ಕ್ಯಾನ್ಸರಿನಿಂದ ಚೇತರಿಸಿಕೊಂಡಿದ್ದ ನಟಿ ಕೃಷ್ಣಕುಮಾರಿ ಇನ್ನಿಲ್ಲ
ಬೆಂಗಳೂರು, ಜನವರಿ 24: ತೆಲುಗು ಚಿತ್ರರಂಗದ ಅಭಿನೇತ್ರಿ ನಟಿ ಕೃಷ್ಣಕುಮಾರಿ ಇನ್ನು ನೆನಪು ಮಾತ್ರ. ಮೂಳೆ ಕ್ಯಾನ್ಸರಿನಿಂದ ಬಳಲುತ್ತಿದ್ದ ಅವರು ಇತ್ತೀಚೆಗೆ ಚೇತರಿಕೆ ಕಂಡಿದ್ದರು. ಆದರೆ, ವಯೋ ಸಹಜ ಅನಾರೋಗ್ಯದಿಂದ ನಿಸ್ತೇಜರಾಗಿ ಬುಧವಾರ ಬೆಳಗ್ಗೆ ತಮ್ಮ ಮಗಳ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.
1933 ರ ಮಾರ್ಚ್ 6 ರಂದು ಪಶ್ಚಿಮ ಬಂಗಾಳದ ನೈಹಾತಿಯಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಟಿ ಕೃಷ್ಣ ಕುಮಾರ್ ಅವರ ತಂದೆ ವೆಂಕೋಜಿ ರಾವ್, ತಾಯಿ ಸಚಿ ದೇವಿ. ಆಂಧ್ರಪ್ರದೇಶದ ರಾಜಮಂಡ್ರಿ ಮೂಲದ ಈ ತೆಲುಗು ಕುಟುಂಬದಿಂದ ಕೃಷ್ಣಕುಮಾರಿ ಅಲ್ಲದೆ ಅವರ ಸೋದರಿ ಸಾಹುಕಾರ್ ಜಾನಕಿ ಕೂಡಾ ಬಹುಭಾಷಾ ನಟಿಯಾಗಿ ಮಿಂಚಿದರು.
ಕೃಷ್ಣ ಕುಮಾರಿ ಅವರು 60 ರಿಂದ 80ರ ದಶಕದ ನಡುವೆ ತೆಲುಗು ಭಾಷೆಯಲ್ಲಿ 130 ಚಿತ್ರ ಸೇರಿದಂತೆ 230ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು.
ಖ್ಯಾತ ನಟಿ ಸಾವಿತ್ರಿ ಅವರ ಪರಂಪರೆಯನ್ನು ಮುಂದುವರೆಸಿದ್ದ ಕೃಷ್ಣ ಕುಮಾರಿ ಅವರು ತಮ್ಮ ಕಾಲ ಪ್ರಮುಖ ನಾಯಕ ನಟರಾದ ಎನ್.ಟಿ. ರಾಮ ರಾವ್, ಅಕ್ಕಿನೀನಿ ನಾಗೇಶ್ವರ ರಾವ್, ಕೃಷ್ಣಮ್ ರಾಜು, ಡಾ ರಾಜ್ ಕುಮಾರ್, ಶಿವಾಜಿ ಗಣೇಶನ್, ಜಗ್ಗಯ್ಯ ಜತೆ ನಟಿಸಿದ್ದರು.
1951 ರಲ್ಲಿ ಕೃಷ್ಣಕುಮಾರಿಯವರ ಚಲನಚಿತ್ರ ಚೊಚ್ಚಲವು ನವ್ವುತೆ ನವರತ್ನಾಲು ತೆಲುಗು ಜೊತೆ ಪ್ರಾರಂಭವಾಯಿತು. ನಂತರ ತಮಿಳು ಸಿನೆಮಾಗಳಲ್ಲಿ ಹೆಚ್ಚಾಗಿ ನಟಿಸಿದರು. ಕನ್ನಡದಲ್ಲಿ ಕೆಲವೇ ಕೆಲವು ಚಲನಚಿತ್ರಗಳಲ್ಲಿ ನಟಿಸಿದರು. ಭಕ್ತ ಕನಕದಾಸ, ಆಶಾಸುಂದರಿ, ದಶಾವಾತಾರ, ಶ್ರೀಶೈಲ ಮಹಾತ್ಮೆ, ಭಕ್ತ ಕಬೀರ,ಸ್ವರ್ಣ ಗೌರಿ, ಚಂದ್ರ ಕುಮಾರ, ಸತಿ ಸಾವಿತ್ರಿ ಪ್ರಮುಖ ಚಿತ್ರಗಳು.
ಇಂಡಿಯನ್ ಎಕ್ಸ್ ಪ್ರೆಸ್ ನ ಮಾಜಿ ಸಂಪಾದಕ ಮತ್ತು ಪತ್ರಿಕೋದ್ಯಮಿ ಅಜಯ್ ಮೋಹನ್ ಖೈತಾನ್ ರನ್ನು ಕೃಷ್ಣ ಕುಮಾರಿ ಮದುವೆಯಾಗಿದ್ದರು. ಪುತ್ರಿ ದೀಪಿಕಾ, ಅಳಿಯ ವಿಕ್ರಮ್, ಮೊಮ್ಮಗ ಪವನ್ ಜತೆ ಬೆಂಗಳೂರಿನಲ್ಲಿ ಕೃಷ್ಣಕುಮಾರಿ ಅವರು ಬಹುಕಾಲದಿಂದ ನೆಲೆಸಿದ್ದರು.