರ
Recommended Video
ಬೆಂಗಳೂರು, ಜನವರಿ 18: ಕನ್ನಡದ ಹಿರಿಯ ನಟ, ನಿರ್ದೇಶಕ ಕಾಶಿನಾಥ್ ಇಂದು(ಜ.18) ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಶಂಕರ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಬಹಳ ದಿನಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಇಂದು(ಜ.18) ಬೆಳಿಗ್ಗೆ ಹೃದಯಾಘಾತದಿಂದ ಮರಣ ಹೊಂದಿದ್ದಾರೆ. ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಕಾಶಿನಾಥ್ : ಪ್ರತಿಭಾವಂತ, ಸ್ವಾಭಿಮಾನಿ ಮತ್ತು ರೆಬೆಲ್
ಕನ್ನಡ ಚಿತ್ರರಂಗ ಕಂಡ ಪ್ರತಿಭಾನ್ವಿತ ನಟ, ನಿರ್ದೇಶಕರ ಪಟ್ಟಿಯಲ್ಲಿ ಕಾಶೀನಾಥ್ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ಕುಂದಾಪುರ ಸಮೀಪದ ಕೋಟೇಶ್ವರದ ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಅವರು, ಖ್ಯಾತ ನಟ, ನಿರ್ದೇಶಕ ಉಪೇಂದ್ರ, ಮನೋಹರ್, ಸುನೀಲ್ ಕುಮಾರ್ ದೇಸಾಯಿ ಮುಂತಾದ ಹೆಸರಾಂತ ನಿರ್ದೇಶಕರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದವರು.
ವಿಭಿನ್ನ ಶೈಲಿಯ ಚಿತ್ರಗಳಿಂದಲೇ ಹೆಸರಾದ ಅವರ ಹಲವು ಚಿತ್ರಗಳು ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಿವೆ.
ಅಮರ ಮಧುರ ಪ್ರೇಮ, ಅನುಭವ, ಅನಾಮಿಕ, ಅವಳೇ ನನ್ನ ಹೆಂಡ್ತಿ, ಮಿಥಿಲೆಯ ಸೀತೆಯರು, ಅದೃಷ್ಟ ರೇಖೆ, ಲವ್ ಮಾಡಿ ನೋಡು, ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು ಸೇರಿದಂತೆ 43 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಕೀರ್ತಿ ಇವರದು.
ಇವರ ಅಜಗಜಾಂತರ(1991) ಎಂಬ ಚಿತ್ರವನ್ನು ಹಿಂದಿಯಲ್ಲಿ ಜುದಾಯಿ (1997) ಎಂದು ರೀಮೇಕ್ ಮಾಡಲಾಗಿತ್ತು.
ನಟ, ನಿರ್ದೇಶಕ ಕಾಶಿನಾಥ್ ವಿಶೇಷ ಸಂದರ್ಶನ
ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು ಚಿತ್ರಗಳನ್ನೂ ನಿರ್ಮಿಸಿ, ನಿರ್ದೇಶಿಸಿ, ಚಿತ್ರಕಥೆ ಬರೆದ ಹೆಗ್ಗಳಿಕೆ ಇವರದು. ತೆಲುಗಿ ಚಿತ್ರಗಳಲ್ಲಿ ನಟಿಸಿದ್ದಷ್ಟೇ ಅಲ್ಲದೆ, ಕನ್ನಡ ಮತ್ತು ತೆಲುಗು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ.
ಹಾಸ್ಯ, ಮೊನಚು, ಜೀವನಾನುಭವದ ಹೂರಣದೊಂದಿಗೆ ನಿರ್ದೇಶಿಸಿದ ಹಲವು ಚಲನಚಿತ್ರಗಳ ಮೂಲಕ ಜೀವನದ ನೂರಾರು ಮಜಲುಗಳನ್ನು ಪರಿಚಯಿಸುವಲ್ಲಿ ಯಶಸ್ವಿಯಾದ ಕಾಶಿನಾಥ್ ಅವರ ಅಗಲಿಕೆ ಕನ್ನಡ ಚಿತ್ರರಂಗಕ್ಕೆ ನಿಜಕ್ಕೂ ನಷ್ಟವೇ ಸರಿ.